Aishwarya Rajesh: ಉತ್ತರಕಾಂಡ ಸಿನಿಮಾದಲ್ಲಿ ರಮ್ಯಾ ಬದಲಾಗಿ 'ದುರ್ಗಿ' ಪಾತ್ರ ಮಾಡಲಿರುವ ಐಶ್ವರ್ಯಾ ರಾಜೇಶ್
ಉತ್ತರಕಾಂಡ ಸಿನಿಮಾದಲ್ಲಿ ಸ್ಯಾಂಡಲ್ವುಡ್ ಕ್ವೀನ್ ರಮ್ಯಾ ನಟಿಸದೇ ಹಿಂದೆ ಸರಿದ ಮೇಲೆ ಆ ಪಾತ್ರ ಯಾರು ಮಾಡುತ್ತಾರೆ ಎನ್ನುವ ಕುತೂಹಲ ಇತ್ತು. ಈಗ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದ್ದು ಐಶ್ವರ್ಯಾ ರಾಜೇಶ್ ಈಗ ಡಾಲಿ ಧನಂಜಯ ಎದುರು ನಾಯಕಿಯಾಗಿ ನಟಿಸಲಿದ್ದಾರೆ.
ಉತ್ತರಕಾಂಡ ಸಿನಿಮಾಗೆ ರೋಹಿತ್ ಪದಕಿ ನಿರ್ದೇಶನ ಮಾಡುತ್ತಿದ್ದು, ಮತ್ತು ಕಾರ್ತಿಕ್ ಗೌಡ ಮತ್ತು ಯೋಗಿ ಜಿ ರಾಜ್ ಸಹ-ಸ್ಥಾಪಕರಾದ ಕೆಆರ್ ಜಿ ಸ್ಟುಡಿಯೋಸ್ ಬಂಡವಾಳ ಹೂಡುತ್ತಿದೆ.

ಉತ್ತರಕಾಂಡ ಸಿನಿಮಾ ಎರಡು ಭಾಗಗಳಲ್ಲಿ ತೆರೆಗೆ ಬರಲಿದೆ. ಈಗಾಗಲೇ ಉತ್ತರ ಕರ್ನಾಟಕ ಭಾಗದಲ್ಲಿ ಚಿತ್ರದ ಚಿತ್ರೀಕರಣ ಆರಂಭವಾಗಿದೆ. ಧನಂಜಯ ಸಿನಿಮಾದಲ್ಲಿ ನಾಯಕನಾಗಿ ನಟಿಸುತ್ತಿದ್ದು, ಶಿವರಾಜ್ಕುಮಾರ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಮೊದಲು ರಮ್ಯಾ ಚಿತ್ರದ ನಾಯಕಿ ಎಂದು ಘೋಷಣೆ ಮಾಡಲಾಗಿತ್ತು, ಚಿತ್ರದ ಮುಹೂರ್ತದ ಸಂದರ್ಭದಲ್ಲಿ ರಮ್ಯಾ ಕೂಡ ಭಾಗಿಯಾಗಿದ್ದರು. ಆದರೆ, ವೈಯಕ್ತಿಕ ಕಾರಣಗಳಿಂದ ಸಿನಿಮಾದಲ್ಲಿ ನಟಿಸುತ್ತಿಲ್ಲ ಎಂದು ರಮ್ಯಾ ಸ್ಪಷ್ಟನೆ ನೀಡಿದ್ದರು.
ಅವರ ಜಾಗಕ್ಕೆ ಐಶ್ವರ್ಯಾ ರಾಜೇಶ್ ಅವರನ್ನು ಚಿತ್ರತಂಡ ಆಯ್ಕೆ ಮಾಡಿದ್ದು, ದುರ್ಗಿ ಪಾತ್ರದಲ್ಲಿ ಮಿಂಚಲು ಐಶ್ವರ್ಯಾ ಸಜ್ಜಾಗಿದ್ದಾರೆ. ತೆಲುಗು, ತಮಿಳು ಸಿನಿಮಾಗಳಲ್ಲಿ ಅಭಿನಯಿಸಿ ಹೆಸರು ಮಾಡಿರುವ ಐಶ್ವರ್ಯಾ ರಾಜೇಶ್ ಅವರಿಗೆ ಇದು ಮೊದಲ ಕನ್ನಡ ಸಿನಿಮಾ ಆಗಿದೆ.
ಅದ್ದೂರಿ ತಾರಾಗಣ
ಸಿನಿಮಾದಲ್ಲಿ ಅದ್ದೂರಿ ತಾರಾಗಣವೇ ಇದೆ. ಚೈತ್ರ ಜೆ ಆಚಾರ್, ದಿಗಂತ್, ಯೋಗರಾಜ್ ಭಟ್, ಗೋಪಾಲಕೃಷ್ಣ ದೇಶಪಾಂಡೆ, ಉಮಾಶ್ರೀ ಮತ್ತು ಮಲಯಾಳಂನ ನಟ-ನಿರ್ಮಾಪಕ ವಿಜಯ್ ಬಾಬು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಅದ್ವೈತ ಗುರುಮೂರ್ತಿ ಛಾಯಾಗ್ರಹಣ ಮಾಡುತ್ತಿದ್ದು, ಬಾಲಿವುಡ್ನ ಖ್ಯಾತ ಸಂಗೀತ ಸಂಯೋಜಕ ಅಮಿತ್ ತ್ರಿವೇದಿ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಲಿದ್ದಾರೆ.
ಸಂತಸ ಹಂಚಿಕೊಂಡ ಐಶ್ವರ್ಯಾ
ಉತ್ತರಕಾಂಡ ಸಿನಿಮಾ ಚಿತ್ರೀಕರಣದಲ್ಲಿ ಈಗಾಗಲೇ ಭಾಗವಹಿಸಿರುವ ಐಶ್ವರ್ಯಾ ರಾಜೇಶ್ ಸಂತಸ ಹಂಚಿಕೊಂಡಿದ್ದಾರೆ. ಎಕ್ಸ್ನಲ್ಲಿ ಚಿತ್ರೀಕರಣದ ಫೋಟೊಗಳನ್ನು ಹಂಚಿಕೊಂಡಿದ್ದು, ಇದಕ್ಕಿಂತ ಇನ್ನೇನು ಕೇಳಲಿ, ಮೊದಲ ಕನ್ನಡ ಸಿನಿಮಾ ಎಂದು ಶೀರ್ಷಿಕೆ ನೀಡಿದ್ದಾರೆ.
ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ಮೂಲಕ ಗಮನ ಸೆಳೆದ ಚೈತ್ರಾ ಆಚಾರ್ ಕೂಡ ಉತ್ತರಕಾಂಡ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡಲಿದ್ದಾರೆ. "ಲಚ್ಚಿ" ಎಂಬ ಒಂದು ಮುಖ್ಯ ಪಾತ್ರಕ್ಕಾಗಿ ಬಣ್ಣ ಹಚ್ಚಲಿದ್ದಾರೆ.
ತಾರಾಬಳಗದಿಂದಲೇ ಸಿನಿಮಾ ಮೇಲಿನ ನಿರೀಕ್ಷೆ ಸಾಕಷ್ಟು ಹೆಚ್ಚಾಗಿದೆ. ಪಕ್ಕಾ ಉತ್ತರ ಕರ್ನಾಟಕ ಶೈಲಿಯ ಗ್ಯಾಂಗ್ಸ್ಟರ್ ಡ್ರಾಮಾ ಆಗಿದ್ದು, ಧನಂಜಯ ಗಬ್ರು ಸತ್ಯನಾಗಿ ಅಬ್ಬರಿಸಲು ಸಜ್ಜಾಗಿದ್ದಾರೆ.











Click it and Unblock the Notifications