ಕಾರ್ಮಿಕರಿಗೆ ಸೌಲಭ್ಯ ವಂಚನೆ, ಸಿಡ್ನಿ ತಿಮ್ಮಪ್ಪ ದೇಗುಲ ಸುದ್ದಿಯಲ್ಲಿ
ಸಿಡ್ನಿ : ಆಸ್ಟ್ರೇಲಿಯಾದ ಹೆಲೆನ್ಸ್ಬರ್ಗ್ನ ಶ್ರೀವೆಂಕಟೇಶ್ವರ ದೇವಾಲಯ ಟ್ರಸ್ಟ್ ಭಾರತದಿಂದ ದೇಗುಲ ನಿರ್ಮಾಣಾರ್ಥ ಕರೆಸಿಕೊಂಡಿದ್ದ ಭಾರತೀಯ ಶಿಲ್ಪಿಗಳನ್ನು ಮತ್ತೆ ಭಾರತಕ್ಕೆ ವಾಪಸು ಕಳಿಸಲು ಆಸ್ಟ್ರೇಲಿಯಾ ಸರಕಾರ ನಿರ್ಧರಿಸಿದೆ ಎಂಬ ಸುದ್ದಿಯಾಂದಿಗೆ ದೇಗುಲ ಶಿಲ್ಪಿಗಳ ಪ್ರಕರಣ ಹೊಸ ತಿರುವು ಪಡೆದಿದೆ.
ಆಸ್ಟ್ರೇಲಿಯಾದಲ್ಲಿ ಜಾರಿಯಲ್ಲಿರುವ ನಿಯಮಗಳ ರೀತ್ಯ ಕಾರ್ಮಿಕರಿಗೆ ಕನಿಷ್ಠ ವೇತನ ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸಿಲ್ಲ ಎಂಬ ಆರೋಪಕ್ಕಾಗಿ ವೆಂಕಟೇಶ್ವರ ದೇವಾಲಯ ಸಂಸ್ಥೆ ಕಾನೂನು ಉಲ್ಲಂಘನೆಗಾಗಿ ಕಠಿಣ ಕ್ರಮಕ್ಕೆ ಒಳಗಾಗುವ ಸಾಧ್ಯತೆಗಳೂ ಇವೆ. ಈ ಸಂಬಂಧ ಉಂಟಾಗಬಹುದಾದ ಮುಜುಗರ ತಪ್ಪಿಸಲು ಈ ಕಾರ್ಮಿಕರನ್ನು ಭಾರತಕ್ಕೆ ವಾಪಸ್ಸು ಕಳುಹಿಸಲು ನಿರ್ಧರಿಸಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಈ ಕಾರ್ಮಿಕರನ್ನು ಭಾರತದಿಂದ ಕರೆಸಿಕೊಳ್ಳುವ ಮೊದಲೇ ದೇವಾಲಯ ಸಂಸ್ಥೆ ನಿಯಮಗಳ ರೀತ್ಯ ಕನಿಷ್ಠ ವೇತನ ಹಾಗೂ ಅಗತ್ಯ ಸೌಲಭ್ಯ - ಸೌಕರ್ಯ ನೀಡುವುದಾಗಿ ಮುಚ್ಚಳಿಕೆ ಬರೆದುಕೊಟ್ಟಿತ್ತು. ಈ ಒಪ್ಪಿಗೆಯ ನಂತರ ಆಸ್ಟ್ರೇಲಿಯಾ ಭಾರತೀಯ ಶಿಲ್ಪಿಗಳಿಗೆ ವೀಸಾ ನೀಡಿತು. ಆದರೆ, ಕಳೆದ ತಿಂಗಳು ಕಾಮಗಾರಿ ನಡೆಯುತ್ತಿದ್ದ ಸ್ಥಳಕ್ಕೆ ಕಾರ್ಮಿಕ ಸಂಘದ ರಾಷ್ಟ್ರೀಯ ನಾಯಕ ಆ್ಯಂಡ್ರೂ ಫರ್ಗ್ಯುಸನ್ ಅವರು ಭೇಟಿ ಮಾಡಿದಾಗ ಹೊರಬಿದ್ದ ಸತ್ಯಾಂಶವೇ ಬೇರೆ.
ದೇವಾಲಯ ಸಮಿತಿ ತಮಗೆ ಕಳೆದ ಮೂರು ವರ್ಷದಿಂದ ತಿಂಗಳಿಗೆ 45 ಆಸ್ಟ್ರೇಲಿಯನ್ ಡಾಲರ್ ನೀಡುತ್ತಿದೆ. ತಾತ್ಕಾಲಿಕ ಷೆಡ್ನಲ್ಲಿ ತಮ್ಮ ವಾಸ್ತವ್ಯ. ತಮ್ಮ ಕುಟುಂಬದವರಿಗೆ ವಾರಕ್ಕೆ ನೂರು ಆಸ್ಟ್ರೇಲಿಯನ್ ಡಾಲರ್ ನೀಡಲಾಗುತ್ತಿದೆ ಎಂದು ಕಾರ್ಮಿಕರು ತಿಳಿಸಿದರಂತೆ. ಆದರೆ, ನಿಯಮಗಳ ರೀತ್ಯ ವಾರಕ್ಕೆ ಸಾವಿರ ಡಾಲರ್ ನೀಡಬೇಕು ಎಂಬುದು ಕಾರ್ಮಿಕ ನಾಯಕರ ಆಗ್ರಹ. ಮಿಗಿಲಾಗಿ ಈ ಕಾರ್ಮಿಕರಿಗೆ ಆಸ್ಟ್ರೇಲಿಯಾದಲ್ಲಿ ಕೆಲಸ ಮುಗಿಯುವ ತನಕ ಇರುವ ಹಕ್ಕಿದೆ ಎಂದೂ ಹೇಳುತ್ತಾರೆ.
ದೇವಾಲಯ ಮಂಡಳಿ ನೀಡುವ ಸಮಜಾಯಿಷಿ
ಈ ಶಿಲ್ಪಿಗಳು ಧರ್ಮದ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಮಂಡಳಿ ವತಿಯಿಂದ ಎಲ್ಲ ಅನುಕೂಲ ಕಲ್ಪಿಸಲಾಗಿದೆ. ಕೆಲಸಗಾರರ ಬಗ್ಗೆ ನಮಗೆ ಕಳಕಳಿ ಇದೆ. ಅವರಿಗೆ ಹವಾನಿಯಂತ್ರಿತ ಕೊಠಡಿಯಲ್ಲಿ ಉಳಿಯಲು ಅವಕಾಶ ನೀಡಲಾಗಿದೆ. ಸ್ನಾನಕ್ಕೆ ಅನುಕೂಲ ಮಾಡಿಕೊಡಲಾಗಿದೆ ಎಂದು ಕಾರ್ಮಿಕ ನಾಯಕರ ಆರೋಪ ನಿರಾಕರಿಸಿರುವ ದೇವಾಲಯ ಸಮಿತಿ ಅಧ್ಯಕ್ಷ ಡಾ. ಪೆರುಮಾಳ ಜನಾರ್ದನ್ ತಿಳಿಸಿದ್ದಾರೆ.
ಈ ಯಾವ ಕೆಲಸಗಾರರಿಗೂ ತಮಿಳು ಭಾಷೆಯ ವಿನಾ ಬೇರೆ ಭಾಷೆ ಬರುವುದಿಲ್ಲ. ತಪ್ಪು ಗ್ರಹಿಕೆಯಿಂದ ಈ ಗೊಂದಲ ಉಂಟಾಗಿದೆ ಎನ್ನುತ್ತಾರೆ. ಸರಕಾರ ತನ್ನ ನಿರ್ಧಾರವೇ ಸರಿ ಎಂದು ಹೇಳುವುದಾದರೆ, ಈ ಕಾರ್ಮಿಕರು ಆಸ್ಟ್ರೇಲಿಯಾದಿಂದ ಎತ್ತಂಗಡಿ ಆಗುವುದು ಖಂಡಿತ. ಸಧ್ಯಕ್ಕಂತೂ ಕೆಲಸ ನಿಂತಿದೆಯಂತೆ. ಅನಾಥ ರಕ್ಷಕನಾದ ಶ್ರೀಮನ್ನಾರಾಯಣ ಏನು ಅಪ್ಪಣೆ ಕೊಡಿಸುತ್ತಾನೋ ನೋಡೋಣ.