ಈ ವರ್ಷ ಜಗತ್ತಿನಲ್ಲಿ ಒಳ್ಳೆಯದಕ್ಕಿಂತ ಕೆಟ್ಟದ್ದೇ ಕೇಳೋದು ಬಹಳ ಐತಿ; ಮಳೆ,ಬೆಳೆಯ ಕುರಿತು ಬಸವೇಶ್ವರ ಕಾರ್ಣಿಕ ಹೇಳಿದ್ದೇನು?
ವಿಜಯಪುರ, ಏಪ್ರಿಲ್20: ರಾಜ್ಯದಲ್ಲಿ ಮಳೆ ಬೆಳೆ ಈ ಬಾರಿ ಚೆನ್ನಾಗಿ ಆಗುತ್ತದೆ. ದಕ್ಷಿಣ ಭಾಗದಲ್ಲಿ ಸ್ವಲ್ಪ ಹೆಚ್ಚಿಗೆ ಮಳೆಯಾಗುತ್ತದೆ, ವಾತಾವರಣದಲ್ಲಿ ವ್ಯತ್ಯಾಸವಾಗಿ ಗಾಳಿಯ ರಭಸವು ಹೆಚ್ಚಾಗಿದೆ ಎಂದು ಕೊಡೆಕಲ್ ಬಸವೇಶ್ವರ ದೇವಸ್ಥಾನದ ಶೂನ್ಯ ಶಂಕರಲಿಂಗ ದಿಂಡವಾರ ಶರಣರು ಕಾರ್ಣಿಕ ನುಡಿದಿದ್ದಾರೆ.
ವಿಜಯಪುರ ತಾಲೂಕಿನ ಜಂಬಗಿ (ಆ) ಗ್ರಾಮದ ಶರಣ ಶಿವಶಂಕರ ದಿಂಡವಾರ ತೋಟದಲ್ಲಿ ಕೊಡೆಕಲ್ ಬಸವೇಶ್ವರ ದೇವಸ್ಥಾನದ ಜಾತ್ರೆ ನಿಮಿತ್ತ ಪುರಾಣ ಮುಕ್ತಾಯ, ಗ್ರಂಥ ಬಿಡುಗಡೆ ಹಾಗೂ ಕಾರ್ಣಿಕ ನುಡಿಗಳ ಕಾರ್ಯಕ್ರಮ ಶುಕ್ರವಾರ ನಡೆಯಿತು. ಈ ವೇಳೆ ದೇವಸ್ಥಾನದ ಮುಖ್ಯಗುರು ಶೂನ್ಯ ಶಂಕರಲಿಂಗ ದಿಂಡವಾರ ಶರಣರು ಕ್ರೋಧಿನಾಮ ಸಂವತ್ಸರದ ಕಾಲಮಾನ ಪ್ರಸ್ತುತ ಕಾರ್ಣಿಕ ನುಡಿಗಳನ್ನು ಹೇಳಿದರು. ದೇಶದಲ್ಲಿ ಅಭಿವೃದ್ಧಿ ಕಾರ್ಯಗಳು ಯಥಾಸ್ಥಿತಿಯಲ್ಲಿ ಮುಂದುವರಿಯುತ್ತವೆ ಎಂದು ದಿಂಡವಾರ ಶರಣರು ಕಾರ್ಣಿಕ ನುಡಿದಿದ್ದಾರೆ.

ನಮ್ಮ ರಾಷ್ಟ್ರಕ್ಕೆ ಯಾವುದೇ ಹಾನಿ ಇಲ್ಲ. ಮಹಿಳೆಯರಿಗೆ ಹೆಚ್ಚಿನ ಸ್ಥಾನ ಸಿಗುವ ಸಾಧ್ಯತೆಗಳಿರುತ್ತವೆ. ವಿಶ್ವದಲ್ಲಿ ನಮ್ಮ ದೇಶ ಹೆಸರು ತರುತ್ತದೆ. ಜಗತ್ತಿನಲ್ಲಿ ಒಳ್ಳೆಯದಕ್ಕಿಂತ ಕೆಟ್ಟದ್ದೆ ಕೇಳುವುದು ಬಹಳವಾಗುತ್ತದೆ. ಸುತ್ತಲಿನ ರಾಷ್ಟ್ರಗಳ ವಿಷಯ ಕೇಳಿ ಭಯವಾಗುತ್ತದೆ ಎಂದು ಕಾರ್ಣಿಕ ನುಡಿದರು.
ಕೊಡೆಕಲ್ ಬಸವೇಶ್ವರ ದೇವಾಲಯದಿಂದ ನಾನಾ ವಾದ್ಯಗಳೊಂದಿಗೆ ಕೊಡೆಕಲ್ ಬಸವೇಶ್ವರರ ವಚನ ಓದುತ್ತ ಅದ್ಧೂರಿಯಾಗಿ ಪಲ್ಲಕ್ಕಿ ಉತ್ಸವ ನಡೆಯಿತು. ಇನ್ನೂ ಈ ವೇಳೆ ಚಿತ್ರದುರ್ಗದ ಹಾಲೇಶಪ್ಪ ಪಟೇಲ್, ಸಂಸ್ಕೃತ ಶಿಕ್ಷಕಿ ಹೇಮಾವತಿ, ಅಮಿವೇಶ ದಿಂಡವಾರ, ಪಂಚಾಕ್ಷರಿ ದಿಂಡವಾರ, ಷಣ್ಮುಖಪ್ಪ ಪಟ್ಟಣಶೆಟ್ಟಿ, ಜಿ.ಕೆ.ಪಟ್ಟಣದ, ಗುರಣ್ಣ ಬಣ್ಣದ, ರಾಮಗೊಂಡ ಗುದ್ದಿ, ಜಿ.ಬಿ.ಬಾಗೇವಾಡಿ, ಮಲ್ಲಿಕಾರ್ಜುನ ಹತ್ತಿ, ಪಾಯಣ್ಣ ಪಡಸಲಗಿ, ದ್ರಾಕ್ಷಾಯಿಣಿ ಪಟ್ಟಣಶೆಟ್ಟಿ, ಸಾವಿತ್ರಿ ಗಿರಡೆ, ಲಲಿತಾ ಡೋಣೂರ ಮತ್ತಿತರರಿದ್ದರು.
ಗಗನದಿ ಮುತ್ತು ಸುರಿದಾವೋ: ರಾಮಲಿಂಗೇಶ್ವರ ಸ್ವಾಮೀಜಿಯ ಕಾರ್ಣಿಕ
ಕಾರ್ಮೋಡ ಕವಿದಿತ್ತೋ, ಕೆರೆ - ಕಟ್ಟೆ, ನದಿಗಳು ತುಂಬಿ ಹರಿದಾವೋ, ಗಗನದಿ ಮುತ್ತು ಸುರಿದಾವೋ ಎಂದು ದಾವಣಗೆರೆ ಜೆಲ್ಲೆಯ ಚನ್ನಗಿರಿ ತಾಲೂಕಿನ ಹರಪನಹಳ್ಳಿ - ಕೆಂಗಾಪುರ ರಾಂಪುರ ಮಠದ ರಾಮಲಿಂಗೇಶ್ವರ ಸ್ವಾಮೀಜಿಯ ಕಾರ್ಣಿಕ ನುಡಿದಿತ್ತು.
ಈ ವರ್ಷ ಉತ್ತಮ ಮಳೆಯ ಮುನ್ಸೂಚನೆ ನೀಡುವ ಮೂಲಕ ರೈತರಿಗೆ ಸಿಹಿ ಸುದ್ದಿ ನೀಡಿದ್ದಾರೆ. ರಾಜ್ಯದಲ್ಲಿ ಮಳೆ, ಬೆಳೆ ಸಮೃದ್ಧವಾಗಲಿದೆ. ಈ ಬಾರಿ ಉತ್ತಮ ಮಳೆಯಾಗಿ ಕೆರೆ ತೊರೆಗಳು ತುಂಬಿ ತುಳುಕಲಿವೆ ಎಂದು ಕೆಂಗಾಪುರ ರಾಂಪುರ ಮಠದ ರಾಮಲಿಂಗೇಶ್ವರ ಸ್ವಾಮೀಜಿಯ ಕಾರ್ಣಿಕವನ್ನ ವಿಶ್ಲೇಷಿಸಿದ್ದಾರೆ.












Click it and Unblock the Notifications