ಕ್ಯಾನ್ಸರ್ ಪತ್ತೆಯಾದಾಗ ನನಗಾಗಿ ಅವರೆಲ್ಲ ಕಾಯ್ತಾರೆ ಅನ್ಕೊಂಡಿರಲಿಲ್ಲ: ನಟ ಶಿವರಾಜ್ಕುಮಾರ್ ಭಾವುಕ
ಕನ್ನಡ ಚಿತ್ರರಂಗದ 'ಹ್ಯಾಟ್ರಿಕ್ ಹೀರೋ' ಶಿವರಾಜ್ಕುಮಾರ್ ಸದ್ಯ ತಮ್ಮ ನಟನೆಯ ಹೊಸ ಸಿನಿಮಾಗಳ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗಷ್ಟೇ ಚೆನ್ನೈನಲ್ಲಿ ನಡೆದ ಸಿನಿಮಾ ಪ್ರಚಾರದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಶಿವಣ್ಣ, ತೆಲುಗು ನಟ ರಾಮ್ ಚರಣ್ ನಟನೆಯ ಬಹುನಿರೀಕ್ಷಿತ 'ಪೆದ್ದಿ' (Peddi) ಚಿತ್ರದ ಕುರಿತು ಅತ್ಯಂತ ಆಸಕ್ತಿದಾಯಕ ಮತ್ತು ಭಾವುಕ ವಿಷಯವೊಂದನ್ನು ರಿವೀಲ್ ಮಾಡಿದ್ದಾರೆ. ಇದೇ ವೇಳೆ ತಮಗಿದ್ದ ಕ್ಯಾನ್ಸರ್ ಬಗ್ಗೆಯೂ ಶಿವಣ್ಣ ಮಾತನಾಡಿದ್ದಾರೆ.
ಸಿನಿಮಾ ಬಿಡಲು ಯೋಚಿಸಿದ್ದೆ
ತಾವು ಎದುರಿಸಿದ ಕಠಿಣ ಆರೋಗ್ಯ ಸಮಸ್ಯೆ ಹಾಗೂ ಕ್ಯಾನ್ಸರ್ ಚಿಕಿತ್ಸೆಯ ಕಾರಣದಿಂದಾಗಿ 'ಪೆದ್ದಿ' ಸಿನಿಮಾದಿಂದ ಬಹುತೇಕ ಹೊರನಡೆಯಲು ತೀರ್ಮಾನಿಸಿದ್ದಾಗಿ ಶಿವಣ್ಣ ಮೊದಲ ಬಾರಿಗೆ ಹೇಳಿದ್ದಾರೆ. "ಪೆದ್ದಿ ಸಿನಿಮಾದ ನಿರ್ದೇಶಕ ಬುಚ್ಚಿ ಬಾಬು ಸನಾ ಅವರು ನನಗೆ ಕಥೆ ಹೇಳಿದಾಗ ಸಬ್ಜೆಕ್ಟ್ ತುಂಬಾ ಇಷ್ಟವಾಗಿತ್ತು. ಅಂದೇ ನಾನು ನಟ ರಾಮ್ ಚರಣ್ ಅವರೊಂದಿಗೂ ಮಾತನಾಡಿದ್ದೆ. ಆದರೆ, ಆನಂತರ ದುರದೃಷ್ಟವಶಾತ್ ನನಗೆ ಕ್ಯಾನ್ಸರ್ ಇರುವುದು ಪತ್ತೆಯಾಯಿತು. ಚಿಕಿತ್ಸೆಗಾಗಿ ನಾನು ಅಮೆರಿಕಾಗೆ ಹೋಗಬೇಕಾದ ಅನಿವಾರ್ಯತೆ ಎದುರಾಯಿತು" ಎಂದು ಶಿವಣ್ಣ ಆ ಕಠಿಣ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

'ನಮಗೆ ನೀವೇ ಬೇಕು' ಎಂದು ಕಾಯಿತು ಚಿತ್ರತಂಡ
ಯುಎಸ್ನಲ್ಲಿ ಸುದೀರ್ಘ ಚಿಕಿತ್ಸೆ ಪಡೆಯಬೇಕಿದ್ದರಿಂದ, ಚಿತ್ರತಂಡಕ್ಕೆ ತಮ್ಮಿಂದ ತೊಂದರೆಯಾಗಬಾರದು ಎಂದು ಶಿವಣ್ಣ ಯೋಚಿಸಿದ್ದರು. "ನನ್ನ ಪರಿಸ್ಥಿತಿಯಿಂದಾಗಿ ನಾನು ಈ ಚಿತ್ರದಿಂದ ಹೊರಬರಲು ನಿರ್ಧರಿಸಿದ್ದೆ. ಸಿನಿಮಾ ಕ್ಯಾನ್ಸಲ್ ಮಾಡೋಣವೇ? ಎಂದು ಚಿತ್ರತಂಡವನ್ನು ಕೇಳಿದ್ದೆ" ಎಂದಿದ್ದಾರೆ ಹ್ಯಾಟ್ರಿಕ್ ಹೀರೋ. ಆದರೆ, ರಾಮ್ ಚರಣ್ ಹಾಗೂ ನಿರ್ದೇಶಕ ಬುಚ್ಚಿ ಬಾಬು ಸನಾ ಶಿವಣ್ಣ ಅವರನ್ನು ಕೈಬಿಡಲು ಸಿದ್ಧರಿರಲಿಲ್ಲ. "ನನ್ನ ನಿರ್ಧಾರಕ್ಕೆ ಒಪ್ಪದ ಬುಚ್ಚಿ ಬಾಬು, ಇಲ್ಲ ಸರ್, ನಮಗೆ ಈ ಪಾತ್ರಕ್ಕೆ ನೀವೇ ಬೇಕು' ಎಂದು ಹಠ ಹಿಡಿದರು. ಇಡೀ ಚಿತ್ರತಂಡ ನನಗಾಗಿ ತುಂಬಾ ದಿನಗಳ ಕಾಲ ತಾಳ್ಮೆಯಿಂದ ಕಾದರು. ಅವರ ಪ್ರೀತಿ ಮತ್ತು ದೊಡ್ಡ ಗುಣಕ್ಕೆ ನಾನು ಸದಾ ಆಭಾರಿ" ಎಂದು ಶಿವಣ್ಣ ಧನ್ಯವಾದ ತಿಳಿಸಿದ್ದಾರೆ.
ಕ್ಯಾನ್ಸರ್ ಗೆದ್ದು ಬಂದ ಶಿವಣ್ಣ
ಕಳೆದ 2024ರಲ್ಲಿ ಶಿವಣ್ಣ ಅವರಿಗೆ ಮೂತ್ರಕೋಶದ ಕ್ಯಾನ್ಸರ್ ಇರುವುದು ವೈದ್ಯಕೀಯ ತಪಾಸಣೆಯಲ್ಲಿ ಪತ್ತೆಯಾಗಿತ್ತು. ಸಿನಿಮಾ ಶೂಟಿಂಗ್ಗಳ ಮಧ್ಯೆಯೇ ಈ ಆಘಾತಕಾರಿ ಸುದ್ದಿ ತಿಳಿದಾಗ ಇಡೀ ಚಿತ್ರರಂಗ ಹಾಗೂ ಅಭಿಮಾನಿ ವಲಯ ಕಂಗಾಲಾಗಿತ್ತು. ಆದರೆ, ಶಿವಣ್ಣ ಮಾತ್ರ ತಮ್ಮ ಮುಖದಲ್ಲಿ ಸದಾ ನಗು ಇಟ್ಟುಕೊಂಡು, ಅಭಿಮಾನಿಗಳಿಗೆ ಧೈರ್ಯ ತುಂಬುತ್ತಲೇ ಚಿಕಿತ್ಸೆಗೆ ಸಜ್ಜಾಗಿದ್ದರು.

ನಂತರ ಶಿವಣ್ಣ ಉನ್ನತ ಚಿಕಿತ್ಸೆಗಾಗಿ ಅಮೆರಿಕಾಗೆ ತೆರಳಬೇಕಾಯಿತು. ಫ್ಲೋರಿಡಾದ ಪ್ರಸಿದ್ಧ ಮಿಯಾಮಿ ಕ್ಯಾನ್ಸರ್ ಇನ್ಸ್ಟಿಟ್ಯೂಟ್ನಲ್ಲಿ (Miami Cancer Institute) ಅವರಿಗೆ ನುರಿತ ವೈದ್ಯರ ತಂಡ ಚಿಕಿತ್ಸೆ ನೀಡಿತು. ಡಿಸೆಂಬರ್ 2024ರಲ್ಲಿ ಶಿವಣ್ಣ ಅವರಿಗೆ ಬರೋಬ್ಬರಿ 6 ಗಂಟೆಗಳ ಕಾಲ ಸುದೀರ್ಘ ಶಸ್ತ್ರಚಿಕಿತ್ಸೆಯನ್ನು ಮಾಡಲಾಯಿತು. ಈ ವೇಳೆ ಅವರ ಪತ್ನಿ ಗೀತಾ ಶಿವರಾಜ್ಕುಮಾರ್ ಹಾಗೂ ಕುಟುಂಬಸ್ಥರು ಜೊತೆಯಲ್ಲೇ ಇದ್ದು ಧೈರ್ಯ ತುಂಬಿದ್ದರು. ಹ್ಯಾಟ್ರಿಕ್ ಹೀರೊ ಮತ್ತೆ ಆತ್ಮವಿಶ್ವಾಸದಿಂದ ಈ ಕಠಿಣ ಪರಿಸ್ಥಿತಿಯನ್ನು ಗೆದ್ದು ಬಂದು ಸದ್ಯ ಎಂದಿನಂತೆ ಶೂಟಿಂಗ್ಗಳಲ್ಲಿ ಸಕ್ರಿಯರಾಗಿದ್ದಾರೆ.
ಜೂನ್ 4ಕ್ಕೆ ತೆರೆಗೆ ಬರಲಿದೆ 'ಪೆದ್ದಿ'
ಬುಚ್ಚಿ ಬಾಬು ಸನಾ ನಿರ್ದೇಶನದ 'ಪೆದ್ದಿ' ಸಿನಿಮಾವು 1980ರ ದಶಕದ ಆಂಧ್ರಪ್ರದೇಶದ ಗ್ರಾಮೀಣ ಭಾಗದ ಹಿನ್ನೆಲೆಯನ್ನು ಹೊಂದಿದೆ. ದಿನಗೂಲಿ ಕಾರ್ಮಿಕನೊಬ್ಬ ತನ್ನ ಮತ್ತು ತನ್ನ ಹಳ್ಳಿಯ ಗೌರವಕ್ಕಾಗಿ ನಡೆಸುವ ಹೋರಾಟದ ಕಥೆ ಇದಾಗಿದೆ. ಚಿತ್ರದಲ್ಲಿ ರಾಮ್ ಚರಣ್ ಜೊತೆಗೆ ಜಾನ್ವಿ ಕಪೂರ್, ಶಿವರಾಜ್ಕುಮಾರ್, ಜಗಪತಿ ಬಾಬು ಸೇರಿದಂತೆ ದೊಡ್ಡ ತಾರಾಬಳಗವಿದ್ದು, ಸಿನಿಮಾ ಇದೇ ಜೂನ್ 4ರಂದು ವಿಶ್ವಾದ್ಯಂತ ಅದ್ಧೂರಿಯಾಗಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಇದರಲ್ಲಿ ಶಿವಣ್ಣ ಕೂಡ ಪವರ್ಫುಲ್ ಪಾತ್ರವೊಂದನ್ನು ಮಾಡಿದ್ದಾರೆ.













Click it and Unblock the Notifications