ಚಾಮರಾಜನಗರ ಆಕ್ಸಿಜನ್ ದುರಂತ; ಪಟ್ಟಿಯಲ್ಲಿ ಮೃತಪಟ್ಟವರ ಹೆಸರಿಲ್ಲ
ಚಾಮರಾಜನಗರ, ಮೇ 26; ಆಕ್ಸಿಜನ್ ಕೊರತೆಯಿಂದ ಜಿಲ್ಲಾಸ್ಪತ್ರೆಯಲ್ಲಿ ಮೇ 2ರ ರಾತ್ರಿ ನಡೆದಿದ್ದ ದುರಂತದಲ್ಲಿ ಮೃತಪಟ್ಟವರ 24 ಕುಟುಂಬಗಳಿಗೆ ರಾಜ್ಯ ಸರ್ಕಾರ ತಲಾ 2 ಲಕ್ಷ ರೂಪಾಯಿ ಪರಿಹಾರ ಬಿಡುಗಡೆ ಮಾಡಿದೆ. ಆದರೆ ಮೃತಪಟ್ಟ ಹಲವರ ಹೆಸರು ಕೈಬಿಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಆಕ್ಸಿಜನ್ ಕೊರತೆಯಿಂದ ಮೃತಪಟ್ಟ ಚಾಮರಾಜನಗರ ತಾಲೂಕು ಬಿಸಿಲವಾಡಿಯ ಸಿದ್ದನಾಯಕ ಎಂಬುವರ ಹೆಸರು ಸಹ ಪರಿಹಾರದ ಪಟ್ಟಿಯಿಂದ ಕೈ ಬಿಡಲಾಗಿದ್ದು, ಕುಟುಂಬದರ ಗೋಳು ಹೇಳತೀರದಾಗಿದೆ.
ಚಾಮರಾಜನಗರ; ಕೊರೊನಾ ದೇವಿಯ ಪ್ರತಿಷ್ಠಾಪಿಸಿ ಪೂಜೆ!
ಆಟೋ ಚಾಲಕರಾಗಿದ್ದ ಸಿದ್ದನಾಯಕ ಏಪ್ರಿಲ್ 26ರಂದು ಕೋವಿಡ್ ಪಾಸಿಟಿವ್ ಆಗಿ ಜಿಲ್ಲಾಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಮೇ 2ರಂದು ರಾತ್ರಿ 11.15ರ ವೇಳೆಯಲ್ಲಿ ಆಕ್ಸಿಜನ್ ಕೊರತೆಯಿಂದ ಮೃತ ಪಟ್ಟಿದ್ದರು. ಸಿದ್ದನಾಯಕ ಮೃತಪಟ್ಟಿರುವ ಬಗ್ಗೆ ವೈದ್ಯಾಧಿಕಾರಿಗಳು ಸಹ ಧೃಢೀಕರಣ ಪತ್ರ ನೀಡಿದ್ದಾರೆ. ಆದರೆ ಸರ್ಕಾರ ಪರಿಹಾರ ನೀಡುತ್ತಿರುವ ಸಂತ್ರಸ್ಥರ ಪಟ್ಟಿಯಲ್ಲಿ ಮಾತ್ರ ಸಿದ್ಧನಾಯಕ ಹೆಸರು ಇಲ್ಲವಾಗಿದೆ.
ಚಾಮರಾಜನಗರ ಆಕ್ಸಿಜನ್ ದುರಂತದಲ್ಲಿ ಮೃತಪಟ್ಟ ಕುಟುಂಬಗಳಿಗೆ ಪರಿಹಾರ
"ಅಂದು ರಾತ್ರಿ ನಾನು ಹಾಗೂ ನಮ್ಮ ಅಣ್ಣ ಯಜಮಾನರ ಬಳಿಯೇ ಇದ್ದೆವು. 10.30ರ ವೇಳೆಗೆ ಆಕ್ಸಿಜನ್ ಖಾಲಿಯಾಯ್ತು. ನಮ್ಮ ಯಜಮಾನರನ್ನು ಬೆನ್ನು ಮೇಲೆ ಮಾಡಿ ಬೆನ್ನು ತಟ್ಟುತ್ತಾ, ಕೈಕಾಲು ಉಜ್ಜುತ್ತಾ ಹೆದರಬೇಡಿ ಇನ್ನೇನು ಆಕ್ಸಿಜನ್ ಬರುತ್ತೆ ಎಂದು ಧೈರ್ಯ ತುಂಬುತ್ತಿದ್ದವು. ಆದರೆ ರಾತ್ರಿ 11.15 ಆದರೂ ಆಕ್ಸಿಜನ್ ಬರಲಿಲ್ಲ, ನಮ್ಮ ಕಣ್ಣೆದುರೇ ನನ್ನ ಪತಿ ಸತ್ತು ಹೋದರು" ಎಂದು ಸಿದ್ದನಾಯಕರ ಪತ್ನಿ ಜ್ಯೋತಿ ಅಂದಿನ ಘಟನೆ ವಿವರಿಸಿದ್ದಾರೆ.
ಚಾಮರಾಜನಗರ ಜಿಲ್ಲೆಯಲ್ಲಿ ಏರುತ್ತಲೇ ಇದೆ ಸಾವಿನ ಸಂಖ್ಯೆ
"ನಮಗೆ ಆಸ್ಪತ್ರೆಯಲ್ಲೂ ಅನ್ಯಾಯ ಆಯಿತು. ಈಗ ಪರಿಹಾರದಲ್ಲೂ ಅನ್ಯಾಯ ಆಗಿದೆ. ವಯಸ್ಸಾದ ನನ್ನ ಅತ್ತೆ, ಮಾವ ಹಾಗೂ ನನ್ನ ಚಿಕ್ಕಮಕ್ಕಳನ್ನು ಕಟ್ಟಿಕೊಂಡು ಜೀವನ ಹೇಗೆ ಸಾಗಿಸಲಿ?" ಎಂದು ಜ್ಯೋತಿ ಕಣ್ಣೀರಿಡುತ್ತಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿಗೆ ಹೋಗಿ ವಿಚಾರಿಸಿದಾಗ ಸಿದ್ದನಾಯಕರ ಹೆಸರು ಪಟ್ಟಿಯಲ್ಲಿ ಇಲ್ಲ, ನೀವು ಜಿಲ್ಲಾಸ್ಪತ್ರೆಗೆ ಹೋಗಿ ವಿಚಾರಿಸಿ ಎಂದು ಅಲ್ಲಿ ತಿಳಿಸಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿ ವಿಚಾರಿಸಿದಾಗ ಫೈಲ್ ಗಳೆಲ್ಲಾ ಸೀಜ್ ಆಗಿವೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.
Recommended Video
ಈ ಬಗ್ಗೆ ಪ್ರತಿಕ್ರಿಯಿಸಿರುವ ಚಾಮರಾಜನಗರ ಶಾಸಕ ಪುಟ್ಟರಂಗಶೆಟ್ಟಿ, "ಜಿಲ್ಲಾಸ್ಪತ್ರೆಯಿಂದ ಪಟ್ಟಿ ಕೊಡುವಾಗಲೇ ತಪ್ಪಾಗಿದೆ. ಆಕ್ಸಿಜನ್ ಕೊರತೆಯಿಂದ 24 ಮಂದಿಯಷ್ಟೇ ಅಲ್ಲ 34 ಮಂದಿ ಸತ್ತಿದ್ದಾರೆ ಎಂದು ಆವತ್ತಿನಿಂದಲು ಪ್ರತಿಪಾದಿಸುತ್ತಾ ಬಂದಿದ್ದೇನೆ. ಸಿದ್ದನಾಯಕ ಸೇರಿದಂತೆ ಇನ್ನೂ 10-15 ಮಂದಿಯ ಹೆಸರು ಕೈ ಬಿಡಲಾಗಿದೆ. ಇದನ್ನು ಸರಿಪಡಿಸಿ ಉಳಿದ ಕುಟುಂಬಗಳಿಗೂ ಪರಿಹಾರ ನೀಡಬೇಕು" ಎಂದು ಆಗ್ರಹಿಸಿದರು.