ಗುಜರಾತ್ ಚುನಾವಣೆಯಲ್ಲಿ 'OTP ಸೂತ್ರ' ಬಳಸುವುದಿಲ್ಲ ಎಂದಿದ್ದೇಕೆ ಕೇಜ್ರಿವಾಲ್?
ಗಾಂಧಿನಗರ, ನವೆಂಬರ್ 05: ಗುಜರಾತ್ನ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷವು ಅಧಿಕಾರಕ್ಕೆ ಬಂದರೆ ಕೇವಲ ಒಂದು ಜಾತಿ ಅಥವಾ ಸಮುದಾಯಕ್ಕಾಗಿ ಕೆಲಸ ಮಾಡುವುದಿಲ್ಲ, ಬದಲಿಗೆ ರಾಜ್ಯದ ಪ್ರತಿಯೊಬ್ಬ ಪ್ರಜೆಗಳಿಗಾಗಿ ಕೆಲಸ ಮಾಡುತ್ತದೆ ಎಂದು ಆಪ್ ಮುಖ್ಯಸ್ಥ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ಖಾಸಗಿ ಸುದ್ದಿವಾಹಿನಿಗೆ ಸಂದರ್ಶನ ನೀಡಿದ ಅವರು, ತಾವು ಗುಜರಾತ್ ವಿಧಾನಸಭಾ ಚುನಾವಣೆಯನ್ನು ಎಲ್ಲಾ ಜನರ ಬೆಂಬಲದಿಂದ ಗೆಲ್ಲುವುದಕ್ಕೆ ಬಯಸುತ್ತೇವೆಯೇ ಹೊರತೂ ಜಾತಿ ರಾಜಕಾರಣವನ್ನು ಮಾಡಲು ಬಯಸುವುದಿಲ್ಲ ಎಂದರು.
ತಮ್ಮ ವೈಯಕ್ತಿಕ ಅನುಭವವನ್ನು ವಿವರಿಸಿದ ಕೇಜ್ರಿವಾಲ್, ಬಹುಕಾಲದಿಂದ ಬಿಜೆಪಿ ಭದ್ರಕೋಟೆಯಾಗಿರುವ ಗುಜರಾತ್ನಲ್ಲಿ ನೆಲೆಯೂರಲು "ಒಟಿಪಿ ಸೂತ್ರ"ವನ್ನು ಬಳಸುತ್ತಿದ್ದೀರಾ ಎಂದು ಇತ್ತೀಚೆಗೆ ಕೇಳಲಾಗಿತ್ತು ಎಂದು ಕೇಜ್ರಿವಾಲ್ ಹೇಳಿದರು. ಒಟಿಪಿ ಸೂತ್ರ ಎಂದರೇನು ಎಂಬ ಪ್ರಶ್ನೆಗೆ ಉತ್ತರವನ್ನು ನೀಡಲಾಗಿತ್ತು. ಒಟಿಪಿ ಎಂದರೆ, ಒಬಿಸಿ(OBC), ಆದಿವಾಸಿಗಳು(Tribals) ಮತ್ತು ಪಟಿದಾರ್(Patidars)," ಎಂದರು.

ಬಿಜೆಪಿಯ ಒಡೆದ ಮತಗಳೆಲ್ಲ ಎಎಪಿಗೆ ಬರುತ್ತೆ ಎಂದ ಕೇಜ್ರಿವಾಲ್
"ನಾವು ವಿದ್ಯುತ್ ಅನ್ನು ಉಚಿತವಾಗಿ ನೀಡಿದರೆ, ಅದು ಎಲ್ಲರಿಗೂ ಆಗಿರುತ್ತದೆ. ನಾವು ಶಾಲೆಗಳನ್ನು ನಿರ್ಮಿಸಿದರೆ, ಅದು ಪ್ರತಿಯೊಬ್ಬರ ಮಕ್ಕಳಿಗಾಗಿ ಆಗಿರುತ್ತದೆ. ನಮ್ಮ ಪಕ್ಷ ಒಂದೇ ಜಾತಿಗಾಗಿ ಕೆಲಸ ಮಾಡುವುದಿಲ್ಲ, ಎಲ್ಲರಿಗಾಗಿ ಕೆಲಸ ಮಾಡುತ್ತದೆ. ಗುಜರಾತ್ನಲ್ಲಿ ಎಎಪಿಯ ಚುನಾವಣಾ ನಿರೀಕ್ಷೆಗಳ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ ಕೇಜ್ರಿವಾಲ್, ಬಿಜೆಪಿ ಮತ ಹಂಚಿಕೆಯು ಶೇಕಡಾ 20ರಷ್ಟು ಕಡಿಮೆಯಾಗಿದೆ ಎಂದರು. ಈ ಕುರಿತು ಅವರು ತಮ್ಮ ಪಕ್ಷದ ಆಂತರಿಕ ಸಮೀಕ್ಷೆಗಳನ್ನು ಉಲ್ಲೇಖಿಸಿದ್ದಾರೆ. ಆ ಎಲ್ಲಾ ಮತಗಳು ನಮಗೆ ಬರುತ್ತಿವೆ, ಕಾಂಗ್ರೆಸ್ಗೆ ಅಲ್ಲ ಎಂದು ಹೇಳಿದರು.

ದೆಹಲಿ ಮತ್ತು ಗುಜರಾತ್ ಪೈಕಿ ಕೇಜ್ರಿವಾಲ್ ಪ್ರಚಾರ ಎಲ್ಲಿ?
ಗುಜರಾತ್ ವಿಧಾನಸಭೆ ಚುನಾವಣೆ ಹೊಸ್ತಿಲಿನಲ್ಲೇ ದೆಹಲಿಯ ಮಹಾನಗರ ಪಾಲಿಕೆಗಳಿಗೆ ಚುನಾವಣೆಯು ನಡೆಯಲಿದೆ. ನೀವು ಈ ಪೈಕಿ ಎಲ್ಲಿ ಹೆಚ್ಚು ಪ್ರಚಾರ ಕಾರ್ಯವನ್ನು ಮಾಡುತ್ತೀರಿ ಎಂಬ ಪ್ರಶ್ನೆಗೆ ಅರವಿಂದ್ ಕೇಜ್ರಿವಾಲ್ ಒಂದು ವ್ಯಾಖ್ಯದಲ್ಲಿ ಉತ್ತರಿಸಿದರು. "ನಾವಲ್ಲ, ಜನರೇ ಪ್ರಚಾರವನ್ನು ಮಾಡುತ್ತಾರೆ. ಅದೇ ಜನರು ನಮ್ಮನ್ನು ದೆಹಲಿ ಮುನ್ಸಿಪಲ್ ಚುನಾವಣೆ ಮತ್ತು ಗುಜರಾತ್ ಚುನಾವಣೆಯನ್ನು ಗೆಲ್ಲುವಂತೆ ಮಾಡುತ್ತಾರೆ," ಎಂದರು.

ಬಿಜೆಪಿಯ ವಿರುದ್ಧ ಅರವಿಂದ್ ಕೇಜ್ರಿವಾಲ್ ಗುಡುಗು
ನವದೆಹಲಿಯಲ್ಲಿ ವಾಯುಮಾಲಿನ್ಯ ಸಮಸ್ಯೆಯನ್ನು ಎದುರಿಸುತ್ತಿರುವ ಇಂಥ ಸಂದರ್ಭದಲ್ಲಿ ಬಿಜೆಪಿ ನಾಯಕರು ಗುಜರಾತ್ ವಿಧಾನಸಭಾ ಚುನಾವಣೆ ಮೇಲೆ ಹೆಚ್ಚು ಲಕ್ಷ್ಯ ವಹಿಸಿದ್ದಾರೆ. ಈ ರೀತಿ ನಿರ್ಲಕ್ಷ್ಯ ತೋರುತ್ತಿರುವ ಬಿಜೆಪಿ ನಾಯಕರ ನಡೆಗೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕಿಡಿ ಕಾರಿದರು. ಬಿಜೆಪಿಯು ನವದೆಹಲಿ ವಾಯುಮಾಲಿನ್ಯದ ಸಮಸ್ಯೆಯನ್ನು ಬದಿಗೆ ಸರಿಸಿ ಚುನಾವಣೆಗಳ ಮೇಲೆ ಹೆಚ್ಚು ಫೋಕಸ್ ಮಾಡುತ್ತಿದೆ ಎಂದು ದೂಷಿಸಿದರು.

ಗುಜರಾತ್ನಲ್ಲಿ ಚುನಾವಣೆ ನಡೆಯುವುದು ಯಾವಾಗ?
ಗುಜರಾತ್ನಲ್ಲಿ ಒಟ್ಟು ಎರಡು ಹಂತಗಳಲ್ಲಿ 182 ವಿಧಾನಸಭೆಗಳಿಗೆ ಚುನಾವಣೆ ನಡೆಯಲಿದೆ. ಮೊದಲ ಹಂತದಲ್ಲಿ 89 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಸಲಾಗುತ್ತದೆ. ಈ ಸಂಬಂಧ ನವೆಂಬರ್ 5ರಂದು ಅಧಿಸೂಚನೆ ಹೊರಡಿಸಲಾಗಿದೆ. ನವೆಂಬರ್ 14 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನಾಂಕವಾಗಿದ್ದು, ನವೆಂಬರ್ 15 ನಾಮಪತ್ರ ಪರಿಶೀಲನೆ, ನವೆಂಬರ್ 17 ನಾಮಪತ್ರ ವಾಪಸ್ ಪಡೆಯಲು ಕೊನೆ ದಿನಾಂಕವಾಗಿದೆ. ಡಿಸೆಂಬರ್ 1ರಂದು ಮೊದಲ ಹಂತದಲ್ಲಿ ಮತದಾನ ಪ್ರಕ್ರಿಯೆ ನಡೆಯಲಿದೆ.
ಅದೇ ರೀತಿ ಗುಜರಾತ್ನ 93 ವಿಧಾನಸಭಾ ಕ್ಷೇತ್ರಗಳಿಗೆ ಎರಡನೇ ಹಂತದಲ್ಲಿ ಚುನಾವಣೆ ನಡೆಸಲಾಗುತ್ತದೆ. ಈ ಸಂಬಂಧ ನವೆಂಬರ್ 10ರಂದು ಅಧಿಸೂಚನೆ ಹೊರಡಿಸಲಾಗಿದೆ. ನವೆಂಬರ್ 17ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನಾಂಕವಾಗಿದ್ದು, ನವೆಂಬರ್ 18ರಂದು ನಾಮಪತ್ರ ಪರಿಶೀಲನೆ, ನವೆಂಬರ್ 21ರಂದು ನಾಮಪತ್ರ ವಾಪಸ್ ಪಡೆಯಲು ಕೊನೆ ದಿನಾಂಕವಾಗಿದೆ. ಡಿಸೆಂಬರ್ 5ರಂದು ಎರಡನೇ ಹಂತದಲ್ಲಿ ಮತದಾನ ಪ್ರಕ್ರಿಯೆ ನಡೆಸಲಾಗುತ್ತದೆ. ಅಂತಿಮವಾಗಿ ಡಿಸೆಂಬರ್ 8ರಂದು 182 ವಿಇಧಾನಸಭಾ ಕ್ಷೇತ್ರಗಳ ಚುನಾವಣಾ ಫಲಿತಾಂಶ ಹೊರಬೀಳಲಿದೆ.












Click it and Unblock the Notifications