ಹುಬ್ಬಳ್ಳಿಯಲ್ಲಿ ಹೆಲ್ಮೆಟ್ ಇಲ್ಲದಿದ್ದರೆ ಪೆಟ್ರೋಲ್ ಇಲ್ಲ
ಹುಬ್ಬಳ್ಳಿ, ಜನವರಿ, 28: ಹೆಲ್ಮೆಟ್ ಇಲ್ಲದೆ ವಾಹನ ಚಲಾಯಿಸುವ ಹುಬ್ಬಳ್ಳಿ-ಧಾರವಾಡ ಆವಳಿನಗರದ ಬೈಕ್ ಸವಾರರಿಗೆ ಹು-ಧಾ ಪೊಲೀಸ್ ಆಯುಕ್ತ ಪಾಂಡುರಂಗ ರಾಣೆ ಬಿಸಿ ಮುಟ್ಟಿಸಿದ್ದಾರೆ. ಹೆಲ್ಮೆಟ್ ಹಾಕದೇ ಪೆಟ್ರೋಲ್ ಹಾಕಿಸಿಕೊಳ್ಳಲು ಬರುವ ಸವಾರರಿಗೆ ಪೆಟ್ರೋಲ್ ಹಾಕಬೇಡಿ ಎಂದು ಪೆಟ್ರೋಲ್ ಬಂಕ್ ಮಾಲೀಕರಿಗೆ ತಾಕೀತು ಮಾಡಿದ್ದಾರೆ.
ಶುಕ್ರವಾರ ಪೆಟ್ರೋಲ್ ಮಾಲೀಕರ ಸಂಘದ ಸಭೆ ಕರೆದು ಈ ಕುರಿತು ಸೂಚಿಸಿದ ಆಯುಕ್ತರು ಅವಳಿ ನಗರದಲ್ಲಿ ಹೆಲ್ಮೆಟ್ ಇಲ್ಲದೇ ದ್ವಿಚಕ್ರ ವಾಹನ ಸವಾರರು ಸಂಚರಿಸುತ್ತಿದ್ದಾರೆ. ಸಂಚಾರ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಲು ಈಗಾಗಲೇ ಮೊಬೈಲ್ ಆಪ್ ಬಿಡುಗಡೆ ಮಾಡಲಾಗಿದೆ. ಆದರೂ ಕೂಡ ನಗರದಲ್ಲಿ ಹೆಲ್ಮೆಟ್ ಇಲ್ಲದೇ ವಾಹನ ಚಲಾಯಿಸುವವರ ಸಂಖ್ಯೆ ಹೆಚ್ಚುತ್ತಿದೆ. ಹೀಗಾಗಿ ಪೆಟ್ರೋಲ್ ಬಂಕ್ ನಲ್ಲಿ ಪೆಟ್ರೋಲ್ ಹಾಕಿಸಿಕೊಳ್ಳುಲು ಬರುವ ವಾಹನ ಸವಾರರಿಗೆ ಪೆಟ್ರೋಲ್ ಹಾಕಬಾರದು, ಜೊತೆಗೆ ಹೆಲ್ಮೆಟ್ ಹಾಕಿಕೊಳ್ಳುವಂತೆ ಎಚ್ಚರಿಸಬೇಕು ಎಂದು ಸೂಚಿಸಿದರು.
ಸುಪ್ರೀಂ ಕೋರ್ಟ್ ಆದೇಶವನ್ನು ಪಾಲಿಸಲು ಈ ಕ್ರಮ ಜರುಗಿಸಲಾಗುತ್ತಿದೆ ಎಂದ ಪಾಂಡುರಂಗ ರಾಣೆ, ದ್ವಿಚಕ್ರ ವಾಹನ ಸವಾರರು ಇದರಿಂದ ಹೆಲ್ಮೆಟ್ ಧರಿಸಲು ಸಹಕಾರಿಯಾಗುತ್ತದೆ ಎಂದರು.[ತಲೆ ಮೇಲೆ ಹೆಲ್ಮೆಟ್ ಇಲ್ಲ, ಗಾಡಿಗೆ ಪೆಟ್ರೋಲ್ ಸಿಗಲ್ಲ]
ಈ ಹಿಂದೆ ಅನೇಕ ಬಾರಿ ಹೆಲ್ಮೆಟ್ ಇಲ್ಲದೆ ಸಂಚಾರ ಮಾಡಿದವರ ವಿರುದ್ಧ ಕ್ರಮಜರುಗಿಸಿ ಜುಲ್ಮಾನೆ ಹಾಕಿದ್ದರು. ಜನರು ಮಾತ್ರ ತಮ್ಮ ಬುದ್ದಿಯನ್ನು ಬಿಡುತ್ತಲೇ ಇಲ್ಲ. ಜೀವದ ಮೇಲೆ ಭಯವೇ ಇಲ್ಲದಂತೆ ವರ್ತಿಸುತ್ತಿದ್ದಾರೆ ಎಂಬುದು ಚಿಂತಕರ ಮಾತಾಗಿದೆ.