ನಕ್ಷತ್ರ ಸರಣಿ : ಹಠಮಾರಿ ಸ್ವಭಾವದ ವಿಶಾಖಾ ನಕ್ಷತ್ರದವರು
ವಿಶಾಖಾ ನಕ್ಷತ್ರದಲ್ಲಿ ಜನಿಸಿದವರದು ಚರಣಗಳಿಗನುಗುಣವಾಗಿ ತುಲಾ ಮತ್ತು ವೃಶ್ಚಿಕ ರಾಶಿಯಾಗುತ್ತದೆ. ಈ ನಕ್ಷತ್ರದ 1ರಿಂದ 3ನೇ ಚರಣದಲ್ಲಿ ಜನಿಸಿದವರದು ತುಲಾ ರಾಶಿಯಾಗುತ್ತದೆ. ಆದರೆ 4ನೇ ಚರಣದವರು ವೃಶ್ಚಿಕ ರಾಶಿಯನ್ನು ತಮ್ಮ ಜನ್ಮರಾಶಿಯಾಗಿ ನೋಡಿಕೊಳ್ಳಬೇಕಾಗುತ್ತದೆ. 1ನೇ ಚರಣದವರಿಗೆ ತೀ, 2ಕ್ಕೆ ತೂ, 3ಕ್ಕೆ ತೇ ಹಾಗೂ 4ನೇ ಚರಣದಲ್ಲಿ ಜನಿಸಿದವರಿಗೆ ತೋ ಎಂಬ ಜನ್ಮಾಕ್ಷರ ಬರುತ್ತದೆ.
ಮೊದಲೇ ರಾಕ್ಷಸ ಗಣದವರಾದ ಇವರು ದೇವರೆಂದರೆ ಅಷ್ಟಕ್ಕಷ್ಟೇ ಎನ್ನುವ ಮನೋಭಾವ ಹೊಂದಿರುತ್ತಾರೆ. ದೈಹಿಕವಾಗಿ ತುಂಬಾ ಬಲಿಷ್ಠರಾಗಿರುತ್ತಾರೆ. ಜೊತೆಗೆ ಎತ್ತರವನ್ನೂ ಹೊಂದಿರುವುದರಿಂದ ಇವರಿಗೆ ಕೆಲವರು "ಹೀರೋ ತರಾನೇ ಕಾಣ್ತಿಯಲ್ಲೋ" ಎಂದಿರುತ್ತಾರೆ. ಈ ನಕ್ಷತ್ರದ ಹೆಂಗಸರೂ ಕೂಡ ದುಂಡನೇ ಮುಖದೊಂದಿಗೆ ದಷ್ಟಪುಷ್ಟವಾಗಿ ತುಂಬಾ ಸುಂದರವಾದ ಅಂಗಸೌಷ್ಠವ ಹೊಂದಿರುತ್ತಾರೆ. ಬೆಳ್ಳಿ ತರಹ ಬೆಳ್ಳಗಿರುವ ಇವರನ್ನು ನೋಡಿದರೆ "ಕೂಸೇ ಚೆಂದ್ ಕಾಣ್ತೀ" ಎನ್ನುತ್ತಿರುತ್ತಾರೆ ಹೆತ್ತವರು. ಆದರಿವರು "ಕನ್ನಿಂಗ್ ಹಾರ್ಟೆಡ್" ರಾಗಿರುವುದರಿಂದ ಹೊಗಳಿಕೆಗೆಲ್ಲಾ ತಲೆ ಬಾಗದವರು ಎನ್ನುವುದು ಮಾತ್ರ ವಿಶೇಷ.
ಹೂ ಬಿಸಿಲಿನಲ್ಲಿ ಮನಸೋ ಇಚ್ಛೆ ಓಡಾಡೋಕೆ ಇವರಿಗಿಷ್ಟ. ಅತೀವ ಪ್ರೀತಿಯ ಮನಸ್ಸು ಹೊಂದಿರುತ್ತಾರೆ. ಈ ನಕ್ಷತ್ರದ ಸ್ವಾಮಿ ಗುರುವಾಗಿರುವುದರಿಂದ ವಿದ್ಯಾ, ಬುದ್ಧಿ ಇವರಲ್ಲಿ ಸ್ವಲ್ಪ ಹೆಚ್ಚಿಗೇನೆ ಎಲ್ಲರಿಗಿಂತಲೂ. ಜೊತೆಗೆ ರಾಶಿಯ ಸ್ವಾಮಿ ಶುಕ್ರನಾಗಿರುವುದರಿಂದ ಕಲಾಕಾರರು ಕೂಡ ಇವರು. ಆದರೆ, ಇವರು ದಡ್ಡರಾಗಿದ್ದರೂ ಕೂಡ ಹೆತ್ತವರಿಗೆ ಇವರ ಮೇಲೆನೆ ತುಸು ಜಾಸ್ತಿ ಪ್ರೀತಿ. ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿ ದಡ್ಡ ಮಕ್ಕಳ ಮೇಲೆ ಹೆತ್ತವರ ಪ್ರೀತಿ ಜಾಸ್ತಿ ಇರುತ್ತದೆ, ಅಲ್ವಾ? [2015 ವರ್ಷ ಭವಿಷ್ಯ : ತುಲಾ ರಾಶಿಗೆ ಇನ್ನೂ ಬಾಕಿಯಿದೆ!]
ಗೋಸುಂಬೆ ಸ್ವಭಾವದವರಾ? : ಗುಂಡಿಗೆ ಗಟ್ಟಿ ಇರುವ ಇವರು ತಾವು ಪ್ರೀತಿಸಿದ ವಸ್ತುವಿರಲಿ, ವ್ಯಕ್ತಿಗಳಿರಲಿ ತಾವಿರುವವರೆಗೂ ಬಿಟ್ಟು ಕೊಡದ ಧೀರರು. ಆದರೆ ಅತಿಯಾದ ರಸಿಕತನವೊಂದೇ ಇವರಲ್ಲಿರುವ ನ್ಯೂನತೆ ಎನ್ನಬಹುದು. ಹೊಸಬರೊಂದಿಗೆ ಸ್ನೇಹವನ್ನು ಅಷ್ಟಕ್ಕಷ್ಟೇ ಇಟ್ಟುಕೊಳ್ಳುವ ಇವರು, ತಮ್ಮ ಕೆಲಸವಿದ್ದಾಗ ಮಾತ್ರ ನಯವಾಗಿ ಮಾತನಾಡುವ ಗೋಸುಂಬೆ ಸ್ವಭಾವದವರು.
ಏನಾದರೂ ನಿರ್ಧಾರ ಮಾಡಿದರೆ ಮುಗೀತು. ಅದೇ ಅಂತಿಮ ಇವರಿಗೆ. ಯಾರು ಹೇಳಿದರೂ ಕೇಳಲ್ಲ. ಅಂತಾ ಹಠಮಾರಿಗಳಿವರು. ಗಂಡಸಾದರೆ ಹೆಂಗಸರೆಂದರೇ ಬಾಯಿ ಬಿಡುತ್ತಾರೆ, ಹೆಂಗಸರಾದರೇ ಗಂಡಸರೊಂದಿಗೆ ಗಂಡುಬೀರಿ ತರಹ ವರ್ತನೆ ಮಾಡುತ್ತಿರುತ್ತಾರೆ. [2015 ವರ್ಷ ಭವಿಷ್ಯ : ವೃಶ್ಚಿಕ ರಾಶಿಗೆ ಗುರುಬಲ]
ಹೊರಗಡೆ ಕಾಣಿಸದ ದೇಹಾಂಗಗಳಲ್ಲಿ ಮಚ್ಚೆ ಹೊಂದಿರುವ ಇವರು ತಮ್ಮ ಒಳಗಿರುವ ಮಚ್ಚೆಗಳನ್ನು ನೋಡಿಕೊಂಡು ತಾವೇ ಖುಷಿ ಪಡುತ್ತಿರುತ್ತಾರೆ. ಸಂಸಾರದ ಎಲ್ಲ ಸುಖಗಳನ್ನು ಅನುಭವಿಸಬೇಕು ಎಂಬ ಹಂಬಲ ಹೊಂದಿರುವ ಇವರು ಉತ್ತಮ ಸಂಸಾರ ಹೇಗೆ ನಡೆಸಬೇಕು ಎಂಬುದರ ಬಗ್ಗೆ ಸಿಕ್ಕಾಪಟ್ಟೆ ತಿಳಿದುಕೊಳ್ಳಲು ಕಾತರಿಸುತ್ತಿರುತ್ತಾರೆ.
ಲೆಕ್ಕಾಚಾರದಲ್ಲಿ ಮಾತ್ರ ಚುರುಕು. ಆದರೆ, ಹಣ ಖರ್ಚು ಮಾಡುವಾಗ ಇವರಷ್ಟು ಜಿಪುಣರನ್ನೇ ನೋಡಿಲ್ಲಾ ಎಂದೆನಿಸಿಕೊಳ್ಳುತ್ತಿರುತ್ತಾರೆ. ಮತ್ತೊಬ್ಬರ ಮಧ್ಯೆ ಜಗಳ ಹಚ್ಚಿಡುವುದರಿಂದ ಎಲ್ಲರೂ ಇವರನ್ನು ಕಂಡರೆ ಬೆಚ್ಚಿ ಬೀಳುತ್ತಿರುತ್ತಾರೆ. ಬೇರೆಯವರ ತಪ್ಪು ಹುಡುಕಿ ಅದನ್ನು ಹಂಗಿಸಿ ಮಾತನಾಡಲು ಇಷ್ಟಪಡುವ ಇವರಿಗೆ, ಮತ್ತೊಬ್ಬರ ಬುದ್ಧಿಮಾತು ಕೇಳುವುದೆಂದರೆ ತಲೆನೋವು. ಸಿಕ್ಕಾಪಟ್ಟೆ ಹವ್ಯಾಸಗಳನ್ನು ಹೊಂದಿರುವುದರಿಂದ ಇಂದು ಒಬ್ಬರೊಂದಿಗೆ ಚೆನ್ನಾಗಿದ್ದರೆ ನಾಳೆ ಮತ್ತೊಬ್ಬರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಬುದ್ಧಿ ಇವರದು.
ವೈಜ್ಞಾನಿಕ ಸಂಶೋಧನಾ ಕ್ಷೇತ್ರದಲ್ಲಿ, ಸೈನ್ಯ ಬರವಣಿಗೆ ಮತ್ತು ರಾಜಕೀಯ, ವಕೀಲಿಕೆಯಲ್ಲಿ ತಮ್ಮ ಜೀವನವನ್ನು ಕಂಡುಕೊಂಡಿರುತ್ತಾರೆ. ಸತ್ಯಕ್ಕೆ ಮಾತ್ರ ತಲೆಬಾಗುವ ಇವರು, ಸಾಮಾನ್ಯವಾಗಿ ಕುಟುಂಬ ವರ್ಗದವರಿಂದ ದೂರ ಇರೋದಕ್ಕೆ ಇಷ್ಟ ಪಡುತ್ತಿರುತ್ತಾರೆ. ಸ್ವಲ್ಪ ಮದಿರಾ ಪ್ರಿಯರೆನಿಸಿಕೊಂಡಿರುವ ಇವರು, ಮಾತಿನಲ್ಲೇ ಮೋಡಿ ಮಾಡುವ ಜಾದುಗಾರರೆನ್ನಬಹುದು.
ಆರೋಗ್ಯದ ಬಗ್ಗೆ ಎಚ್ಚರ : ಈ ರಾಶಿಯ ಗಂಡಸರು ಪಾರ್ಶ್ವವಾಯು ಮತ್ತು ಅಸ್ತಮಾ ಬರದಂತೆ ಮುನ್ನೆಚ್ಚರಿಕೆ ವಹಿಸಿಕೊಳ್ಳಬೇಕು. ಹೆಂಗಸರು ಮೂತ್ರಕೋಶದ ಕಲ್ಲಿನ ಬಗ್ಗೆ ಜಾಗೃತೆ ವಹಿಸಬೇಕು. ಆಧುನಿಕ ಶೈಲಿಯಲ್ಲಿ ಬದುಕಲು ಇಷ್ಟಪಡುವ ಇವರು ಹಳೆಯ ತಲೆಮಾರಿನ ಪದ್ಧತಿಗಳನ್ನು ಮೂಢನಂಬಿಕೆಗಳೆಂದು ಹೀಯಾಳಿಸುತ್ತಿರುತ್ತಾರೆ. ದೇವರೆಲ್ಲಿದ್ದಾನೆ ಎನ್ನುವ ಹುಂಬ ಸ್ವಭಾವ ಇವರಲ್ಲಿ ಅತೀ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ವಯಸ್ಸಾದಂತೆ ಸಂಸಾರದ ಬಗ್ಗೆ ತಲೆ ಕೆಡಿಸಿಕೊಳ್ಳದೇ ತಮ್ಮಷ್ಟಕ್ಕೇ ತಾವೇ ಇರಲು ಇಷ್ಟಪಡಲಾರಂಭಿಸುತ್ತಾರೆ.
ಸ್ವಂತದ್ದೇನಾದರೂ ಮಾಡಬೇಕೆಂದು ಯೋಚಿಸುತ್ತ ಅದರಲ್ಲೇ ತಾವು ಹೊಂದಿದ್ದ ಗುರಿ ಸಾಧಿಸುತ್ತಾರೆ. ತಾಯಿ ಪ್ರೀತಿ ಇವರಿಗೆ ಅಷ್ಟಕ್ಕಷ್ಟೇ ಎನ್ನಬಹುದು. ಆದರೆ ತಂದೆಯೆಂದರೆ ಪ್ರಾಣವೆನ್ನುತ್ತ ಸುಮ್ಮನೇ ಅನಾಥರಂತೆ ಬದುಕಲು ಇಷ್ಟಪಡುತ್ತಾರೆ. ತಂದೆ ತಾಯಿ ಹೇಳಿದರೂ ಅವರ ಮಾತು ಕೇಳದೆ ತಮ್ಮಷ್ಟಕ್ಕೇ ತಾವೇ ಇರಲು ಇಷ್ಟಪಡುತ್ತಿರುತ್ತಾರೆ. ಮಡದಿ ಮತ್ತು ಮಕ್ಕಳೆಂದರೆ ಹೆಚ್ಚು ಇಷ್ಟ. ಆದರೆ ಸಂಗಾತಿ ಬಿಟ್ಟು ಮತ್ತೊಬ್ಬರೊಂದಿಗೆ ಹೆಚ್ಚು ಆಕರ್ಷಣೆ ಹೊಂದಿರುವುದು ಮತ್ತು ಮದಿರೆಯ ಬಗ್ಗೆ ಹೆಚ್ಚಿನ ಪ್ರೀತಿ ಇಟ್ಟುಕೊಂಡಿರುವುದು ಇವರ ಅಧೋಗತಿಗೆ ಕಾರಣವಾಗುತ್ತದೆ. ಏಕೆಂದರೆ ಇದರಿಂದ ಇವರಿಗೆ ತೊಂದರೆಗಳೇ ಜಾಸ್ತಿ.
ಈ ನಕ್ಷತ್ರದ ಹೆಂಗಸರು ಅತಿಯಾಗಿ ಸುಂದರರಾಗಿರುವುದರಿಂದ ತುಂಬಾ ತೊಂದರೆಗಳನ್ನೂ ಕೂಡ ಅನುಭವಿಸಬೇಕಾಗುತ್ತದೆ. ಹೀಗಾಗಿ ಅತಿಯಾದ ಮೇಕಪ್ ಮಾಡಿಕೊಳ್ಳಲು ಇವರಿಗಿಷ್ಟವಿರುವುದಿಲ್ಲ. ದೇವರೇ ಸೌಂದರ್ಯ ಕೊಟ್ಟಿದ್ದಾನೆ ಎನ್ನುವ ಕೊಬ್ಬು ಬೇರೆ ಇವರಿಗೆ.
ಯಾವ ನಕ್ಷತ್ರದವರು ಹೇಗೆ? : ಈ ನಕ್ಷತ್ರದ ಒಂದನೇ ಚರಣದವರು ಶೈಕ್ಷಣಿಕ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿರುತ್ತಾರೆ. ನ್ಯಾಯಯುತವಾಗಿರಬೇಕು ಎನ್ನುವ ಸ್ವಭಾವ ಹೊಂದಿರುವುದರಿಂದ ಸಾಕಷ್ಟು ಸಿಟ್ಟು ಸೆಡವು ಇವರಲ್ಲಿ ಮನೆ ಮಾಡಿರುತ್ತದೆ. ಆದರೆ ಆತ್ಮವಿಶ್ವಾಸ ಹೆಚ್ಚಿರುವುದರಿಂದ ಇವರಿಗೇನೂ ಮಾಡಕ್ಕೆ ಆಗಲ್ಲ ಯಾರಿಂದಲೂ. ದುಡ್ಡಿನ ವಿಷಯದಲ್ಲಿ ಮಾತ್ರ ಇವರು ಅದೃಷ್ಟವಂತರಾಗಿರುತ್ತಾರೆ.
ಎರಡನೇ ಚರಣದವರು, ಮಾತನಾಡುವುದರಲ್ಲಿ ಸಿದ್ಧಹಸ್ತರಾಗಿರುತ್ತಾರೆ. ಜೊತೆಗೆ ಸುಂದರವಾಗಿ ಕಾಣಿಸಿಕೊಳ್ಳುವ ಹಂಬಲದಿಂದ ಸಿಕ್ಕಾಪಟ್ಟೆ ಖರ್ಚು ಮಾಡಿ ತಮಗಿಷ್ಟವಾದ ವಸ್ತುಗಳನ್ನು ಖರೀದಿಸುತ್ತಿರುತ್ತಾರೆ. ಜೊತೆಗೆ ಸುಂದರವಾದ ಕವಿತೆ, ಕಥೆ ಮತ್ತು ಕಾದಂಬರಿಗಳನ್ನು ಬರೆಯಲು ಹಂಬಲಿಸುತ್ತಿರುತ್ತಾರೆ. ಇವರಿಗೆ ಕುಟುಂಬದ ಸದಸ್ಯರೊಂದಿಗೆ ಅತಿಯಾದ ಹೊಂದಾಣಿಕೆ ಇರುತ್ತದೆ.
ಮೂರನೇ ಚರಣದವರು, ಮತ್ತೊಬ್ಬರನ್ನು ಮಾತಿನಲ್ಲಿ ಮೋಡಿ ಮಾಡುವ ಮಹಾನ್ ಕಲಾವಿದರ ತರಹ ಇರುತ್ತಾರೆ. ಸಾಹಿತ್ಯ ಕ್ಷೇತ್ರದಲ್ಲಿ ಇವರಿಗೆ ಅತಿಯಾದ ಒಲವು ಇರುವುದರಿಂದ ಸುಂದರವಾದ ಕವನಗಳನ್ನು ಕೂಡ ರಚಿಸಬಲ್ಲವರಾಗಿರುತ್ತಾರೆ. ಸ್ವಂತ ಯೋಚನೆಗಳಿಗೆ ಹೆಚ್ಚು ಒತ್ತು ಕೊಡುವುದರಿಂದ ಲೋಭಿತನವೂ ತುಂಬಿ ತುಳುಕುತ್ತಿರುತ್ತದೆ ಇವರಲ್ಲಿ. ಇವರು ಖರ್ಚಿನಲ್ಲಿ ಯಾವಾಗಲೂ ಮುಂದಿರುತ್ತಾರೆ.ಜೊತೆಗೆ ಕಣ್ಣಿನ ನೋವುಗಳಿಂದ ಪದೇ ಪದೇ ನೊಂದುಕೊಳ್ಳುತ್ತಿರುತ್ತಾರೆ.
ನಾಲ್ಕನೇ ಚರಣದವರು ಮಾತ್ರ ವೃಶ್ಚಿಕ ರಾಶಿಯವರಾಗಿರುವುದರಿಂದ ಇವರ ಕೆಲವೊಂದು ಗುಣಾವಶೇಷಗಳು ಮೇಲಿನವರಿಗಿಂತ ಭಿನ್ನವಾಗಿರುತ್ತಾರೆ. ಕೆಲವೊಂದು ದುಶ್ಚಟಗಳ ದಾಸರಾಗಿ ತಮ್ಮಷ್ಟಕ್ಕೇ ತಾವೇ ರೋಗಿಗಳೆನಿಸಿಕೊಳ್ಳುತ್ತಿರುತ್ತಾರೆ. ಇದರಿಂದ ಇವರಿಗೆ ಕೆಲವೊಂದು ಅಪವಾದಗಳು ಕೂಡ ಬರುತ್ತಿರುತ್ತವೆ. ಜೊತೆಗೆ ಅತಿಯಾದ ಆಲಸ್ಯತನವೂ ಇವರನ್ನು ಮೂಲೆಗುಂಪು ಮಾಡುವಂತಾಗುತ್ತದೆ.
ಈ ನಕ್ಷತ್ರದವರು ಪ್ರತಿ ವರ್ಷದ ತಮ್ಮ ಜನ್ಮದಿನದಂದು ಅನ್ನದಾಸೋಹ ನಡೆಯುವ ದೇವಾಲಯಗಳಲ್ಲಿ ಅಕ್ಕಿ, ಬೆಲ್ಲ, ಅವರೆಕಾಳು, ತೊಗರಿಬೆಳೆ ದಾನವಾಗಿ ನೀಡಬೇಕು ತಮ್ಮ ಕೈಲಾದಷ್ಟು.
ನಕ್ಷತ್ರ ಟಿಪ್ಸ್ : ಶನಿರಾಜನ ಶಾಂತಿಗೆ ಮುಂದಾಗಬೇಕು.
ಅನುರಾಧಾ ನಕ್ಷತ್ರ ವಿಶೇಷ ಎಂಬುದು ಮುಂದಿನ ಲೇಖನದಲ್ಲಿ (ಒನ್ಇಂಡಿಯಾ ಕನ್ನಡ)
ಸಂಪಾದಕರ ಮಾತು : ಓದುಗರು, ಸಾಡೇಸಾತಿ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಬಯಸಿದ್ದಲ್ಲಿ, ಯಾವುದೇ ತೊಂದರೆಗಳಿಗೆ ಪರಿಹಾರ ಕಂಡುಕೊಳ್ಳಬಯಸಿದ್ದಲ್ಲಿ ಲೇಖಕರಿಗೆ ನೇರವಾಗಿ ಪೋನಾಯಿಸಿ ತಿಳಿದುಕೊಳ್ಳಬಹುದು (ಲೇಖಕರ ಮೊಬೈಲ್ : 94815 22011)