ಮೆಟ್ರೋ ಪಿಲ್ಲರ್ ದುರಂತ: ಸ್ವಯಂಪ್ರೇರಿತ ವಿಚಾರಣೆ ಕೈಗೆತ್ತಿಕೊಂಡ ಹೈಕೋರ್ಟ್
ಬೆಂಗಳೂರಿನ ಹೆಣ್ಣೂರು ಬಳಿ ನಿರ್ಮಾಣ ಹಂತದ ಪಿಲ್ಲರ್ ಕುಸಿದು ಬಿದ್ದ ಇಬ್ಬರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಅರ್ಜಿ ದಾಖಲಿಸಿಕೊಂಡಿದೆ. ಇಂದು ಕಲಾಪ ಪ್ರಾರಂಭವಾಗುತ್ತಿದ್ದಂತೆ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ಅಶೋಕ ಎಸ್. ಕಿಣಗಿ ಅವರಿದ್ದ ನ್ಯಾಪೀಠ, ಘಟನೆ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿರುವುದನ್ನು ಪ್ರಸ್ತಾಪಿಸಿತು. ಅಲ್ಲದೇ ಈ ರೀತಿಯ ಘಟನೆ ದುರಾದೃಷ್ಟಕರ ಎಂದು ತಿಳಿಸಿತು.
ಮೆಟ್ರೋ ಪಿಲ್ಲರ್ ಕುಸಿದು ಮಹಿಳೆ ಮತ್ತು ಆಕೆಯ ಅಂಬೆಗಾಲಿಡುವ ಮಗುವನ್ನು ಬಲಿ ತೆಗೆದುಕೊಂಡರೆ, ಇಬ್ಬರು ಗಾಯಗೊಂಡಿದ್ದಾರೆ. ಗೋವಿಂದಪುರ ಪೊಲೀಸ್ ಠಾಣೆಯಲ್ಲಿ ಮೆಟ್ರೋ ಪಿಲ್ಲರ್ ಕುಸಿತ ಪ್ರಕರಣದಲ್ಲಿ ಸಂಬಂಧಪಟ್ಟ ಐವರು ವ್ಯಕ್ತಿಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಎಫ್ಐಆರ್ ಪ್ರಕಾರ, ಸೈಟ್ ಎಂಜಿನಿಯರ್ಗಳು, ಮೆಟ್ರೋ ಗುತ್ತಿಗೆದಾರರು, ಸೈಟ್ ಇನ್ಚಾರ್ಜ್ ಅಧಿಕಾರಿಗಳು, ಬಿಎಂಆರ್ಸಿಎಲ್ ಅಧಿಕಾರಿಗಳು ಮತ್ತು ಇತರರನ್ನು ಸೇರಿಸಲಾಗಿದೆ. ಘಟನೆಯ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ ನಂತರ ಎಫ್ಐಆರ್ ದಾಖಲಾಗಿದೆ. ಮೃತರ ಕುಟುಂಬಕ್ಕೆ ಮುಖ್ಯಮಂತ್ರಿಗಳು ಪರಿಹಾರವನ್ನೂ ಘೋಷಿಸಿದ್ದಾರೆ.
ಇಂಜಿನಿಯರ್ಗಳಿಗೆ ನೋಟಿಸ್
ಬೆಂಗಳೂರಿನಲ್ಲಿ ನಿರ್ಮಾಣ ಹಂತದಲ್ಲಿರುವ ಮೆಟ್ರೋ ಪಿಲ್ಲರ್ ಕುಸಿದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಬಂಧಪಟ್ಟ ಗುತ್ತಿಗೆದಾರರು ಮತ್ತು ಇಂಜಿನಿಯರ್ಗಳಿಗೆ ನೋಟಿಸ್ ನೀಡಲಾಗಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ತಿಳಿಸಿದೆ. ಆಂತರಿಕ ತಾಂತ್ರಿಕ ತಂಡವು ಈ ಬಗ್ಗೆ ತನಿಖೆ ನಡೆಸಲಿದೆ ಎಂದೂ ಅದು ಹೇಳಿದೆ.
ಮೃತರ ಕುಟುಂಬಕ್ಕೆ ಸಹಾಯ ಧನ
ನಗರದಲ್ಲಿ ನಿರ್ಮಾಣ ಹಂತದಲ್ಲಿರುವ ಮೆಟ್ರೋ ಪಿಲ್ಲರ್ ಕುಸಿದು ಬಿದ್ದ ಪರಿಣಾಮ ಮಹಿಳೆಯೊಬ್ಬರು ಆಕೆಯ ಪುಟ್ಟ ಮಗು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಮಹಿಳೆಯ ಪತಿ ಮತ್ತು ಮಗಳು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಗುತ್ತಿಗೆದಾರರಿಗೆ ಮತ್ತು ಸಂಬಂಧಪಟ್ಟ ಇಂಜಿನಿಯರ್ಗಳಿಗೆ ನೊಟೀಸ್ ನೀಡಲಾಗಿದೆ. 11 ಎಸ್ಸಿ ತನಿಖೆ ನಡೆಸಿ ವರದಿ ನೀಡಲು ವಿನಂತಿಸಲಾಗುವುದು. ಆಂತರಿಕ ತಾಂತ್ರಿಕ ತಂಡವೂ ಈ ಬಗ್ಗೆ ತನಿಖೆ ನಡೆಸಲಿದೆ ಎಂದು ಪ್ರಕಟಣೆ ತಿಳಿಸಿದೆ. ಮೃತರ ಕುಟುಂಬಕ್ಕೆ ಸಹಾಯ ಧನ ನೀಡಲಾಗುವುದು ಎಂದು ಪಾಲಿಕೆ ತಿಳಿಸಿದೆ.
ಫಲಕಾರಿಯಾಗದ ಚಿಕಿತ್ಸೆ
ಗಾಯಾಳುಗಳ ಚಿಕಿತ್ಸಾ ವೆಚ್ಚ ಹಾಗೂ ಮೃತರ ಕುಟುಂಬಕ್ಕೆ 20 ಲಕ್ಷ ರೂಪಾಯಿ ನೆರವು ನೀಡಲಾಗುವುದು ಎಂದು ತಿಳಿಸಿದೆ. ಒಬ್ಬ ಮಹಿಳೆ ಮತ್ತು ಗಂಡು ಮಗುವಿಗೆ ಗಾಯಗಳಾಗಿದ್ದು, ತಕ್ಷಣ ಅವರನ್ನು ಚಿಕಿತ್ಸೆಗಾಗಿ ಹತ್ತಿರದ ಅಲ್ಟಿಯಸ್ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ದುರದೃಷ್ಟವಶಾತ್ ಅವರ ಜೀವಗಳನ್ನು ಉಳಿಸಲು ಸಾಧ್ಯವಾಗಲಿಲ್ಲ. ದುರದೃಷ್ಟಕರ ಘಟನೆಯಿಂದ ಬಿಎಂಆರ್ಸಿಎಲ್ ತೀವ್ರವಾಗಿ ದುಃಖಿತವಾಗಿದೆ ಮತ್ತು ಸಂಕಷ್ಟದಲ್ಲಿರುವ ಕುಟುಂಬದೊಂದಿಗೆ ನಿಲ್ಲುತ್ತದೆ ಎಂದು ಪ್ರಕಟಣೆ ತಿಳಿಸಿದೆ.
ನೋವು ತೋಡಿಕೊಂಡ ಮೃತ ಮಹಿಳೆಯ ತಂದೆ
ಆದರೆ ಮೃತರ ಕುಟುಂಬ ಸರ್ಕಾರದ ವಿರುದ್ಧ ಕಿಡಿ ಕಾರಿದೆ. ಈ ವೇಳೆ ಮಾತನಾಡಿರುವ ತೇಜಸ್ವಿನಿ ಅವರ ತಂದೆ ಮದನ್, ಇದು ಪರಿಹಾರದ ಬಗ್ಗೆ ಅಲ್ಲ. "ನನಗೆ ಅವರ ಪರಿಹಾರದ ಅಗತ್ಯವಿಲ್ಲ. ನಾನು ಅವರಿಗೆ 1 ಕೋಟಿ ರೂ.ನೀಡುತ್ತೇನೆ. ಅವರು ನನ್ನ ಮಗಳು ಮತ್ತು ಮೊಮ್ಮಗನ ಜೀವವನ್ನು ಮರಳಿ ತರಬಹುದೇ? ಇದು ಹಣದ ಬಗ್ಗೆ ಅಲ್ಲ. ಬಿಎಂಆರ್ಸಿಎಲ್ ಮತ್ತು ಗುತ್ತಿಗೆದಾರ ನಾಗಾರ್ಜುನ ಕನ್ಸ್ಟ್ರಕ್ಷನ್ ಕಂಪನಿ ಲಿಮಿಟೆಡ್ (ಎನ್ಸಿಸಿ) ಲೋಪ ಸ್ಪಷ್ಟವಾಗಿ ಕಾಣುತ್ತದೆ" ಎಂದು ಹೇಳಿದ್ದಾರೆ. ಅಲ್ಲದೇ, "ಭವಿಷ್ಯದಲ್ಲಿ ಇಂತಹ ಘಟನೆಗಳನ್ನು ತಡೆಯಲು ಮತ್ತು ಜೀವಗಳನ್ನು ಉಳಿಸುವಂತೆ ನಾನು ಸರ್ಕಾರವನ್ನು ಕೇಳಿಕೊಳ್ಳುತ್ತೇನೆ. ಸರ್ಕಾರ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಬೇಕು. ಅಧಿಕಾರಿಗಳನ್ನು ಬಂಧಿಸಬೇಕು. ಮುಖ್ಯಮಂತ್ರಿಗಳು ಯಾವುದೇ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗದಿದ್ದರೆ ನೂರಾರು ಜನಜೀವನ ಅಪಾಯಕ್ಕೆ ಸಿಲುಕಲಿದೆ" ಎಂದು ಮೃತ ಮಹಿಳೆಯ ತಂದೆ ನೋವು ತೋಡಿಕೊಂಡಿದ್ದಾರೆ.