ಮೇಟಿ ಸ್ಥಾನಕ್ಕೆ ಯಾರ ನೇಮಕವೂ ಇಲ್ಲ, ಸಂಪುಟ ವಿಸ್ತರಣೆಯಿಲ್ಲ: ಸಿಎಂ
ಎಚ್.ವೈ. ಮೇಟಿಯವರು ತೆರವಾದ ಸ್ಥಾನಕ್ಕೆ ಯಾರನ್ನು ನೇಮಕ ಮಾಡುವುದಿಲ್ಲ, ಸಚಿವ ಸಂಪುಟದ ವಿಸ್ತರಣೆ ಮಾಡುವುದಿಲ್ಲ, ಸಿಎಂ ಸ್ಪಷ್ಟನೆ
ಬೆಂಗಳೂರು, ಡಿಸೆಂಬರ್ 16: ಸದ್ಯಕ್ಕೆ ಸಂಪುಟ ರಚನೆಯ ಪ್ರಸ್ತಾಪವನ್ನು ಕೈಬಿಡಲಾಗಿದೆ ಜೊತೆಗೆ ಎಚ್.ವೈ. ಮೇಟಿಯವರು ತೆರವಾದ ಸ್ಥಾನಕ್ಕೆ ಯಾರನ್ನು ನೇಮಕ ಮಾಡುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಇಂದಿರಾಗಾಂಧಿ ಸಂಗೀತ ಕಾರಂಜಿ ಸ್ಥಳದಲ್ಲಿರುವ ಸೈನಿಕರ ಸ್ಮಾರಕ ಬಳಿ ಏರ್ಪಡಿಸಿದ್ದ ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಎಚ್.ವೈ. ಮೇಟಿ ರಾಜೀನಾಮೆಯಿಂದ ತೆರವಾಗಿರುವ ಸ್ಥಾನಕ್ಕೆ ಸದ್ಯಕ್ಕೆ ಯಾರ ನೇಮಕವೂ ಇಲ್ಲ ಎಂದರು. ಸಂಪುಟಕ್ಕೆ ಸೇರಿಸಿಕೊಳ್ಳಿ ಎಂದು ನನ್ನ ಬಳಿ ಯಾರೂ ಬಂದಿಲ್ಲ. ನಿಮ್ಮ ಬಳಿ ಯಾರಾದರೂ ಬಂದಿದ್ದಾರೆಯೇ? ಎಂದು ಸುದ್ದಿಗಾರರನ್ನು ಸಿಎಂ ಪ್ರಶ್ನಿಸಿದರು.[ಮೇಟಿ ವಿಡಿಯೋ ಬೆಂಗ್ಳೂರು ದಾಟಿ ದೆಹಲಿಗೆ: ರಾಹುಲ್ ಗೆ ರಾಸಲೀಲೆ ದೂರು]
ಇಂದಿರಾಗಾಂಧಿ ಸಂಗೀತ ಸ್ಮಾರಕದ ಬಳಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸಿಎಂ ಮಾತನಾಡಿ ಸೈನಿಕರು ಗಡಿಯಲ್ಲಿ ತಮ್ಮ ಪ್ರಾಣದ ಹಂಗು ತೊರೆದು ಕೆಲಸ ಮಾಡುತ್ತಿರುವುದರಿಂದಲೇ ನಾವೆಲ್ಲ ನೆಮ್ಮದಿಯಿಂದ ಇದ್ದೇವೆ ಎಂದರು.[ರಾಸಲೀಲೆ ಪ್ರಕರಣ, ಸಿಡಿ ಬಹಿರಂಗ ಪಡಿಸಿದರೆ ತಕ್ಷಣ ಕ್ರಮ: ಸಿಎಂ]
1971, ಡಿಸೆಂಬರ್ 16 ರಂದು ಭಾರತ-ಪಾಕ್ ನಡುವೆ ನಡೆದ ಯುದ್ಧದಲ್ಲಿ 93 ಸಾವಿರ ಸೈನಿಕರು ಶರಣಾದರು. ನಮ್ಮ ದೇಶದ 3,850 ಸೈನಿಕರು ಸಾವನ್ನಪ್ಪಿದರು. ರಾಜ್ಯದ 58 ಜನ ಸೈನಿಕರೂ ಕೂಡ ಹುತಾತ್ಮರಾದರು. 10 ಸಾವಿರ ಮಂದಿ ಗಾಯಗೊಂಡರು. ಅವರೆಲ್ಲರ ಆತ್ಮಕ್ಕೆ ಶಾಂತಿ ದೊರೆಯಲಿ. ಸೈನಿಕರಿಂದಲೇ ನಾವೆಲ್ಲ ಸುರಕ್ಷಿತವಾಗಿದ್ದೇವೆ. ಅವರಿಗೆ ಅಗತ್ಯವಾದ ಎಲ್ಲಾ ಸೌಲಭ್ಯ, ನೆರವು, ಗೌರವ ನೀಡುವುದು ನಮ್ಮ ಕರ್ತವ್ಯ ಎಂದರು.