'ದೃಷ್ಠಿ'ಗೆ ಹತ್ತಾದರೆ, ಸಂಸ್ಥೆಯಿಂದ ಆದ ಒಳ್ಳೆ ಕೆಲಸ ನೂರಾರು
ಆ ಸಂಸ್ಥೆಯ ಹೆಸರು ದೃಷ್ಠಿ. ಹತ್ತು ವರ್ಷ ಪೂರೈಸಿದ ಸಂಭ್ರಮದಲ್ಲಿರುವ ಸಂಸ್ಥೆಯ ಕನಸು ಕಂಡವರು ಬಾಲಕೃಷ್ಣ ಕೊಡೆಂಕಿರಿ. ಅವರು ವೃತ್ತಿಯಲ್ಲಿ ಉಪನ್ಯಾಸಕರು, ಕೃಷಿಕ. 72 ವರ್ಷ ವಯಸ್ಸಿನ ಪರಿಪೂರ್ಣ ಯುವಕ. ಸಮಾಜ ಸೇವೆಯ ವಿಚಾರಕ್ಕೆ ಬಂದಾಗ ಅಂತಹ ಹುರುಪು. ಮನಸ್ಸಿದ್ದರೆ ಸಮಯವನ್ನು ಹೊಂದಿಸಿಕೊಂಡು, ಏನನ್ನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಸಾಕ್ಷಿ ಇವರು.
ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದವರು. ಸಮಾಜದಲ್ಲಿ ಬಡವರಿಗೆ, ನೊಂದವರಿಗೆ, ಅನಾಥರಿಗೆ, ವಿದ್ಯಾರ್ಥಿಗಳ ಬಾಳಿಗೆ ನೆರವಾಗುವ ಉದ್ದೇಶವನ್ನಿಟ್ಟುಕೊಂಡು ಎನ್ಜಿಒ 'ದೃಷ್ಠಿ'ಯನ್ನು ಕಳೆದೈದು ವರ್ಷಗಳಿಂದ ಮುನ್ನಡೆಸಿಕೊಂಡು ಬರುತ್ತಿದ್ದಾರೆ. ದೃಷ್ಠಿಗೀಗ ದಶಕದ ಸಂಭ್ರಮ.
ವೃದ್ಧರಿಗೆ ಭರವಸೆಯ ಬೆಳಕಾದ ಸುಯೋಗಾಶ್ರಯ: ಲತಿಕಾ ಭಟ್ ಸಂದರ್ಶನ
ಆರಂಭದಲ್ಲಿ ಬಾಲಕೃಷ್ಣರಿಗೆ ಕಾರ್ಯದ ಒತ್ತಡದಲ್ಲಿ ತಮ್ಮ ಸಂಸ್ಥೆಯ ಜವಾಬ್ದಾರಿಗಳನ್ನು ಹೆಚ್ಚಾಗಿ ವಹಿಸಿಕೊಳ್ಳುವುದಕ್ಕೆ ಅಸಾಧ್ಯವಾಗಿದ್ದರೂ ತಮ್ಮ ನಿವೃತ್ತಿಯ ಅನಂತರದಲ್ಲಿ ಸಂಪೂರ್ಣವಾಗಿ ತಮ್ಮ ಗಮನವನ್ನು ದೃಷ್ಠಿಯತ್ತ ನೆಟ್ಟವರು. ಅಶಕ್ತರ ಬಾಳಿಗೆ ಬೆಳಕಾಗುವ ನಿಟ್ಟಿನಲ್ಲಿ ಶ್ರಮಿಸುತ್ತಿರುವವರು.
ದೃಷ್ಠಿಯ ದೃಷ್ಟಾಂತದ ಬಗ್ಗೆ ಇವರಲ್ಲಿ ಕೇಳಿದಾಗ, 2007 ರಲ್ಲಿ ಆರಂಭವಾದ ಈ ಸ್ವಯಂ ಸೇವಾ ಸಂಸ್ಥೆ ಇಂದು ಹತ್ತರ ಕಾಲಿಟ್ಟಿದೆ. ಹೌದು ಸಮಾಜಮುಖಿ ಕಾರ್ಯಗಳ ದೂರ 'ದೃಷ್ಠಿ'ಯನ್ನಿಟ್ಟುಕೊಂಡು ಆರಂಭವಾದ ಈ ಸಂಸ್ಥೆಗೀಗ ದಶಕದ ಸಂಭ್ರಮ. ಬೆಂಗಳೂರಿನಲ್ಲಿ ಮುಖ್ಯ ಕಚೇರಿಯನ್ನು ಹೊಂದಿರುವ ಈ ಸಂಸ್ಥೆಯ ಸಂಸ್ಥಾಪಕರು ಸಂತೋಷ್ ಕೊಡಂಕಿರಿ. ತಮ್ಮ ತಂದೆ ಬಾಲಕೃಷ್ಣ ಅವರ ಮಾರ್ಗದರ್ಶನದಲ್ಲಿ ಜೀವವಿತ್ತವರು.
ಸಮಾಜದಲ್ಲಿ ತುಳಿತಕ್ಕೊಳಗಾದವರನ್ನು, ಆರ್ಥಿಕವಾಗಿ ಹಿಂದುಳಿದವರನ್ನು, ಬಡವರನ್ನು ಸಮಾಜದ ಮುಖ್ಯ ಭೂಮಿಕೆಗೆ ತರುವ ಸದುದ್ದೇಶವನ್ನಿಟುಕೊಂಡಿರುವ ದೃಷ್ಠಿಯಿಂದ ಅನೇಕ ಮಂದಿ ಸಹಾಯವನ್ನು ಪಡೆದಿದ್ದಾರೆ. ದೃಷ್ಠಿ ಆರಂಭವಾದಂದಿನಿಂದ ಇಲ್ಲಿಯವರೆಗೆ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನೂ ನೀಡುತ್ತಿದ್ದಾರೆ.
ಜಯನಗರದ ಉನ್ನತೀಕರಣ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಕಳೆದ ಆರು ವರ್ಷಗಳಿಂದ ಪ್ರತಿ ವರ್ಷವೂ ಪುಸ್ತಕ ಮತ್ತು ಪಠ್ಯ ಸಾಮಗ್ರಿಗಳನ್ನು ನೀಡುವ ಮೂಲಕವೂ ಶಿಕ್ಷಣದ ಬಗ್ಗೆ ತಮಗಿರುವ ಅಗಾಧವಾದ ಪ್ರೀತಿಯನ್ನು ದೃಷ್ಠಿಯ ಮೂಲಕ ಪಡಿಸುತ್ತಾ ಬಂದಿದ್ದಾರೆ.
ಗ್ರಾಮೀಣ ಪ್ರದೇಶದ ಶಾಲೆಗಳನ್ನು ದತ್ತು ಸ್ವೀಕರಿಸಿ, ಶಾಲೆಗೆ ಬೇಕಾದ ಮೂಲಸೌಕರ್ಯಗಳನ್ನು ದೃಷ್ಠಿ ಒದಗಿಸುತ್ತದೆ. ಅಲ್ಲದೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೂ ತಮ್ಮ ಸಂಸ್ಥೆಯ ಮೂಲಕ ಸಹಕಾರವನ್ನು ನೀಡುತ್ತಿದ್ದಾರೆ. ಅನೇಕ ಸ್ವಯಂ ಸಂಸ್ಥೆಗಳಿಗೂ ಅವರ ಬೇಡಿಕೆಗಳನ್ನು ಅರಿತುಕೊಂಡು ಸಹಾಯ ಮಾಡಿರುವ ಹೆಗ್ಗಳಿಕೆಯೂ ಈ ಸಂಸ್ಥೆಯದ್ದು.
ಈ ಸ್ವಯಂ ಸೇವಾ ಸಂಸ್ಥೆಯ ಕಾರ್ಯವನ್ನು ಮೆಚ್ಚಿ ಇದರ ಜತೆಗೆ ಹಲವಾರು ಸಂಘ- ಸಂಸ್ಥೆಗಳು ಕೈ ಜೋಡಿಸಿವೆ. ಅನೇಕ ದಾನಿಗಳೂ ಸಂಸ್ಥೆಗೆ ಸಹಕಾರವನ್ನು ನೀಡಿದ್ದಾರೆ. ಅಲ್ಲದೆ ಬಾಲಕೃಷ್ಣ ಅವರೇ ತಮ್ಮ ಸ್ವಂತ ದುಡಿಮೆಯ ಗಳಿಕೆಯನ್ನೂ ಈ ನಿಟ್ಟಿನಲ್ಲಿ ಬಳಕೆ ಮಾಡುವ ಮೂಲಕ, ಸಮಾಜ ಸೇವೆಯ ನಿಜವಾದ ಅರ್ಥವನ್ನು ಸಮಾಜಕ್ಕೆ ಪರಿಚಯಿಸುವ ಕೆಲಸವನ್ನು ಮಾಡುತ್ತಿದ್ದಾರೆ.
ಮುಖ್ಯ ಕಚೇರಿ ಬೆಂಗಳೂರಿನಲ್ಲಿದ್ದರೂ ಇದರ ಕಾರ್ಯವ್ಯಾಪ್ತಿ ವಿಶಾಲ. ಕರ್ನಾಟಕದ ಸುಳ್ಯದಲ್ಲಿಯೂ ಇದರ ಸಹ ಸಂಸ್ಥೆಯನ್ನು ಆರಂಭಿಸುವ ಉದ್ದೇಶವನ್ನೂ ಹೊಂದಿದ್ದಾರೆ ಬಾಲಕೃಷ್ಣ. ಇನ್ನು ತಮ್ಮ ಕಾರ್ಯಕ್ರಮಗಳ ಮೂಲಕವೇ ರೋಟರಿ, ಲಯನ್ ಇತ್ಯಾದಿ ಸಂಸ್ಥೆಗಳ ಬೆಂಬಲವನ್ನೂ ಈ ಸಂಸ್ಥೆ ಪಡೆದುಕೊಂಡಿದೆ. ಅಲ್ಲದೆ ಇನ್ನು ಮುಂಬರುವ ದಿನಗಳಲ್ಲಿ ಕಣ್ಣೀರೊರೆಸುವ ಕಾಯಕದಲ್ಲಿ ಇನ್ನೂ ಹೆಚ್ಚಿನ ಕೆಲಸವನ್ನು ಮಾಡುವಂತಹ ಅಪೇಕ್ಷೆಯನ್ನು ದೃಷ್ಠಿ ಹೊಂದಿದೆ.
ಪ್ರತಿಯೊಬ್ಬ ಗಂಡಸಿನ ಸಂಪೂರ್ಣತೆಯಲ್ಲಿ ಹೆಣ್ಣಿನ ಪಾತ್ರ ಮಹತ್ವದ್ದು. ದೃಷ್ಠಿ ಮತ್ತು ಬಾಲಕೃಷ್ಣರ ವಿಚಾರಕ್ಕೆ ಬಂದಾಗಲೂ ಈ ಮಾತು ಸತ್ಯ. ಸಾಕ್ಷರತಾ ಆಂದೋಲನ ದಿನಗಳಲ್ಲಿ ಕೊಡೆಂಕಿರಿ ಬಾಲಕೃಷ್ಣ ಅವರ ಧರ್ಮಪತ್ನಿ ಸುಶೀಲ ಬಿ ಭಟ್. ಅವರು ಮಾಡುತ್ತಿದ್ದ ಸಮಾಜ ಸೇವೆಗಳಲ್ಲಿ ಬೆಂಬಲವನ್ನು ನೀಡಿದವರು.
'ದೃಷ್ಠಿ'ಗೆ ದೃಷ್ಠಿ ನೀಡಿದ ವ್ಯಕ್ತಿ ಸಂತೋಷ್ ಕೊಡೆಂಕಿರಿ. ಸಮಾನ ಮನಸ್ಕರನ್ನು ಜತೆಗೂಡಿಸಿಕೊಂಡು ಕಟ್ಟಿದ ಸಮಾಜ ಸೇವಾ ಸಂಸ್ಥೆಯ ಸುಮಾರು 12 ಸಾಮಾಜಿಕ ಕಳಕಳಿಯುಳ್ಳ ಸಾಕ್ಷ್ಯಚಿತ್ರಗಳನ್ನು ನಿರ್ಮಿಸಿದ್ದಾರೆ. ಪುಟ್ಟರಾಜು ಅವರನ್ನೊಳಗೊಂಡಂತೆ ಪಾವನ ಸಂತೋಷ್, ಶ್ರೀನಿವಾಸ್ ಎಚ್., ಶಿವರುದ್ರಯ್ಯ ಎಸ್.ವಿ. ಒಂದು ಸಮರ್ಥ ಆಡಳಿತ ಮಂಡಳಿ ದೃಷ್ಠಿಯ ಬೆಳಕುಗಳಾಗಿ ಕಾರ್ಯ ನಿರ್ವಹಿಸಿಕೊಂಡು ಬರುತ್ತಿದ್ದಾರೆ.