ಗ್ರಾಮೀಣ ಜನರಿಗೆ ಆರ್ ಆರ್ ಬಿ ಟಾನಿಕ್: ರಾಜೀವ್ ಗೌಡ
ನವದೆಹಲಿ, ಏ. 29: ರಾಜ್ಯಸಭಾ ಸದಸ್ಯ ಪ್ರೋ. ರಾಜೀವ್ ಗೌಡ ರಾಜ್ಯಸಭೆಯಲ್ಲಿ ರಿಜನಲ್ ರೂರಲ್ ಬಿಲ್ [ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ ಬಿಲ್] ಕುರಿತಾಗಿ ಮಾತನಾಡಿದರು. ಗ್ರಾಮೀಣ ಬ್ಯಾಂಕ್ ಗಳು ಪ್ರಖರವಾಗಿ ಇರದಿದ್ದರೆ ರೈತರ ಬದುಕು ಬದಲಾಗದು ಎಂದು ರಾಜೀವ್ ಗೌಡ ಅಭಿಪ್ರಾಯ ವ್ಯಕ್ತಪಡಿಸಿದರು.
ಲೋಕಸಭೆಯಲ್ಲಿ ಪಾಸ್ ಆಗಿದ್ದ ಬಿಲ್ ನ್ನು ಮಂಗಳವಾರ ರಾಜ್ಯಸಭೆಯೂ ಅನುಮೋದನೆ ಮಾಡಿದೆ. ಈ ವೇಳೆ ಬಿಲ್ ಮೇಲಿನ ಚರ್ಚೆಯಲ್ಲಿ ಮಾತನಾಡಿದ ರಾಜೀವ್ ಗೌಡ ಅನೇಕ ಅಂಶಗಳ ಮೇಲೆ ಬೆಳಕು ಚೆಲ್ಲಿದರು.[ಸೂಟು ಬೂಟಿನ ಮೋದಿ ಸರ್ಕಾರಕ್ಕೆ ಧಿಕ್ಕಾರ]
ಭಾರತೀಯ ರೈತರಿಗೆ ನಿಜವಾಗಿ ಎಲ್ಲ ರೀತಿಯ ಸೌಲಭ್ಯ ದೊರೆಯಲು ಈ ಬಿಲ್ ಅನುಮೋದನೆಗೆ ಒಳಪಟ್ಟಿದೆ. ಮೊದಲು ರೈತರ ಹೊಸ ಯೋಜನೆಗಳಿಗೆ ಸಹಕಾರ ನೀಡಲು ಬ್ಯಾಂಕ್ ಗಳು ಮುಂದಾಗಬೇಕು. ಈ ಕಾನೂನು ಜಾರಿಯಾದರೆ ಸ್ಥಳೀಯ ಅಥವಾ ಗ್ರಾಮೀಣ ಬ್ಯಾಂಕ್ ಗಳಿಗೆ ನಿರ್ದಿಷ್ಟ ಮೊತ್ತದ ಜವಾಬ್ದಾರಿಯನ್ನು ನೀಡುತ್ತದೆ. ಕಾನೂನಿಗೆ ಅನುಗುಣವಾಗಿ ಬ್ಯಾಂಕ್ ಗಳು ಗ್ರಾಮೀಣ ಅಭಿವೃದ್ಧಿಯಲ್ಲಿ ತೊಡಗಿಕೊಳ್ಳಬೇಕು ಎಂದು ಹೇಳಿದರು.
ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಬ್ಯಾಂಕ್ ಗಳಲ್ಲಿ ಹೂಡಿಕೆ ಮಾಡಿರುವ ಷೇರುಗಳ ಪ್ರಮಾಣವೂ ಏರಿಕೆಯಾಗಲಿದೆ. ಇದು ವ್ಯವಸ್ಥೆಗೆ ಮತ್ತಷ್ಟು ಭದ್ರತೆ ಒದಗಿಸಲಿದೆ. ಒಟ್ಟು ಶೇ. 51 ರಷ್ಟು ಷೇರುಗಳು ಸರ್ಕಾರದ ಒಡೆತನದಲ್ಲಿ ಬಂದರೆ ಉಳಿದ ಶೇ. 49 ಷೇರುಗಳನ್ನು ಜನರು ಖರೀದಿ ಮಾಡಲಿದ್ದಾರೆ ಎಂದು ಗೌಡ ತಿಳಿಸಿದರು.[5 ಕಂಪನಿಗಳಿಗೆ ಅಂತಿಮ ಮೊಳೆ ಹೊಡೆದ ಕೇಂದ್ರ ಸರಕಾರ]
ಕಾನೂನಿಗೆ ಸರ್ಕಾರದ ಯಾವ ಅಡೆ ತಡೆಗಳು ಇರಬಾರದು. ಇದೊಂದು ಸ್ವತಂತ್ರ ಸಂಸ್ಥೆಯಾಗಿ ಕೆಲಸ ಮಾಡಬೇಕು. ದೇಶದ ಹೊಸ ನೀತಿ ರೂಪಣೆಗೆ ಈ ಮಾದರಿ ನಿರ್ದೇಶನ ನೀಡುವಂತೆ ಆಗಬೇಕು. ಜತೆಗೆ ಜನರಿಗೆ ಸೌಲಭ್ಯಗಳನ್ನು ತಲುಪಿಸುವ ದಾರಿಯಾಗಿ ಬದಲಾಗಬೇಕು ಎಂದು ಹೇಳಿದರು.