ಹಾಸನ : ಕೆರೆಗೆ ಉರುಳಿದ ಕಾರು, ಐವರು ಜಲಸಮಾಧಿ
ಹಾಸನ, ಸೆಪ್ಟೆಂಬರ್ 27 : ಮಾರುತಿ ಸಿಫ್ಟ್ ಕಾರು ಕೆರೆಗೆ ಉರುಳಿ ಬಿದ್ದು 5 ಜನರು ಜಲಸಮಾಧಿಯಾದ ಘಟನೆ ಹಾಸನದಲ್ಲಿ ನಡೆದಿದೆ. ಮೂರು ದಿನಗಳ ಹಿಂದೆ ಕಾರು ಕೆರೆಗೆ ಬಿದ್ದಿರುವ ಸಾಧ್ಯತೆ ಇದ್ದು, ಇಂದು ಮೃತ ದೇಹ ತೇಲಿದ ಬಳಿಕ ಘಟನೆ ಬೆಳಕಿಗೆ ಬಂದಿದೆ.
ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಹನುಮನಹಳ್ಳಿ ಬಳಿಯ ಕೆರೆಗೆ ಕಾರು ಉರುಳಿ ಬಿದ್ದಿದೆ. ಇಂದು ಮೃತದೇಹ ತೇಲಲು ಆರಂಭಿಸಿದಾಗ, ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದರು. ಶೋಧ ಕಾರ್ಯ ನಡೆಸಿದಾಗ ಸುಮಾರು 20 ಅಡಿ ಆಳದಲ್ಲಿ ಕಾರು ಪತ್ತೆಯಾಗಿದೆ.
ಕೆರೆಗೆ ಉರುಳಿದ ಸರ್ಕಾರಿ ಬಸ್ 8 ಸಾವು
ಕಾರಿನಲ್ಲಿದ್ದ ಇಬ್ಬರು ಮಹಿಳೆಯರು ಸೇರಿದಂತೆ 5 ಜನರು ಮೃತಪಟ್ಟಿದ್ದಾರೆ. ಮೃತಪಟ್ಟವರನ್ನು ಉಮೇಶ್ (22), ಅನಿಲ್ ಎಂದು ಗುರುತಿಸಲಾಗಿದ್ದು, ಉಳಿದ ಮೂವರ ಗುರುತು ಇನ್ನೂ ಪತ್ತೆಯಾಗಿಲ್ಲ.
ಬಾಡಿಗೆ ಕಾರಿನಲ್ಲಿ ಐವರು ಹಂಗರಹಳ್ಳಿಯಿಂದ ಗೊರೂರಿಗೆ ತೆರಳುತ್ತಿದ್ದರು ಎಂದು ಅಂದಾಜಿಸಲಾಗಿದೆ. ಪೊಲೀಸರು ಕಾರಿನ ನಂಬರ್ ಮೂಲಕ ವಿಳಾಸ ಪತ್ತೆ ಮಾಡಲು ಪ್ರಯತ್ನ ನಡೆಸಿದ್ದಾರೆ.
2013ರಲ್ಲಿ ಬೇಲೂರು ತಾಲೂಕಿನ ವಿಷ್ಣು ಸಮುದ್ರ ಕೆರೆಗೆ ಕೆಎಸ್ಆರ್ಟಿಸಿ ಬಸ್ ಉರುಳಿ ಬಿದ್ದು 15 ಜನರು ಸಾವನ್ನಪ್ಪಿದ್ದರು. 2017ರ ಜುಲೈ ತಿಂಗಳಿನಲ್ಲಿ ಹಾಸನದ ತಟ್ಟವಾಳು ಕೆರೆಗೆ ಬಸ್ ಉರುಳಿ ಬಿದ್ದಿತ್ತು. 6 ಪ್ರಯಾಣಿಕರು ಈ ಅಪಘಾತದಲ್ಲಿ ಸಾವನ್ನಪ್ಪಿದ್ದರು.