ನಿಮ್ಮ ಗ್ಯಾಂಗ್ಗಳ ರೆಕಾರ್ಡಿಂಗ್ ನನ್ನಲ್ಲಿದೆ: ಕೇಜ್ರಿವಾಲ್ಗೆ ಸುಕೇಶ್ ಹೊಸ ಎಚ್ಚರಿಕೆ
ದೆಹಲಿ ನವೆಂಬರ್ 19: ಕೇಜ್ರಿವಾಲ್ ಮತ್ತು ಆಪ್ ವಿರುದ್ಧ ಜೈಲಿನಿಂದ ಸುಕೇಶ್ ಚಂದ್ರಶೇಖರ್ ಏಳನೇ ಪತ್ರವನ್ನು ಬರೆದಿದ್ದಾರೆ. ಈ ಪತ್ರದಲ್ಲೂ ಸುಕೇಶ್ ಎಎಪಿ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ.
ಜೈಲು ಶಿಕ್ಷೆಗೊಳಗಾದ ಸುಕೇಶ್ ಚಂದ್ರಶೇಖರ್ ಅವರು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಅವರ ಉಪ ಮನೀಷ್ ಸಿಸೋಡಿಯಾ ಮತ್ತು ಪಕ್ಷದ ನಾಯಕ ಸತ್ಯೇಂದ್ರ ಜೈನ್ ವಿರುದ್ಧ ಆರೋಪ ಮಾಡಿದ್ದಾರೆ. ಈ ಬಾರಿ ಎಎಪಿ ನಾಯಕರು ಮಕ್ಕಳ ಶಿಕ್ಷಣ ಕಲ್ಯಾಣಕ್ಕಾಗಿರುವ ಹಣವನ್ನು ಲಪಟಾಯಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಮಾತ್ರವಲ್ಲದೆ 'ನಿಮ್ಮ ದರೋಡೆಕೋರರ ಗ್ಯಾಂಗ್ಗಳ ರೆಕಾರ್ಡಿಂಗ್ ನನ್ನ ಬಳಿ ಇದೆ' ಎಂದು ಕೇಜ್ರಿವಾಲ್ಗೆ ಸುಕೇಶ್ ಹೊಸ ಎಚ್ಚರಿಕೆ ಕೊಟ್ಟಿದ್ದಾರೆ.
'ಕೇಜ್ರಿವಾಲ್ ಜೀ ನೀವು ನನ್ನನ್ನು ದರೋಡೆಕೋರ ಎಂದು ಕರೆದಿದ್ದೀರಿ. ನೀವು ಮಕ್ಕಳ ಶಿಕ್ಷಣ ಕಲ್ಯಾಣಕ್ಕಾಗಿರುವ ಹಣವನ್ನು ಲಪಟಾಯಿಸಿರುವ ದೊಡ್ಡ ವಂಚಕರು ಮತ್ತು ಕಳ್ಳರು ಹಾಗೂ ದರೋಡೆಕೋರರು'ಎಂದು ಆರೋಪಿಸಿದ್ದಾರೆ. 'ಎಲ್ಲೆಡೆ ನೀವು ದೆಹಲಿ ಸ್ಕೂಲ್ ಮಾಡೆಲ್ ಹೆಸರಿನಲ್ಲಿ ಹಣ ಪಡೆಯಲು ಬಯಸುತ್ತೀರಿ. ಸತ್ಯೇಂದರ್ ಜಿ, ಮನೀಷ್ ಜಿ ಹಣ ಪಡೆಯುತ್ತಾರೆ' ಎಂದು ಸುಕೇಶ್ ಅವರು ಪತ್ರದಲ್ಲಿ ತಿಳಿಸಿದ್ದಾರೆ.
ಸುಕೇಶ್ ಜೊತೆ ಸತ್ಯೆಂದ್ರ ಜೈನ್ ಡೀಲ್ ಆರೋಪ
ಸತ್ಯೇಂದ್ರ ಜೈನ್ ಫೆಬ್ರವರಿ 2017 ರಲ್ಲಿ ತನಗೆ ಕರೆ ಮಾಡಿ 20 ಮಿಲಿಯನ್ ಡಾಲರ್ಗಳನ್ನು ರೂಪಾಯಿಗೆ ಪರಿವರ್ತಿಸಿ ಅದರಲ್ಲಿ ಒಂದು ಭಾಗವನ್ನು ಬಿಟ್ಕಾಯಿನ್ ಆಗಿ ಬೆಂಗಳೂರಿನಲ್ಲಿರುವ ತನ್ನ ವ್ಯಾಪಾರ ಸಹೋದ್ಯೋಗಿಗಳಿಗೆ ನೀಡಲು ಹೇಳಿದ್ದರು ಎಂದು ಸುಕೇಶ್ ಆರೋಪಿಸಿದ್ದಾರೆ.
"ಕೇಜ್ರಿವಾಲ್ ಜೀ, ಈಗ ನೀವು ಮತ್ತೊಮ್ಮೆ ಅಳುವುದು ಖಚಿತವಾಗಿದೆ ಮತ್ತು ಇದೆಲ್ಲವೂ ಕಲ್ಪನೆ, ಸುಳ್ಳು ಇತ್ಯಾದಿ ಎಂದು ಹೇಳುತ್ತೀರಿ. ಹಾಗಾಗಿ ಅದು ಸುಳ್ಳು ಅಥವಾ ಕಲ್ಪನಾ ಎಂದು ಕರೆಯಲ್ಪಟ್ಟಿದ್ದರೆ, ದಯವಿಟ್ಟು ಪಾಲಿಗ್ರಾಫ್ ಪರೀಕ್ಷೆಗೆ ಒಪ್ಪಿಕೊಳ್ಳುವಂತೆ ನಾನು ನಿಮ್ಮನ್ನು ವಿನಂತಿಸುತ್ತೇನೆ. ಆಗ ನಾನು ಮತ್ತು ಸತ್ಯೇಂದರ್ ಜಿ ಜೊತೆಗಿನ ಮಾತುಕತೆಗಳ ಎಲ್ಲಾ ಸತ್ಯಗಳು ಹೊರಬರುತ್ತವೆ" ಎಂದು ಪತ್ರದಲ್ಲಿ ಕೇಳಿದ್ದಾರೆ.
ಕೇಜ್ರಿವಾಲ್ಗೆ ಸುಕೇಶ್ ಹೊಸ ಎಚ್ಚರಿಕೆ
'ನಾನು ಎಲ್ಲಾ ಪುರಾವೆಗಳೊಂದಿಗೆ ನನ್ನ ಆರೋಪಗಳನ್ನು ಸಾಬೀತುಪಡಿಸಲಿದ್ದೇನೆ. ತನಿಖೆಯನ್ನು ಪ್ರಾರಂಭಿಸಲಿರುವ ತನಿಖಾ ಸಂಸ್ಥೆಗೆ ನೀಡುತ್ತೇನೆ. ಹಾಗಾಗಿ ಅತಿಯಾದ ಆತ್ಮವಿಶ್ವಾಸ ನನಗಿಲ್ಲ ಎಂದು ಭಾವಿಸಬೇಡಿ. ನಿಮ್ಮ ಗ್ಯಾಂಗ್ನ ಪ್ರತಿಯೊಂದು ಚಾಟ್ ಮತ್ತು ರೆಕಾರ್ಡಿಂಗ್ಗಳು ನನ್ನ ಬಳಿ ಇವೆ' ಎಂದು ಚಂದ್ರಶೇಖರ್ ಪತ್ರದಲ್ಲಿ ಆರೋಪಿಸಿದ್ದಾರೆ.
ಮಾಧ್ಯಮಗಳಿಗೆ ಬರೆದ ಪತ್ರದಲ್ಲಿ ಚಂದ್ರಶೇಖರ್, "ಅಮೆರಿಕ ಸುದ್ದಿಗಳಲ್ಲಿ ದೆಹಲಿ ಶಾಲೆಯ ಮಾದರಿಯ ಕಥೆಯನ್ನು ಪ್ರಚಾರ ಮಾಡಲು PR ಗೆ USD 8.5 ಲಕ್ಷ ಮತ್ತು ಶೇಕಡಾ 15 ರಷ್ಟು ಹೆಚ್ಚುವರಿ ಕಮಿಷನ್ ನೀಡಲಾಗಿದೆ" ಎಂದು ಆರೋಪಿಸಿದ್ದಾರೆ.
ಮೋರ್ಬಿ ಘಟನೆಯಿಂದ ಗಮನ ಬೇರೆಡೆ ಸೆಳೆಯುವ ಯತ್ನ
ಎಎಪಿ ಸುಕೇಶ್ ಅವರ ಹೇಳಿಕೆಗಳನ್ನು ಪದೇ ಪದೇ ನಿರಾಕರಿಸಿದೆ. ಇದರ ಹಿಂದೆ ಬಿಜೆಪಿಯ ಕೈವಾಡವಿದೆ ಎಂದು ಆರೋಪಿಸಿದೆ. ಇಂಡಿಯಾ ಟುಡೆಯೊಂದಿಗೆ ಮಾತನಾಡಿದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಸುಕೇಶ್ ಆರೋಪವನ್ನು ತಳ್ಳಿಹಾಕಿದ್ದಾರೆ, ಇದು ಗುಜರಾತ್ನ ಮೋರ್ಬಿಯಲ್ಲಿ ಸೇತುವೆ ಕುಸಿತದಿಂದ ಜನರ ಗಮನವನ್ನು ಬೇರೆಡೆ ಸೆಳೆಯುವ ಪ್ರಯತ್ನವಾಗಿದೆ ಎಂದು ಹೇಳಿದ್ದಾರೆ.
'ಸುಕೇಶ್ ಮುಂದೊಂದು ದಿನ ಬಿಜೆಪಿ ಸೇರಬಹುದು'
ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಕೇಜ್ರಿವಾಲ್, "ಸುಕೇಶ್ ಚಂದ್ರಶೇಖರ್ ಬಿಜೆಪಿಯ ಭಾಷೆಯಲ್ಲಿ ಮಾತನಾಡಲು ಕಲಿಯುತ್ತಿದ್ದಾರೆ. ಕೇಜ್ರಿವಾಲ್ಗೆ ಸುಳ್ಳು ಪತ್ತೆ ಪರೀಕ್ಷೆ ನಡೆಸಬೇಕು ಎಂದು ಬಿಜೆಪಿಯಂತೆ ಸುಕೇಶ್ ಹೇಳಲು ಪ್ರಾರಂಭಿಸಿದ್ದಾರೆ. ಇದೆಲ್ಲವೂ ಬಿಜೆಪಿಯ ಕುತಂತ್ರ. ಸುಕೇಶ್ ಮುಂದೊಂದು ದಿನ ಬಿಜೆಪಿ ಸೇರಬಹುದು'' ಎಂದಿದ್ದಾರೆ.
ಸುಕೇಶ್ ಚಂದ್ರಶೇಖರ್ ಅವರು ಉನ್ನತ ವ್ಯಕ್ತಿಗಳು ಮತ್ತು ಸೆಲೆಬ್ರಿಟಿಗಳಿಂದ ಹಣ ವಸೂಲಿ ಮಾಡಿದ ಆರೋಪದ ಮೇಲೆ ದೆಹಲಿಯ ಮಂಡೋಲಿ ಜೈಲಿನಲ್ಲಿದ್ದಾರೆ. ಮೊದಲು ತಿಹಾರ್ ಜೈಲಿನಲ್ಲಿ ಅವರನ್ನು ಇರಿಸಲಾಗಿತ್ತು. ಆದರೆ ಸುಕೇಶ್ ಅವರು ಪದೇ ಪದೇ ವಿನಂತಿಸಿದ ನಂತರ ಅವರನ್ನು ಸ್ಥಳಾಂತರಿಸಲಾಯಿತು. ತಿಹಾರ್ ಜೈಲಿನಿಂದ ತನಗೆ ಪ್ರಾಣ ಬೆದರಿಕೆ ಇದೆ ಎಂದು ಹೇಳಿಕೊಂಡಿದ್ದರು.