JDS: ತೆನೆ ಹೊತ್ತ ಮಹಿಳೆ ಹೆಸರು ಕಮಲ-ನಾಮಕರಣದ ವಿಚಾರ ಬಿಚ್ಚಿಟ್ಟ ಪ್ರಜ್ವಲ್ ರೇವಣ್ಣ
ಹಾಸನ, ಏಪ್ರಿಲ್ 14: ನನ್ನ ಚುನಾವಣೆ ಮೂಲಕ ರೇವಣ್ಣ ಅವರ ಕಣ್ಣೀರು ಒರೆಸುವಂತಹ ಕೆಲಸ ಮಾಡಿ. ರೇವಣ್ಣ ಅವರಿಗೆ ಶಕ್ತಿ ತುಂಬುವ ಕೆಲಸ ಮಾಡಬೇಕು ಅಂದರೆ ಹೆಚ್ಚಿನ ಲೀಡ್ನಲ್ಲಿ ಗೆಲ್ಲಿಸಬೇಕು ಎನ್ನುವ ಸಂಕಲ್ಪ ಮಾಡಬೇಕಾಗುತ್ತದೆ. ಹೀಗಾಗಿ ಇವತ್ತು ದೇಶಕ್ಕೋಸ್ಕರ ಚುನಾವಣೆ ಎಂದು ಹಾಸನ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಹೇಳಿದ್ದಾರೆ.
ಹಾಸನದಲ್ಲಿ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಅವರು, ನಾನು ಜನರಿಗಾಗಿ ಏನೇನು ಕೆಲಸ ಮಾಡಿದ್ದೇನೆ ಎಂದು ಅರ್ಧ ಗಂಟೆ ನಿರಂತರವಾಗಿ ಹೇಳಬಲ್ಲೆ. ನಾನು ಬಹಳಷ್ಟು ಕೆಲಸಗಳನ್ನು ಮಾಡಿದ್ದೇನೆ. ಕೆಲಸದ ಬಗ್ಗೆ ಚರ್ಚೆ ಮಾಡುವುದು ಬೇಡ. ಕೆಲಸದಲ್ಲಿ ಅವರು ನಮಗೆ ಸಾಟಿ ಇಲ್ಲ. ಆದರೆ ಅವರು ಅಭಿವೃದ್ಧಿ ಬಗ್ಗೆ ಚರ್ಚೆ ಮಾಡುವುದಿಲ್ಲ. ರೇವಣ್ಣ ಅವರಿಗೆ ದುರಂಹಕಾರ ಎನ್ನುತ್ತಾರೆ. ರೇವಣ್ಣ ಕೋಪಿಷ್ಟರು. ಆದರೆ ಅವರ ಹೃದಯ ಈ ಭಾಗದ ಜನರಿಗಾಗಿ ಮಿಡಿಯುತ್ತದೆ ಎಂದರು.

ಬೇರೆ ಚರ್ಚೆ ಬೇಡ, ಚುನಾವಣೆಗಾಗಿ ಶ್ರಮಿಸೋಣ. ಈ ಬಾರಿ ಮೈತ್ರಿಯಾಗಿರುವ ಕಾರಣ ಕೆಲವರು ಚುನಾವಣೆಯಲ್ಲಿ ಚಿಹ್ನೆ ಯಾವುದಿರುತ್ತೆ ಅಂತಾ ಕೇಳುತ್ತಿದ್ದಾರೆ. ತೆನೆ ಹೊತ್ತ ಮಹಿಳೆ ಚಿಹ್ನೆ ಇರುತ್ತಾ, ಕಮಲ ಇರುತ್ತಾ ಅಂತಾ ಕೇಳುತ್ತಿದ್ದಾರೆ. ಅನುಮಾನ ಹಾಗೂ ಗೊಂದಲ ಬೇಡ, ತೆನೆ ಹೊತ್ತ ಮಹಿಳೆ ನಮ್ಮ ಚಿಹ್ನೆ ಇರುತ್ತದೆ. ನಿಮಗೆ ಗೊಂದಲ ಬೇಡ ಅಂತಾ ಹೊಸ ತಂತ್ರ ಮಾಡಿದ್ದೇವೆ. ನಮ್ಮ ತೆನೆ ಹೊತ್ತ ಮಹಿಳೆಗೆ ಮೊದಲು ಹೆಸರು ಇಟ್ಟಿರಲಿಲ್ಲ. ಈಗ ನಾಮಕರಣ ಮಾಡಿದ್ದೇವೆ. ಆ ಮಹಿಳೆ ಹೆಸರು ಕಮಲ ಎಂದು ಹೇಳಿದ್ದಾರೆ.
ಆರ್ಎಸ್ಎಸ್ ಸ್ವಯಂ ಸೇವಕ, ಮಾಧ್ಯಮ ವಕ್ತಾರ ವಿಜಯಕುಮಾರ್ ಮೇಲೆ ಹಲ್ಲೆ ವಿಚಾರವಾಗಿ ಮಾತನಾಡಿ ಅವರು, ಪ್ರಕರಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಶಾಮೀಲಾಗಿದ್ದಾರೆ. ವಿಜಯಕುಮಾರ್ಗೆ ನ್ಯಾಯ ಸಿಗುವವರೆಗೂ ಹೋರಾಡುತ್ತೇನೆ. ಪೊಲೀಸರು ಒತ್ತಡಕ್ಕೆ ಸಿಲುಕಿದ್ದಾರೆ. ಕೆಲವರು ರಾತ್ರೋರಾತ್ರಿ ಹಾಸನದಿಂದ ಪೊಲೀಸರಿಗೆ ಫೋನ್ ಮಾಡಿಸಿದ್ದಾರೆ. ಕಿಡಿಗೇಡಿಗಳ ಮೇಲೆ ಪೊಲೀಸರು ಕಠಿಣವಾದ ಕ್ರಮ ಜರುಗಿಸಬೇಕಿತ್ತು. ಆದರೆ ವಿಫಲರಾಗಿದ್ದಾರೆ. ರಾಜಕೀಯ ಒತ್ತಡಕ್ಕೆ ಮಣಿದು ರೌಡಿಗಳಿಗೆ ರಕ್ಷಣೆ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.












Click it and Unblock the Notifications