ಬೆಂಗಳೂರು ತನ್ನ ಮೂಲ ಅಸ್ಮಿತೆ ಕಳೆದುಕೊಳ್ಳುತ್ತಿದೆ: ಅನಂತಕುಮಾರ್ ಕಳವಳ
ಬೆಂಗಳೂರು, ಜೂನ್ 10 : ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನ ಇದ್ದರೂ ಕೂಡ ನಾವು ಪ್ರಕೃತಿಗೆ ವಿರುದ್ಧವಾದ ಜೀವನ ಸಾಗಿಸುತ್ತಿರುವುದು ಬಹಳ ಆತಂಕಕಾರಿ ಎಂದು ಕೇಂದ್ರ ರಸಗೊಬ್ಬರ ಮತ್ತು ರಾಸಾಯನಿಕ ಸಚಿವ ಅನಂತಕುಮಾರ್ ಹೇಳಿದರು.
ನಗರದ ವಿಜಯಾ ಕಾಲೇಜಿನ ಆವರಣದಲ್ಲಿ ಅದಮ್ಯ ಚೇತನ ಸಂಸ್ಥೆಯ ವತಿಯಿಂದ ಆಯೋಜಿಸಲಾಗಿದ್ದ 128 ನೇ ಹಸಿರು ಭಾನುವಾರ - ಸಸ್ಯಾಗ್ರಹ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಬ್ರೀಟಿಷ್ ಗೆಜೆಟಿಯರ್ ಪ್ರಕಾರ 1800 ರಲ್ಲಿ ಬೆಂಗಳೂರಿನ ತಾಪಮಾನ ಬೇಸಿಗೆ ಕಾಲದಲ್ಲಿ 18 ರಿಂದ 19 ಡಿಗ್ರಿ ಸೆಲ್ಸಿಯಸ್.
ಬಿಸಾಡಿದ ಪ್ಲಾಸ್ಟಿಕ್ ಕೊಳೆತು ಮಣ್ಣಾಗಲು ಬೇಕು 250 ವರ್ಷ!
ಚಳಿಗಾಲದಲ್ಲಿ ತಾಪಮಾನ ಶೂನ್ಯಕ್ಕೆ ಇಳಿಯುತ್ತಿತ್ತು. ಆದರೆ ಆಧುನಿಕತೆ, ಭೂಮಾಫಿಯಾ, ಮುಗ್ಧ ನಾಗರೀಕರ ಜೀವನ ಶೈಲಿ ಪರಿಣಾಮ ಇಂದು ಬೇಸಿಗೆ ಕಾಲದ ತಾಪಮಾನ 32 ಡಿಗ್ರಿ ಸೆಲ್ಸಿಯಸ್ ಗೆ ತಲುಪಿದೆ. ಇದಕ್ಕೆ ನಮ್ಮಂತಹ ಮುಗ್ಧ ನಾಗರೀಕರ ಕೊಡುಗೆ ಅಪಾರ ಎಂದು ವ್ಯಂಗ್ಯವಾಡಿದರು.
ಬೆಂಗಳೂರು ನಗರದ ಪರಿಸರದ ಬಗ್ಗೆ ಸಮೀಕ್ಷೆಯನ್ನು ಮಾಡುವಂತೆ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸ್ಸಿ ) ವಿಜ್ಞಾನಿಗಳಿಗೆ ಸೂಚನೆ ನೀಡಿದ್ದೆ. 1 ಮನುಷ್ಯನಿಗೆ 7 ಗಿಡ ಇರಬೇಕು. ಬೆಂಗಳೂರಿನಲ್ಲಿ ಅದಕ್ಕಿಂತ ಹೆಚ್ಚಾದ ಮರಗಳಿದ್ದವು. 30 ವರ್ಷಗಳ ಹಿಂದೆ ಇದರ ಪ್ರಮಾಣ ಒಬ್ಬ ಮನುಷ್ಯನಿಗೆ ಒಂದು ಮರ ಎನ್ನುವ ಪ್ರಮಾಣಕ್ಕೆ ಇಳಿಯಿತು.
ಈಗಂತೂ 7 ಜನಕ್ಕೆ ಒಂದು ಗಿಡ ಎನ್ನುವಷ್ಟು ಕಡಿಮೆ ಪ್ರಮಾಣದಷ್ಟು ಕಡಿಮೆಯಾಗಿದೆ. ಅಪ್ಯಾಯಮಾನ ಪರಿಸರಕ್ಕೆ ಹೆಸರುವಾಸಿಯಾಗಿದ್ದ ಬೆಂಗಳೂರು ತನ್ನ ಮೂಲ ಅಸ್ಮಿತೆಯನ್ನು ಕಳೆದುಕೊಳ್ಳುತ್ತಿರುವುದು ಬಹಳ ಆತಂಕಕಾರಿ ಎಂದು ಅನಂತಕುಮಾರ್ ಕಳವಳ ವ್ಯಕ್ತಪಡಿಸಿದರು.
ಚಿಕ್ಕಪೇಟೆ ಶಾಸಕ ಉದಯ ಗರುಡಾಚಾರ್ ಮಾತನಾಡಿ, ಬೆಂಗಳೂರು ನಗರದ ಪರಿಸರವನ್ನು ಶುದ್ಧಗೊಳಿಸುವ ನಿಟ್ಟಿನಲ್ಲಿ ಅದಮ್ಯ ಚೇತನ ಹಾಗೂ ಕೇಂದ್ರ ಸಚಿವ ಅನಂತ ಕುಮಾರ್ ಅವರು ಉತ್ತಮ ಪ್ರತಿಜ್ಞೆ ಮಾಡಿದ್ದಾರೆ. ಇಂತಹ ಪ್ರತಿಜ್ಞೆಯನ್ನು ನಾವೆಲ್ಲರೂ ಕೈಗೊಳ್ಳಬೇಕಾದ ಅವಶ್ಯಕತೆ ಇದೆ ಎಂದರು.
ಅದಮ್ಯ ಚೇತನ ಮುಖ್ಯಸ್ಥೆ ತೇಜಸ್ವಿನಿ ಅನಂತಕುಮಾರ್, ಶಾಸಕರ ಪತ್ನಿ ಮೇದಿನಿ ಗರುಡಾಚಾರ್, ವಿಜಯಾ ಶಿಕ್ಷಣ ಸಂಸ್ಥೆಯ ಸಹಕಾರ್ಯದರ್ಶಿ ಆರ್ ವಿ ಪ್ರಭಾಕರ, ಪ್ರಾಂಶುಪಾಲರು, ನೂರಾರು ಜನ ವಿದ್ಯಾರ್ಥಿಗಳು ಸೇರಿದಂತೆ ಹಲವರು ಭಾಗವಹಿಸಿದ್ದರು.
128 ನೇ ಹಸಿರು ಭಾನುವಾರದ ಅಂಗವಾಗಿ ವಿಜಯಾ ಕಾಲೇಜಿನ ಆವರಣದಲ್ಲಿ ಹೊಂಗೆ, ಶಿವನಿ, ಸಂಪಿಗೆ, ಅವಕಾಡೋ, ಮಂದಾರ, ಬುಗುರಿ ಮತ, ಮೆಹಂದಿ, ರಾಯಲ್ ಪಾಲ್ಮ ಸೇರಿದಂತೆ ಹಲವಾರು ಗಿಡಗಳನ್ನು ನೆಡಲಾಯಿತು.