ವಾಯು ಮಾಲಿನ್ಯ ಹೆಚ್ಚಳ: ಬೆಂಗಳೂರಿನಲ್ಲಿ ಮುನ್ನೆಚ್ಚರಿಕೆ
ಬೆಂಗಳೂರು, ನವೆಂಬರ್, 8: ದೇಶ ರಾಜಧಾನಿ ನವದೆಹಲಿಯಲ್ಲಿ ವಾಯುಮಾಲಿನ್ಯ ಮಿತಿಮೀರಿರುವ ಬೆನ್ನಲ್ಲೇ ಬೆಂಗಳೂರಿನಲ್ಲಿಯೂ ಸಹ ಅಗತ್ಯ ಮುನ್ನೆಚ್ಚರಿಕೆ ಕೈಗೊಳ್ಳಲು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮುಂದಾಗಿದೆ.
ವಾಹನ ನೋಂದಣಿಗೆ ಕಡಿವಾಣ, 15ವರ್ಷಕ್ಕಿಂತ ಹಳೆಯದಾದ ವಾಹನಗಳನ್ನು ನಿಷೇಧಿಸುವುದು, ಸಿಎನ್ ಜಿ, ವಿದ್ಯುತ್ ಚಾಲಿತ ವಾಹನಗಳ ಬಳಕೆಗೆ ಆದ್ಯತೆ ನೀಡಲು ಕ್ರಮಕೈಗೊಳ್ಳುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಮಂಡಳಿ ನಿರ್ಧರಿಸಿದೆ.
ಕಳೆದ 10 ವರ್ಷಗಳಲ್ಲಿ ಬೆಂಗಳೂರಿನಲ್ಲಿ ವಾಯುಮಾಲಿನ್ಯ ಪ್ರಮಾಣ ಮಿತಿಮೀರಿದ್ದು, ವೈಟ್ ಫೀಲ್ಡ್ ಪ್ರದೇಶವೊಂದರಲ್ಲೇ 2005-05 ಪ್ರತಿ ಘನಮೀಟರ್ ಗೆ ಶೇ.91.8 ಮೈಕ್ರೋ ಗ್ರಾಂನಷ್ಟಿದ್ದ RSPM ಪ್ರಮಾಣ 2015-16ರಲ್ಲಿ ಶೇ.105ಕ್ಕೆ ಏರಿತ್ತು. ಪ್ರಸ್ತುತ ಮಾಲಿನ್ಯ ಪ್ರಮಾಣ ಶೇ.189ರಷ್ಟು ಇದೆ.
ಇನ್ನೂ ಯಲಹಂಕ ಪ್ರದೇಶದಲ್ಲೂ ಸಹ 2005ರಲ್ಲಿ ಶೇ.57.6ರಷ್ಟಿದ್ದ, RSPM, ಪ್ರಸ್ತುತ 109ಕ್ಕೆ ತಲುಪಿದೆ. ಇದೇ ರೀತಿಯ ಪ್ರಮಾಣ ಮುಂದುವರಿದರೆ ಐದಾರು ವರ್ಷದಲ್ಲಿ ದೆಹಲಿಯನ್ನೂ ಮೀರಿಸುವಂತಹ ವಾಯುಮಾಲಿನ್ಯ ಬೆಂಗಳೂರಿನಲ್ಲೂ ಕಾಣಿಸಿಕೊಳ್ಳಬಹುದು.
ತಂತ್ರಜ್ಞಾನ ಬೆಳವಣಿಗೆ ಮತ್ತು ಸರ್ಕಾರದ ಕ್ರಮಗಳಿಂದಾಗಿ ಕೈಗಾರಿಕಾ ಮಾಲಿನ್ಯ ಹತೋಟಿಯಲ್ಲಿದ್ದು, ನಗರದಲ್ಲಿ ಹೊಗೆ ಉಗುಳುವ ಕೈಗಾರಿಕೆಗಳನ್ನು ಮುಚ್ಚಿದ್ದರಿಂದಲೇ ಪ್ರಮಾಣ ಕಡಿಮೆಯಾಗಿದೆ ಎಂದು ಹೇಳಲಾಗಿದೆ.
ಕಳೆದೊಂದು ದಶಕದಲ್ಲಿ 40ಲಕ್ಷ ವಾಹನಗಳು ಹೆಚ್ಚಳವಾಗಿದ್ದು, 2021-22ರವೇಳೆಗೆ ಒಂದೂ ಕೋಟಿಗೂ ಅಧಿಕ ವಾಹನಗಳು ರಸ್ತೆಗಿಳಿಯಲಿವೆ ಎಂದು ಹೇಳಲಾಗಿದೆ.
1980ರಲ್ಲಿ 1.68ಲಕ್ಷ ವಾಹನಗಳಿದ್ದವು. ಪ್ರಸ್ತುತ 61 ಲಕ್ಷ ವಾಹನಗಳು ರಾಜಧಾನಿಯಲ್ಲಿ ಇವೆ. ಕಳೆದ 11 ವರ್ಷಗಳಲ್ಲಿ ಬರೋಬ್ಬರಿ 40ಲಕ್ಷ ವಾಹನಗಳು ಹೆಚ್ಚಳವಾಗಿವೆ.
ವಾಯುಮಾಲಿನ್ಯ ಪ್ರಮಾಣ ಹೆಚ್ಚಳಕ್ಕೆ ವಾಹನಗಳೇ ಪ್ರಮುಖ ಕಾರಣವಾಗಿದ್ದು, ಒಬ್ಬರಿಗೆ ಒಂದೇ ಕಾರು, ಒಂದೇ ಬೈಕು, ಎನ್ನುವ ನಿಯಮವನ್ನು ತ್ವರಿತವಾಗಿ ಜಾರಿಗೆ ತರಲು ಮಂಡಳಿ ಯೋಚಿಸುತ್ತಿದೆ.