ಟ್ರಾಫಿಕ್ ಸಿಗ್ನಲ್ಗಳಲ್ಲಿ ಇಂಜಿನ್ ಆನ್ ಅಂಡ್ ಆಫ್ ಬೇಡ, ಚಾಲಕರಿಗೆ ಬಿಎಂಟಿಸಿ ಸೂಚನೆ
ಬೆಂಗಳೂರು, ಏಪ್ರಿಲ್ 27 : ಇತ್ತೀಚಿಗೆ ಬಿಎಂಟಿಸಿ ಬಸ್ಗಳು ಆಕಸ್ಮಿಕ ಬೆಂಕಿಗಾಹುತಿಯಾಗುತ್ತಿರುವ ಹಿನ್ನಲೆ, ಬಿಎಂಟಿಸಿ ಅಧಿಕಾರಿಗಳು ಟ್ರಾಫಿಕ್ ಸಿಗ್ನಲ್ಗಳಲ್ಲಿ ಇಂಜಿನ್ನ್ನು ಆನ್ ಅಂಡ್ ಆಫ್ ಮಾಡದಂತೆ ಬಿಎಂಟಿಸಿ ಚಾಲಕರಿಗೆ ಸೂಚನೆ ಮಾಡಿದ್ದಾರೆ. ಇತ್ತೀಚೆಗೆ ಬಿಎಂಟಿಸಿಯ ಮೂರು ಬಸ್ಗಳು ಬೆಂಕಿಗೆ ಆಹುತಿಯಾಗಿದ್ದು. ಈ ಪ್ರಕರಣದ ಸಂಬಂಧ ಪ್ರಾಥಮಿಕ ತನಿಖೆಯನ್ನ ನಡೆಸಲಾಗಿತ್ತು. ಈ ತನಿಖೆಯಲ್ಲಿ ಇಂಜಿನ್ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡು ಈ ಅವಘಡ ಸಂಭವಿಸಿದೆ ಎಂದು ಬಹಿರಂಗ ಪಡಿಸಲಾಗಿದೆ. ಹೀಗಾಗಿ ಅಧಿಕಾರಿಗಳು ಬಿಎಂಟಿಸಿ ಚಾಲಕರಿಗೆ ಈ ನಿರ್ದೇಶನ ನೀಡಿದ್ದಾರೆ.
ಈ ಬಗ್ಗೆ ಆದೇಶ ಹೊರಡಿಸಿರುವ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ಅನ್ಬು ಕುಮಾರ್, "ವಿದ್ಯುತ್ ಶಾಕ್ ಸರ್ಕ್ಯೂಟ್ ತಪ್ಪಿಸಲು ಟ್ರಾಫಿಕ್ ಸಿಗ್ನಲ್ನಲ್ಲಿ ಇಂಜಿನ್ ಅನ್ನು ಸ್ವಿಚ್ ಆಫ್ ಮಾಡದಂತೆ ಮತ್ತು ಮರು ಪ್ರಾರಂಭಿಸಿದಂತೆ ಚಾಲಕರಿಗೆ ಸಲಹೆ ನೀಡಿದ್ದೇವೆ. ಈ ಹಿಂದೆ ಡೀಸೆಲ್ ಉಳಿಸಲು ಇಂಜಿನ್ ಸ್ವಿಚ್ ಆಫ್ ಮಾಡಲಾಗಿತ್ತು. ಈಗ ಬಸ್ ಡಿಪೋಗಳಲ್ಲಿ ಮೊದಲ ಟ್ರಿಪ್ ಪ್ರಾರಂಭಿಸಿದ ಬಳಿಕ ಮತ್ತೆ ಕೊನೆಗೊಳ್ಳುವಾಗಲೇ ಇಂಜಿನ್ ಆಫ್ ಮಾಡಬೇಕು ಎಂದು ಚಾಲಕರಿಗೆ ನಿರ್ದೇಶಿಸಿದ್ದೇವೆ," ಎಂದು ಹೇಳಿದ್ದಾರೆ.
ಈ ಮೂರು ಬಸ್ ದುರಂತದಲ್ಲಿ ಇಂಜಿನ್ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಬಿಎಂಟಿಸಿ ಆಂತರಿಕ ತನಿಖೆಯಿಂದ ತಿಳಿದು ಬಂದಿದೆ. ಈ ಬಸ್ಗಳ ಎಲೆಕ್ಟ್ರಿಕ್ ಲೈನ್ ಮತ್ತು ಡೀಸೆಲ್ ಲೈನ್ ಒಂದಕ್ಕೋಂದು ಪಕ್ಕದಲ್ಲೇ ಇರುವುದರಿಂದ ಪದೇ ಪದೇ ಇಂಜಿನ್ನ್ನ ಆನ್ ಅಂಡ್ ಆಫ್ ಮಾಡುವುದರಿಂದ ಡೀಸೆಲ್ ಸೋರಿಕೆಯಾಗಿ ಬೆಂಕಿ ಹೊತ್ತಿಕೊಳ್ಳಲು ಕಾರಣವಾಗುತ್ತದೆ ಎಂದು ಅನ್ಬು ಕುಮಾರ್ ಹೇಳಿದ್ದಾರೆ.
ಬೆಂಕಿಗೆ ಆಹುತಿಯಾದ ಈ ಮೂರು ಬಸ್ಗಳು ಅಶೋಕ್ ಲೇಲ್ಯಾಂಡ್ ಕಂಪನಿಯಿಂದ ಖರೀದಿಸಿರುವ ಬಸ್ಗಳಾಗಿದೆ. ಸದ್ಯ ಈ ಪ್ರಕರಣದ ಬಗ್ಗೆ ಅಶೋಕ್ ಲೇಲ್ಯಾಂಡ್ ಮತ್ತು ಬಿಎಂಟಿಸಿ ಅಧಿಕಾರಿಗಳು ಸಮಸ್ಯೆಯನ್ನು ನಿರ್ಣಯಿಸುತ್ತಿದ್ದಾರೆ. ಅಲ್ಲಿಯವರೆಗೆ ಬಿಎಂಟಿಸಿ ಈ ತಾತ್ಕಲಿಕ ಪರಿಹಾರಕ್ಕೆ ಮುಂದಾಗಿದೆ.
ನಗರದಲ್ಲಿ ನಡೆದ ಈ ಮೂರು ಬಸ್ ಅಗ್ನಿ ದುರಂತದಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಆದರೆ ಈ ಘಟನೆಯಲ್ಲ ಬಿಎಂಟಿಸಿ ಗಂಭೀರವಾಗಿ ಪರಿಗಣಸಿದ್ದು, ಸಮಿತಿಯನ್ನು ರಚಿಸಿದೆ, ಈ ಸಮಿತಿಗೆ ಅಶೋಕ್ ಲೇಲ್ಯಾಂಡ್ ಕಂಪನಿಯಿಂದ ಖರೀದಿಸಿದ ಎಲ್ಲಾ 186 ಬಸ್ಗಳನ್ನು ಪರಿಶೀಲಿಸುವಂತೆ ಸೂಚನೆ ನೀಡಿದೆ.
2014 ರಲ್ಲಿ ಬಿಎಂಟಿಸಿ 186 ಅಶೋಕ್ ಲೇಲ್ಯಾಂಡ್ ಕಂಪನಿಯ BS-4 ಮಿಡಿ ಬಸ್ಗಳನ್ನು ಖರೀದಿಸಿತ್ತು. ಈ ಮಿಡಿ ಬಸ್ಗಳೆಂದರೆ, ಸಾಮಾನ್ಯವಾಗಿ ಮಿನಿ ಬಸ್ಗಳಿಗಿಂತ ದೊಡ್ಡದಾಗಿರುತ್ತದೆ. ಈ ಬಸ್ಸುಗಳು ಮುಖ್ಯವಾಗಿ ನಗರದ ಕಿರಿದಾದ ಮತ್ತು ದಟ್ಟಣೆಯ ಪ್ರದೇಶಗಳಲ್ಲೂ ಚಲಾಯಿಸಬಹುದಾಗಿದೆ. ಈ ಬಸ್ಸುಗಳು 9 ಮೀಟರ್ ಉದ್ದ ಮತ್ತು 33 ಅಸನಗಳನ್ನು ಹೊಂದಿರುತ್ತದೆ.
ಜನವರಿ 21 ರಂದು ಚಾಮರಾಜಪೇಟೆ ಬಳಿಯ ಮಕ್ಕಳ ಕೂಟ ಬಳಿ ಬಿಎಂಟಿಸಿ ಬಸ್ನ ಇಂಜಿನ್ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡು ಇಡೀ ಬಸ್ ಸುಟ್ಟು ಕರಕಲಾಗಿತ್ತು. ಈ ಘಟನೆ ಮಾಸುವ ಮುನ್ನವೇ ಫೆಬ್ರವರಿ 1 ನೇ ತಾರೀಖು ನಂದಾ ಟಾಕೀಸ್ ರಸ್ತೆ ಬಳಿ ಮತ್ತೊಂದು ಬಿಎಂಟಿಸಿ ಬಸ್ ಬೆಂಕಿಗೆ ಆಹುತಿಯಾಗಿತ್ತು. ಆದಾದ ನಂತರ ಈ ತಿಂಗಳ 9 ರಂದು ಮತ್ತೆ ಶೇಷಾದ್ರಿ ರಸ್ತೆಯ ಎಸ್ಜೆಪಿ ಕಾಲೇಜಿನ ಬಳಿ ಬಿಎಂಟಿಸಿ ಬಸ್ ಬೆಂಕಿಗೆ ಧಗಧಗಿಸಿತ್ತು. ಸದ್ಯ ಈ ಮೂರು ಘಟನೆಗಳಿಂದ ಎಚ್ಚೆತ್ತ ಬಿಎಂಟಿಸಿ ಅಧಿಕಾರಿಗಳು ತನಿಖೆ ನಡೆಸಲು ಸಮಿತಿ ರಚಿಸಿದ್ದು, ತಾತ್ಕಲಿಕವಾಗಿ ಟ್ರಾಫಿಕ್ ಸಿಗ್ನಲ್ಗಳಲ್ಲಿ ಇಂಜಿನ್ ಆನ್ ಅಂಡ್ ಆಫ್ ಮಾಡದಂತೆ ಚಾಲಕರಿಗೆ ಸೂಚಿಸಿದೆ.
Recommended Video