ಪೆಟ್ರೋಲ್ ಬೆಲೆ 2 ರು. ಇಳಿಕೆ, ಗ್ರಾಹಕನ ಮೂಗಿಗೆ ತುಪ್ಪ
ಮೇ 23ರಂದು ಪೆಟ್ರೋಲ್ ಬೆಲೆಯನ್ನು 7.54 ರು.ನಷ್ಟು ಏರಿಸಿದ್ದರಿಂದ ದೇಶದಾದ್ಯಂತ ಭಾರೀ ಪ್ರತಿಭಟನೆ ವ್ಯಕ್ತವಾಗಿತ್ತು. ಕೇಂದ್ರ ಸರಕಾರದ ಕ್ರಮವನ್ನು ವಿರೋಧಿಸಿ ಎನ್ಡಿಎ ಮೈತ್ರಿಕೂಟ ಮೇ 31ರಂದು ಭಾರತ ಬಂದ್ಗೆ ಕರೆ ನೀಡಿತ್ತು. ಬಂದ್ಗೆ ದೇಶದಾದ್ಯಂತ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಕರ್ನಾಟಕದಾದ್ಯಂತ ಬಂದ್ಗೆ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿತ್ತು.
ಭಾರತ ಬಂದ್ ಹಿಂದಿನ ದಿನವೇ ಪೆಟ್ರೋಲ್ ದರವನ್ನು ಇಳಿಸುವ ಇಂಗಿತವನ್ನು ತೈಲ ಕಂಪನಿಗಳು ವ್ಯಕ್ತಪಡಿಸಿದ್ದವು. ಆದರೆ, ಬಂದ್ ಕರೆ ನೀಡಿದ್ದ ಎನ್ಡಿಎ ಮೈತ್ರಿಕೂಟ ಬೆಲೆ ಇಳಿಕೆಯ ರಾಜಕೀಯ ಲಾಭ ಪಡೆಯುತ್ತವೆ ಎನ್ನುವ ಹಿನ್ನೆಲೆಯಲ್ಲಿ ಬೆಲೆ ಇಳಿಕೆಗೆ ಅನುಮೋದನೆ ನೀಡಿರಲಿಲ್ಲ. ಪೆಟ್ರೋಲ್ ಬೆಲೆ ಏರಿಕೆಗೆ ಯುಪಿಎ ಅಂಗ ಪಕ್ಷಗಳಾದ ತೃಣಮೂಲ ಕಾಂಗ್ರೆಸ್ ಮತ್ತು ಡಿಎಂಕೆ ಪಕ್ಷ ಕೂಡ ವಿರೋಧ ವ್ಯಕ್ತಪಡಿಸಿದ್ದವು.
ಪೆಟ್ರೋಲ್ ಬೆಲೆ ಏರಿಕೆ ಬಿಸಿ ದೇಶದ ಎಲ್ಲೆಡೆಗಿಂತ ಕರ್ನಾಟಕದಲ್ಲಿ ಜನಸಾಮಾನ್ಯರಿಗೆ ಹೆಚ್ಚು ತಟ್ಟಿತ್ತು. ಮೌಲ್ಯ ವರ್ಧಿತ ತೆರಿಗೆ ಮತ್ತು ಪ್ರವೇಶ ತೆರಿಗೆ ಎಲ್ಲಕ್ಕಿಂತ ಹೆಚ್ಚು ಇರುವುದರಿಂದ ಬೆಂಗಳೂರಿನ ಜನತೆ ಪೆಟ್ರೋಲಿಗೆ ಹೆಚ್ಚಿನ ಹಣವನ್ನು ಸುರಿಯುತ್ತಿದ್ದಾರೆ. ಬೆಲೆ ಏರಿಕೆಗೆ ಮುನ್ನ ಲೀಟರಿಗೆ 78.50 ಪೈಸೆ ಇದ್ದ ಬೆಲೆ ಏರಿಕೆಯ ನಂತರ ಲೀಟರಿಗೆ 81.75 ರು. ಆಗಿತ್ತು. ಬೆಲೆ ಇಳಿಕೆಯ ನಂತರ ಬೆಂಗಳೂರಿನಲ್ಲಿ ದರ ಲೀಟರಿಗೆ 79 ರು. ಆಗುವ ಸಾಧ್ಯತೆಯಿದೆ.
ಎಷ್ಟೇ ಪ್ರತಿರೋಧ ವ್ಯಕ್ತವಾಗಿದ್ದರೂ, ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯ ಆಧಾರದ ಮೇಲೆ ಪೆಟ್ರೋಲ್ ಬೆಲೆ ನಿಗದಿ ಮಾಡಲಾಗುತ್ತದೆ. ಪೆಟ್ರೋಲ್ ಬೆಲೆ ಇಳಿಸುವ ಸಾಧ್ಯತೆಯೇ ಇಲ್ಲ ಎಂದು ಪೆಟ್ರೋಲಿಯಂ ಸಚಿವ ಜೈಪಾಲ ರೆಡ್ಡಿ ಹೇಳಿಕೆ ನೀಡಿದ್ದರು. ಈಗ, ಮೇ ಕೊನೆಯ ಹದಿನೈದು ದಿನಗಳಲ್ಲಿ ಸಿಂಗಪುರದಲ್ಲಿ ಕಚ್ಚಾ ತೈಲದ ಬೆಲೆ ಸಾಕಷ್ಟು ಇಳಿಕೆ ಕಂಡಿದೆ. ಪ್ರತಿ ಬ್ಯಾರಲ್ಗೆ 111 ಡಾಲರ್ ಇದ್ದದ್ದು, ಈಗ 106 ಡಾಲರಿಗೆ ಇಳಿದಿದೆ.