ಜೂ 24ರಿಂದ ಅಗ್ನಿಪಥ್ ಯೋಜನೆ ಅಡಿಯಲ್ಲಿ ಸೇನೆಗೆ ನೇಮಕಾತಿ ಶುರು
ನವದೆಹಲಿ, ಜೂನ್ 17: ಕೇಂದ್ರ ಸರ್ಕಾರವು ಘೋಷಿಸಿರುವ ಅಗ್ನಿಪಥ್ ಯೋಜನೆ ಅಡಿಯಲ್ಲಿ ನೇಮಕಾತಿ ಪ್ರಕ್ರಿಯೆಯನ್ನು ಜೂನ್ 20ರ ಸೋಮವಾರದಿಂದ ಪ್ರಾರಂಭಿಸುವುದರ ಕುರಿತು ಅಧಿಸೂಚನೆ ಹೊರಡಿಸಲಾಗುವುದು ಎಂದು ಭಾರತೀಯ ಸೇನೆ ತಿಳಿಸಿದೆ.
ಮುಂಬರುವ ಜೂನ್ 24ರಿಂದ ಅಗ್ನಿಪಥ್ ಯೋಜನೆ ಅಡಿಯಲ್ಲಿ ಐಎಎಫ್ ನೇಮಕಾತಿ ಪ್ರಕ್ರಿಯೆಯನ್ನು ಪ್ರಾರಂಭಿಸಲಿದೆ ಎಂದು ಭಾರತೀಯ ವಾಯುಪಡೆಯ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿಆರ್ ಚೌಧರಿ ಶುಕ್ರವಾರ ಘೋಷಿಸಿದ್ದಾರೆ. ಹೊಸ ಸೇನಾ ನೇಮಕಾತಿ ಯೋಜನೆಯ ವಿರುದ್ಧ ಏಳು ರಾಜ್ಯಗಳಲ್ಲಿ ನಡೆಯುತ್ತಿರುವ ಹಿಂಸಾತ್ಮಕ ಪ್ರತಿಭಟನೆಗಳ ಮಧ್ಯೆ ಈ ಹೇಳಿಕೆ ಹೊರ ಬಿದ್ದಿದೆ.
'ಅಗ್ನಿಪಥ್' ಆಕ್ರೋಶದ ಜ್ವಾಲೆಗೆ ಹೊತ್ತಿ ಉರಿದ ರಾಜ್ಯಗಳಲ್ಲಿ ಏನೇನಾಯ್ತು?
ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಭಾರತೀಯ ವಾಯುಪಡೆಯ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿಆರ್ ಚೌಧರಿ, ನೇಮಕಾತಿಯ ಗರಿಷ್ಠ ವಯೋಮಿತಿ ಅನ್ನು 23 ವರ್ಷಕ್ಕೆ ಹೆಚ್ಚಿಸಿರುವುದನ್ನು ಘೋಷಿಸಲು ಸಂತೋಷವಾಗುತ್ತದೆ. ಇದರಿಂದ ಯುವಕರಿಗೆ ಹೆಚ್ಚು ಅನುಕೂಲವಾಗಲಿದೆ. ಜೂನ್ 24ರಿಂದಲೇ ನೇಮಕಾತಿ ಪ್ರಕ್ರಿಯೆ ಶುರು ಮಾಡಲಾಗುವುದು ಎಂದು ಹೇಳಿದರು.
ಎರಡು ದಿನಗಳಲ್ಲಿ ಹೊರ ಬೀಳಲಿರುವ ಅಧಿಸೂಚನೆ
"ನೇಮಕಾತಿ ಪ್ರಕ್ರಿಯೆಯು ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಮುಂದಿನ 2 ದಿನಗಳಲ್ಲಿ ಸೇನೆಯ ಅಧಿಕೃತ ವೆಬ್ ಸೈಟ್ ನಲ್ಲಿ ಅಧಿಸೂಚನೆ ಹೊರಡಿಸಲಾಗುವುದು. ತದನಂತರ ನಮ್ಮ ಸೇನಾ ನೇಮಕಾತಿ ಸಂಸ್ಥೆಗಳು ನೋಂದಣಿಯ ಬಗ್ಗೆ ವಿವರವಾದ ವೇಳಾಪಟ್ಟಿ ಘೋಷಿಸುತ್ತವೆ," ಎಂದು ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ ಹೇಳಿದ್ದಾರೆ.
"ಅಗ್ನಿವೀರ್ಗಳು ನೇಮಕಾತಿ ತರಬೇತಿ ಕೇಂದ್ರಗಳಿಗೆ ಹೋಗುವ ಪ್ರಶ್ನೆಗೆ ಸಂಬಂಧಿಸಿದಂತೆ, ಮೊದಲ ಅಗ್ನಿವೀರ್ಗಳ ತರಬೇತಿಯು ಈ ಡಿಸೆಂಬರ್ನಲ್ಲಿ (2022 ರಲ್ಲಿ) ಕೇಂದ್ರಗಳಲ್ಲಿ ಪ್ರಾರಂಭವಾಗಲಿದೆ" ಎಂದು ಹೇಳಿದರು.
"ಮೊದಲು ಅಗ್ನಿಪಥ್ ಯೋಜನೆ ಕುರಿತು ತಿಳಿದುಕೊಳ್ಳಿ"
ಕೇಂದ್ರ ಸರ್ಕಾರ ಜಾರಿಗೊಳಿಸಲು ಹೊರಟಿರುವ ಅಗ್ನಿಪಥ್ ಯೋಜನೆಯ ಬಗ್ಗೆ ಪ್ರತಿಭಟನೆಗಳು ನಡೆಯುತ್ತಿರುವುದರ ಕುರಿತು ಸೇನಾ ಮುಖ್ಯಸ್ಥ ಮನೋಜ್ ಪಾಂಡೆ ಪ್ರತಿಕ್ರಿಯೆ ನೀಡಿದರು. "ಈ ಅಗ್ನಿಪಥ್ ಯೋಜನೆ ಬಗ್ಗೆ ದೇಶದ ಯುವಕರಿಗೆ ಸರಿಯಾದ ಮಾಹಿತಿಯಿಲ್ಲ ಎಂದು ನಾನು ಭಾವಿಸುತ್ತೇನೆ. ಒಮ್ಮೆ ಅವರೆಲ್ಲರೂ ಯೋಜನೆಯ ಕುರಿತು ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಬೇಕಿದೆ. ಏಕೆಂದರೆ ಈ ಯೋಜನೆಯು ಯುವಕರಿಗೆ ಮಾತ್ರವಲ್ಲದೇ, ಎಲ್ಲರಿಗೂ ಪ್ರಯೋಜನಕಾರಿ ಆಗಿದೆ ಎಂಬ ನಂಬಿಕೆ ಅವರಲ್ಲಿ ಮೂಡುತ್ತದೆ," ಎಂದು ಹೇಳಿದರು.
7 ರಾಜ್ಯಗಳಲ್ಲಿ ಅಗ್ನಿಪಥ್ ವಿರುದ್ಧ ಪ್ರತಿಭಟನೆ
ಹೊಸ ಸೇನಾ ನೇಮಕಾತಿ ನೀತಿ ಅಗ್ನಿಪಥ್ಗೆ ಸಂಬಂಧಿಸಿದಂತೆ ಹಲವಾರು ರಾಜ್ಯಗಳಲ್ಲಿ ಪ್ರತಿಭಟನೆ ತೀವ್ರಗೊಂಡಿದೆ. ಸರ್ಕಾರದ ಹೊಸ ನೀತಿ ವಿರುದ್ಧ ಕೆರಳಿರುವ ಜನಸಮೂಹ ರೈಲುಗಳಿಗೆ ಬೆಂಕಿ ಹಚ್ಚಿತು. ಸಾರ್ವಜನಿಕರು ಮತ್ತು ಪೊಲೀಸ್ ವಾಹನಗಳ ಮೇಲೆ ದಾಳಿ ಮಾಡಲಾಗಿದ್ದು ಪೊಲೀಸ್ ಸಿಬ್ಬಂದಿ ಗಾಯಗೊಂಡರು.
ಬಿಹಾರದ ಆರಾದಿಂದ ಹರಿಯಾಣದ ಪಲ್ವಾಲ್, ಉತ್ತರ ಪ್ರದೇಶದ ಆಗ್ರಾದಿಂದ ಗ್ವಾಲಿಯರ್ ಮತ್ತು ಮಧ್ಯಪ್ರದೇಶದ ಗ್ವಾಲಿಯರ್ ಮತ್ತು ಇಂದೋರ್ ವರೆಗೆ ಸಶಸ್ತ್ರ ಪಡೆಗಳಲ್ಲಿ ಉದ್ಯೋಗಕ್ಕಾಗಿ ನೂರಾರು ಯುವ ಆಕಾಂಕ್ಷಿಗಳು ಬೀದಿಗಿಳಿದು ಪ್ರತಿಭಟನೆ ನಡೆಸಿದರು. ಹೊಸ ನೇಮಕಾತಿ ನೀತಿಯ ವಿರುದ್ಧ ರೈಲ್ವೆ ಹಳಿಗಳನ್ನು ತಡೆದು, ರಸ್ತೆಗಳಲ್ಲಿ ಟೈರ್ಗಳನ್ನು ಸುಡುವ ಮೂಲಕ ಆಕ್ರೋಶ ಹೊರ ಹಾಕಿದರು.
ಅಗ್ನಿಪಥ್ ಯೋಜನೆ ಬಗ್ಗೆ ತಿಳಿಯಬೇಕಾಗಿದ್ದು ಏನು?
ಕೇಂದ್ರ ಸರ್ಕಾರದ ಅಗ್ನಿಪಥ್ ಯೋಜನೆಯು ದೇಶದ ಮೂರು ಸೇನೆಗಳಿಗೆ ಯೋಧರನ್ನು ನೇಮಿಸಿಕೊಳ್ಳುವ ಪ್ರಕ್ರಿಯೆಗೆ ಸಂಬಂಧಿಸಿದ್ದಾಗಿದೆ. 17.5 ರಿಂದ 23 ವಯೋಮಾನ ಯುವಕರನ್ನು ಒಪ್ಪಂದದ ಮೇರೆಗೆ ನಾಲ್ಕು ವರ್ಷದ ಅವಧಿಗೆ ನೇಮಕ ಮಾಡಿಕೊಳ್ಳಲಾಗುತ್ತದೆ. ಈ ಅವಧಿಯಲ್ಲಿ 6 ತಿಂಗಳು ತರಬೇತಿಯೂ ಸೇರಿರುತ್ತದೆ. ನಾಲ್ಕು ವರ್ಷದ ಸೇವಾವಧಿಯಲ್ಲಿ ಮಾಸಿಕ 30 ರಿಂದ 40 ಸಾವಿರ ರೂಪಾಯಿ ವೇತನದ ಜೊತೆಗೆ ವೈದ್ಯಕೀಯ ವಿಮೆ ಮತ್ತು ಆರೋಗ್ಯ ವಿಮೆ ಸೌಲಭ್ಯವನ್ನು ನೀಡಲಾಗುತ್ತದೆ. ಆದರೆ ನಾಲ್ಕು ವರ್ಷಗಳ ನಂತರ ಅಗ್ನಿಪಥ್ ಯೋಜನೆಯಡಿ ನೇಮಕಗೊಂಡ ಶೇ.75ರಷ್ಟು ಯೋಧರನ್ನು ಸೇನೆಯಿಂದ ವಿಮುಕ್ತಿಗೊಳಿಸಲಾಗುವುದು. ತದನಂತರದಲ್ಲಿ ಈ ಯೋಧರಿಗೆ ಯಾವುದೇ ರೀತಿ ಪಿಂಚಣಿ ಸೌಲಭ್ಯವನ್ನು ನೀಡಲಾಗುವುದಿಲ್ಲ.
ಮುಂದಿನ ಒಂದೂವರೆ ವರ್ಷದ ಅವಧಿಯಲ್ಲಿ ಅಗ್ನಿಪಥ್ ಯೋಜನೆ ಅಡಿಯಲ್ಲಿ ಸುಮಾರು 10 ಲಕ್ಷ ಯುವಕರಿಗೆ ಉದ್ಯೋಗವನ್ನು ಕಲ್ಪಿಸುವ ಗುರಿಯೊಂದಿಗೆ ಈ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.