ಬಿಬಿಎಂಪಿ: ಬೊಮ್ಮನಹಳ್ಳಿಯ ಅಪಾರ್ಟ್ಮೆಂಟ್ ಒತ್ತುವರಿ ತೆರವು
ಬೆಂಗಳೂರು, ಸೆಪ್ಟಂಬರ್ 28: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯಿಂದ ರಾಜಕಾಲುವೆ ಒತ್ತುವರಿ ತೆರವು ಕಾರ್ಯ ಮುಂದುವರಿದಿದೆ. ಬುಧವಾರ ವಿವಿಧೆಡೆ ಒತ್ತುವರಿ ತೆರವು ಮಾಡುವ ಜತೆಗೆ ಸರ್ವೇ ಕಾರ್ಯವನ್ನು ನಡೆಸಿದೆ.
ಬೆಂಗಳೂರಿನ ಬೊಮ್ಮನಹಳ್ಳಿ ವಲಯದ ಕೋಡಿಚಿಕ್ಕನಹಳ್ಳಿಯಲ್ಲಿರುವ ಜನಪ್ರಿಯ ಲೇಕ್ ವ್ಯೂ ಅಪಾರ್ಟ್ಮೆಂಟ್ ಬಳಿ 11 ಅಡಿ ಅಗಲ ಹಾಗೂ 100 ಅಡಿ ಉದ್ದದ ರಾಜಕಾಲುವೆಯ ಒತ್ತುವರಿ ತೆರವು ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಲ್ಲಿ ಬೃಹತ್ ನೀರುಗಾಲುವೆಗಳನ್ನು ಒತ್ತುವರಿ ಮಾಡಿಕೊಂಡಿರುವುದು ಸರ್ವೇಯಿಂದ ದೃಢಪಟ್ಟಿತ್ತು. ಜನಪ್ರಿಯ ಲೇಕ್ ವ್ಯೂ ಅಪಾರ್ಟ್ಮೆಂಟ್ (ಫೇಸ್-2, ಗೇಟ್-1) ಬಳಿ 2 ಕಾಂಪೌಂಡ್ ಗೋಡೆ, ಒಂದು ಖಾಲಿ ಜಾಗ ಹಾಗೂ ರಾಜಕಾಲುವೆ ಮೇಲೆ ನಿರ್ಮಿಸಿದ್ದ ರಸ್ತೆಯನ್ನು ತೆರವುಗೊಳಿಸಲಾಗುತ್ತಿದೆ. ಕಾರ್ಯಾಚರಣೆ ಪ್ರಗತಿಯಲ್ಲಿದ್ದು, ಸದರಿ ಸ್ಥಳದಲ್ಲಿಯೇ ನಾಳೆ ಕೂಡ ಸಂಪೂರ್ಣ ತೆರವು ಮಾಡಿ ಖಾಲಿ ಜಾಗ ವಶಪಡಿಸಿಕೊಳ್ಳಲಾಗುವುದು ಎಂದು ಬಿಬಿಎಂಪಿ ತಿಳಿಸಿದೆ.
ಮಹದೇವಪುರ ವಲಯದಲ್ಲಿ ಸರ್ವೇ ಕಾರ್ಯ ಪ್ರಗತಿ
ಮಹದೇವಪುರ ವಲಯ ವ್ಯಾಪ್ತಿಯಲ್ಲಿ ಹಲವೆಡೆ ಸರ್ವೇ ಕಾರ್ಯ ನಡೆಸಿದ ಬಿಬಿಎಂಪಿ ಅಧಿಕಾರಿಗಳಿಗೆ ರಾಜಕಾಲುವೆ ಒತ್ತುವರಿ ಆಗಿರುವುದು ಕಂಡು ಬಂದಿದೆ. ಹೂಡಿ, ದೊಡ್ಡಾನೆಕುಂದಿ, ವರ್ತೂರು, ಕುಂದನಹಳ್ಳಿ, ಮುನ್ನೇನಕೊಳಲು, ಕಸವಹಳ್ಳಿಯ ಪ್ರದೇಶಗಳಲ್ಲಿ ಸುಮಾರು 5,000 ಮೀಟರ್ ರಾಜಕಾಲುವೆ ಒತ್ತುವರಿಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ವಿವಿಧೆಡೆ ಸರ್ವೇ ಮುಂದುವರಿದ ಕಾರ್ಯ
"ಭೂಮಾಪಕ ಅಧಿಕಾರಿಗಳು ಸೇರಿದಂತೆ ಬಿಬಿಎಂಪಿ ಸಿಬ್ಬಂದಿ ಒತ್ತುವರಿ ಮಾರ್ಕಿಂಗ್ ಮಾಡುತ್ತಿದ್ದಾರೆ. ಅದು ಪೂರ್ಣಗೊಂಡ ಬೆನ್ನಲ್ಲೆ ಜೆಸಿಬಿ, ಟಿಪ್ಪರ್ ಸಹಾಯದಿಂದ ಕೂಡಲೇ ಒತ್ತುವರಿ ತೆರವು ಮಾಡಲಾಗುವುದು. ಈ ಪೈಕಿ ಸರ್ವೇ ಕಾರ್ಯವನ್ನು ತ್ವರಿತವಾಗಿ ಪೂರ್ಣಗೊಳಿಸಿ ಮಾರ್ಕಿಂಗ್ ಮಾಡಿ ಒತ್ತುವರಿ ತೆರವಿಗೆ ಸೂಕ್ತ ಕ್ರಮ ಕೈಗೊಳ್ಳಿ," ಎಂದು ಮುಖ್ಯ ಅಭಿಯಂತರ ಬಸವರಾಜ್ ಕಬಾಡೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಬೆಂಗಳೂರಿಗೆ ಪ್ರವಾಹ ಉಂಟಾದ ಬೆನ್ನಲ್ಲೆ ಬಿಬಿಎಂಪಿ ಕಾಯೋನ್ಮುಖವಾಗಿದ್ದು, ಈಗಾಗಲೇ ಮಾರತ್ತಹಳ್ಳಿ, ಮಹದೇವಪುರ, ಬೊಮ್ಮನಹಳ್ಳಿ, ದಾಸರಹಳ್ಳಿ ಸೇರಿದಂತೆ ವಿವಿಧಡೆ ಒತ್ತುವರಿ ತೆರವು ನಡೆಸುತ್ತಿದ್ದಾರೆ. ರಾಜಕಾಲುವೆ ಮೇಲಿನ ಸ್ಲಾಬ್, ಶೆಡ್, ಕಾಂಪೌಂಡ್, ಅಂಗಡಿ ಮುಂಗಟ್ಟುಗಳನ್ನು ತೆರವು ಮಾಡಿದ ಅಧಿಕಾರಿಗಳು ಪನಃ ಈ ಪ್ರದೇಶಗಳಲ್ಲಿ ಒತ್ತುವರಿ ಮಾಡಿದಂತೆ ತಾಕೀತು ಮಾಡಿದ್ದಾರೆ. ಗುರುವಾರವ ನಗರದ ವಿವಿಧೆಡೆ ಬಿಬಿಎಂಪಿ ತೆರವು ಕಾರ್ಯಾಚರಣೆ ಮುಂದುವರಿಯಲಿದೆ.