ಬ್ರಾಹ್ಮಣರ ವಿರುದ್ದ ಹೇಳಿಕೆ: ಛತ್ತೀಸ್ಗಢ ಸಿಎಂ ತಂದೆ ಜೈಲು ಪಾಲು
ರಾಯ್ಪುರ, ಸೆಪ್ಟೆಂಬರ್ 07: ಬ್ರಾಹ್ಮಣ ಸಮುದಾಯದ ವಿರುದ್ದ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದ ಛತ್ತೀಸ್ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ತಂದೆ ನಂದ ಕುಮಾರ್ ಬಘೇಲ್ರನ್ನು ಬಂಧನ ಮಾಡಲಾಗಿದ್ದು, ರಾಯ್ಪುರದ ಕೋರ್ಟ್ 15 ದಿನಗಳ ಕಸ್ಟಡಿ ವಿಧಿಸಿದೆ.
ತನ್ನ ತಂದೆಯನ್ನು ಪೊಲೀಸರು ಬಂಧನ ಮಾಡಿದ್ದ ಬೆನ್ನಲ್ಲೇ ಈ ಬಗ್ಗೆ ಹೇಳಿಕೆ ನೀಡಿದ ಛತ್ತೀಸ್ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್, "ಕಾನೂನಿನ ಎದುರು ಎಲ್ಲರೂ ಸಮಾನರೇ, ನನ್ನ ಸರ್ಕಾರದಲ್ಲಿ ಯಾರೂ ಮೇಲಿಲ್ಲ," ಎಂದು ಹೇಳಿದ್ದಾರೆ.
ಛತ್ತೀಸ್ಗಢ ರಾಜಕೀಯ ಬಿಕ್ಕಟ್ಟು: ಭೂಪೇಶ್ಗೂ ಮುನ್ನ ದೆಹಲಿಯತ್ತ ಶಾಸಕರ ದೌಡು
"ನನ್ನ ಸರ್ಕಾರದಲ್ಲಿ ಎಲ್ಲರೂ ಕಾನೂನಿನ ಎದುರು ಸಮಾನರು. ಅದು ಮುಖ್ಯಮಂತ್ರಿಯ 86 ವರ್ಷದ ತಂದೆಯಾದರೂ ಕೂಡಾ ಕಾನೂನಿಗೆ ಸಮಾನರು. ಮುಖ್ಯಮಂತ್ರಿಯಾಗಿರುವ ನಾನು ಎಲ್ಲಾ ಸಮುದಾಯದ ನಡುವೆ ಏಕತೆ, ಸೌಹಾರ್ಧತೆಯನ್ನು ಕಾಪಾಡಿಕೊಳ್ಳುವಂತೆ ನೋಡಿಕೊಳ್ಳುವುದು ನನ್ನ ಕರ್ತವ್ಯ. ನನ್ನ ತಂದೆ ಯಾವುದೇ ಸಮುದಾಯದ ವಿರುದ್ದ ಅವಹೇಳನಕಾರಿ ಹೇಳಿಕೆ ನೀಡಿದ್ದರೆ, ನಾನು ಕ್ಷಮೆ ಕೇಳುತ್ತೇನೆ. ಹಾಗೆಯೇ ಕಾನೂನು ಕ್ರಮವನ್ನು ಕೂಡಾ ಕೈಗೊಳ್ಳಲಾಗುವುದು," ಎಂದು ತಿಳಿಸಿದ್ದಾರೆ.
"ನನ್ನ ತಂದೆಗೂ ಹಾಗೂ ನನಗೂ ಇರುವ ಸಿದ್ದಾಂತದ ವ್ಯತ್ಯಾಸಗಳು ಎಲ್ಲರಿಗೂ ತಿಳಿದಿದೆ. ನಮ್ಮ ರಾಜಕೀಯ ಸಿದ್ದಾಂತಗಳು ಹಾಗೂ ನಂಬಿಕೆಗಳು ಬೇರೆ ಬೇರೆಯಾಗಿದೆ. ನಾನು ಆತನ ಮಗನಾಗಿ ನನ್ನ ತಂದೆಯನ್ನು ಗೌರವಿಸುತ್ತೇನೆ. ಆದರೆ ಮುಖ್ಯಮಂತ್ರಿಯಾಗಿ ನಾನು ನನ್ನ ತಂದೆಯನ್ನು ಈ ರೀತಿ ಸಮಾಜದ ಶಾಂತಿ ಕದಡುವ ಹೇಳಿಕೆ ನೀಡಿದರೂ ಕ್ಷಮಿಸಲು ಸಾಧ್ಯವಿಲ್ಲ," ಎಂದಿದ್ದಾರೆ.
ಹಾಗೆಯೇ "ಛತ್ತೀಸ್ಗಢ ಸರ್ಕಾರ ಎಲ್ಲ ಧರ್ಮ, ಜಾತಿ, ಸಮುದಾಯವನ್ನು ಗೌರವಿಸುತ್ತದೆ. ಎಲ್ಲರಿಗೂ ಸಮಾನವಾದ ಆದ್ಯತೆಯನ್ನು ನೀಡಲಾಗುವುದು," ಎಂದು ಈ ಸಂದರ್ಭದಲ್ಲೇ ಹೇಳಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಛತ್ತೀಸ್ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್, "ಮಗನಾಗಿ ನಾನು ತಂದೆಯನ್ನು ಕ್ಷಮಿಸಬಲ್ಲೆ, ಆದರೆ ಮುಖ್ಯಮಂತ್ರಿಯಾಗಿ ಇಂತಹ ಸಮಾಜದ ಸ್ವಾಸ್ಥ್ಯಕ್ಕೆ ಧಕ್ಕೆ ತರುವ ಹೇಳಿಕೆ ನೀಡಿರುವುದನ್ನು ಕ್ಷಮಿಸಲು ಸಾಧ್ಯವಿಲ್ಲ," ಎಂದಿದ್ದಾರೆ.
ಕಾಂಗ್ರೆಸ್ಗೆ ಮತ್ತೆ ಬಂಡಾಯಗಾರರ ಕಾಟ: ಎಚ್ಚರ ತಪ್ಪಿದರೆ 'ಕೈ' ಜಾರೀತು ಆಡಳಿತ
ಉತ್ತರ ಪ್ರದೇಶದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ "ಬ್ರಾಹ್ಮಣರು ವಿದೇಶಿಯರು. ಅವರನ್ನು ನಾವು ಬಹಿಷ್ಕರಿಸಬೇಕು. ಬ್ರಾಹ್ಮಣರನ್ನು ನಾವು ಗ್ರಾಮಗಳಿಗೆ ಬಿಟ್ಟುಕೊಳ್ಳಬಾರದು. ಅವರನ್ನು ದೇಶದಿಂದಲೇ ಹೊರ ಹಾಕಬೇಕು," ಎಂದು ಛತ್ತೀಸ್ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ತಂದೆ ನಂದ ಕುಮಾರ್ ಬಘೇಲ್ ಹೇಳಿದ್ದರು.
ಈ ಹಿನ್ನೆಲೆ ಭಾನುವಾರ ಸರ್ವ ಬ್ರಾಹ್ಮಣ ಸಮಾಜ ನಂದ ಕುಮಾರ್ ಅವರ ವಿರುದ್ಧ ರಾಯ್ಪುರ ನಗರ ಠಾಣೆಗೆ ದೂರು ನೀಡಿದೆ. ಪೊಲೀಸರು ಭಾರತೀಯ ದಂಡ ಸಂಹಿತೆಯ ಕಲಂ 153-A ( ಧರ್ಮ, ಜಾತಿ, ಭಾಷೆ ವಿಚಾರದಲ್ಲಿ ಎರಡು ಕೋಮುಗಳ ನಡುವೆ ದ್ವೇಷ ಸೃಷ್ಠಿಸುವುದು), 505(1)(b) (ಜನರಲ್ಲಿ ಭಯ ಮೂಡಿಸಿ ಅವರು ಅಪರಾಧ ಮಾಡುವಂತೆ ಮಾಡುವುದು) ರ ಅಡಿಯಲ್ಲಿ ದೂರು ದಾಖಲು ಮಾಡಿದ್ದಾರೆ. ಬ್ರಾಹ್ಮಣ ಸಮಾಜ ನೀಡಿದ ದೂರಿನನ್ವಯ ನಂದ ಕುಮಾರ್ ಬಘೇಲ್ ವಿರುದ್ಧ ದೀನ್ ದಯಾಳ್ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ಕೂಡ ದಾಖಲಾಗಿದೆ. ಈಗ ಮುಖ್ಯಮಂತ್ರಿಯ ತಂದೆಯನ್ನೇ ಬಂಧನ ಮಾಡಲಾಗಿದೆ. ಕೋರ್ಟ್ ನ್ಯಾಯಾಂಗ ಬಂಧನ ವಿಧಿಸಿದೆ.
(ಒನ್ ಇಂಡಿಯಾ ಸುದ್ದಿ)