ದೆಹಲಿ ಆಸಿಡ್ ದಾಳಿ: ಪೊಲೀಸರಿಗೇ ಚಳ್ಳೆಹಣ್ಣು ತಿನಿಸಲು ಯತ್ನಿಸಿದ್ದ ಖತರ್ನಾಕ್ ಆರೋಪಿ
ದೆಹಲಿ ಡಿಸೆಂಬರ್ 15: ದೆಹಲಿ ಶ್ರದ್ಧಾ ಹತ್ಯೆ ಪ್ರಕರಣದ ಬಳಿಕ ಮತ್ತೊಂದು ಭಯಾನಕ ದಾಳಿ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ದೆಹಲಿಯಲ್ಲಿ ಬಾಲಕಿ ಮೇಲೆ ಆಸಿಡ್ ದಾಳಿಯ ಅಮಾನವೀಯ ಘಟನೆ ಮಹಿಳೆಯರ ಸುರಕ್ಷತೆಯ ಬಗ್ಗೆ ಮತ್ತೆ ಯೋಚಿಸುವಂತೆ ಮಾಡಿದೆ. 12 ನೇ ತರಗತಿಯ ವಿದ್ಯಾರ್ಥಿನಿ ಬೆಳಿಗ್ಗೆ (ಡಿಸೆಂಬರ್ 14) ಶಾಲೆಗೆ ತೆರಳುತ್ತಿದ್ದ ವೇಳೆ ಬೈಕ್ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಆಕೆಯ ಮೇಲೆ ಆಸಿಡ್ ಎರಚಿ ಪರಾರಿಯಾಗಿದ್ದರು. ಘಟನೆ ನಡೆದ ಕೆಲವೇ ಘಟನೆಗಳಲ್ಲಿ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇದಕ್ಕೂ ಮುನ್ನ ಖತರ್ನಾಕ್ ಆರೋಪಿ ಪೊಲೀಸರಿಗೇ ಚಳ್ಳೆಹಣ್ಣು ತಿನಿಸಲು ಯತ್ನಿಸಿರುವುದು ಬೆಳಕಿಗೆ ಬಂದಿದೆ.
ದೆಹಲಿ ಪೊಲೀಸರು ದ್ವಾರಕಾ ಆಸಿಡ್ ದಾಳಿಯ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಮೂವರು ಆರೋಪಿಗಳನ್ನು ಸಚಿನ್ ಅರೋರಾ (20), ಹರ್ಷಿತ್ ಅಗರ್ವಾಲ್(19) ಮತ್ತು ವೀರೇಂದ್ರ ಸಿಂಗ್ (22) ಎಂದು ಗುರುತಿಸಲಾಗಿದೆ. ಪೊಲೀಸರ ಪ್ರಕಾರ, 12 ನೇ ತರಗತಿಯ ವಿದ್ಯಾರ್ಥಿಯು ಕೆಲವು ತಿಂಗಳ ಹಿಂದೆ ಪ್ರಮುಖ ಆರೋಪಿ ಸಚಿನ್ ಅರೋರಾ (20) ನೊಂದಿಗೆ ಸ್ನೇಹವನ್ನು ಕೊನೆಗೊಳಿಸಿದ್ದರಿಂದ ಸೇಡು ತೀರಿಸಿಕೊಳ್ಳುವ ಉದ್ದೇಶದಿಂದ ಆತ ಬಾಲಕಿ ಮೇಲೆ ಆಸಿಡ್ ದಾಳಿ ಮಾಡಿದ್ದಾನೆಂದು ತಿಳಿದುಬಂದಿದೆ.
ದೆಹಲಿ ಸರ್ಕಾರದಿಂದ 450 ಬಗೆಯ ವೈದ್ಯಕೀಯ ಪರೀಕ್ಷೆಗಳು ಉಚಿತ
ಪೊಲೀಸರಿಗೇ ಚಳ್ಳೆಹಣ್ಣು ತಿನಿಸಲು ಯತ್ನ
ಘಟನೆಯ ದಿನ, ಸಚಿನ್ ಮತ್ತು ಹರ್ಷಿತ್ ಶಾಲಾ ಬಾಲಕಿಯ ಮೇಲೆ ಆಸಿಡ್ ಎರಚಲು ಬೈಕ್ನಲ್ಲಿ ಬಂದರು. ಆದರೆ ವೀರೇಂದ್ರ ಸಚಿನ್ನ ಸ್ಕೂಟರ್ ಮತ್ತು ಮೊಬೈಲ್ ಫೋನ್ ಅನ್ನು ಮತ್ತೊಂದು ಸ್ಥಳಕ್ಕೆ ತೆಗೆದುಕೊಂಡು ಪೊಲೀಸರನ್ನು ದಾರಿ ತಪ್ಪಿಸುತ್ತಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಹರ್ಷಿತ್ ಬೈಕ್ ಚಲಾಯಿಸುತ್ತಿದ್ದಾಗ ಸಚಿನ್ ಬಾಲಕಿಯ ಮೇಲೆ ಆಸಿಡ್ ಎರಚಿದ್ದಾನೆ. ಪ್ರಮುಖ ಆರೋಪಿಯು ಇ-ಕಾಮರ್ಸ್ ಪ್ಲಾಟ್ಫಾರ್ಮ್ ಫ್ಲಿಪ್ಕಾರ್ಟ್ನಿಂದ ಆಸಿಡ್ ತಂದಿದ್ದಾನೆ ಎಂದು ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
17 ವರ್ಷದ ಆಸಿಡ್ ದಾಳಿಯ ಸಂತ್ರಸ್ತೆಯ ತಂದೆ, 'ಅಂತಹ ಕೆಲಸವನ್ನು ಮಾಡಬಹುದೆಂದು ನನಗೆ ಯಾವುದೇ ಸುಳಿವು ಇಲ್ಲ ಮತ್ತು ತನ್ನ ಮಗಳು ಯಾವುದೇ ಕಿರುಕುಳದ ಬಗ್ಗೆ ಎಂದಿಗೂ ದೂರು ನೀಡಲಿಲ್ಲ' ಎಂದು ಹೇಳಿದರು.
ಆಕೆ ತನ್ನ ಸಹೋದರಿಯೊಂದಿಗೆ ಶಾಲೆಗೆ ಹೋಗಲು ಪಶ್ಚಿಮ ದೆಹಲಿಯ ಮನೆಯಿಂದ ಹೊರಟ ಕೆಲವೇ ನಿಮಿಷಗಳಲ್ಲಿ, ಇಬ್ಬರು ಮುಸುಕುಧಾರಿ ಬೈಕ್ನಲ್ಲಿ ಬಂದು ಆಸಿಡ್ ದಾಳಿ ನಡೆಸಿದರು. ಘಟನೆಯ ಬಗ್ಗೆ ಪೋಷಕರಿಗೆ ತಿಳಿಸಲು ಆಕೆಯ ಸಹೋದರಿ ಮನೆಗೆ ಧಾವಿಸಿದರು. ಆದರೆ ಕೆಲವು ಅಂಗಡಿಯವರು ಬಾಲಕಿಗೆ ಸಹಾಯ ಮಾಡಿದ್ದಾರೆ.
ಬಾಲಕಿಯ ಸ್ಥಿತಿ ಚಿಂತಾಜನಕ
ಬಾಲಕಿಯ ಮುಖದಲ್ಲಿ ಶೇಕಡ ಏಳರಿಂದ ಎಂಟು ರಷ್ಟು ಸುಟ್ಟ ಗಾಯಗಳಾಗಿದ್ದು, ಆಕೆಯ ಕಣ್ಣುಗಳಿಗೂ ಹಾನಿಯಾಗಿದೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಬಲಿಪಶುವಿನ ಸ್ಥಿತಿ ಚಿಂತಾಜನಕವಾಗಿದೆ ಎಂದು ಅವರು ಹೇಳಿದ್ದಾರೆ. ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ನೀಲಿ ಬಣ್ಣದ ಬೈಕ್ನಲ್ಲಿ ಇಬ್ಬರು ವ್ಯಕ್ತಿಗಳು ಸಂತ್ರಸ್ತೆಯ ಮೇಲೆ ಆಸಿಡ್ ಎರಚಿರುವುದು ದೃಶ್ಯದಲ್ಲಿ ಸೆರೆಯಾಗಿದೆ. ಬುಧವಾರ ಬೆಳಗ್ಗೆ 7.30ಕ್ಕೆ ಮನೆಯಿಂದ ಶಾಲೆಗೆ ತೆರಳಿದ ಬಳಿಕ ಆಕೆಯ ಮೇಲೆ ದಾಳಿ ನಡೆದಿದೆ.
ಘಟನೆಯನ್ನು ಖಂಡಿಸಿದ ಡಿಸಿಡಬ್ಲ್ಯು
ದೆಹಲಿ ಮಹಿಳಾ ಆಯೋಗದ (ಡಿಸಿಡಬ್ಲ್ಯು) ಮುಖ್ಯಸ್ಥೆ ಸ್ವಾತಿ ಮಲಿವಾಲ್ ಘಟನೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಇಂತಹ ಘೋರ ಅಪರಾಧಗಳನ್ನು ತಡೆಯಲು ಆಸಿಡ್ ಮಾರಾಟವನ್ನು ಏಕೆ ನಿರ್ಬಂಧಿಸಬಾರದು ಎಂದು ಪ್ರಶ್ನಿಸಿದ್ದಾರೆ. ಹಲವಾರು ಶಿಫಾರಸುಗಳು ಮತ್ತು ಸೂಚನೆಗಳನ್ನು ನೀಡಿದ್ದರೂ, ದೇಶದಲ್ಲಿ ಆಸಿಡ್ ಚಿಲ್ಲರೆ ಮಾರಾಟವಾಗಿಬಿಟ್ಟಿದೆ. ಆಸಿಡ್ ಅನ್ನು ತರಕಾರಿಗಳನ್ನು ಮಾರಾಟ ಮಾಡುವಂತೆ ಮಾರಾಟ ಮಾಡಲಾಗುತ್ತದೆ ಎಂದು ಆರೋಪಿಸಿ ಮಲಿವಾಲ್ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
'ಹೆಣ್ಣು ಮಗುವಿನ ಸುರಕ್ಷತೆ ನಮಗೆ ಮುಖ್ಯ' ಕೇಜ್ರಿವಾಲ್
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪಶ್ಚಿಮ ದೆಹಲಿಯಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಆಸಿಡ್ ಎಸೆದ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿದರು. ಈ ಮೂಲಕ ನಗರದ ಪ್ರತಿಯೊಂದು ಮಗುವಿನ ಬಗ್ಗೆ ಸರ್ಕಾರವು ಕಾಳಜಿ ವಹಿಸುತ್ತದೆ ಎಂದು ಹೇಳಿದರು. 'ಇದನ್ನು ಸಹಿಸಲಾಗುವುದಿಲ್ಲ. ಆರೋಪಿಗೆ ಇಷ್ಟೊಂದು ಧೈರ್ಯ ಬಂದಿದ್ದು ಹೇಗೆ? ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು. ದೆಹಲಿಯಲ್ಲಿರುವ ಪ್ರತಿ ಹೆಣ್ಣು ಮಗುವಿನ ಸುರಕ್ಷತೆ ನಮಗೆ ಮುಖ್ಯವಾಗಿದೆ' ಎಂದು ಕೇಜ್ರಿವಾಲ್ ಹೇಳಿದ್ದಾರೆ.
ಮಾಧ್ಯಮ ವರದಿಗಳ ಪ್ರಕಾರ, 2018 ಮತ್ತು 2021 ರ ನಡುವೆ ದೆಹಲಿಯಲ್ಲಿ 32 ಆಸಿಡ್ ದಾಳಿ ಪ್ರಕರಣಗಳು ವರದಿಯಾಗಿವೆ. 2018 ರಲ್ಲಿ ನಗರದಲ್ಲಿ 11 ಪ್ರಕರಣಗಳು ಮತ್ತು 2019 ರಲ್ಲಿ 10 ಪ್ರಕರಣಗಳು ದಾಖಲಾಗಿವೆ. 2020 ರಲ್ಲಿ ಕೊರೊನವೈರಸ್ ಕಾರಣದಿಂದಾಗಿ ರಾಷ್ಟ್ರವ್ಯಾಪಿ ಲಾಕ್ಡೌನ್ ಅನ್ನು ಕಂಡ ವರ್ಷವಾಗಿತ್ತು. ಹೀಗಾಗಿ ಈ ವರ್ಷ ರಾಷ್ಟ್ರೀಯ ರಾಜಧಾನಿ ಎರಡು ಪ್ರಕರಣಗಳನ್ನು ವರದಿ ಮಾಡಿದೆ. ಇನ್ನೂ 2021 ರಲ್ಲಿ ಒಂಬತ್ತು ಪ್ರಕರಣಗಳು ದಾಖಲಾಗಿವೆ.