ಬೆಳಗಾವಿಯಲ್ಲಿ ಕನ್ನಡ ಕಾರ್ಯಕರ್ತರಿಗೆ ಲಾಠಿ ಏಟು
ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಆಯೋಜಿಸಿರುವ ಮಹಾಮೇಳವ ಸಮ್ಮೇಳನದ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಸೋಮವಾರ ಚೆನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸುತ್ತಿದ್ದರು. ಇದೇ ವೇಳೆ, ಅಲ್ಲಿಗೆ ಎಂಇಎಸ್ ಗೆ ಸೇರಿದ ವಾಹನವೊಂದು ತನ್ನ ಧ್ವಜದೊಂದಿಗೆ ಆಗಮಿಸಿತು. ಎಂಇಎಸ್ ವಾಹನ ನೋಡಿದ ಕೂಡಲೇ ಕೆಲವು ಕಾರ್ಯಕರ್ತರು ಅದರತ್ತ ಕಲ್ಲು ತೂರಾಟ ನಡೆಸಿದರು.
ಇದರಿಂದ ಪರಿಸ್ಥಿತಿ ವಿಕೋಪಕ್ಕೆ ತಿರುಗಿತು, ತಕ್ಷಣ ಪೊಲೀಸರು ಕನ್ನಡ ಕಾರ್ಯಕರ್ತರ ಮೇಲೆ ಲಘು ಲಾಠಿ ಪ್ರಹಾರ ನಡೆಸಿದರು. ಸದ್ಯ ಚೆನ್ನಮ್ಮ ವೃತ್ತದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ. (ಕನ್ನಡಿಗರಿಗೆ ಉದ್ಯೋಗ, ಅದೇ ನಿಜವಾದ ರಾಜ್ಯೋತ್ಸವ)
ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶಕ್ಕೆ ಪ್ರತಿಯಾಗಿ ಎಂಇಎಸ್ ಸೋಮವಾರ ಮಹಾಮೇಳವ ಹಮ್ಮಿಕೊಂಡಿದೆ. ಇದಕ್ಕೆ ಜಿಲ್ಲಾಡಳಿತ ಸಹ ಅನುಮತಿ ನೀಡಿದೆ. ಇದನ್ನು ಖಂಡಿಸಿ ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದ್ದವು. ಈ ಸಂದರ್ಭದಲ್ಲಿ ಕನ್ನಡ ಕಾರ್ಯಕರ್ತರ ಮೇಲೆ ಲಾಠಿ ಪ್ರಹಾರ ನಡೆಸಲಾಗಿದೆ.
ಕಾರ್ಯಕರ್ತರು ಪೊಲೀಸ್ ವಶಕ್ಕೆ : ಎಂಇಎಸ್ ಶಾಸಕ ಸಾಂಬಾಜಿ ಪಾಟೀಲ್ ಅವರ ಕನ್ನಡ ವಿರೋಧಿ ನೀತಿ ಖಂಡಿಸಿ ರಕ್ಷಣಾ ವೇದಿಕೆ ಕಾರ್ಯಕರ್ತರು ಅವರ ಕಚೇರಿ ಮೇಲೆ ದಾಳಿ ನಡೆಸಿದ್ದಾರೆ. ಕಚೇರಿಯ ನಾಮಫಲಕ ಕಿತ್ತುಹಾಕಿ ಪ್ರತಿಭಟನೆ ನಡೆಸುತ್ತಿದ್ದರು. ಸ್ಥಳಕ್ಕೆ ಆಗಮಿಸಿ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದಾರೆ. ಪೊಲೀಸರು ಕನ್ನಡ ಕಾರ್ಯಕರ್ತರನ್ನು ಕರೆದುಕೊಂಡು ಹೋಗುತ್ತಿದ್ದ ಪೊಲೀಸ್ ವಾಹನದ ಮೇಲೂ ಸಾಂಬಾಜಿ ಬೆಂಬಲಿಗರು ಕಲ್ಲು ತೂರಾಟ ನಡೆಸಿದ್ದಾರೆ.