ಕೇಸರಿ ಸ್ಕೆಚ್: ಛತ್ತೀಸ್ಗಢದಲ್ಲಿ ನಾಯಕತ್ವ ಬದಲಾಯಿಸಿದ್ದೇಕೆ ಬಿಜೆಪಿ?
ರಾಯಪುರ್, ಆಗಸ್ಟ್ 10: ಛತ್ತೀಸ್ಗಢದಲ್ಲಿ ಬಿಜೆಪಿಯು ತನ್ನ ಪಕ್ಷದ ನಾಯಕತ್ವವನ್ನು ಹಿಂದುಳಿದ ವರ್ಗದ (ಓಬಿಸಿ) ನಾಯಕ ಅರುಣ್ ಸಾವೊ ಹೆಗಲಿಗೆ ಒಪ್ಪಿಸಿದೆ. ಕಾಂಗ್ರೆಸ್ ಸರ್ಕಾರದ ಅಧಿಕಾರದಲ್ಲಿರುವ ಈ ರಾಜ್ಯದಲ್ಲಿ ಮುಂದಿನ ವರ್ಷವೇ ಚುನಾವಣೆ ನಡೆಯಲಿದೆ.
ವಿಧಾನಸಭೆ ಚುನಾವಣೆ ಹೊಸ್ತಿಲಿನಲ್ಲಿ ಬಿಜೆಪಿಯು ತನ್ನ ನಾಯಕತ್ವವನ್ನು ಬದಲಾಯಿಸಿರುವುದು ರಾಜಕೀಯ ತಂತ್ರಗಾರಿಕೆಯನ್ನು ಎತ್ತಿ ತೋರಿಸುವಂತಿದೆ. ಈ ಸಂಬಂಧ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್, ಪಕ್ಷದ ಅಧ್ಯಕ್ಷ ಜೆ. ಪಿ. ನಡ್ಡಾ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ದೇಶದಲ್ಲೇ ಮೊದಲ ಬಾರಿ ಛತ್ತೀಸ್ಗಢ ಸರ್ಕಾರದಿಂದ ಗೋಮೂತ್ರ ಖರೀದಿ ಪ್ರಾರಂಭ
ಛತ್ತೀಸ್ಗಢದಲ್ಲಿ ತಕ್ಷಣದಿಂದಲೇ ಜಾರಿಗೆ ಬರುವಂತೆ ಅರುಣ್ ಸಾವೊ ಅನ್ನು ಬಿಜೆಪಿ ರಾಜ್ಯಾಧ್ಯಕ್ಷರಾಗಿ ನೇಮಕಗೊಳಿಸಲಾಗಿದೆ. ಪ್ರಮುಖ ಬುಡಕಟ್ಟು ನಾಯಕ ವಿಷ್ಣುದೇವ್ ಸಾಯಿ ಸ್ಥಾನಕ್ಕೆ ಅರುಣ್ ಸಾವೊರನ್ನು ನೇಮಿಸಲಾಗಿದೆ.
ಬಿಜೆಪಿ ತಂತ್ರದ ಹಿಂದೆ ಭೂಪೇಶ್ ಬಾಘೇಲ್ ಟಾರ್ಗೆಟ್
ಸಾಹು ಸಮುದಾಯದಿಂದ ಬಂದಿರುವ, ಛತ್ತೀಸ್ಗಢದಲ್ಲಿ ಕಾಂಗ್ರೆಸ್ನ ಪ್ರಮುಖ ಒಬಿಸಿ ಮುಖವಾಗಿರುವ ಮುಖ್ಯಮಂತ್ರಿ ಭೂಪೇಶ್ ಬಾಘೇಲ್ ಅನ್ನು ಎದುರಿಸಲು ಬಿಜೆಪಿಯ ತಂತ್ರದ ಭಾಗವಾಗಿ ನಾಯಕತ್ವ ಬದಲಾವಣೆ ಮಾಡಲಾಗಿದೆ. ಆ ಮೂಲಕ ಬಾಘೇಲ್ ಪ್ರಭಾವದ ಮತ್ತು ಕಾಂಗ್ರೆಸ್ ಸರ್ಕಾರಕ್ಕೆ ಸೆಡ್ಡು ಹೊಡೆಯಲು ಬಿಜೆಪಿ ಪ್ಲ್ಯಾನ್ ರೂಪಿಸಿದೆ. ಇದರ ಜೊತೆಗೆ ವಿಧಾನಸಭೆ ಚುನಾವಣೆಗೆ ಸಿದ್ಧತೆಯ ಮಾಡಿಕೊಳ್ಳುವುದು ಹಾಗೂ ಕಾರ್ಯಕರ್ತರಲ್ಲಿ ಧೈರ್ಯ ತುಂಬುವ ಕಾರ್ಯಕ್ಕೆ ಬಿಜೆಪಿ ಅಣಿಯಾಗುತ್ತಿದೆ.
ಬಿಜೆಪಿಗೆ ಬುಡಕಟ್ಟು ಜನಾಂಗದ ನಾಯಕರೇ ಟಾರ್ಗೆಟ್
ಬಿಜೆಪಿಯ ಈ ಕ್ರಮವು ಕಾರ್ಯತಂತ್ರದಲ್ಲಿ ಮತ್ತೊಂದು ಬದಲಾವಣೆಯ ಸೂಚನೆಯಾಗಿದೆ. ಇಲ್ಲಿಯವರೆಗೆ, ಬಿಜೆಪಿಯು ತನ್ನ ನೆಲೆಯನ್ನು ನಿರ್ಮಿಸಲು ಬುಡಕಟ್ಟು ಜನಾಂಗದವರ ಮೇಲೆ ಹೆಚ್ಚು ಲಕ್ಷ್ಯ ವಹಿಸಿತ್ತು. ಅದು ನಂದಕುಮಾರ್ ಸಾಯಿ, ರಾಮ್ ಸೇವಕ್ ಪೈಕ್ರಾ, ವಿಕ್ರಮ್ ಉಸೇಂಡಿ, ಶಿವ ಪ್ರತಾಪ್ ಸಿಂಗ್ ಮತ್ತು ವಿಷ್ಣುದೇವ್ ಸಾಯಿ ಸೇರಿದಂತೆ ರಾಜ್ಯ ಘಟಕದ ಮುಖ್ಯಸ್ಥರ ಆಯ್ಕೆಯಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ಈ ಎಲ್ಲ ನಾಯಕರು ಬುಡಕಟ್ಟು ಜನಾಂಗದ ಹಿನ್ನೆಲೆಯಿಂದ ಬಂದವರು ಎಂದು ಗಮನಾರ್ಹವಾಗಿದೆ.
ಬಿಜೆಪಿಯಿಂದ ರಾಜ್ಯ ಘಟಕದಲ್ಲಿ ಬದಲಾವಣೆ ಗಾಳಿ
ಬಿಜೆಪಿಯು ರಾಜ್ಯ ಘಟಕದಲ್ಲಿ ಬದಲಾವಣೆಗಳನ್ನು ಮಾಡಲು ಸಜ್ಜಾಗಿದೆ. ಜುಲೈನಲ್ಲಿ ಛತ್ತೀಸ್ಗಢ ಮತ್ತು ಮಧ್ಯಪ್ರದೇಶವನ್ನು ನೋಡಿಕೊಳ್ಳಲು ಈಶಾನ್ಯದ ಪ್ರಾದೇಶಿಕ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಆಗಿದ್ದ ಅಜಯ್ ಜಮ್ವಾಲ್ ಅನ್ನು ಕರೆತಂದಿದೆ. 2018ರಲ್ಲಿ ರಮಣ್ ಸಿಂಗ್ ನೇತೃತ್ವದಲ್ಲಿ ಸೋತಿದ್ದ ಬಿಜೆಪಿ ಹಲವು ಉಪಚುನಾವಣೆಗಳಲ್ಲೂ ಮುಖಭಂಗ ಅನುಭವಿಸಿದೆ. ಹೀಗಾಗಿ ಮೂರನೇ ಅವಧಿಯಲ್ಲಿ ಅಧಿಕಾರ ನಡೆಯುತ್ತಿರುವ ಕಾಂಗ್ರೆಸ್ ಅನ್ನು ಸೋಲಿಸುವುದಕ್ಕೆ ಹೊಸ ಮಾರ್ಗವನ್ನು ಹುಡುಕುತ್ತಿದೆ. ಛತ್ತೀಸ್ಗಢ ಬಿಜೆಪಿ ಘಟಕಕ್ಕೆ ಹೊಸ ಶಕ್ತಿಯನ್ನು ತುಂಬುವ ಅಗತ್ಯವಿದ್ದ ಹಿನ್ನೆಲೆ ಬದಲಾವಣೆ ಗಾಳಿ ಬೀಸಿದೆ.
53 ವರ್ಷದ ಅರುಣ್ ಸಾವೊ ಹಿನ್ನೆಲೆ ಏನು?
ಛತ್ತೀಸ್ಗಢದ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಆಯ್ಕೆ ಆಗಿರುವ 53 ವರ್ಷದ ಅರುಣ್ ಸಾವೊ 1990ರಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಮೂಲಕ ಬಿಜೆಪಿ ನಂಟು ಬೆಳೆಸಿಕೊಂಡವರು. ತದನಂತರ ಬಿಜೆಪಿಯ ಯುವ ಘಟಕವಾಗಿರುವ ಭಾರತೀಯ ಜನತಾ ಯುವ ಮೋರ್ಚಾದ ಸದಸ್ಯರಾದರು. ಯುವ ಮೋರ್ಚಾದಲ್ಲಿ ಅವರು ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದರು. ವಕೀಲರಾಗಿರುವ ಸಾವೊ, ಬಿಲಾಸ್ಪುರದಿಂದ ಮೊದಲ ಬಾರಿಗೆ ಲೋಕಸಭಾ ಸಂಸದರಾಗಿ ಆಯ್ಕೆಯಾಗಿದ್ದರು.
ಛತ್ತೀಸ್ಗಢ ರಾಜಕೀಯದ ಹಿಂದೆ ಜಾತಿ ಲೆಕ್ಕಾಚಾರ?
2000ರಲ್ಲಿ ಮಧ್ಯಪ್ರದೇಶ ಬೇರ್ಪಟ್ಟ ಛತ್ತೀಸ್ಗಢದಲ್ಲಿ OBC ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನಸಂಖ್ಯೆಯು ಗಣನೀಯ ಪ್ರಮಾಣದಲ್ಲಿದೆ. ಛತ್ತೀಸ್ಗಢದ ಜನಸಂಖ್ಯೆಯಲ್ಲಿ ಸುಮಾರು ಶೇ.34ರಷ್ಟು ಬುಡಕಟ್ಟು ಜನಾಂಗದವರಾಗಿದ್ದರೆ, ಶೇ.45ರಷ್ಟು ಮಂದಿ ಒಬಿಸಿ ವರ್ಗಕ್ಕೆ ಸೇರಿದವರಾಗಿದ್ದಾರೆ. "ಒಬಿಸಿ ನಾಯಕನಾಗಿ ಇರುವುದೇ ಬಾಘೇಲ್ ಸ್ಥಾನಮಾನ ಮತ್ತು ಕಾಂಗ್ರೆಸ್ನ ಉನ್ನತ ಸ್ಥಾನಕ್ಕೆ ಏರಲು ದಾರಿ ಮಾಡಿ ಕೊಟ್ಟಿತು. ನಾಲ್ಕು ವರ್ಷ ಅಧಿಕಾರದಲ್ಲಿದ್ದರೂ ಅವರ ಜನಪ್ರಿಯತೆ ಮಾತ್ರ ಕಡಿಮೆಯಾಗಿಲ್ಲ. ಹೀಗಾಗಿಯೇ ಒಬಿಸಿ ಮುಖಕ್ಕೆ ರಾಜ್ಯ ಘಟಕದ ನೇತೃತ್ವ ವಹಿಸಲು ಅವಕಾಶ ನೀಡಲಾಗಿದೆ ಎಂದು ಬಿಜೆಪಿಯ ನಾಯಕರು ಹೇಳುತ್ತಿದ್ದಾರೆ.