ಮೋದಿ, ಬಿಎಸ್ವೈ ಜೋಡೆತ್ತುಗಳು ಸರಿ ಇಲ್ಲ; ಪರಮೇಶ್ವರ ನಾಯ್ಕ್
ವಿಜಯನಗರ, ಜೂನ್ 13; ಹೂವಿನಹಡಗಲಿ ಕ್ಷೇತ್ರದ ಕಾಂಗ್ರೆಸ್ ಶಾಸಕ, ಮಾಜಿ ಸಚಿವ ಪಿ. ಟಿ. ಪರಮೇಶ್ವರ ನಾಯ್ಕ್ ಪ್ರತಿಭಟನೆ ವೇಳೆ ಕೊರೊನಾ ಮಾರ್ಗಸೂಚಿ ಉಲ್ಲಂಘನೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ.
ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಸೋಗಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಪೆಟ್ರೋಲ್ ದರ ಏರಿಕೆಯನ್ನು ವಿರೋಧಿಸಿ ಕಾಂಗ್ರೆಸ್ ಪಕ್ಷದಿಂದ ಪ್ರತಿಭಟನೆ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಕೋವಿಡ್ ನಿಯಮ ಉಲ್ಲಂಘಿಸಲಾಗಿದೆ.
ಕಾಂಗ್ರೆಸ್ ಕಾರ್ಯಕರ್ತರು ಪೆಟ್ರೋಲ್ ಬೆಲೆ ಏರಿಕೆಯನ್ನು ವಿರೋಧಿಸಿ ಕೇಂದ್ರದ ಮೋದಿ ಸರ್ಕಾರ ಮತ್ತು ರಾಜ್ಯದ ಯಡಿಯೂರಪ್ಪ ನೇತೃತ್ವದ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಕೋವಿಡ್ನಿಂದಾಗಿ ಇಡೀ ರಾಜ್ಯದ ಜನತೆ ಉದ್ಯೋಗವನ್ನು ಕಳೆದುಕೊಂಡು ಸಂಕಷ್ಟದಲ್ಲಿ ಮುಳುಗಿದ್ದಾರೆ. ಇಂತಹ ಸಂದರ್ಭದಲ್ಲಿ ಜನರ ಜೇಬಿಗೆ ಕೈ ಹಾಕಿ ಸರ್ಕಾರ ಹಣವನ್ನು ಕಿತ್ತುಕೊಳ್ಳುತ್ತಿವೆ. ಜನರ ಬಗ್ಗೆ ಕಾಳಜಿ ಇಲ್ಲಾ, ಜನಸಾಮಾನ್ಯರ ಬದುಕು ದುಸ್ಥಾರವಾಗಿದೆ ಎಂದು ಟೀಕಿಸಿದರು.
ಈ ಸಂದರ್ಭದಲ್ಲಿ ಪ್ರತಿಭಟನೆಯನ್ನು ಉದ್ದೇಶಿಸಿ ಹೂವಿನಹಡಗಲಿ ಕ್ಷೇತ್ರದ ಶಾಸಕರು ಮಾತನಾಡಿದರು. ಸರ್ಕಾರಗಳನ್ನು ಟೀಕಿಸುವ ಬರದಲ್ಲಿ ಸಾಮಾಜಿಕ ಅಂತರ ಮರೆತು, ಮಾಸ್ಕ್ ಧರಿಸದೇ ಆವೇಶದಲ್ಲಿ ಶಾಸಕರು ಭಾಷಣ ಮಾಡಿದರು. "ಈ ಎರಡು ಜೋಡೆತ್ತುಗಳು ಸರಿಯಾಗಿಲ್ಲ. ಅದರಿಂದಾಗಿ ದೇಶದ ಆರ್ಥಿಕ ವ್ಯವಸ್ಥೆ ಏರು ಇಳಿವು ಕಾಣುತ್ತಿದೆ" ಎಂದು ವಾಗ್ದಾಳಿ ನಡೆಸಿದರು.
ಹಳ್ಳಿಯ ಸೊಗಡಿನ ಮಾತುಗಳಲ್ಲಿ ಮೋದಿ ಮತ್ತು ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದರು. "ಪ್ರಧಾನಿ ಮೋದಿ ಮತ್ತು ಸಿಎಂ ಯಡಿಯೂರಪ್ಪ ಸುಳಿ ಸುಮಾರಿದೆ. ಈ ಎರಡೂ ಎತ್ತುಗಳು ಸರಿ ಇಲ್ಲಾ, ನಮ್ಮ ತಂದೆಯವರು ಈ ಹಿಂದೆ ಜಾತ್ರೆಗೆ ಹೋಗಿ ಎತ್ತು ಖರೀದಿ ಮಾಡುವಾಗ ಸುಳಿ, ಕೊಂಬು ಎಲ್ಲಾ ಚೆನ್ನಾಗಿದ್ದಾವಾ? ಅಂತ ನೋಡಿ ಎತ್ತುಗಳನ್ನು ಖರೀದಿ ಮಾಡುತ್ತಿದ್ದರು" ಎಂದರು.












Click it and Unblock the Notifications