ಕರ್ಣಾಟಕ ಬ್ಯಾಂಕ್ Q2 ನಿವ್ವಳ ಲಾಭ 186% ಏರಿಕೆ
ಕರ್ಣಾಟಕ ಬ್ಯಾಂಕಿನ ನಿವ್ವಳ ಬಡ್ಡಿ ಆದಾಯ ಶೇ 28 ರಷ್ಟು ಏರಿಕೆ ಕಂಡು 233 ಕೋಟಿ ರು ಬಂದಿದೆ. ಕಳೆದ ವರ್ಷ ಇದೇ ತ್ರೈಮಾಸಿಕ ಅವಧಿಯಲ್ಲಿ 182 ಕೋಟಿ ರು ಮಾತ್ರ ಗಳಿಸಲಾಗಿತ್ತು.
ಕಳೆದ ತ್ರೈಮಾಸಿಕದಲ್ಲಿ ಶೇ 12.5 ರಷ್ಟಿದ್ದ Capital adequacy ಅನುಪಾತ ಈ ತ್ರೈಮಾಸಿಕದಲ್ಲಿ ಶೇ 12.17ರಷ್ಟು ಏರಿಕೆಯಾಗಿದೆ.
ಈ ತ್ರೈಮಾಸಿಕದಲ್ಲಿ ಒಟ್ಟಾರೆ ಆದಾಯ ಶೇ 22.85 ರಷ್ಟು ಏರಿಕೆ ಕಂಡು 1032.37 ಕೋಟಿ ರು ದಾಖಲಾಗಿದೆ. ಕಳೆದ ತ್ರೈಮಾಸಿಕದಲ್ಲಿ ಆದಾಯ 840.33 ಕೋಟಿ ರು ಮಾತ್ರ ಗಳಿಸಿತ್ತು.
ಒಟ್ಟಾರೆ ಅನುತ್ಪಾದಕ ಆಸ್ತಿ (non performing assets) ದರ ಶೇ 3.22 ರಷ್ಟಾಗಿದ್ದು, ಕಳೆದ ತ್ರೈಮಾಸಿಕದಲ್ಲಿ 3.31% ಇತ್ತು. ನಿವ್ವಳ ಅನುತ್ಪಾದಕ ಆಸ್ತಿ ದರ 2.08% ರಷ್ಟಿದ್ದು, ಕಳೆದ ತ್ರೈಮಾಸಿಕದಲ್ಲಿ 1.99% ಇತ್ತು.
ಉತ್ತಮ ತ್ರೈಮಾಸಿಕ ವರದಿ ನಡುವೆಯೂ ಷೇರು ಮಾರುಕಟ್ಟೆಯಲ್ಲಿ ಕರ್ಣಾಟಕ ಬ್ಯಾಂಕಿನ ಷೇರುಗಳು ಬುಧವಾರ(ಆ.17) ಹೆಚ್ಚಿನ ಸಂಚಲನ ಮೂಡಿಸಿಲ್ಲ.
ಬಿಎಸ್ ಇನಲ್ಲಿ ಕರ್ನಾಟಕ ಬ್ಯಾಂಕ್ ಷೇರು ಗಳು 123.40 ರು ನಂತೆ ಶೇ 0.65 ರಷ್ಟು ಏರಿಕೆ ಕಂಡಿತ್ತು. ಎನ್ ಎಸ್ ಇನಲ್ಲಿ 123.40 ರು ನಂತೆ ಶೇ 0.82 ರಷ್ಟು ಏರಿತ್ತು.
ಮಂಗಳೂರು ಮೂಲದ ಪ್ರಮುಖ ಬ್ಯಾಂಕ್ ಕರ್ಣಾಟಕ ಬ್ಯಾಂಕ್ ಅನ್ನು ಐಸಿಐಸಿಐ ಖರೀದಿಸಲಿದೆ ಎಂಬ ಸುದ್ದಿ ಇತ್ತೀಚೆಗೆ ಹರಡಿತ್ತು. ಮಾಧ್ಯಮ ವರದಿಗಳನ್ನು ಬ್ಯಾಂಕ್ ಕರ್ಣಾಟಕ ಬ್ಯಾಂಕ್ ನ ಸಿಇಒ ಪಿ. ಜಯರಾಮ ಭಟ್ ಅಲ್ಲಗೆಳೆದಿದ್ದರು.
2015ರ ಹೊತ್ತಿಗೆ ಸಂಸ್ಥೆ ಔದ್ಯಮಿಕ ಟರ್ನ್ ಓವರ್ ಅನ್ನು 1 ಲಕ್ಷ ಕೋಟಿ ರು ಗೆ ಏರಿಸುವ ಗುರಿ ಹೊಂದಿರುವುದು. ಕರ್ಣಾಟಕ ಬ್ಯಾಂಕ್ ಕೆಬಿಎಲ್ ಮೊಬೈಲ್ ಬ್ಯಾಂಕಿಂಗ್ ಸೇವೆಯನ್ನು ಆರಂಭಿಸಿ ಜನಪ್ರಿಯತೆ ಗಳಿಸಿದ್ದು, ತ್ರೈಮಾಸಿಕ ವರದಿ ಫಲಿತಾಂಶದಲ್ಲಿ ಉತ್ತಮ ಸಾಧನೆಗೆ ಕಾರಣವಾಗಿದೆ.
ಕೆಲ ತಿಂಗಳ ಹಿಂದೆ ಕೋಟಕ್ ಮಹೀಂದ್ರಾ ಬ್ಯಾಂಕ್ ಕೂಡಾ ಕರ್ನಾಟಕ ಬ್ಯಾಂಕ್ ಖರೀದಿಗೆ ಮುಂದಾಗಿದೆ ಎಂಬ ಸುದ್ದಿ ಹಬ್ಬಿತ್ತು. ನಂತರ ಈ ಪಟ್ಟಿಗೆ ಐಸಿಐಸಿಐ ಸೇರ್ಪಡೆಯಾಗಿತ್ತು. ಇದ್ಯಾವುದೂ ಕರ್ಣಾಟಕ ಬ್ಯಾಂಕ್ ತ್ರೈಮಾಸಿಕ ವರದಿ ಮೇಲೆ ಋಣಾತ್ಮಕ ಪರಿಣಾಮ ಬೀರಿಲ್ಲ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.