ದಾವಣಗೆರೆ ಕಾಂಗ್ರೆಸ್ ಅಭ್ಯರ್ಥಿ ಅಂತಿಮ, ಎಚ್.ಬಿ.ಮಂಜಪ್ಪಗೆ ಟಿಕೆಟ್
ದಾವಣಗೆರೆ, ಏಪ್ರಿಲ್ 03 : ನಿರೀಕ್ಷೆಯಂತೆಯೇ ದಾವಣಗೆರೆ ಕ್ಷೇತ್ರದ ಟಿಕಟ್ ಶಾಮನೂರು ಶಿವಶಂಕರಪ್ಪ ಅವರ ಕುಟುಂಬದ ಕೈ ತಪ್ಪಿದೆ. 2019ರ ಲೋಕಸಭಾ ಚುನಾವಣೆಗೆ ಎಚ್.ಬಿ.ಮಂಜಪ್ಪ ಕಾಂಗ್ರೆಸ್ ಅಭ್ಯರ್ಥಿ ಎಂದು ಎಐಸಿಸಿ ಘೋಷಣೆ ಮಾಡಿದೆ.
ಏಪ್ರಿಲ್ 3ರಂದು ಎಐಸಿಸಿ ದಾವಣಗೆರೆ ಕ್ಷೇತ್ರದ ಅಭ್ಯರ್ಥಿಯನ್ನು ಘೋಷಣೆ ಮಾಡಿದೆ. ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ.ಮಂಜಪ್ಪ ಅವರು ಕ್ಷೇತ್ರದಿಂದ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ.
ಮತ್ತೆ ಗೊಂದಲ ಮೂಡಿಸಿದ ದಾವಣಗೆರೆ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ!
ದಾವಣಗೆರೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಯಾರು? ಎಂಬುದು ಕುತೂಹಲಕ್ಕೆ ಕಾರಣವಾಗಿತ್ತು. ಶಾಮನೂರು ಶಿವಶಂಕರಪ್ಪ ಅವರು ಅಭ್ಯರ್ಥಿ ಎಂದು ಎಐಸಿಸಿ ಘೋಷಣೆ ಮಾಡಿದರೂ ಅವರು ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ ಎಂದು ಹಿಂದೆ ಸರಿದಿದ್ದರು.
ದಾವಣಗೆರೆ : ಟಿಕೆಟ್ ಬೇಡ ಅಂದ್ರು ಶಾಮನೂರು, ಕಾಂಗ್ರೆಸ್ ಕಂಗಾಲು
ಏಪ್ರಿಲ್ 23ರಂದು ದಾವಣಗೆರೆ ಕ್ಷೇತ್ರದ ಚುನಾವಣೆ ನಡೆಯಲಿದ್ದು ಏಪ್ರಿಲ್ 4 ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನವಾಗಿದೆ. ಬಿಜೆಪಿಯಿಂದ ಹಾಲಿ ಸಂಸದ ಜಿ.ಎಂ.ಸಿದ್ದೇಶ್ವರ ಅವರು ಅಭ್ಯರ್ಥಿಯಾಗಿದ್ದಾರೆ. ಎಚ್.ಬಿ.ಮಂಜಪ್ಪ ಅವರು ಶಾಮನೂರು ಕುಟುಂಬಕ್ಕೆ ಆತ್ಮೀಯರಾಗಿದ್ದಾರೆ.
2ಬಾರಿಗೆ ಅಭ್ಯರ್ಥಿ ಘೋಷಣೆ
ದಾವಣಗೆರೆ ಕ್ಷೇತ್ರಕ್ಕೆ 88 ವರ್ಷದ ಶಾಮನೂರು ಶಿವಶಂಕರಪ್ಪ ಅಭ್ಯರ್ಥಿ ಎಂದು ಎಐಸಿಸಿ ಘೋಷಣೆ ಮಾಡಿತ್ತು. ಆದರೆ, ವಯಸ್ಸಿನ ಕಾರಣ ನೀಡಿ ತಾವು ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ ಮಗನಿಗೆ ಟಿಕೆಟ್ ಕೊಡಿ ಎಂದು ಶಾಮನೂರು ಶಿವಶಂಕರಪ್ಪ ಹೇಳಿದ್ದರು. ಈಗ 2 ನೇ ಬಾರಿ ಕ್ಷೇತ್ರಕ್ಕೆ ಟಿಕೆಟ್ ಘೋಷಣೆ ಮಾಡಿದ್ದು, ಎಚ್.ಬಿ.ಮಂಜಪ್ಪ ಅಭ್ಯರ್ಥಿಯಾಗಿದ್ದಾರೆ.
ಚುನಾವಣೆ ಬಗ್ಗೆ ಮಲ್ಲಿಕಾರ್ಜನ ನಿರಾಸಕ್ತಿ
ಶಾಮನೂರು ಶಿವಶಂಕರಪ್ಪ ಪುತ್ರ ಎಸ್.ಎಸ್.ಮಲ್ಲಿಕಾರ್ಜುನ ಅವರಿಗೆ ಟಿಕೆಟ್ ನೀಡಲು ಹೈಕಮಾಂಡ್ ಸಿದ್ಧವಾಗಿತ್ತು. ಆದರೆ, 3 ಲೋಕಸಭಾ ಚುನಾವಣೆ, 2018ರ ವಿಧಾನಸಭೆ ಚುನಾವಣೆಯಲ್ಲಿ ಸೋಲು ಕಂಡಿರುವ ಅವರು ಚುನಾವಣೆಗೆ ಸ್ಪರ್ಧಿಸಲು ನಿರಾಸಕ್ತಿ ತೋರಿಸಿದ್ದರು.
ದಾವಣಗೆರೆ ಉಸ್ತುವಾರಿ ಜವಾಬ್ದಾರಿ
ಕೆಪಿಸಿಸಿ ಸೋಮವಾರ ಎಸ್.ಎಸ್.ಮಲ್ಲಿಕಾರ್ಜುನ ಅವರನ್ನು ದಾವಣಗೆರೆ ಕ್ಷೇತ್ರದ ಉಸ್ತುವಾರಿಯಾಗಿ ನೇಮಕ ಮಾಡಿತ್ತು. ಆದರೆ, ಅಭ್ಯರ್ಥಿ ಯಾರು ಎಂಬುದು ಕುತೂಹಲಕ್ಕೆ ಕಾರಣವಾಗಿತ್ತು. ಅಂತಿಮವಾಗಿ ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ.ಮಂಜಪ್ಪ ಅಭ್ಯರ್ಥಿಯಾಗಿದ್ದಾರೆ.
ನಡೆಯಲಿಲ್ಲ ಹೈಕಮಾಂಡ್ ತಂತ್ರ
ಶಾಮನೂರು ಶಿವಶಂಕರಪ್ಪ ಅವರ ಕುಟುಂಬದವರನ್ನೇ ಅಭ್ಯರ್ಥಿಯನ್ನಾಗಿ ಮಾಡುವ ಮೂಲಕ ಲಿಂಗಾಯತ ಮತಗಳನ್ನು ಪಡೆಯಬೇಕು ಎಂಬ ಹೈಕಮಾಂಡ್ ತಂತ್ರ ಫಲಕೊಟ್ಟಿಲ್ಲ. ಶಾಮಕೂರು ಕುಟುಂಬಕ್ಕೆ ಆತ್ಮೀಯರಾದ ಎಚ್.ಬಿ.ಮಂಜಪ್ಪ ಅವರು ಅಭ್ಯರ್ಥಿಯಾಗಿದ್ದಾರೆ.
ಗೆಲುವಿನ ಓಟಕ್ಕೆ ತಡೆ ಬೀಳುತ್ತಾ?
ದಾವಣಗೆರೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಲಿ ಸಂಸದ ಜಿ.ಎಂ.ಸಿದ್ದೇಶ್ವರ. ಮೂರು ಚುನಾವಣೆಯಲ್ಲಿ ಗೆದ್ದು ಹ್ಯಾಟ್ರಿಕ್ ಬಾರಿಸಿರುವ ಅವರು 4ನೇ ಬಾರಿಗೆ ಕಣಕ್ಕಿಳಿದಿದ್ದಾರೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸುತ್ತಿದ್ದು, ಸಿದ್ದೇಶ್ವರ ಗೆಲುವಿನ ಓಟಕ್ಕೆ ತಡೆ ಬೀಳಲಿದೆಯೇ? ಕಾದು ನೋಡಬೇಕು.