ನಮ್ಮ ದೇಶದ ಆಯುರ್ವೇದ ಕ್ಷೇತ್ರಕ್ಕೆ ನನ್ನದೊಂದು ಕೊಡುಗೆ ಇದೆ
ನಮ್ಮ ದೇಶದ ಆಯುರ್ವೇದ ಕ್ಷೇತ್ರಕ್ಕೆ ನನ್ನದೊಂದು ಕೊಡುಗೆ ಇದೆ
ಬೆಂಗಳೂರು, ಅ 7: ದುಡ್ಡು ಮಾಡುವ ಕೆಲಸವನ್ನಲ್ಲ, ಮನಸ್ಸಿಗೆ ತೃಪ್ತಿನೀಡುವ ಕೆಲಸದಲ್ಲಿ ತೊಡಗಿಸಿಕೊಳ್ಳಬೇಕು. ಹಾಗಾಗಿ ನಾನು ದುಡ್ಡು ಮಾಡುವ ಅಲೋಪತಿ ಔಷಧಿಗಳನ್ನಗಳ ಉತ್ಪಾದನೆ ಮಾಡದೇ ಆಯುರ್ವೇದ ಔಷಧಗಳ ಉತ್ಪಾದನೆಯಲ್ಲಿ ತೊಡಗಿಸಿಕೊಂಡೆ. ನಮ್ಮ ದೇಶದ ಆಯುರ್ವೇದ ಕ್ಷೇತ್ರಕ್ಕೆ ನನ್ನದೊಂದು ಕೊಡುಗೆ ಇದೆ ಎಂಬ ಸಂತೃಪ್ತಿ ನನಗಿದೆ ಎಂದು ಅರೆಕಾ ಟೀ ಕಂಪನಿಯ ಪಿ ವಿ ಹೆಬ್ಬಾರ್ ಹೇಳಿದರು.
ಭಾನುವಾರ (ಅ 7) ಮಲ್ಲೇಶ್ವರದ ಹವ್ಯಕ ಭವನದಲ್ಲಿ ಸಂಪನ್ನವಾದ "ಹವ್ಯಕ ಯುವಜನೋತ್ಸವ" ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪಿ ವಿ ಹೆಬ್ಬಾರ್, ಹವ್ಯಕರು ಶಿಸ್ತು ಹಾಗೂ ಸಂಘಟನೆಗೆ ಹೆಸರುವಾಸಿ. ಹಿಂದೆ ಹವ್ಯಕರ ಮಠವಾದ ರಾಮಚಂದ್ರಾಪುರಮಠದಲ್ಲಿ ನಡೆದ ವಿಶ್ವಗೋಸಮ್ಮೇಳನಕ್ಕೆ ಹೋಗಿದ್ದೆ. ಲಕ್ಷಾಂತರ ಜನ ಸೇರಿದ್ದರೂ ಅಲ್ಲಿದ್ದ ಶಿಸ್ತು ನಾವು ಆಶ್ಚರ್ಯ ಚಕಿತರಾಗಿದ್ದೆವು. ಹವ್ಯಕ ಮಹಾಸಭೆಯಲ್ಲಿ ಉತ್ತಮ ಕಾರ್ಯಕ್ರಮಗಳು ನಡೆಯುತ್ತಿದ್ದು, ಸಮಾಜ ಒಗ್ಗಟ್ಟಾಗಿ ಜಗತ್ತಿಗೆ ಒಳಿತನ್ನು ಮಾಡಲಿ ಎಂದು ಹೆಬ್ಬಾರ್ ಆಶಿಸಿದರು.
ಖ್ಯಾತ ಚಿಂತಕ ಅರಳುಮಲ್ಲಿಗೆ ಪಾರ್ಥಸಾರಥಿ ಅವರು 'ಮಹತ್ತನ್ನು ಚಿಂತಿಸಿ, ಬೃಹತ್ತನ್ನು ಸಾಧಿಸಿ' ಎಂಬ ಕುರಿತು ಮಾತನಾಡಿ ಸಾಮಾನ್ಯ ಜನವಾಗಿ ಬದುಕಲು ಚಿಂತಿಸಬಾರದು, ನಮ್ಮ ಆಲೋಚನೆಗಳು ಉನ್ನತವಾಗಿರಬೇಕು. ನಮ್ಮ ಚಿಂತನೆಗಳು ಉನ್ನತವಾಗಿದ್ದಾಗಲಷ್ಟೇ ದೊಡ್ಡದ್ದನ್ನು ಸಾಧಿಸಲು ಸಾಧ್ಯ. ಹಿಂದಿನ ದಿನ ಏನಾಗಿದೆ, ನಾಳೆ ದಿನ ಏನಾಗಲಿದೆ ಎಂದು ಚಿಂತಿಸುತ್ತಾ ಕೂರದೇ, ಇಂದು ನಮ್ಮ ಸಮಯವನ್ನು ಹೇಗೆ ಸದುಪಯೋಗ ಪಡಿಸಿಕೊಂಡು ಅರ್ಥಪೂರ್ಣವಾಗಿಸಿಕೊಳ್ಳಬೇಕು ಎಂದು ಪಾರ್ಥಸಾರಥಿ ಕಿವಿಮಾತು ಹೇಳಿದರು.
ಖ್ಯಾತ ವಾಗ್ಮಿಗಳಾದ ಕೆ.ಪಿ ಪುತ್ತೂರಾಯ ಮಾತನಾಡಿ, ಸಾಮಾನ್ಯ ಜ್ಞಾನವಿಲ್ಲದ ವಿಷಯ ಜ್ಞಾನ ಅರ್ಥಹೀನ. ವಿಷಯ ಜ್ಞಾನ ಹಾಗೂ ಸಾಮಾನ್ಯ ಜ್ಞಾನ ಬೇರೆಬೇರೆಯಾಗಿದ್ದು, ಸಾಮಾನ್ಯ ಜ್ಞಾನ ಜೀವನಕ್ಕೆ ಅತ್ಯಗತ್ಯವಾಗಿದೆ. ವಿಶ್ವವಿದ್ಯಾನಿಲಯದ ಸಿಲಬಸ್ ನಿಂದ ಜೀವನದಲ್ಲಿ ಯಶಸ್ವಿಯಾಗಲು ಸಾಧ್ಯವಿಲ್ಲ. ಜೀವನದ ಸಿಲೆಬಸ್ ಅರಿತು ಅದರಲ್ಲಿ ಉತ್ತೀರ್ಣವಾದವರು ಮಾತ್ರ ಜೀವನದಲ್ಲಿ ಯಶಸ್ವಿಯಾಗಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಮಹಾಸಭೆಯ ಅಧ್ಯಕ್ಷರಾದ ಡಾ. ಗಿರಿಧರ್ ಕಜೆ ಮಾತನಾಡಿ, ಅಖಿಲ ಹವ್ಯಕ ಮಹಾಸಭೆ 75 ವರ್ಷಗಳ ಹಿಂದೆ ಆರಂಭವಾಗಿದ್ದು, ಅಮೃತಮಹೋತ್ಸವ ವರ್ಷವನ್ನು ಆಚರಿಸಿಕೊಳ್ಳುತ್ತಿದೆ. ಡಿ.28 ರಂದು ಅರಮನೆ ಮೈದಾನದಲ್ಲಿ ಅಮೃತಮಹೋತ್ಸವ ನಡೆಯಲಿದ್ದು, ಡಿ 29 ,30 ರಂದು "ದ್ವಿತೀಯ ವಿಶ್ವ ಹವ್ಯಕ ಸಮ್ಮೇಳನ" ನಡೆಯಲಿದೆ.
ಈ ಸಂದರ್ಭದಲ್ಲಿ ಲಕ್ಷಾಂತರ ಜನ ಸೇರಲಿದ್ದು 75 ಪುಸ್ತಕಗಳು ಲೋಕಾರ್ಪಿತವಾಗಲಿದೆ. 75 ವಿದ್ವಾಂಸರಿಗೆ, 75 ವಿದ್ಯಾರ್ಥಿಗಳಿಗೆ, 75 ಸಾಧಕರಿಗೆ ಹಾಗೂ 75 ಕೃಷಿಕರಿಗೆ ಸನ್ಮಾನ ಮಾಡಲಾಗುವುದು. ಹವ್ಯಕ ಪಾಕೋತ್ಸವಗಳು, ಪ್ರದರ್ಶನಗಳು ನಡೆಯಲಿದ್ದು, ವಿಶಿಷ್ಟ ಕಾರ್ಯಕ್ರಮಗಳ ಮೂಲಕ ಹವ್ಯಕರ ಸಂಸ್ಕೃತಿ ಸಂಸ್ಕಾರಗಳನ್ನು ಜಾಗತಿಕ ಮಟ್ಟದಲ್ಲಿ ಪ್ರದರ್ಶಿಸುವ ಕಾರ್ಯ ಇದಾಗಲಿದೆ ಎಂದು ಗಿರಿಧರ್ ಕಜೆ ತಿಳಿಸಿದರು.

ಇಂಟರ್ವ್ಯೂ ಎದುರಿಸುವುದು ಹೇಗೆ?
ಇಂಟರ್ವ್ಯೂ ಎದುರಿಸುವುದು ಹೇಗೆ? ಎಂಬ ವಿಷಯದ ಬಗ್ಗೆ ಮಾತನಾಡಿದ ಮುರುಳಿ ಕುಕ್ಕುಪುಣಿ, ಇಂಟರ್ವ್ಯೂ ಗಳನ್ನು ಧೈರ್ಯವಾಗಿ ಎದುರಿಸಬೇಕು. ಸಾಮಾನ್ಯವಾಗಿ ನಾವು ಗ್ರಾಮೀಣ ಭಾಗದಿಂದ ಬಂದಿರುವುದರಿಂದ ಇಂಗ್ಲಿಷ್ ಮೇಲೆ ಸಾಕಷ್ಟು ಹಿಡಿತ ಇರುವುದಿಲ್ಲ, ಆದರೆ ಅದಕ್ಕೆ ಅಂಜದೇ ಅಭ್ಯಾಸದಿಂದ ಕಲಿತುಕೊಳ್ಳಬೇಕು. ಇಂಟರ್ವ್ಯೂಗಳಲ್ಲಿ ನಮ್ಮ ಜ್ಞಾನದಷ್ಟೇ ಪ್ರಮುಖಪಾತ್ರವನ್ನು ಆತ್ಮವಿಶ್ವಾಸ ಹಾಗೂ ಬಾಡಿಲಾಂಗ್ವೇಜ್ ಗಳು ವಹಿಸುತ್ತವೆ ಎಂದು ಅಭಿಪ್ರಾಯಪಟ್ಟರು.

ಸ್ಟಾರ್ಟ್'ಪ್ ವಿಚಾರ ವಿಮರ್ಶೆ - ಮಾರ್ಗದರ್ಶನ
ಸ್ಟಾರ್ಟ್'ಪ್ ಆರಂಭಿಸಿ ಯಶಸ್ವಿಯಾದ ಉದ್ಯಮಿಗಳಾದ ನಿತಿನ್ ಶಾಸ್ತ್ರಿ, ಕೃಪೇಶ್ ಭಟ್ , ಸಿಎ ಸದಾಶಿವ ಹಾಗೂ ಕೃಷ್ಣಮೂರ್ತಿ ಭಟ್ ಯಲಹಂಕ ನೇತೃತ್ವದಲ್ಲಿ ಸ್ಟಾರ್ಟ್'ಪ್ ವಿಚಾರ ವಿಮರ್ಶೆ - ಮಾರ್ಗದರ್ಶನ ಕಾರ್ಯಕ್ರಮ ಗಮನ ಸೆಳೆಯಿತು. ಸ್ಟಾರ್ಟ್'ಪ್ ಆರಂಭಿಸಲು ಯಾವ ರೀತಿಯ ಸಹಾಯ ಸಿಗಲಿದೆ, ಯಾವೆಲ್ಲ ಗುಣಗಳ ಅವಶ್ಯ, ಸೋಲುಗಳು ಎದುರಾದಾಗ ಅದನ್ನು ಹೇಗೆ ಎದುರಿಸುವುದು ಮುಂತಾದ ವಿಚಾರಗಳು ಹಾಗೂ ಅವರ ಅನುಭವಗಳು ಚರ್ಚಿತವಾದವು.

ಗ್ರಾಮೀಣ ಭಾಗದ ಯುವ ಸಾಧಕರಿಗೆ ಸನ್ಮಾನ
ಅನಿಲ್ ಬಳಂಜ, ಅಶ್ವಿನಿ ಕೊಡಿಬೈಲು,ನಾಗರತ್ನ ಹೆಬ್ಬಾರ್,ಕೇಶವ ಪ್ರಸಾದ್ ಮುಳಿಯ, ವಿದುಷಿ ದೀಕ್ಷಾ ರಾಮಕೃಷ್ಣ,ಶಿವಕುಮಾರ್ ಅಳಗೊಡು, ರಾಜೇಶ್ ಮಾವಿನಸರ, ಮಂಜುನಾಥ ಜಿ ಎನ್, ನಿಖಿಲ್ ಮಳಲಿ, ಕೌಶಿಕ್ ಹೆಗಡೆ,ಸತೀಶ್ ಹೆಗಡೆ,ಶಿವರಾಮ ಭಾಗ್ವತ್ ಅವರು ವಿವಿಧ ಕ್ಷೇತ್ರಗಳಲ್ಲಿ ಮಾಡಿದ ಸಾಧನೆಯನ್ನು ಗುರುತಿಸಿ ಮಹಾಸಭೆಯಿಂದ ಸನ್ಮಾನಿಸಲಾಯಿತು.

ಸುಬ್ರಾಯ್ ಭಾವನ್ ಸಂತಿಗೆ
ಸಮಾರೋಪ ಸಮಾರಂಭದಲ್ಲಿ ನಿವೃತ್ತ ನ್ಯಾಯಾಧೀಶರಾದ ಕುಕ್ಕಾಜೆ ರಾಮಕೃಷ್ಣ ಭಟ್, ಭಾರತ್ ವಿಕಾಸ್ ಗ್ರೂಪಿನ ಪ್ರಸನ್ನ ಶಾಸ್ತ್ರಿ, ಶ್ರೀರಾಮಚಂದ್ರಾಪುರಮಠದ ಸಮ್ಮುಖ ಸರ್ವಾಧಿಕಾರಿ ತಿಮ್ಮಪ್ಪಯ್ಯ ಮಡಿಯಾಲ್ ಐ.ಪಿ.ಎಸ್ ಉಪಸ್ಥಿತರಿದ್ದರು. ಪ್ರಕಾಶ್ ಹೆಗಡೆ ಕಲ್ಲಾರೆಮನೆ ಹಾಗೂ ತಂಡದಿಂದ ಸ್ವರಧಾರೆ ಸಂಗೀತ ಕಾರ್ಯಕ್ರಮ, ಹವ್ಯಕ ಸಂಪ್ರದಾಯಿಕ ಶೈಲಿಯ "ಫ್ಯಾಷನ್ ಶೋ" ಹಾಗೂ "ಸುಬ್ರಾಯ್ ಭಾವನ್ ಸಂತಿಗೆ" ಮನೋರಂಜನಾ ಕಾರ್ಯಕ್ರಮಗಳು ದಿನದ ಕೇಂದ್ರ ಬಿಂದುವಾಗಿ ಮನೋರಂಜನೆ ನೀಡಿದವು.

ನೂರಾರು ಯುವಕ ಯುವತಿಯರು ಸಾಕ್ಷಿಯಾದ ಕಾರ್ಯಕ್ರಮ
ಕಾರ್ಯಕ್ರಮದ ಸಂಚಾಲಕ ಆದಿತ್ಯ ಕಲಗಾರು ಕಾರ್ಯಕ್ರಮಗಳನ್ನು ಸಂಯೋಜಿಸಿ, ಧನ್ಯವಾದ ಸಮರ್ಪಿಸಿದರು. ಕಾರ್ಯಕ್ರಮದಲ್ಲಿ ಮಹಾಸಭೆಯ ಉಪಾಧ್ಯಕ್ಷರಾದ ಶ್ರೀಧರ್ ಭಟ್ ಕೆಕ್ಕಾರು, ಕೋಶಾಧ್ಯಕ್ಷ ಕೃಷ್ಣಮೂರ್ತಿ ಹೆಗಡೆ ಯಲಹಂಕ, ಕಾರ್ಯದರ್ಶಿಗಳಾದ ಪ್ರಶಾಂತ್ ಭಟ್, ಶ್ರೀಧರ್ ಭಟ್ ಸಾಲೆಕೊಪ್ಪ ಸೇರಿದಂತೆ ಪದಾಧಿಕಾರಿಗಳು, ಸಂಚಾಲಕರು ನೂರಾರು ಯುವಕ ಯುವತಿಯರು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
-
ಕರ್ನಾಟಕದಲ್ಲಿ 40 ಡಿಗ್ರಿ ಸೆಲ್ಸಿಯಸ್ ದಾಟಿದೆ ಉಷ್ಣಾಂಶ: ಈಗಿನ್ನೂ ಮಾರ್ಚ್, ಮೇ ಕಥೆ ಹೇಗೆ? ಬಿಸಿಗಾಳಿಗೆ ಬಸವಳಿದ ಜನ -
Gold Rate: ಬಂಗಾರ ಮತ್ತಷ್ಟು ದುಬಾರಿ: 16,000 ರೂ. ದಾಟಿದ ಚಿನ್ನ, ಬೆಳ್ಳಿ ಬೆಲೆ ಕೂಡ ಏರಿಕೆ, ಇಲ್ಲಿದೆ ಇಂದಿನ ದರ ವಿವರ -
ಎಲ್ಪಿಜಿ ಸಿಲಿಂಡರ್ ಪೂರೈಕೆ ಸ್ಥಗಿತ: ನಾಳೆಯಿಂದ ಬೆಂಗಳೂರಿನಾದ್ಯಂತ ಹೋಟೆಲ್ಗಳು ಬಂದ್ -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣಕ್ಕೆ ಈ ಪ್ರದೇಶ ಬೆಸ್ಟ್: ಉದ್ಯಮಿ ಕಿರಣ್ ಮಜುಂದಾರ್ ಶಾ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು












Click it and Unblock the Notifications