ಬಂಡೀಪುರ ಮೂಲೆಹೊಳೆ ಚೆಕ್ಪೋಸ್ಟ್ನಲ್ಲಿ ನಿಲ್ಲದ ವಸೂಲಿ ದಂಧೆ!
ಚಾಮರಾಜನಗರ, ಸೆಪ್ಟೆಂಬರ್ 22 : ಸಾಮಾನ್ಯವಾಗಿ ಎಲ್ಲ ಚೆಕ್ ಪೋಸ್ಟ್ಗಳಲ್ಲಿಯೂ ಒಂದಿಷ್ಟು ಮಾಮೂಲಿ ನೀಡದಿದ್ದರೆ ಲಾರಿ ಸೇರಿದಂತೆ ಇತರೆ ಯಾವ ಸರಕು ಸಾಗಾಣಿಕೆ ವಾಹನಗಳನ್ನು ಬಿಡುವುದಿಲ್ಲ. ಇದು ಎಲ್ಲರಿಗೂ ಗೊತ್ತಿರುವ ವಿಚಾರ. ಹೀಗಾಗಿಯೇ ಎಲ್ಲ ತಪಾಸಣಾ ಕೇಂದ್ರದಲ್ಲಿ ಹಣ ನೀಡಿ ವಾಹನಗಳ ಚಾಲಕರು ನಿರಾಳವಾಗಿ ಹೋಗುತ್ತಾರೆ.
ಆಗಾಗ್ಗೆ ಬರುವ ಲಾರಿ ಸೇರಿದಂತೆ ಗೂಡ್ಸ್ ವಾಹನಗಳ ಚಾಲಕರ ಪರಿಚಯ ಚೆಕ್ಪೋಸ್ಟ್ಗಳಲ್ಲಿರುವ ಸಿಬ್ಬಂದಿಗೆ ಇರುವುದರಿಂದ ಮಾಮೂಲು ಹಣವನ್ನು ನೀಡಿ ಅವರ ಪಾಡಿಗೆ ಹೋಗುತ್ತಿರುತ್ತಾರೆ. ಹೀಗಾಗಿ ಅಂತಹ ವಾಹನಗಳಲ್ಲಿ ಏನಿದೆ ಎಂಬುದನ್ನು ನೋಡದೆ ಕಳುಹಿಸುತ್ತಿರುವುದರಿಂದ ಕೇರಳದ ತ್ಯಾಜ್ಯ ಯಾವುದೇ ಅಡೆತಡೆಯಿಲ್ಲದೆ ಕರ್ನಾಟಕದೊಳಗೆ ಬರುತ್ತಿದೆ.
ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನವನ ಹಾಗೂ ಹುಲಿ ಸಂರಕ್ಷಿತ ಪ್ರದೇಶದ ಅಭಯಾರಣ್ಯದ ಅಂತಾರಾಜ್ಯ ಗಡಿಯಲ್ಲಿರುವ ಮೂಲೆಹೊಳೆ ಚೆಕ್ ಪೋಸ್ಟ್ನಲ್ಲಿ ವಾಹನಗಳ ಚಾಲಕರಿಂದ ಸಿಬ್ಬಂದಿ ಹಣ ವಸೂಲಿ ಮಾಡುತ್ತಿದ್ದಾರೆ ಎಂಬ ಆರೋಪ ಹಿಂದಿನಿಂದಲೂ ಇದೆ. ಇದು ಅಂತಾರಾಜ್ಯ ಚೆಕ್ ಪೋಸ್ಟ್ ಆಗಿರುವುದರಿಂದ ಇಲ್ಲಿ ಕಮಾಯಿ ಜಾಸ್ತಿ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಜತೆಗೆ ಇಂತಹ ವಾಹನಗಳಿಗೆ ಇಂತಿಷ್ಟು ಎಂದು ನಿಗದಿಪಡಿಸಲಾಗಿದ್ದು, ಅಷ್ಟು ಹಣವನ್ನು ಕೊಟ್ಟು ಹೋಗುತ್ತಿರುತ್ತಾರೆ. ಕೆಲವು ಮಾಹಿತಿಗಳ ಪ್ರಕಾರ ಸರಕು ಸಾಗಾಣಿಕೆ ವಾಹನಗಳು ಇಲ್ಲಿ ಕನಿಷ್ಟ 200 ನೀಡಲೇಬೇಕಂತೆ.
ಕೇರಳದ ಸುಲ್ತಾನ್ ಬತ್ತೇರಿ ಮಾರ್ಗದಲ್ಲಿರುವ ಮೂಲೆಹೊಳೆ ಅರಣ್ಯ ಚೆಕ್ಪೋಸ್ಟ್ನಲ್ಲಿ ಡಿಆರ್ಎಫ್ಓ ಸೋಮು ಎಂಬವವರು ಅರಣ್ಯ ಇಲಾಖೆಯ ಸಮವಸ್ತ್ರದಲ್ಲೇ ಕೇರಳಕ್ಕೆ ತೆರಳುವ ಲಾರಿ, ಹಾಗೂ ಸರಕು ಸಾಗಾಣಿಕೆ ವಾಹನ ಚಾಲಕರಿಂದ ಹಣ ವಸೂಲಿ ಮಾಡುತ್ತಿರುವುದು ಇದೀಗ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಅದನ್ನು ಗಮನಿಸಿದರೆ ಇಲ್ಲಿ ವಸೂಲಿ ತಡೆಗೆ ಯಾವುದೇ ನಿರ್ಬಂಧ ಇಲ್ಲ ಎಂಬುದು ಗೊತ್ತಾಗಿ ಬಿಡುತ್ತದೆ.
ಚೆಕ್ಪೋಸ್ಟ್ಗಳಲ್ಲಿ ಕೆಲಸ ಮಾಡುವ ಸಿಬ್ಬಂದಿ ಹಣ ವಸೂಲಿ ಮಾಡಿ ಮೇಲಾಧಿಕಾರಿಗಳಿಗೆ ಇಂತಿಷ್ಟು ಎಂದು ತಲುಪಿಸಲೇ ಬೇಕಾಗಿದೆ. ಹೀಗಾಗಿ ಸಿಬ್ಬಂದಿಗೆ ವಸೂಲಿ ಮಾಡದೆ ಹೋದರೆ ಬೇರೆ ದಾರಿನೇ ಇಲ್ಲದಾಗಿದೆ. ಇದು ಮೂಲೆಹೊಳೆ ಚೆಕ್ಪೋಸ್ಟ್ವೊಂದರ ಕಥೆ ಅಲ್ಲ, ಎಲ್ಲ ಚೆಕ್ ಪೋಸ್ಟ್ಗಳಲ್ಲಿಯೂ ಇದೇ ದಂಧೆ ನಡೆಯುತ್ತಿದ್ದು, ಚೆಕ್ ಪೋಸ್ಟ್ಗಳಲ್ಲಿ ಕೆಲಸ ಮಾಡಲು ಕೆಲವರು ಮುಗಿಬೀಳುತ್ತಾರೆ.
ಇದೀಗ ಮೂಲೆ ಹೊಳೆ ಚೆಕ್ಪೋಸ್ಟ್ನಲ್ಲಿ ವಸೂಲಿ ದಂಧೆ ಹೆಚ್ಚಾಗಿದ್ದು ವಾಹನ ಚಾಲಕರಿಂದ ಹೆಚ್ಚಿನ ಹಣ ವಸೂಲಿ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದ್ದು, ಇದಕ್ಕೆ ಸಾಕ್ಷಿ ಎಂಬಂತೆ ಇಲ್ಲಿನ ಡಿಆರ್ಎಫ್ಓ ಸೋಮುರವರು ರಸ್ತೆ ಬದಿಯಲ್ಲಿ ನಿಂತು ಹಣ ವಸೂಲಿ ಮಾಡುತ್ತಿರುವುದನ್ನು ಮೊಬೈಲ್ಗಳಲ್ಲಿ ಸೆರೆ ಹಿಡಿಯಲಾಗಿದೆ. ಇನ್ನಾದರೂ ಸಂಬಂಧಿಸಿದವರು ಇತ್ತ ಗಮನಹರಿಸಿ ಈ ದಂಧೆಗೆ ಕಡಿವಾಣ ಹಾಕಬೇಕಾಗಿದೆ.