ಶ್ರೀರಾಮ ಸೇನೆ ನಿಷೇಧಕ್ಕೆ ದೇವೇಗೌಡರ ಆಗ್ರಹ
ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಎಚ್.ಡಿ. ದೇವೇಗೌಡ, ದಾಳಿಗೆ ಕಾರಣವಾದ ಶ್ರೀರಾಮಸೇನೆ ಅಥವಾ ಇನ್ಯಾವುದೇ ಹಿಂದೂ ಸಂಘಟನೆಯನ್ನು ತಕ್ಷಣ ನಿಷೇಧಿಸಬೇಕು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಪ್ರಧಾನಿ ಮಂತ್ರಿ ಡಾ.ಮನಮೋಹನ್ಸಿಂಗ್ಗೆ ಪತ್ರ ಬರೆದಿರುವ ದೇವೇಗೌಡ, ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಆರಂಭದಲ್ಲಿಯೇ ಚರ್ಚ್ಗಳ ಮೇಲೆ ದಾಳಿ, ಅಲ್ಪಸಂಖ್ಯಾತರ ಮೇಲೆ ಹಲ್ಲೆ ನಡೆದಾಗ ಬಜರಂಗದಳ ಮತ್ತು ಶ್ರೀರಾಮಸೇನೆ ಸಂಘಟನೆಯನ್ನು ನಿಷೇಧಿಸಲು ಸೂಚಿಸಲಾಗಿತ್ತು.
ಬೇಕೆಂದು ವಿನಂತಿಸಿದ್ದನ್ನು ಪತ್ರದಲ್ಲಿ ಉಲ್ಲೇಖಿಸಿರುವ ಮಾಜಿ ಪ್ರಧಾನಿ, ಈಗ ಪ್ರಶಾಂತ್ ಭೂಷಣ್ ಮೇಲೆ ನಡೆದ ದಾಳಿಯ ಹಿನ್ನೆಲೆಯಲ್ಲಿ ದೇಶದ ಜಾತ್ಯತೀತ ಸ್ವರೂಪ, ಏಕತೆ, ಸಮಗ್ರತೆ ಮತ್ತು ಜನತಂತ್ರ ವ್ಯವಸ್ಥೆಗೆ ಮಾರಕವಾಗಿರುವ ಶ್ರೀರಾಮಸೇನೆ ಹಾಗೂ ಬಜರಂಗದಳವನ್ನು ತಕ್ಷಣವೇ ಕಾನೂನು ಬಾಹಿರ ಸಂಘಟನೆಗಳೆಂದು ಅಮಾನ್ಯ ಮಾಡುವುದು ತುರ್ತು ಅಗತ್ಯವಾಗಿದೆ ಎಂದು ಪ್ರತಿಪಾದಿಸಿದ್ದಾರೆ.
ಪ್ರಶಾಂತ್ ಭೂಷಣ್ರ ಮೇಲೆ ಗೂಂಡಾಗಿರಿ ತೋರಿಸಿರುವುದು ಇಡೀ ದೇಶಕ್ಕೆ ಅಘಾತವಾಗಿದೆ. ಸುಪ್ರೀಂ ಕೋರ್ಟ್ ಅಂಗಳದಲ್ಲೇ ಸಾಂವಿಧಾನಿಕ ಹಕ್ಕುಗಳ ಪ್ರತಿಪಾದಿಸುವ ವ್ಯಕ್ತಿಯನ್ನು ಹಿಗ್ಗಾಮುಗ್ಗಾ ಥಳಿಸಿರುವುದು ಭದ್ರತಾ ವ್ಯವಸ್ಥೆಯ ಮೇಲೆ ಶಂಕೆ ವ್ಯಕ್ತವಾಗುತ್ತದೆ.
ಸಮಾಜಘಾತುಕ ಶಕ್ತಿಗಳ ಹೇಡಿತನದ ಕೃತ್ಯವಾಗಿದ್ದು, ಸರ್ಕಾರ ಕೂಡಲೇ ಕ್ರಮ ಜರುಗಿಸಬೇಕು ಎಂದು ಮಾಜಿ ಪ್ರಧಾನಿ ಮನವಿ ಮಾಡಿದ್ದಾರೆ.
ಪ್ರಜಾತಂತ್ರ ವ್ಯವಸ್ಥೆಯಲ್ಲಿ ವಾಕ್ ಸ್ವಾತಂತ್ರ್ಯಕ್ಕೆ ಬೆಲೆ ಇರಬೇಕು. ಈ ರೀತಿ ಅಡಗಿಸಲು ತೋಳ್ಬಲ ಪ್ರದರ್ಶಿಸುವುದು ಅಂಗೀಕಾರಾರ್ಹವಲ್ಲ. ದೇಶದ ಪ್ರಜಾಸತ್ತಾತ್ಮಕ ಮತ್ತು ವಾಕ್ ಸ್ವಾತಂತ್ರವನ್ನು ರಕ್ಷಿಸಿಕೊಳ್ಳುವಲ್ಲಿ ಬದ್ಧ ಎಂಬ ದಿಟ್ಟ ಸಂದೇಶವನ್ನು ಸಾರಬೇಕಿದೆ.
ಜನತಂತ್ರ ವಿರೋಧಿ ಮತ್ತು ಫ್ಯಾಸಿಸ್ಟ್ ಶಕ್ತಿಗಳಿಗೆ ಪಾಠ ಕಲಿಸಲು ಇದು ಸಕಾಲ ಎಂದು ಹೇಳಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಪತ್ರದಲ್ಲಿ ಹೇಳಿದ್ದಾರೆ.