ಮಹಾತ್ಮ ಗಾಂಧೀಜಿ ಬೆಂಗಳೂರಿಗೆ ಕಾಲಿಟ್ಟು ನೂರು ವರ್ಷ
ಬೆಂಗಳೂರು, ಮೇ. 7 : ಮಹಾತ್ಮ ಗಾಂಧೀಜಿ ಬೆಂಗಳೂರಿಗೆ ಕಾಲಿಟ್ಟು ಮೇ 8 ಕ್ಕೆ ನೂರು ವರ್ಷಗಳು ಸಂದಲಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
ಗಾಂಧೀಜಿ ಅಂಚೆ ಚೀಟಿ ಬಿಡುಗಡೆ, ಛಾಯಾಚಿತ್ರ ಪ್ರದರ್ಶನ, ಪಾದಯಾತ್ರೆ, ಭಜನೆ, ಪುಸ್ತಕ ಬಿಡುಗಡೆ ಮುಂತಾದ ಕಾರ್ಯಕ್ರಮಗಳನ್ನು ಈ ಸವಿನೆನಪಿನ ಅಂಗವಾಗಿ ದಿನವಿಡೀ ಹಮ್ಮಿಕೊಳ್ಳಲಾಗಿದೆ.[ಸತ್ಯಾಗ್ರಹ ಮೂಡಿದ ನಾಡಲ್ಲೇ ಗಾಂಧೀಜಿಗೆ ಅವಮಾನ!]
ಬೆಳಗ್ಗೆ 9 ಗಂಟೆಗೆ ಬೆಂಗಳೂರು ರೈಲ್ವೆ ನಿಲ್ದಾಣದಿಂದ ಪಾದಯಾತ್ರೆ ಹೊರಡಲಿದೆ. 10 ಗಂಟೆಗೆ ಕುಮಾರಕೃಪಾ ರಸ್ತೆಯ ಗಂಧಿ ಭವನದಲ್ಲಿ ಅಪರೂಪದ ಛಾಯಾಚಿತ್ರ ಪ್ರದರರ್ಶನಕ್ಕೆ ಸಚಿವ ರೋಷನ್ ಬೇಗ್ ಚಾಲನೆ ನೀಡಲಿದ್ದಾರೆ. 11 ಗಂಟೆಗೆ ಶತಮಾನೋತ್ಸವ ಸಂಭ್ರಮ ಕಾರ್ಯಕ್ರಮವನ್ನು ಸಿಎಂ ಸಿದ್ದರಾಮಯ್ಯ ಜ್ಞಾನಜ್ಯೋತಿ ಸಭಾಂಗಣದಲ್ಲಿ ಉದ್ಘಾಟಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಗಾಂಧೀಜಿಯವರ ಮೊದಲ ಭೇಟಿಯ ನೆನಪಿನ ವಿಶೇಷ ಅಂಚೆ ಲಕೋಟೆ ಬಿಡುಗಡೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
ರಾಜ್ಯ ಸರ್ಕಾರದಿಂದ ಕಾರ್ಯಕ್ರಮ
ಕರ್ನಾಟಕ ಗಾಂಧೀ ಸ್ಮಾರಕ ನಿಧಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಯುವಜನ ಸಬಲೀಕರಣ ಇಲಾಖೆ ಮತ್ತು ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಹಾಗೂ ಹಲವು ಸಂಘಗಳ ಸಹಯೋಗದೊಂದಿಗೆ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಬೆಳಗ್ಗೆ ಪಾದಯಾತ್ರೆ
ಬೆಳಿಗ್ಗೆ 9 ಗಂಟೆಗೆ ಬೆಂಗಳೂರು ರೈಲ್ವೆ ನಿಲ್ದಾಣದಿಂದ ಪಾದಯಾತ್ರೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಸ್ವಾತಂತ್ರ್ಯ ಯೋಧರು ಎನ್.ಎಸ್.ಎಸ್. ಕಾರ್ಯಕರ್ತರು ಈ ಪಾದಯಾತ್ರೆಯಲ್ಲಿ ಭಾಗವಹಿಸುವರು.
ಪುಸ್ತಕ ಬಿಡುಗಡೆ
ರಾಜ್ಯ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹೊರ ತಂದಿರುವ ಕರ್ನಾಟಕದಲ್ಲಿ ಗಾಂಧೀ ವಿಶೇಷ ಪ್ರಕಟಣೆಯನ್ನು ಕನ್ನಡ-ಸಂಸ್ಕೃತಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಉಮಾಶ್ರೀ ಬಿಡುಗಡೆ ಮಾಡಲಿದ್ದಾರೆ.
ಸಾಂಸ್ಕೃತಿಕ ಕಾರ್ಯಕ್ರಮ
ಬೆಂಗಳೂರು ಹಾತ್ ರಂಗಮಂದಿರದಲ್ಲಿ ಯಕ್ಷಗಾನ, ನಾಟಕ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಸಂಜೆ ಆರು ಗಂಟೆಗೆ ಆರಂಭವಾಗಲಿದೆ. ಮಹಿಳೆಯರಿಂದ ವಿಶೇಷ ಯಕ್ಷಗಾನ ಪ್ರದರ್ಶನವಿದೆ.