ಛತ್ತೀಸ್ಗಢ ರಾಜಕೀಯ ಬಿಕ್ಕಟ್ಟು: ಭೂಪೇಶ್ಗೂ ಮುನ್ನ ದೆಹಲಿಯತ್ತ ಶಾಸಕರ ದೌಡು
ರಾಯ್ಪುರ, ಆಗಸ್ಟ್ 27: ಛತ್ತೀಸ್ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಕಾಂಗ್ರೆಸ್ ಹಿರಿಯ ನಾಯಕರನ್ನು ಭೇಟಿಯಾಗಲು ದೆಹಲಿಗೆ ತೆರಳುತ್ತಾರೆ ಎಂಬ ವರದಿಗಳ ಬೆನ್ನಲ್ಲೇ ಸಿಎಂ ಭೂಪೇಶ್ ಬಘೇಲ್ಗೆ ಪರವಾಗಿ ಇರುವ ಹಲವಾರು ಶಾಸಕರು ಹಾಗೂ ಮೂವರು ರಾಜ್ಯ ಸಚಿವರುಗಳು ಗುರುವಾರ ರಾತ್ರಿ ದೆಹಲಿಗೆ ತೆರಳಿದ್ದಾರೆ ಎಂದು ವರದಿಯಾಗಿದೆ. ಛತ್ತೀಸ್ಗಢದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರದಲ್ಲಿ ಕಾಂಗ್ರೆಸ್ ನಾಯಕರ ನಡುವೆ ಬಿರುಕು ಉಂಟಾಗಿರುವ ನಡುವೆ ಈ ಬೆಳವಣಿಗೆ ನಡೆದಿದೆ. ಆದರೆ ಕಾಂಗ್ರೆಸ್ ರಾಜ್ಯ ಉಸ್ತುವಾರಿ ಪಿಎಲ್ ಪುನಿಯಾ ಹಾಗೂ ಛತ್ತೀಸ್ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಮಾತ್ರ ಈ ನಾಯಕತ್ವ ಬದಲಾವಣೆಯನ್ನು ಅಲ್ಲಗಳೆದಿದ್ದಾರೆ.
ಮೂಲಗಳ ಪ್ರಕಾರ ಕೆಲವು ಶಾಕಸರು ಈಗಾಗಲೇ ದೆಹಲಿಗೆ ತೆರಳಿ ಅಲ್ಲಿ ಭೂಪೇಶ್ ಬಘೇಲ್ ಬರುವುದಕ್ಕೂ ಮೊದಲೇ ಇದ್ದಾರೆ. ಹಾಗೆಯೇ ಈ ಶಾಸಕರುಗಳು ಛತ್ತೀಸ್ಗಢ ಕಾಂಗ್ರೆಸ್ ರಾಜ್ಯ ಉಸ್ತುವಾರಿ ಪಿಎಲ್ ಪುನಿಯಾರನ್ನು ಭೇಟಿಯಾಗಿದ್ದಾರೆ. ಇನ್ನು ಹನ್ನೆರಡಕ್ಕೂ ಅಧಿಕ ಶಾಸಕರುಗಳು ದೆಹಲಿಗೆ ತೆರಳಿದ್ದಾರೆ ಹಾಗೂ ರಾಯ್ ಪುರದ ಸರ್ಕ್ಯೂಟ್ ಹೌಸ್ನಲ್ಲಿ ಕಾಂಗ್ರೆಸ್ ಪದಾಧೀಕಾರಿಗಳು ಸಭೆ ನಡೆಸಿದ್ದಾರೆ ಎಂದು ಕೂಡಾ ಕೆಲವು ಮೂಲಗಳು ತಿಳಿಸಿದೆ.
ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಶಾಸಕ ದೇವೇಂದ್ರ ಯಾದವ್, "ನಾವು ಭೂಪೇಶ್ ಬಘೇಲ್ ನಾಯಕತ್ವದಡಿಯಲ್ಲಿ ಛತ್ತೀಸ್ಗಢ ರಾಜ್ಯದ ಜನರಿಗೆ ಸೇವೆ ಸಲ್ಲಿಸುತ್ತಿದ್ದೇವೆ. ನಾವು ಛತ್ತೀಸ್ಗಢ ರಾಜ್ಯ ಸರ್ಕಾರದಲ್ಲಿ ಉಂಟಾಗಿರುವ ಪರಿಸ್ಥಿತಿಯ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ಗೆ ತಿಳಿಸುತ್ತೇವೆ," ಎಂದು ಹೇಳಿದ್ದಾರೆ.

ಛತ್ತೀಸ್ಗಢದಲ್ಲಿ ನಡೆಯುತ್ತಿರುವುದಾದರೂ ಏನು?
ಛತ್ತೀಸ್ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ದೆಹಲಿಯಲ್ಲಿ ಮಾಜಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯನ್ನು ಭೇಟಿಯಾಗಿ ಬುಧವಾರ ಸಂಜೆಯಷ್ಟೇ ಹಿಂದೆ ಬಂದಿದ್ದಾರೆ. ರಾಹುಲ್ ಗಾಂಧಿ ಸಮ್ಮುಖದಲ್ಲಿ ಸಚಿವ ಟಿ ಎಸ್ ಸಿಂಗ್ ದಿಯೋ ಹಾಗೂ ಛತ್ತೀಸ್ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಮಾತುಕತೆ ನಡೆದಿದೆ. ಆದರೆ ನಾನು ಮುಂದಿನ ಮುಖ್ಯಮಂತ್ರಿ ಆಗಬೇಕು ಎಂದು ಬೇಡಿಕೆ ಮುಂದಿಟ್ಟಿರುವ ಟಿ ಎಸ್ ಸಿಂಗ್ ದಿಯೋ, 2018 ರಲ್ಲಿ ಸರ್ಕಾರ ರಚನೆ ಮಾಡುವ ಸಂದರ್ಭದಲ್ಲಿಯೇ ಎರಡೂವರೆ ವರ್ಷದ ಬಳಿಕ ನನ್ನನ್ನು ಮುಖ್ಯಮಂತ್ರಿ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ ಈಗ ಮುಖ್ಯಮಂತ್ರಿ ಬದಲಾವಣೆ ಮಾಡುತ್ತಿಲ್ಲ ಎಂದು ಆರೋಪ ಮಾಡಿದ್ದಾರೆ. ಇನ್ನು ಶುಕ್ರವಾರ ಮತ್ತೆ ಛತ್ತೀಸ್ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ದೆಹಲಿಗೆ ತೆರಳಲಿದ್ದಾರೆ. ಟಿ ಎಸ್ ಸಿಂಗ್ ದಿಯೋ ದೆಹಲಿಯಲ್ಲೇ ಇದ್ದಾರೆ ಎಂದು ಹೇಳಲಾಗಿದೆ. ಛತ್ತೀಸ್ಗಢ ರಾಜ್ಯದಲ್ಲಿನ ರಾಜಕೀಯ ಪರಿಸ್ಥಿತಿಯ ಬಗ್ಗೆ ನಾವು ಮಾತುಕತೆ ನಡೆಸುತ್ತೇವೆ ಎಂದು ಹೇಳಿದ್ದಾರೆ. ಛತ್ತೀಸ್ಗಢದಲ್ಲಿ 15 ವರ್ಷಗಳ ಬಿಜೆಪಿ ಆಡಳಿತಕ್ಕೆ ಅಂತ್ಯ ಹಾಡಿದ ಕಾಂಗ್ರೆಸ್ 2018 ರಲ್ಲಿ ಸರ್ಕಾರ ರಚನೆ ಮಾಡಿತ್ತು.

ಹೈಕಮಾಂಡ್ ಬಳಿ ರಾಜ್ಯ ಸ್ಥಿತಿ ವಿವರಿಸುತ್ತೇವೆ ಎಂದ ಶಾಸಕರು
"ನಾವು ಭೂಪೇಶ್ ಬಘೇಲ್ ನಾಯಕತ್ವದಡಿಯಲ್ಲಿ ನಿರಂತರವಾಗಿ ಛತ್ತೀಸ್ಗಢ ರಾಜ್ಯದ ಜನರಿಗೆ ಸೇವೆ ಸಲ್ಲಿಸುತ್ತಿದ್ದೇವೆ. ರಾಜ್ಯದ ಪರಿಸ್ಥಿತಿಯ ಬಗ್ಗೆ ನಾವು ರಾಜ್ಯ ಹೈಕಮಾಂಡ್ ಬಳಿ ಮಾತನಾಡುತ್ತೇವೆ," ಎಂದು ದೆಹಲಿಗೆ ತೆರಳುತ್ತಿರುವ ಛತ್ತೀಸ್ಗಢ ಶಾಸಕ ದೇವೇಂದ್ರ ಯಾದವ್ ಹೇಳಿದ್ದಾರೆ. ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳು ದೆಹಲಿಗೆ ಹೋಗುತ್ತಿರುವ ಉದ್ದೇಶದ ಬಗ್ಗೆ ಪ್ರಶ್ನಿಸಿದ ಸಂದರ್ಭದಲ್ಲಿ ಛತ್ತೀಸ್ಗಢ ಕಾಂಗ್ರೆಸ್ ಶಾಸಕ ದೇವೇಂದ್ರ ಯಾದವ್ ಈ ಹೇಳಿಕೆಯನ್ನು ನೀಡಿದ್ದಾರೆ. ಈ ಸಂದರ್ಭದಲ್ಲೇ ಎಷ್ಟು ಮಂದಿ ಕಾಂಗ್ರೆಸ್ ಶಾಸಕರು ಹೋಗುತ್ತಿದ್ದೀರಿ ಎಂದು ಮಾಧ್ಯಮದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಾಸಕ ದೇವೇಂದ್ರ ಯಾದವ್ "ಎಲ್ಲರೂ ಹೋಗುತ್ತೇವೆ, ಎಲ್ಲರೂ ಜೊತೆಯಾಗಿದ್ದೇವೆ," ಎಂದು ಹೇಳಿದ್ದಾರೆ.

ಹೈಕಮಾಂಡ್ ನಮ್ಮನ್ನು ಕರೆದಿಲ್ಲ
ಈ ನಡುವೆ ಕಾಂಗ್ರೆಸ್ ಮುಖ್ಯಸ್ಥ ಮೋಹನ್ ಮರ್ಕಮ್, ತಾನು ಹಾಗೂ ಶಾಸಕರನ್ನು ದೆಹಲಿಗೆ ಬರಲು ಹೈಕಮಾಂಡ್ ಸಮನ್ಸ್ ಜಾರಿ ಮಾಡಿದೆ ಎಂಬ ವರದಿಗಳನ್ನು ನಿರಾಕರಿಸಿದ್ದಾರೆ. "ಮಾಧ್ಯಮಗಳು ಛತ್ತೀಸ್ಗಢ ಕಾಂಗ್ರೆಸ್ ರಾಜ್ಯ ಅಧ್ಯಕ್ಷರನ್ನು ದೆಹಲಿಗೆ ಬರಲು ಹೈಕಮಾಂಡ್ ಸಮನ್ಸ್ ನೀಡಿದೆ ಎಂದು ಹೇಳಿದೆ. ಆದರೆ ನಾನಾಗಲಿ ಅಥವಾ ಶಾಸಕರನ್ನಾಗಲಿ ಹೈಕಮಾಂಡ್ ಕರೆದಿಲ್ಲ ಎಂದು ನಾನು ಸ್ಪಷ್ಟ ಪಡಿಸಲು ಬಯಸುತ್ತೇನೆ. ಹಾಗೆಯೇ ಈ ಬಗ್ಗೆ ರಾಜ್ಯ ಉಸ್ತುವಾರಿ ಪಿ ಎಲ್ ಪುನಿಯಾ ಕೂಡಾ ಸ್ಪಷ್ಟನೆ ನೀಡಿದ್ದಾರೆ. ಹೈಕಮಾಂಡ್ ಛತ್ತೀಸ್ಗಢದ ಯಾವುದೇ ಶಾಸರಕರನ್ನಾಗಲಿ ಅಥವಾ ಸಚಿವರುಗಳನ್ನಾಗಲಿ ಕರೆದಿಲ್ಲ ಎಂದು ಪಿ ಎಲ್ ಪುನಿಯಾ ಹೇಳಿದ್ದಾರೆ," ಎಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಕಾಂಗ್ರೆಸ್ ಮುಖ್ಯಸ್ಥ ಮೋಹನ್ ಮರ್ಕಮ್ ತಿಳಿಸಿದ್ದಾರೆ.
ಹಾಗೆಯೇ ಹೈಕಮಾಂಡ್ ಹಾಗೂ ಹಿರಿಯ ನಾಯಕರ ಆದೇಶವನ್ನು ಪಾಲಿಸುವಂತೆ ಶಾಸಕರುಗಳಿಗೆ ಕಾಂಗ್ರೆಸ್ ಮುಖ್ಯಸ್ಥ ಮೋಹನ್ ಮರ್ಕಮ್ ಹೇಳಿದ್ದಾರೆ. ಹಾಗೆಯೇ ಪಕ್ಷದ ಶಿಸ್ತನ್ನು ಕಾಪಾಡಿಕೊಳ್ಳಿ ಎಂದಿದ್ದಾರೆ. ಇನ್ನು ರಾಹುಲ್ ಗಾಂಧಿ ಜೊತೆಯಲ್ಲಿ ಬಘೇಲ್ ಹಾಗೂ ದಿಯೋ ಮಾತುಕತೆ ನಡೆಸಿದ್ದು ಅಭಿವೃದ್ದಿ ವಿಚಾರದಲ್ಲಿ, ನಾಯಕತ್ವ ಬದಲಾವಣೆಯ ವಿಚಾರದಲ್ಲಿ ಅಲ್ಲ ಎಂದು ಕಾಂಗ್ರೆಸ್ ಉಸ್ತುವಾರಿ ಪುನಿಯಾ ಸ್ಪಷ್ಟನೆ ನೀಡಿದ್ದಾರೆ.

ರಾಜಕೀಯ ಅಸ್ಥಿರತೆಗೆ ಸಂಚು ಎಂದ ಬಘೇಲ್
ಎರಡೂವರೆ ವರ್ಷಕ್ಕೊಮ್ಮೆ ನಾಯಕತ್ವ ಬದಲಾವಣೆ ಎಂಬ ಮಾತು ರಾಜಕೀಯ ಅಸ್ಥಿರತೆಯನ್ನು ಉಂಟು ಮಾಡುವಂತದ್ದು. ರಾಜಕೀಯ ಅಸ್ಥಿರತೆ ಉಂಟು ಮಾಡುವ ನಿಟ್ಟಿನಲ್ಲೇ ಈಗ ಈ ಬಗ್ಗೆ ಮಾತನಾಡಲಾಗುತ್ತಿದೆ. ಈ ವಾದ ಮಾಡುತ್ತಿರುವವವರು ಇಳಿದವರು ಯಶಸ್ವಿಯಾಗಲಾರರು ಎಂದು ಹೇಳಿದ್ದಾರೆ. ಇನ್ನು ಈ ಬಗ್ಗೆ ಟ್ವೀಟ್ ಮಾಡಿರುವ ರಾಜ್ಯ ಆಹಾರ ಸಚಿವ ಅಮರ್ಜೀತ್ ಭಗತ್ ದೆಹಲಿಯ ವಿಮಾನ ನಿಲ್ದಾಣದಲ್ಲಿ ಬಘೇಲ್ಗೆ ಅದ್ದೂರಿಯಾಗಿ ಘೋಷಣೆಗಳನ್ನು ಕೂಗಿ ಬಿಲ್ಕೊಡುತ್ತಿರುವ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ. ಹಾಗೆಯೇ "ಸರ್ಕಾರದಲ್ಲಿ ಅಸ್ಥಿರತೆ ಉಂಟು ಮಾಡಲು ಬಯಸುವವರು, ಈ ಸರ್ಕಾರವು ರೈತರು, ಬುಡಕಟ್ಟು ಜನಾಂಗ ಹಾಗೂ ಸಾಮಾನ್ಯ ಜನರಿಗೆ ಸೇರಿದ್ದು ಎಂಬುವುದನ್ನು ಗಮನದಲ್ಲಿ ಇಟ್ಟು ಕೊಳ್ಳಬೇಕು," ಎಂದು ಹೇಳಿದ್ದಾರೆ.
(ಒನ್ ಇಂಡಿಯಾ ಸುದ್ದಿ)












Click it and Unblock the Notifications