ಬೆಂಗಳೂರಲ್ಲಿ 3 ಜನೌಷಧ ಕೇಂದ್ರ ಆರಂಭಕ್ಕೆ ನೆರವು: ಅನಂತಕುಮಾರ್
ಬೆಂಗಳೂರು, ಜೂನ್ 16: ನಗರದಲ್ಲಿ ಇನ್ನೂ ಮೂರು ಜನೌಷಧ ಕೇಂದ್ರಗಳನ್ನು ಆರಂಭಿಸಲು ಕೇಂದ್ರದಿಂದ ಅಗತ್ಯ ನೆರವು ನೀಡಲಾಗುವುದು ಎಂದು ಕೇಂದ್ರ ಸಚಿವ ಅನಂತಕುಮಾರ್ ಹೇಳಿದ್ದಾರೆ.
ಚನ್ನಮ್ಮನಕರೆ ಅಚ್ಚುಕಟ್ಟು ವೆಂಕಟಾದ್ರಿ ಕಲ್ಯಾಣ ಮಂಟಪದಲ್ಲಿ ಶನಿವಾರ ಅಭಯ ಫೆಡರೇಷನ್ ಆಫ್ ರೆಸಿಡೆನ್ಷಿಯಲ್ ವೆಲ್ಫೇರ್ ಅಸೋಸಿಯೇಷನ್ ವತಿಯಿಂದ ಏರ್ಪಡಿಸಿದ್ದ ಬಸವನಗುಡಿ ಶಾಸಕರಾದ ಎಲ್.ಎ.ರವಿಸುಬ್ರಮಣ್ಯ ಅವರಿಗೆ ಸನ್ಮಾನ ಹಾಗೂ ಜನಸ್ಪಂದನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬೆಂಗಳೂರು ತನ್ನ ಮೂಲ ಅಸ್ಮಿತೆ ಕಳೆದುಕೊಳ್ಳುತ್ತಿದೆ: ಅನಂತಕುಮಾರ್ ಕಳವಳ
ಗಿರಿನಗರ, ಕತ್ರಿಗುಪ್ಪೆ, ವಿದ್ಯಾಪೀಠ ವಾರ್ಡ್ಗಳಲ್ಲಿಈ ಕೇಂದ್ರಗಳನ್ನು ಆರಂಭಿಸಲು ಯೋಜಿಸಲಾಗಿದೆ. ಸ್ಥಳೀಯ ಶಾಸಕರು ಮತ್ತು ಕಾರ್ಪೊರೇಟರ್ಗಳು ಸೂಕ್ತ ಜಾಗ ದೊರಕಿಸಿಕೊಡಬೇಕು. ನಂತರ ಜನೌಷಧಿ ಕೇಂದ್ರ ಸ್ಥಾಪನೆಗೆ ಅಗತ್ಯವಿರುವ ನೆರವನ್ನು ಕೇಂದ್ರ ಸರಕಾರ ನೀಡಲಿದೆ ಎಂದು ತಿಳಿಸಿದರು.
ಸರ್ಕಾರಿ ಆಸ್ಪತ್ರೆ, ಕ್ಲಿನಿಕ್, ವಾರ್ಡ್ ಕಚೇರಿಗಳು ಇರುವೆಡೆ ಒಂದು ಕೊಠಡಿ ವ್ಯವಸ್ಥೆಯನ್ನು ಸ್ಥಳೀಯ ಜನಪ್ರತಿನಿಧಿಗಳು ಮಾಡಿಕೊಡಬೇಕು. ಕೇಂದ್ರ ಸರ್ಕಾರ ಈ ಜನೌಷಧ ಕೇಂದ್ರ ಸ್ಥಾಪನೆಗೆ ಅಗತ್ಯ ನೆರವನ್ನು ನೀಡಲಿದೆ. ಅಲ್ಲದೆ, ಔಷಧಗಳನ್ನು ಈ ಕೇಂದ್ರಗಳಿಗೆ ಪೂರೈಸಲಿದೆ ಎಂದು ಭರವಸೆ ನೀಡಿದರು.
ಪ್ಲಾಸ್ಟಿಕ್ ನಿರ್ಮೂಲನೆ ಮಾಡಿ: ಅಭಯ ಸೇರಿದಂತೆ ಎಲ್ಲಾ ಸಂಘಸಂಸ್ಥೆಗಳು ಪ್ಲಾಸ್ಟಿಕ್ ಬಳಕೆಯನ್ನು ಸ್ಥಗಿತಗೊಳಿಸುವ ಸಂಕಲ್ಪ ಮಾಡಬೇಕು. ಪ್ಲಾಸ್ಟಿಕ್ ಬಳಕೆಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮಗಳಾಗುತ್ತವೆ. ಈ ಹಿನ್ನಲೆಯಲ್ಲಿ ಇನ್ನು ಮುಂದೆ ದೇಸಿ ಪದ್ಧತಿಗಳನ್ನು ಅಳವಡಿಸಿಕೊಂಡು ಪ್ಲಾಸ್ಟಿಕ್ ಬಳಕೆಯನ್ನು ನಿಲ್ಲಿಸಬೇಕು.
ಈ ಸಂಕಲ್ಪವನ್ನು ಎಲ್ಲರೂ ಮಾಡಬೇಕಾಗಿದೆ ಎಂದು ಹೇಳಿದ ಅವರು, ಪ್ಲಾಸ್ಟಿಕ್ ರಾಪರ್ನಲ್ಲಿ ಸುತ್ತಿದ ದೋಸೆ, ಇಡ್ಲಿ, ಪ್ಲಾಸ್ಟಿಕ್ ಲೋಟ, ತಟ್ಟೆ ಸೇರಿದಂತೆ ಹಲವು ಪ್ಲಾಸ್ಟಿಕ್ ಉತ್ಪನ್ನಗಳನ್ನು ಬಳಸದಂತೆ ಎಚ್ಚರವಹಿಸಬೇಕು ಎಂದು ಕರೆ ನೀಡಿದರು.
ರೋಟರಿ, ಸಿಐಐ, ಎಫ್ಐಎಸಿಸಿಐ ಸೇರಿದಂತೆ ಹಲವು ಸಂಸ್ಥೆಗಳು ತಮ್ಮ ಕಾರ್ಯಕ್ರಮಗಳಲ್ಲಿ ಅತಿಥಿಗಳಿಗೆ ಬೊಕೆಗಳನ್ನು ಕೊಡುವುದನ್ನು ನಿಲ್ಲಿಸಿವೆ. ಇವುಗಳಿಗೆ ಬದಲಾಗಿ ಸಸಿಗಳನ್ನು ಕೊಡುತ್ತಾರೆ. ಅದರ ಜೊತೆಗೆ ಪ್ರಮಾಣಪತ್ರವೊಂದನ್ನೂ ನೀಡುತ್ತಾರೆ. ಅದರಲ್ಲಿ ಈ ಸಸಿಯನ್ನು ಇಂತಹ ಜಾಗದಲ್ಲಿ ನೆಡಲಾಗುತ್ತದೆ ಎಂಬುದನ್ನು ಉಲ್ಲೇಖ ಮಾಡಲಾಗುತ್ತದೆ. ಇದನ್ನು ನಾವೂ ಮಾಡಬೇಕಿದೆ ಎಂದೂ ಕಿವಿಮಾತು ಹೇಳಿದರು.