Ilayaraja Profile : ಇಳಯರಾಜ ಭಾರತ ಕಂಡ ಅತ್ಯುತ್ತಮ ಸಂಗೀತ ನಿರ್ದೇಶಕ
ಇಳಯರಾಜ ಅವರನ್ನು ರಾಷ್ಟ್ರಪತಿಗಳು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿದ್ದಾರೆ. ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ, ಚಿನ್ನದ ರಾಣಿ ಪಿಟಿ ಉಷಾ ಮತ್ತು ಚಿತ್ರಕಥೆ ಸಾಹಿತಿ ವಿ ವಿಜಯೇಂದ್ರ ಪ್ರಸಾದ್ ಮತ್ತು ಇಳಯರಾಜ ಈ ನಾಲ್ವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಲಾಗಿದೆ.
ಇಳಯರಾಜರ ಹಾಡುಗಳನ್ನು ಸವಿದು ಅನಂದಿಸದವರು ಯಾರು? ಅದೆಂಥದ್ದೋ ವಿಶೇಷ ಮೆಲೊಡಿ ಅವರ ಹಾಡುಗಳಲ್ಲಿ ಇರುತ್ತದೆ. 79 ವರ್ಷದ ಇಳಯರಾಜ ತಮಿಳುನಾಡಿನ ಈಗಿನ ತೇಣಿ ಜಿಲ್ಲೆಯಲ್ಲಿ ಹುಟ್ಟಿದವರು. ಇವರು ಭಾರತ ಕಂಡ ಅತ್ಯುತ್ತಮ ಸಂಗೀತ ಸಂಯೋಜಕರು. ವಿಶ್ವದ ಅತ್ಯುತ್ತಮರ ಸಾಲಿನಲ್ಲೂ ಅವರು ನಿಲ್ಲುತ್ತಾರೆ.
ವೀರೇಂದ್ರ ಹೆಗ್ಗಡೆ, ಇಳಯರಾಜ, ಪಿ.ಟಿ. ಉಷಾ ರಾಜ್ಯಸಭೆಗೆ ನಾಮನಿರ್ದೇಶನ
ಏಳು ಸಾವಿರಕ್ಕೂ ಹೆಚ್ಚು ಹಾಡುಗಳಿಗೆ ರಾಗಸಂಯೋಜನೆ ಮಾಡಿದ್ದಾರೆ. 1,400 ಚಿತ್ರಗಳಿಗೆ ಸಂಗೀತ ನೀಡಿದ್ದಾರೆ. 20 ಸಾವಿರಕ್ಕೂ ಹೆಚ್ಚು ಕಾರ್ಯಕ್ರಮಗಳಲ್ಲಿ ಸಂಗೀತವಾದ್ಯ ನೀಡಿದ್ದಾರೆ.
ಭಾರತದ ಅದರಲ್ಲೂ ತಮಿಳಿನ ಜಾನಪದ ಸಂಗೀತವನ್ನು ಆಧರಿಸಿಯೇ ಹೆಚ್ಚಾಗಿ ಇವರು ಹಾಡು ಕಟ್ಟಿದ್ದಾರೆ. ದೇಶಿ ಮತ್ತು ಪಾಶ್ಚಿಮಾತ್ಯ ಸಂಗೀತದ ಅಮೋಘ ಮಿಶ್ರಣವನ್ನು ಇವರ ಹಾಡುಗಳಲ್ಲಿ ಕೇಳಬಹುದು.
ಕನ್ನಡದ ಜಿಕೆ ವೆಂಕಟೇಶ್ ಗುರು
ಇಳಯರಾಜ ಚಿಕ್ಕಂದಿನಿಂದಲೇ ಜಾನಪದ ಸಂಗೀತದೆಡೆಗೆ ಆಕರ್ಷಿತರಾಗಿದ್ದವರು. ತಮ್ಮ ಅಣ್ಣ ಪಾವಲಾರ್ ವರದರಾಜನ್ ಅವರ ವಾದ್ಯತಂಡದೊಂದಿಗೆ ಇಡೀ ದಕ್ಷಿಣ ಭಾರತದ ಪ್ರವಾಸ ಮಾಡುತ್ತಾ ಸಂಗೀತದ ಜ್ಞಾನವನ್ನು ಸಂಪಾದಿಸಿದರು. ಲಂಡನ್ನ ಟ್ರಿನಿಟಿ ಮ್ಯೂಸಿಕ್ ಕಾಲೇಜಿನಲ್ಲಿ ಕ್ಲಾಸಿಕಲ್ ಗಿಟಾರ್ ಕೋರ್ಸ್ನಲ್ಲಿ ಗೋಲ್ಡ್ ಮೆಡಲ್ ಪಡೆದಿದ್ದರು.
ಎಪ್ಪತ್ತರ ದಶಕದಲ್ಲಿ ಪಶ್ಚಿಮ ಬಂಗಾಳದ ಸಲೀಲ್ ಚೌಧರಿ ಮೊದಲಾದ ಸಂಗೀತ ನಿರ್ದೇಶಕರು ಮತ್ತು ರಾಗ ಸಂಯೋಜಕರ ಜೊತೆ ಗಿಟಾರಿಸ್ಟ್, ಕೀಬೋರ್ಡಿಸ್ಟ್ ಆಗಿ ಕೆಲಸ ಮಾಡಿದರು. ಬಳಿಕ ಅವರು ಕನ್ನಡದ ಜಿ.ಕೆ. ವೆಂಕಟೇಶ್ ಅವರಿಗೆ ಸಹಾಯಕರಾಗಿ ಆಯ್ಕೆಯಾದರು. ಅಲ್ಲಿಂದ ಇಳಯರಾಜರ ಸಂಗೀತದ ಮೆರಗು ತೋರಿಸಿಕೊಳ್ಳಲಾರಂಭಿಸಿತು. ಸಂಗೀತ ನಿರ್ದೇಶನ ಮತ್ತು ರಾಗ ಸಂಯೋಜನೆಯ ಸಕಲ ವಿದ್ಯೆಗಳನ್ನೂ ಜಿ.ಕೆ. ವೆಂಕಟೇಶ್ ಅವರಿಂದ ಇಳಯರಾಜ ಪಡೆದುಕೊಂಡರು. ತಾವೇ ಸ್ವಂತವಾಗಿ ರಾಗ ಸಂಯೋಜನೆ ಮಾಡಲು ಆರಂಭಿಸಿದರು.
ಅದಾದ ಬಳಿಕ ಅವರಿಗೆ ತಮಿಳಿನ ಅನ್ನಕ್ಕಿಳಿ ಎಂಬ ಸಿನಿಮಾಗೆ ಹಾಡಿನ ರಾಗ ಸಂಯೋಜನೆ ಮತ್ತು ಸಂಗೀತ ನಿರ್ದೇಶನ ಮಾಡುವ ಅವಕಾಶಸಿಕ್ಕಿತು. ಅಲ್ಲಿಂದ ಇಳಯರಾಜ ಹಿಂದಿರುಗಿ ನೋಡಿದ್ದೇ ಇಲ್ಲ.
ಪಯ್ಯೋಳಿ ಎಕ್ಸ್ಪ್ರೆಸ್ ಪಿ.ಟಿ. ಉಷಾ: ಅಥ್ಲಿಟ್ ಟ್ಯ್ರಾಕ್ನಿಂದ ರಾಜ್ಯಸಭೆವರೆಗೆ ಸಾಧನೆಯ ಹಾದಿ
ಇಳಯರಾಜ ಹೆಸರು ಬಂದಿದ್ದು ಹೀಗೆ
1943, ಜೂನ್ 3ರಂದು ದಲಿತ ಸಮುದಾಯದ ಕುಟುಂಬದಲ್ಲಿ ಹುಟ್ಟಿದ ಇಳಯರಾಜರಿಗೆ ಆ ಹೆಸರು ಬಂದದ್ದು ಹೇಗೆ ಎಂಬ ಕುತೂಹಲಕಾರಿ ವಿವರ ಇಲ್ಲಿದೆ. ಇಳಯರಾಜರದ್ದು ಕ್ರೈಸ್ತ ದಲಿತ ಕುಟುಂಬ. ಡೇನಿಯಲ್ ರಾಸಪ್ಪ ಇವರ ಹುಟ್ಟು ಹೆಸರು. ಶಾಲೆಗೆ ಸೇರಿಸುವಾಗ ಇವರ ಹೆಸರನ್ನು ರಾಜಯ್ಯ ಎಂದು ಬದಲಾಯಿಸಲಾಯಿತು. ಸಂಗೀತ ವಾದ್ಯಗಳನ್ನು ಕಲಿಯಲು ಧನರಾಜ್ ಮಾಸ್ಟರ್ ಅವರ ಶಿಷ್ಯನಾಗಿ ರಾಜಯ್ಯ ಸೇರಿಕೊಂಡಾಗ ಅವರ ಹೆಸರನ್ನು ಇನ್ನೂ ಕಿರಿದಾಗಿಸಿಕೊಂಡು ರಾಜಾ ಎಂದಿಡಲಾಯಿತು.
ಸ್ವತಂತ್ರ ಸಂಗೀತ ನಿರ್ದೇಶನದ ಇವರ ಮೊದಲ ಸಿನಿಮಾ ಅನ್ನಕ್ಕಿಳಿಯ ನಿರ್ಮಾಪಕ ಪಂಚು ಅರುಣಾಚಲಂ ಅವರು ಇಳಯ ಎಂಬ ಹೆಸರನ್ನು ಸೇರಿಸಿದರು. ಅಲ್ಲಿಂದ ಇಳಯರಾಜ ಆದರು.
ಏಸು ಕ್ರಿಸ್ತನ ಪುನರುತ್ಥಾನ ಇಲ್ಲವೆಂದಿದ್ದ ಇಳಯರಾಜ
ಇಳಯರಾಜ ಕ್ರೈಸ್ತರಾಗಿ ಹುಟ್ಟಿದರೂ ಹಿಂದೂ ಧರ್ಮಕ್ಕೆ ಹೆಚ್ಚು ಆಕರ್ಷಿತರಾದವರು. ಆಚರಣೆಯಲ್ಲಿ ಹಿಂದೂವೇ ಆಗಿದ್ದರು. 2018ರಲ್ಲಿ ಸಂದರ್ಶನವೊಂದರಲ್ಲಿ ಇಳಯರಾಜ ಅವರು ಏಸು ಕ್ರಿಸ್ತನ ಪುನರುತ್ಥಾನದ ವಿಚಾರದ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದರು. ಅವರ ಪ್ರಕಾರ, ಏಸು ಕ್ರಿಸ್ತರ ಪುನರುತ್ಥಾನ ಆಗಿತ್ತೋ ಇಲ್ಲವೋ ಗೊತ್ತಿಲ್ಲ, ಆದರೆ, ರಮಣ ಮಹರ್ಷಿ ಅವರ ಪುನರುತ್ಥಾನ ಆಗಿದ್ದು ಹೌದು ಎಂದಿದ್ದರು.
ರಮಣ ಮಹರ್ಷಿಗಳ ಮಹಾ ಭಕ್ತರಾಗಿದ್ದ ಇಳಯರಾಜ ಅವರು ಏಸು ಕ್ರಿಸ್ತರ ಬಗ್ಗೆ ನಿಕೃಷ್ಟವಾಗಿ ಮಾತನಾಡಿದ್ದು ಕ್ರೈಸ್ತ ಸಮುದಾಯದವರನ್ನು ಕೆಣಕಿತ್ತು. ಬೆಂಗಳೂರಿನ ಮ್ಯಾಜಿಸ್ಟ್ರೇಟ್ ಕೋರ್ಟ್ವೊಂದರಲ್ಲಿ ಇಳಯರಾಜ ವಿರುದ್ಧ ದೂರು ಕೊಡಲಾಯಿತು. ಇಳಯರಾಜ ಮಂಡಿಯೂರಿ ಕ್ಷಮೆ ಕೋರಬೇಕೆಂದು ಒತ್ತಾಯಿಸಲಾಗಿತ್ತು.
ಜನ್ಮದಿನಾಂಕ ಬದಲು ಮಾಡಿದ್ದು
ಇಳಯರಾಜ ಅವರು ಹುಟ್ಟಿದ್ದು ಜೂನ್ 3ರಂದು. ಆದರೆ, ಅವರು ಜೂನ್ 2ರಂದು ಜನ್ಮದಿನ ಆಚರಿಸಿಕೊಳ್ಳುತ್ತಾರೆ. ಇದಕ್ಕೆ ಕಾರಣ ದಿವಂಗತ ಮಾಜಿ ಸಿಎಂ ಎಂ ಕರುಣಾನಿಧಿ. ಇಳಯರಾಜರಿಗೆ ಇಸೈಗ್ನಾನಿ ಎಂಬ ಬಿರುದು ದಯಪಾಲಿಸಿದ್ದು ಕಲೈನಾರ್ ಕರುಣಾನಿಧಿಯೇ. ಹೀಗಾಗಿ, ಕರುಣಾನಿಧಿ ಜನ್ಮದಿನವಾದ ಜೂನ್ 2ರಂದೇ ಇಳಯರಾಜ ತಮ್ಮ ಜನ್ಮದಿನವನ್ನೂ ಆಚರಿಸಿ ಸಂಭ್ರಮಿಸುತ್ತಾರೆ.
(ಒನ್ಇಂಡಿಯಾ ಸುದ್ದಿ)
Recommended Video