ಚಾಮರಾಜನಗರ: ಕೋವಿಡ್ ಲಸಿಕೆ ಪಡೆದ 23 ವಿದ್ಯಾರ್ಥಿನಿಯರು ಅಸ್ವಸ್ಥ
ಚಾಮರಾಜನಗರ, ಜುಲೈ 7 : ಕೋವಿಡ್ ವ್ಯಾಕ್ಸಿನೇಷನ್ ಪಡೆದಿದ್ದ 23 ವಿದ್ಯಾರ್ಥಿನಿಯರು ಅಸ್ವಸ್ಥರಾಗಿ ಬಿದ್ದ ಘಟನೆ ಚಾಮರಾಜನಗರ ತಾಲೂಕಿನ ಜ್ಯೋತಿಗೌಡನಪುರ ಗ್ರಾಮದಲ್ಲಿ ಗುರುವಾರ ನಡೆದಿದೆ. ಚಿಕಿತ್ಸೆಯ ಬಳಿಕ ಎಲ್ಲಾ ವಿದ್ಯಾರ್ಥಿನಿಯರು ಆರೋಗ್ಯವಾಗಿದ್ದಾರೆ ಎಂದು ತಿಳಿದುಬಂದಿದೆ.
ಜ್ಯೋತಿಗೌಡನಪುರ ಗ್ರಾಮದಲ್ಲಿನ ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿನ 9 ಹಾಗೂ 10 ನೇ ತರಗತಿಯ ಒಟ್ಟು 23 ಮಂದಿ ವಿದ್ಯಾರ್ಥಿಗಳು ಕೋವಿಡ್ 19 ಲಸಿಕೆ ಪಡೆದು ತಲೆ ತಿರುಗಿ ಹಾಗೂ ಸುಸ್ತಿಗೆ ಒಳಗಾಗಿ ಚಾಮರಾಜನಗರ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ.
ವಸತಿ ಶಾಲೆ ವಿದ್ಯಾರ್ಥಿಗಳಿಗೆ ಬುಧವಾರ ಎರಡನೇ ಡೋಸ್ ಕೋವಿಡ್ ವ್ಯಾಕ್ಸಿನ್ ಹಾಕಲಾಗಿತ್ತು. ಓರ್ವ ವಿದ್ಯಾರ್ಥಿನಿಗೆ ಜ್ವರ ಬಂದಿದ್ದು ಇಬ್ಬರು ವಿದ್ಯಾರ್ಥಿನಿಯರಿಗೆ ತಲೆಬೇನೆ ಉಂಟಾಗಿದೆ. ಇದಾದ ನಂತರ, ಒಬ್ಬರ ನಂತರ ಒಬ್ಬರು ಸುಸ್ತು, ತಲೆ ತಿರುಗು ಎಂದು 23 ಮಂದಿ ಬಿದ್ದಿದ್ದರಿಂದ ಆಸ್ಪತ್ರೆಗೆ ದಾಖಲಿಸಿದ್ದು ಯಾವುದೇ ಭಯ ಪಡುವ ಅಗತ್ಯವಿಲ್ಲ ಎಂದು ಶಾಲೆ ಪ್ರಾಂಶುಪಾಲರಾದ ಭವಾನಿಶಂಕರ್ ತಿಳಿಸಿದ್ದಾರೆ.

ಎಲ್ಲಾ ವಿದ್ಯಾರ್ಥಿನಿಯರೂ ಈಗ ಚೆನ್ನಾಗಿದ್ದಾರೆ. ಮಧ್ಯಾಹ್ನ ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ. ಪೋಷಕರಿಗೂ ಮಾಹಿತಿ ನೀಡಿದ್ದೆವು. ಅವರೂ ಬಂದಿದ್ದಾರೆ. ವಿದ್ಯಾರ್ಥಿನಿಯರನ್ನು ಅವರೊಂದಿಗೆ ಮನೆಗೆ ಕಳುಹಿಸಿದ್ದೇವೆ ಎಂದು ಮಾಹಿತಿ ನೀಡಿದರು.
ವಿದ್ಯಾರ್ಥಿನಿಯರು ಅಸ್ವಸ್ಥ ಸಂಬಂಧ ಡಾ. ವಿದ್ಯಾಸಾಗರ್ ಮಾತನಾಡಿ, "ಇವತ್ತು 23ವಿದ್ಯಾರ್ಥಿನಿಯರು ಆಸ್ಪತ್ರೆಗೆ ದಾಖಲಾಗಿದ್ದಾರೆ, 17 ವಿದ್ಯಾರ್ಥಿನಿಗಳಿಗೆ ಲಸಿಕೆ ಪಡೆದಿದ್ದರು. 5 ಜನ ಪಡೆದಿರಲಿಲ್ಲ. ಒಂದು ಮಗುವಿಗೆ ಮಾತ್ರ ಸುಸ್ತಾದ ಹಾಗೆ ಆಗಿದೆ. ಇದನ್ನು ನೋಡಿದ ಕೆಲವು ಮಕ್ಕಳು ಗಾಬರಿಗೊಂಡು ತಮಗೂ ಸುಸ್ತಾಗುತ್ತಿದೆ ಎಂದು ಇಲ್ಲಿ ಬಂದು ದಾಖಲಾಗಿದ್ದರು. ನಾವು ಎಲ್ಲಾ ರೀತಿಯ ಪರೀಕ್ಷೆ ಮಾಡಿದ್ದೆವು. ಯಾವುದೇ ಆತಂಕವಿಲ್ಲ. ವಿದ್ಯಾರ್ಥಿಗಳಿಗೆ ಕೋವಿಡ್ ವ್ಯಾಕ್ಸಿನ್ ನ ಯಾವುದೇ ಅಡ್ಡ ಪರಿಣಾಮ ಉಂಟಾಗಿಲ್ಲ. ಎಲ್ಲರಿಗೂ ಮನೋವೈದ್ಯರು ಕೌನ್ಸಿಲಿಂಗ್ ನಡೆಸಿದ್ದು ವಿದ್ಯಾರ್ಥಿಗಳಿಗೆ ದೈರ್ಯ ತುಂಬಲು ಪ್ರಯತ್ನಿಸಿದ್ದಾರೆ," ಎಂದು ತಿಳಿಸಿದ್ದಾರೆ.

ನಿನ್ನೆ ಲಸಿಕೆ ಪಡೆದುಕೊಂಡಿದ್ದೆವು. ಇವತ್ತು ಸುಸ್ತಾದ ಹಾಗೆ ಕೆಲವರು ಬಿದ್ದೋಗಿದ್ದರು, ಅದಕ್ಕೆ ಆಸ್ಪತ್ರೆಗೆ ಬಂದೆವು. ಲಸಿಕೆ ಚುಚ್ಚಿದ ಜಾಗದಲ್ಲಿ ತುಂಬಾ ನೋವುಂಟಾಗಿ ಸುಸ್ತು ಆಗುತ್ತಿದೆ ಎಂದು ಕೆಲವರು ಬಂದಿದ್ದೇವೆ ಎಂದು ವಿದ್ಯಾರ್ಥಿನಿಯೊಬ್ಬಳು ತಿಳಿಸಿದ್ದಾಳೆ.












Click it and Unblock the Notifications