5 ವರ್ಷದ ಬಳಿಕ ನಡೆಯಿತು ಚಾಮರಾಜೇಶ್ವರ ರಥೋತ್ಸವ
ಚಾಮರಾಜನಗರ, ಜುಲೈ 13: ಬರೋಬ್ಬರಿ ಐದು ವರ್ಷಗಳ ಬಳಿಕ ಗಡಿಜಿಲ್ಲೆ ಚಾಮರಾಜನಗರದಲ್ಲಿ ಶ್ರೀ ಚಾಮರಾಜೇಶ್ವರ ರಥೋತ್ಸವ ಸಂಭ್ರಮ, ಅದ್ದೂರಿಯಾಗಿ ನಡೆಯಿತು.ಕಿಡಿಗೇಡಿಯೊಬ್ಬ ರಥಕ್ಕೆ ಬೆಂಕಿ ಇಟ್ಟಿದ್ದರಿಂದ ಕಳೆದ ಐದು ವರ್ಷಗಳಿಂದ ಜಾತ್ರೆ ನಡೆದಿರಲಿಲ್ಲ.
ಈ ವರ್ಷ ಒಂದು ಕೋಟಿ ರೂ. ವೆಚ್ಚದಲ್ಲಿ ನೂತನ ರಥ ನಿರ್ಮಾಣಗೊಂಡಿದೆ. ಕೋವಿಡ್ ಆತಂಕವೂ ಇಲ್ಲದ ಕಾರಣ ರಥೋತ್ಸವ ನಡೆಯಿತು. ನೂರಾರು ಭಕ್ತರು ಚಾಮರಾಜೇಶ್ವರಸ್ವಾಮಿ ರಥೋತ್ಸವಕ್ಕೆ ಸಾಕ್ಷಿಯಾದರು.
ಚಾಮರಾಜನಗರ: ಕೋವಿಡ್ ಲಸಿಕೆ ಪಡೆದ 23 ವಿದ್ಯಾರ್ಥಿನಿಯರು ಅಸ್ವಸ್ಥ
ಆಷಾಢ ಮಾಸದಲ್ಲಿ ನಡೆಯುವ ರಾಜ್ಯದ ಏಕೈಕ ರಥೋತ್ಸವ ಇದಾಗಿದೆ. ನೂತನ ದಂಪತಿಗಳ ಜಾತ್ರೆ ಎಂದೇ ಇದು ಹೆಸರುವಾಸಿಯಾಗಿದೆ. ನೂತನವಾಗಿ ಸತಿ-ಪತಿಗಳಾದವರು ಆಷಾಡ ಮಾಸದ ಜಾತ್ರೆಯಲ್ಲಿ ಒಂದಾಗಿ ಹಣ್ಣು, ಜವನ ಎಸೆಯುತ್ತಾರೆ.
ನೂತನವಾಗಿ ಮದುವೆಯಾದ ಹುಡುಗಿ ಆಷಾಡ ಮಾಸದಲ್ಲಿ ತವರಿಗೆ ಹೋಗುವುದರಿಂದ ಈ ಜಾತ್ರೆ ನೆಪದಲ್ಲಿ ಒಂದಾಗಿ ಹಣ್ಣು, ಜವನ ಎಸೆಯುವುದು ಈ ಜಾತ್ರೆ ವಿಶೇಷ.
ಮುಮ್ಮಡಿ ಕೃಷ್ಣರಾಜ ಒಡೆಯರ್ ಆಷಾಢ ಮಾಸದಲ್ಲಿ ಜನಿಸಿದ್ದರಿಂದ ಈ ರಥೋತ್ಸವವೂ ಆಷಾಢ ಮಾಸದಲ್ಲೇ ನಡೆಯಲಿದ್ದು ರಾಜತ್ವ ಮತ್ತು ದೈವತ್ವ ಇರುವ ವಿಶೇಷ ದೇಗುಲ ಇದಾಗಿದೆ.
"ರಥೋತ್ಸವ ದಿನದಿಂದು ಹಣ್ಣು, ಜವನ ಎಸೆದರೇ ಸತ್ ಸಂತಾನ, ಇಷ್ಟಾರ್ಥ ಸಿದ್ದಿ ಉಂಟಾಗುವ ನಂಬಿಕೆ ಇದೆ" ಎಂದು ಅರ್ಚಕರಾದ ಸೂರ್ಯನಾರಾಯಣರಾವ್ ತಿಳಿಸಿದರು.
ಯದುವೀರ್ ಚಾಲನೆ; ಇತಿಹಾಸ ಪ್ರಸಿದ್ಧ ಶ್ರೀ ಚಾಮರಾಜೇಶ್ವರ ಮಹಾ ರಥೋತ್ಸವದಲ್ಲಿ ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಭಾಗಿಯಾಗಿ ಚಾಲನೆ ಕೊಟ್ಟರು.
ಶ್ರೀ ಕೆಂಪನಂಜಾಂಬ ಸಮೇತ ಶ್ರೀ ಚಾಮರಾಜೇಶ್ವರಸ್ವಾಮಿಯವರ ವಿಶೇಷ ಜಾತ್ರಾ ರಥೋತ್ಸವಕ್ಕೆ 11 ರಿಂದ 11.30 ಗಂಟೆಯ ಶುಭ ಕನ್ಯಾ ಲಗ್ನದಲ್ಲಿ ರಥೋತ್ಸವಕ್ಕೆ ಚಾಲನೆ ದೊರೆಯಿತು. ದೇವಾಲಯದ ಮುಂಭಾಗದಿಂದ ದಕ್ಷಿಣಾಭಿಮುಖವಾಗಿ ಚಲಿಸಿ ಎಸ್.ಬಿ.ಎಂ. ರಸ್ತೆಯಲ್ಲಿ ಸಾಗಿ ವೀರಭದ್ರೇಶ್ವರಸ್ವಾಮಿ ದೇವಾಲಯದ ವೃತ್ತದಿಂದ ಮಾರಮ್ಮ ದೇವಸ್ಥಾನದ ರಸ್ತೆಯ ಮೂಲಕ ಹಳೆ ತರಕಾರಿ ಮಾರುಕಟ್ಟೆ ರಸ್ತೆಯಲ್ಲಿ ಸಾಗಿ ದೇವಸ್ಥಾನದ ಮೂಲಸ್ಥಾನ ತಲುಪಿತು.
ಮದುವೆಯಾದ ಬಳಿಕ ಮೊದಲ ಜಾತ್ರೆ; ರಥಕ್ಕೆ ಹಣ್ಣು, ಜವನ ಎಸೆದ ಲೀಲಾ ಶಿವಪ್ರಸಾದ್ ಎಂಬ ದಂಪತಿ ಮಾತನಾಡಿ, "ತಮಗೆ ಮದುವೆಯಾಗಿ 4 ತಿಂಗಳಾಗಿದೆ. ಬೆಂಗಳೂರಿನಿಂದ ಈ ರಥೋತ್ಸವಕ್ಕೆ ಬಂದಿದ್ದು ಪತಿಯೂ ಬಂದಿದ್ದಾರೆ. ಈ ಹಿಂದೆ ಕುಟುಂಬದೊಟ್ಟಿಗೆ ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಿದ್ದೆ. ಈಗ ಪತಿಯೊಟ್ಟಿಗೆ ಮೊದಲ ಬಾರಿ ಬಂದಿದ್ದು ಖುಷಿ ಕೊಟ್ಟಿದೆ, ಹಣ್ಣು, ಜವನ ಎಸೆದು ಇಷ್ಟಾರ್ಥ ಸಿದ್ಧಿಸುವಂತೆ ಪ್ರಾರ್ಥಿಸಿದ್ದೇನೆ" ಎಂದು ತಿಳಿಸಿದರು.
ಯಾವುದೇ ಲೋಪ ದೋಷಗಳಿಗೆ ಆಸ್ಪದ ಕೊಡದಂತೆ ಈ ಬಾರಿ ಚಾಮರಾಜನಗರ ಪೊಲೀಸರು ಭಾರೀ ಭದ್ರತೆಯನ್ನು ಕೈಗೊಂಡಿದ್ದರು. ರಥದ ಚಕ್ರದ ಬಳಿ ಯಾರೂ ಸುಳಿಯದಂತೆ ಮುನ್ನೆಚ್ಚರಿಕೆ ವಹಿಸಲಾಗಿತ್ತು. ರಥೋತ್ಸವ ಸಾಗುವ ದಾರಿಯಲ್ಲಿ ಹನುಮಾನ್ ಧ್ವಜ ಮತ್ತು ನಟ ಪುನೀತ್ ರಾಜ್ ಕುಮಾರ್ ಚಿತ್ರವಿದ್ದ ಕನ್ನಡ ಬಾವುಟ ಹಾರಾಡಿತು.