ಮ್ಯಾನ್ ಹೋಲ್ ದುರಂತ: ಮೃತರ ಕುಟುಂಬಕ್ಕೆ ತಲಾ 10 ಲಕ್ಷ ರು. ಪರಿಹಾರ
ಸೋಮವಾರ ಮಧ್ಯರಾತ್ರಿ ಕೆಲಸಕ್ಕಿಳಿದಿದ್ದ ಕಾರ್ಮಿಕರು; ಮ್ಯಾನ್ ಹೋಲ್ ಗಳಲ್ಲಿ ಕಾರ್ಮಿಕರನ್ನು ಇಳಿಸಕೂಡದೆಂದು ಸುಪ್ರೀಂ ಕೋರ್ಟ್ ನೀಡಿರುವ ಸೂಚನೆಯನ್ನೇ ಮರೆತ ಅಧಿಕಾರಿಗಳು.
ಬೆಂಗಳೂರು, ಮಾರ್ಚ್ 7: ಸಿ.ವಿ. ರಾಮನ್ ನಗರದಲ್ಲಿ ಸೋಮವಾರ ಮಧ್ಯರಾತ್ರಿ ಮ್ಯಾನ್ ಹೋಲ್ ಸ್ವಚ್ಛಗೊಳಿಸುವಾಗ ಅಸುನೀಗಿದ್ದ ಮೂವರು ಕಾರ್ಮಿಕರ ಕುಟುಂಬಕ್ಕೆ ತಲಾ 10 ಲಕ್ಷ ರು. ಪ್ರಕಟಿಸಲಾಗಿದೆ.
ಸೋಮವಾರ ಸಿ.ವಿ. ರಾಮನ್ ನಗರದ ಕಗ್ಗದಾಸಪುರದಲ್ಲಿನ ಮ್ಯಾನ್ ಹೋಲೊಂದರ ಸ್ವಚ್ಛತೆಯಲ್ಲಿ ನಿರತರಾಗಿದ್ದ ಮೂವರು ಕಾರ್ಮಿಕರು ಉಸಿರುಗಟ್ಟಿ ಸಾವನ್ನಪ್ಪಿದ್ದರು. [ಬೆಂಗಳೂರು ಮ್ಯಾನ್ ಹೋಲ್ ದುರಂತ: ಯಾರ್ಯಾರು ಏನೇನಂದ್ರು?]

ಸುದ್ದಿದ ತಿಳಿದ ಕೂಡಲೇ ಬೇಸರ ವ್ಯಕ್ತಪಡಿಸಿದ್ದ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್, ಪ್ರಕರಣದಲ್ಲಿ ಉಲ್ಲಂಘನೆಯಾಗಿದ್ದು ತಪ್ಪೆಸಗಿದವರ ವಿರುದ್ಧ ಉಗ್ರ ಕ್ರಮ ಕೈಗೊಳ್ಳಲಾಗುವುದು ಎಂದಿದ್ದರು. ಬೆಳಗ್ಗೆ 11 ಗಂಟೆ ಸುಮಾರಿಗೆ ಘಟನಾ ಸ್ಥಳಕ್ಕೆ ಭೇಟಿ ನೀಡಿದ ಅವರು, ಮಾಧ್ಯಮಗಳೊಂದಿಗೆ ಮಾತನಾಡಿ ಮೃತರ ಕುಟುಂಬಗಳಿಗೆ 10 ಲಕ್ಷ ರು. ಪರಿಹಾರ ಘೋಷಿಸಿದರು.
ಮೂಲಗಳ ಪ್ರಕಾರ, ಈ ಮೂವರೂ ಕಾರ್ಮಿಕರು ರಾತ್ರಿಯ ವೇಳೆ ಕೆಲಸಕ್ಕೆ ಇಳಿದಿದ್ದರು. ಒಳಗೆ ಹೋದ ಕಾರ್ಮಿಕರು ದುರ್ಮರಣ ಅಪ್ಪಿರುವುದಾಗಿ ಹೇಳಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ಹಾಗೂ ಬಿಡಬ್ಲ್ಯೂಎಸ್ಎಸ್ ಬಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ನಿರ್ಲಕ್ಷ್ಯತೆಯಿಂದಾಗಿ ಕಾರ್ಮಿಕರು ಸಾವನ್ನಪ್ಪಿರುವುದಾಗಿ ಹೇಳಲಾಗಿದ್ದು, ಐಪಿಸಿ ಸೆಕ್ಷನ್ 304ರ ಅಡಿಯಲ್ಲಿ ಕೇಸು ದಾಖಲಿಸಲಾಗಿದೆ.












Click it and Unblock the Notifications