ಬೆಂಗಳೂರಿಗರೇ, ಗಣೇಶ ಮೂರ್ತಿ ಕೊಳ್ಳುವ ಮುನ್ನ ಗಮನಿಸಿ...
ಬೆಂಗಳೂರು, ಆಗಸ್ಟ್, 30: ಬೆಂಗಳೂರಿನಲ್ಲಿ ಗೌರಿ ಗಣೇಶ ಹಬ್ಬದ ಸಿದ್ಧತೆ ಆರಂಭವಾಗಿದೆ. ಮಾರುಕಟ್ಟೆಗಳಲ್ಲಿ ಗಣೇಶ ಮೂರ್ತಿ ಖರೀದಿ ಭರಾಟೆಯೂ ಆರಂಭವಾಗಿದೆ.
ನಗರದ ಆರ್ ವಿ ರಸ್ತೆ, ಗಾಂಧಿ ಬಝಾರ್, ಕೆ ಆರ್ ಮಾರುಕಟ್ಟೆ, ಮಲ್ಲೇಶ್ವರಂ, ಚಾಮರಾಜ ಪೇಟೆ, ವಿದ್ಯಾಪೀಠ, ಬನಶಂಕರಿ ಬಿಡಿಎ ಕಾಂಪ್ಲೆಕ್ಸ್ ಸೇರಿದಂತೆ ರಸ್ತೆಗಳ ಇಕ್ಕೆಲಗಳಲ್ಲಿ ಗಣಪತಿ ವಿಗ್ರಹಗಳು ಮಾರಾಟಕ್ಕೆ ಲಭ್ಯವಿದೆ.[ಪಿಓಪಿ ಗಣೇಶನ ಕೊಂಡರೆ ಜೈಲಲ್ಲೇ ಕರಿಗಡಬು, ಮೋದಕ!]
ರಾಜ್ಯದಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣೇಶ ಮೂರ್ತಿಗಳನ್ನು ಸಂಪೂರ್ಣವಾಗಿ ನಿಷೇಧಿಸಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕರಾಮಾನಿಮಂ) ಆದೇಶ ಹೊರಡಿಸಿದೆ. ಈ ಬಾರಿ ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣೇಶ ಪೂಜೆ ಮಾಡಿದ ಆರೋಪ ಸಾಬೀತಾದರೆ ಕನಿಷ್ಠ ಒಂದೂವರೆ ವರ್ಷದಿಂದ 6 ವರ್ಷದವರೆಗೆ ಜೈಲು ಶಿಕ್ಷೆ ಜತೆಗೆ ದಂಡ ಪಾವತಿಸಬೇಕು ಎಂದು ಹೇಳಿದೆ. [ಶಾಸ್ತ್ರಬದ್ಧವಾಗಿ ಗಣಪತಿಯನ್ನು ವಿಸರ್ಜಿಸುವ ಕ್ರಮ]
ಆದರೆ ಪರಿಸರ ಸ್ನೇಹಿ ಹಬ್ಬ ಆಚರಣೆಗೆ ಜನರ ಸಹಕಾರವೂ ಅಗತ್ಯ. ವ್ಯಾಪಾರಿಗಳ ಮನವಿ ಮೇರೆಗೆ ನಗರದಲ್ಲಿ ಇದಾಗಲೇ ಸಿದ್ಧವಾಗಿರುವ ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣೇಶ ಮೂರ್ತಿ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಹೊಸ ತಯಾರಿಕೆ ಕಂಡುಬಂದರೆ ಮಾತ್ರ ಕಠಿಣ ಕ್ರಮ ನಿಶ್ಚಿತ ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರಾದ ಲಕ್ಷ್ಮಣ್ ತಿಳಿಸಿದ್ದಾರೆ.
ದರ ಹೇಗಿದೆ?
ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಮೂರ್ತಿಯ ಮೇಲೆ 50 ರು. ಹೆಚ್ಚಾಗಿದೆ. ಗಣೇಶ ಭವನದ ಬಳಿ 30 ರು. ಮೂರ್ತಿಯಿಂದ ಹಿಡಿದು ಸಾವಿರ ರು. ಮೂರ್ತಿಯೂ ಲಭ್ಯವಿದೆ.
ಸೆಗಣಿ ಗಣೇಶ
ಕತ್ರಿಗುಪ್ಪೆ ಕೆಇಬಿ ರಸ್ತೆಯ ಮಂಗಳೂರು ಸ್ಟೋರ್ ನಲ್ಲಿರುವ ಸೆಗಣಿ ಗಣೇಶ ನಿಜಕ್ಕೂ ಪರಿಸರ ಪ್ರೇಮಿ. ಜೇಡಿ ಮಣ್ಣು ಮತ್ತು ಸೆಗಣಿಯಿಂದ ತಯಾರಿಸಿರುವ ಗಣೇಶನ ವಿಸರ್ಜನೆಗೆ ಒಂದೇ ಒಂದು ಬಕೆಟ್ ನೀರು ಸಾಕು ಎಂದು ಅಂಗಡಿಯ ವೃಷಭೇಂದ್ರ ಹೇಳುತ್ತಾರೆ.
ಬೆಂಗಳೂರಿನ ಪಿಒಪಿ ಗಣಪತಿ ಲೆಕ್ಕ
ಬೆಂಗಳೂರಿನಲ್ಲಿ 30 ಸಾವಿರ ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣೇಶ ವಿಗ್ರಹಗಳು ಇವೆ. ಬೆಂಗಳೂರು ಬಿಟ್ಟು ಹೊರಕ್ಕೆ 70 ಸಾವಿರ ವಿಗ್ರಹಗಳಿದ್ದು ಸರ್ವೆ ಮೂಲಕ ಗೊತ್ತಾಗಿದೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಲಕ್ಷಣ್ ತಿಳಿಸಿದ್ದಾರೆ.
ಈ ಬಾರಿ ಅವಕಾಶ
ಪಿಒಪಿ ಗಣೇಶನ ನಿಷೇಧ ಜಾರಿಯಲ್ಲಿದೆ. ನಾವು ಕಟ್ಟುನಿಟ್ಟಿನ ಕಾನೂನು ಜಾರಿಗೆ ಮುಂದಾದ ನಂತರ ವಿಗ್ರಹ ತಯಾರಕರು ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಹಳೆಯ ಅಥವಾ ಈಗಾಗಲೇ ತಯಾರಾದ ಮೂರ್ತಿ ಮಾರಾಟಕ್ಕೆ ಅವಕಾಶ ನೀಡಿದ್ದೇವೆ ಎಂದು ಲಕ್ಷಣ್ ತಿಳಿಸುತ್ತಾರೆ.
ವಿಸರ್ಜನೆ ಹೇಗೆ?
ಒಂದು ವೇಳೆ ಪಿಒಪಿ ಗಣಪತಿಯನ್ನು ಮನೆಗೆ ತಂದರೆ ಅದನ್ನು ವೈಜ್ಞಾನಿಕವಾಗಿ ವಿಸರ್ಜನೆ ಮಾಡುವ ಜವಾಬ್ದಾರಿ ನಿಮಗೆ ಮತ್ತು ಸ್ಥಳೀಯ ಬಿಬಿಎಂಪಿಗೆ ಸೇರಿರುತ್ತದೆ. ನಗರದ ಒಳಗೆ ವಿಸರ್ಜನೆಗೆ ಅವಕಾಶ ಇಲ್ಲ, ನೆನಪಿನಲ್ಲಿ ಇರಲಿ.
ಜಾಗೃತಿ ಕಾರ್ಯಕ್ರಮ
ಜಾಹೀರಾತು, ಶಾಲಾ ಕಾಲೇಜಿಗಳಲ್ಲಿ ಜಾಗೃತಿ, ಭಿತ್ತಿ ಪತ್ರ ಪ್ರದರ್ಶನ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಇಟ್ಟುಕೊಂಡು ಪರಿಸರ ಪ್ರೇಮ ಸಾರುವ ಹಬ್ಬ ಆಚರಣೆ ಮಾಡುವಂತೆ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರೇರೇಪಿಸುತ್ತಿದೆ. ಜನರಿಂದಲೂ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ.
ವ್ಯಾಪಾರಿಗಳ ಗೋಳು
ನಾವೇನು ಉದ್ದೇಶ ಪೂರ್ವಕವಾಗಿ ಪಿಒಪಿ ಗಣೇಶನನ್ನು ತಯಾರು ಮಾಡಿಲ್ಲ. ಸರ್ಕಾರ ಅಥವಾ ಸಂಬಂಧಿಸಿದ ಇಲಾಖೆ ಹಬ್ಬಕ್ಕೆ ಮೂರು ನಾಲ್ಕು ತಿಂಗಳು ಇರುವಾಗಲೇ ಅಧಿಸೂಚನೆ ನೀಡಿದ್ದರೆ ಒಳ್ಳೆಯದಿತ್ತು. ಅಪಾರ ವೆಚ್ಚ ಮಾಡಿ ನಿರ್ಮಿಸಿದ ಪಿಒಪಿ ಗಣಪತಿಗೆ ಬೇಡಿಕೆ ಇಲ್ಲ ಎಂದು ಆರ್ ವಿ ರಸ್ತೆಯಲ್ಲಿ ಕಳೆದ 20 ವರ್ಷಗಳಿಂದ ವ್ಯಾಪಾರ ಮಾಡಿಕೊಂಡು ಬಂದಿರುವ ನಾಗರಾಜು ಹೇಳುತ್ತಾರೆ.