ಗಣೇಶೋತ್ಸವದಲ್ಲಿ ಸಾವರ್ಕರ್ ಭಾವಚಿತ್ರ ಅಳವಡಿಕೆಗೆ ನಿರ್ಧಾರ
ಬೆಂಗಳೂರು, ಆಗಸ್ಟ 30: ಕೋವಿಡ್ ಪಿಡುಗಿನ ಬಳಿಕ ನಡೆಯುತ್ತಿರುವ ಅದ್ಧೂರಿ ಗಣೇಶ ಮಹೋತ್ಸವದಲ್ಲಿ ಗಣೇಶ ಮೂರ್ತಿ ಜತೆಗೆ ವಿಡಿ ಸಾವರ್ಕರ್ ಫೋಟೊ ರಾರಾಜಿಸಲಿದೆ.
ಹೌದು ಬೆಂಗಳೂರಿನ ಎಲ್ಲಾ ಸಾರ್ವಜನಿಕ ಗಣೇಶ ಮಂಟಪಗಳಲ್ಲಿ ವಿ.ಡಿ. ಸಾವರ್ಕರ್ ಫೋಟೋ ಅಳವಡಿಸಲು ಅಗತ್ಯ ಎಲ್ಲ ವ್ಯವಸ್ಥೆ ಮಾಡುವಂತೆ ವಿವಿಧ ಗಣೇಶ ಚತುರ್ಥಿ ಸಂಘಗಳ ಒಕ್ಕೂಟವಾದ ಬೆಂಗಳೂರು ಮಹಾನಗರ ಗಣೇಶೋತ್ಸವ ಸಮಿತಿಯು ಕೋರಿದೆ. ಈ ಸಂಬಂಧ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರನ್ನು ಸೋಮವಾರ ಭೇಟಿ ಮಾಡಿದ ಸಮಿತಿ ಸದಸ್ಯರು ಮನವಿ ಸಲ್ಲಿಸಿದರು.
"ಸಾರ್ವಜನಿಕ ಗಣೇಶ ಮಂಟಪಗಳಲ್ಲಿ ಅಗತ್ಯವಿರುವ ಎಲ್ಲ ವ್ಯವಸ್ಥೆಗಳನ್ನು ಮಾಡುವಂತೆ ಪಾಲಿಕೆಗೆ ಮನವಿ ಮಾಡಲಾಗಿದೆ. ಸೆಪ್ಟಂಬರ್ 2ರಿಂದ 4ರವರೆಗೆ ಹಾಗೂ ಸೆಪ್ಟಂಬರ್ 9ರಿಂದ 11ರವರೆಗೆ ಮೂರು ದಿನ ನಗರದಲ್ಲಿ ಬೃಹತ್ ಮೆರವಣಿಗೆ ನಡೆಯಲಿದೆ. ಅದಕ್ಕೂ ಸೂಕ್ತ ವ್ಯವಸ್ಥೆ ಕಲ್ಪಿಸಿ ಎಂದು ಕೋರಲಾಗಿದೆ. ಬಹುತೇಕ ಎಲ್ಲ ಪಂಗಡದವರು ವಿನಾಯಕ ದಾಮೋದರ ಸಾವರ್ಕರ್ ಅವರ ಭಾವಚಿತ್ರ ಹಾಕುವ ಯೋಜನೆ ಇದಾಗಿದೆ," ಎಂದು ಸಮಿತಿಯ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ರಾಜು ತಿಳಿಸಿದರು.
ಹೋರಾಟಗಾರರ ಭಾವಚಿತ್ರ
ಇತ್ತೀಚೆಗಷ್ಟೇ 75ನೇ ಸ್ವಾತಂತ್ಯ ದಿನಾಚರಣೆ ಆಚರಿಸಿದ್ದೇವೆ. ಅಮೃತ ಮಹೋತ್ಸವದ ಸುಸಂದರ್ಭದಲ್ಲಿದ್ದೇವೆ. ಇದರ ಸ್ಮರಣಾರ್ಥ ಸಾವರ್ಕರ್ ಜತೆಗೆ ಇತರ ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರಗಳು ಮತ್ತು ಕೋಷ್ಟಕಗಳನ್ನು ಸಹ ಹೈಲೈಟ್ ಮಾಡಲಾಗುವುದು ಎಂದು ಅವರು ಹೇಳಿದರು.
ಅದ್ಧೂರಿ ಗಣೇಶೋತ್ಸವ ಆಚರಣೆ ವೇಳೆ ದಕ್ಷ ಸಂಚಾರ, ಬೀದಿ ದೀಪಗಳ ಸೂಕ್ತ ನಿರ್ವಹಣೆ ಸೇರಿದಂತೆ ಅತ್ಯಗತ್ಯ ವ್ಯವಸ್ಥೆಗಳನ್ನು ಸಮಪರ್ಕವಾಗಿ ಕಲ್ಪಿಸುವಂತೆ ಸಮಿತಿ ಕೋರಿದೆ. ಇನ್ನು ಗಣೇಶ ವಿಸರ್ಜನೆಗಾಗಿ ಹೆಬ್ಬಾಳ, ಸ್ಯಾಂಕಿ, ಹಲಸೂರು, ಯಡಿಯೂರು ಸೇರಿದಂತೆ ಕೆರೆಗಳಲ್ಲಿ ವಿಗ್ರಹ ನಿಮಜ್ಜನಕ್ಕೆ ಕ್ರೇನ್ಗಳನ್ನು ನಿಯೋಜಿಸುವಂತೆ ಪತ್ರದಲ್ಲಿ ಮನವಿ ಮಾಡಲಾಗಿದೆ.
ವಿಡಿ ಸಾವರ್ಕರ್ ಕುರಿತು ಸಾಕಷ್ಟು ಚರ್ಚೆ, ವಿವಾದಗಳು ಉಂಟಾಗಿದ್ದವು. ಸಾವರ್ಕರ್ ಯಾರು ಎಂಬುದರಿಂದ ಹಿಡಿದು, ಈಗಿನ ರಾಜಕೀಯದವರೆಗೆ ರಾಜಕಾರಣಿಗಳು ಪರಸ್ಪರ ಟೀಕಿಸಿದ್ದವು. ಕೆಲವೆಡೆ ಸಾವರ್ಕರ್ ಬ್ಯಾನರ್, ಫ್ಲೆಕ್ಸ ಕಿತ್ತು ಉದ್ವಿಘ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಇನ್ನೇನು ತಣ್ಣಗಾಯಿತು ಎನ್ನವುಷ್ಟರಲ್ಲಿ ಎದುರಾದ ಗಣೇಶೋತ್ಸವ ವೇಳೆ ಮತ್ತೆ ಸಾವರ್ಕರ್ ಭಾವಚಿತ್ರ ಹಾಕುವುದಾಗಿ ಗಣೇಶೋತ್ಸವ ಸಮಿತಿಗಳು ತೀರ್ಮಾನಿಸಿರುವುದು ಹಲವು ಕುತೂಹಲಕ್ಕೆ ಕಾರಣವಾಗಿದೆ.