ಬಾಲಕನಿಂದ ಕಚ್ಚಿಸಿಕೊಂಡ ಹಾವು ಸಾವು: ಇದು ವಿಚಿತ್ರವಾದರೂ ಸತ್ಯ
ರಾಯಪುರ್, ನವೆಂಬರ್ 05: ಹಾವು ಕಚ್ಚಿ ಬಾಲಕ ಸಾವು ಎನ್ನುವ ಸುದ್ದಿಗಳನ್ನು ಆಗಾಗ ಪತ್ರಿಕೆಗಳಲ್ಲಿ ಸುದ್ದಿವಾಹಿನಿಗಳಲ್ಲಿ ಕೇಳುವುದು ಓದುವುದು ಸರ್ವೇ ಸಾಮಾನ್ಯ. ಆದರೆ ಇದು ಅಂಥ ಸುದ್ದಿಗಳಿಗಿಂತ ವಿಭಿನ್ನ ಹಾಗೂ ವಿಚಿತ್ರವಾಗಿದೆ. ಇಲ್ಲಿ ಹಾವು ಕಚ್ಚಿ ಬಾಲಕ ಸತ್ತಿಲ್ಲ, ಬದಲಿಗೆ ಬಾಲಕನಿಂದಲೇ ಕಚ್ಚಿಸಿಕೊಂಡ ಹಾವು ಸತ್ತಿದೆ.
ಛತ್ತೀಸ್ಗಢದ ಜಶ್ಪುರ ಜಿಲ್ಲೆಯಲ್ಲಿ ಇಂಥದೊಂದು ಘಟನೆ ಬೆಳಕಿಗೆ ಬಂದಿದೆ. ತಮ್ಮ ಮನೆಯ ಹಿತ್ತಲಿನಲ್ಲಿ ಆಟವಾಡುತ್ತಿದ್ದ 8 ವರ್ಷದ ದೀಪಕ್ ಹತ್ತಿರಕ್ಕೆ ರಭಸವಾಗಿ ಹರಿದು ಬಂದ ಹಾವು, ಬಾಲಕನ ತೋಳಿಗೆ ಸುತ್ತಿಕೊಂಡಿದೆ. ಅಲ್ಲಿಂದ ಮುಂದೆ ನಡೆದ ಘಟನೆಯೇ ರೋಚಕವಾಗಿದೆ.
ಹಾವು ಕಚ್ಚಿದ ಬಾಲಕನು ಬದುಕಿ ಉಳಿದಿದ್ದು ಹೇಗೆ? ಅದೇ ರೀತಿ ಬಾಲಕನಿಂದ ಕಚ್ಚಿಸಿಕೊಂಡ ಹಾವು ಸತ್ತಿದ್ದು ಹೇಗೆ ಎನ್ನುವುದೇ ಇಲ್ಲಿ ಕುತೂಹಲಕಾರಿ ಆಗಿದೆ. ಛತ್ತೀಸ್ಗಢದ ನಡೆದಿರುವ ಈ ಘಟನೆಯು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ಕುರಿತು ತಿಳಿದುಕೊಳ್ಳುವುದಕ್ಕಾಗಿ ಮುಂದೆ ಓದಿ.
ತೋಳಿಗೆ ಸುತ್ತಿಕೊಂಡ ನಾಗರಹಾವು!
ಛತ್ತೀಸ್ಗಢದ ಜಶ್ಪುರ ಜಿಲ್ಲೆಯಲ್ಲಿ ಇರುವ ತಮ್ಮ ಮನೆಯ ಹಿತ್ತಲಿನಲ್ಲಿ 8 ವರ್ಷದ ಬಾಲಕ ದೀಪಕ್ ಆಟವಾಡುತ್ತಿದ್ದನು. ಈ ವೇಳೆ ಮನೆ ಹಿತ್ತಲಿನಲ್ಲಿದ್ದ ಪೊದೆಯಿಂದ ನಾಗರಹಾವೊಂದು ರಭಸವಾಗಿ ಹರಿದು ಬಂದಿದೆ. ನೋಡ ನೋಡುತ್ತಿದ್ದಂತೆ ಹಾವು ಬಾಲಕನ ತೋಳನ್ನು ಸುತ್ತಿಕೊಂಡಿದೆ. ಹುಡುಗನ ಎದೆಯಲ್ಲಿ ನಡುಕ ಶುರುವಾಗಿದೆ. ಕ್ಷಣಮಾತ್ರದಲ್ಲಿ ಹುಡುಗನಿಗೆ ಹಾವು ಕಚ್ಚಿದ್ದು, ಅದರ ಎರಡು ಹಲ್ಲುಗಳು ಬಾಲಕನಿಗೆ ನಾಟಿದೆ.
ಬಾಲಕನ ಬದುಕಿನ ಹೋರಾಟ
ಹಾವು ತನ್ನ ತೋಳನ್ನು ಕಚ್ಚುತ್ತಿದ್ದಂತೆ ಆತಂಕಗೊಂಡ ಬಾಲಕ, ತಾನು ಬದುಕುವ ಹೋರಾಟವನ್ನು ಶುರು ಮಾಡಿದ್ದಾನೆ. ತೋಳಿಗೆ ಸುತ್ತಿಕೊಂಡಿದ್ದ ಹಾವನ್ನು ಬಲವಾಗಿ ತನ್ನ ಹಲ್ಲುಗಳಿಂದ ಕಚ್ಚಿದ್ದಾರೆ. ಎರಡು ಬಾರಿ ಬಲವಾಗಿ ಹಾವನ್ನು ಕಚ್ಚುವುದರ ಮೂಲಕ ಅದನ್ನು ಸ್ಥಳದಲ್ಲೇ ಕೊಂದು ಹಾಕಿದ್ದಾರೆ. ಬಾಲಕನಿಂದ ಕಚ್ಚಿಸಿಕೊಂಡ ಹಾಲವು ಸಾವನ್ನಪ್ಪಿದೆ. ಮೊದಲೇ ಹಾವಿನಿಂದ ಕಚ್ಚಿಸಿಕೊಂಡಿದ್ದ ಬಾಲಕ ಜೋರಾಗಿ ಕೂಗುತ್ತಾ ಫೋಷಕರ ಬಳಿಗೆ ಓಡಿ ಹೋಗಿದ್ದಾನೆ.
ಹಾವು ಕಚ್ಚಿರುವ ಬಗ್ಗೆ ತಂದೆ-ತಾಯಿಗೆ ಹೇಳಿದ ದೀಪಕ್
ತಾನು ಆಟವಾಡುತ್ತಿದ್ದ ಸಂದರ್ಭದಲ್ಲಿ ನಾಗರಹಾವು ತನ್ನ ಕೈಗೆ ಕಚ್ಚಿರುವ ಬಗ್ಗೆ 8 ವರ್ಷದ ದೀಪಕ್ ಪೋಷಕರಿಗೆ ತಿಳಿಸಿದ್ದಾನೆ. ತಕ್ಷಣ ಎಚ್ಚೆತ್ತುಕೊಂಡ ಪೋಷಕರು ಆತನನ್ನು ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಈ ವೇಳೆ ಬಾಲಕನಿಗೆ ವೈದ್ಯರು ಹಾವಿನ ವಿಷ ವಿರೋಧಿ ಔಷಧಿಯನ್ನು ನೀಡಿದ್ದಾರೆ. ಒಂದು ದಿನ ಬಾಲಕನನ್ನು ವೀಕ್ಷಣೆಯಲ್ಲಿ ಇರಿಸಲಾಗಿತ್ತು. ತದನಂತರದಲ್ಲಿ ಬಾಲಕನನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಯಿತು.
ಹಾವು ಕಚ್ಚಿದ ಘಟನೆ ಬಗ್ಗೆ ಬಾಲಕ ಹೇಳುವುದೇನು?
"ಹಾವು ನನ್ನ ಕೈಗೆ ಸುತ್ತಿಕೊಂಡು ಕಚ್ಚಿತು. ನನಗೆ ಬಹಳ ನೋವಾಯಿತು. ನಾನು ಅದನ್ನು ಅಲುಗಾಡಿಸಲು ಪ್ರಯತ್ನಿಸಿದಾಗ ಹಾವು ಬಗ್ಗದ ಕಾರಣ, ನಾನು ಅದನ್ನು ಎರಡು ಬಾರಿ ಕಚ್ಚಿದೆ. ಇದೆಲ್ಲವೂ ಕ್ಷಣಾರ್ಧದಲ್ಲಿ ಸಂಭವಿಸಿತು,"ಎಂದು ಬಾಲಕ ದೀಪಕ್ ಹೇಳಿದ್ದಾನೆ. ಅದೇ ರೀತಿ ದೀಪಕ್ನ ಗಾಯದ ಪರೀಕ್ಷೆಯನ್ನು ನಡೆಸಿದ ವೈದ್ಯರು ಇದು ಕೇವಲ "ಒಣ ಕಚ್ಚುವಿಕೆ" ಎಂದಿದ್ದಾರೆ. ಅಂದರೆ ನಾಗರಹಾವು ಬಾಲಕನನ್ನು ಕಚ್ಚಿದೆಯೇ ವಿನಃ ಯಾವುದೇ ವಿಷವನ್ನು ಬಿಡುಗಡೆ ಮಾಡಿಲ್ಲ," ಎಂದಿದ್ದಾರೆ.