ತುಲಾ ವರ್ಷ ಭವಿಷ್ಯ: ಶನಿ ಹೋಗುವಾಗ, ಲಕ್ಷ್ಮಿ ಬರುವಾಗ ಬದುಕು ಬೊಂಬಾಟ್
ಈಗಿನ್ನೂ ನಿಧಾನಕ್ಕೆ ಉಸಿರು ಬಿಡುತ್ತಾ ಚೇತರಿಸಿಕೊಳ್ಳುತ್ತಿರುವ ತುಲಾ ರಾಶಿಯವರಿಗೆ ತೃತೀಯದಲ್ಲಿರುವ ಶನಿ, ಜನ್ಮ ಸ್ಥಾನದಲ್ಲಿರುವ ಗುರು ಇನ್ನಷ್ಟು ನಿರಾಳ ತರುತ್ತಾರೆ. ಮನಸ್ಸಿನಲ್ಲಿದ್ದ ವರ್ಷಗಳ ಚಿಂತೆ ಮಂಜಿನಂತೆ ಕರುಗುತ್ತಾ ಸಾಗುತ್ತದೆ. ಹೀಗೆ ತುಲಾ ರಾಶಿಯವರಿಗೆ ಹೇಳುವುದಕ್ಕೆ ಸಾಕಷ್ಟು ಶುಭ ಫಲಗಳಿವೆ. ಇಷ್ಟು ಕಾಲ ನೀವು ಎದುರು ನೋಡುತ್ತಿದ್ದ ಕಾಲ ಇದೇ ಎಂಬುದನ್ನು ಮೊದಲು ತಿಳಿದುಕೊಳ್ಳಿ.
ದಂಪತಿ ಮಧ್ಯೆ ಅನ್ಯೋನ್ಯತೆ ಕಡಿಮೆ ಆಗಿದೆ ಎಂಬ ಚಿಂತೆ ಮನಸ್ಸಿನಲ್ಲಿದ್ದರೆ ಅದು ಕೂಡ ನಿವಾರಣೆ ಆಗುತ್ತದೆ. ಅಮ್ಮ ಬೇರೆಡೆ ಇದ್ದಾರೆ ಅವರನ್ನು ನಿಮ್ಮ ಬಳಿ ಕರೆಸಿಕೊಳ್ಳಬೇಕು ಎಂಬ ಆಲೋಚನೆಯಲ್ಲಿದ್ದರೂ ಅದು ಈಗ ಸಾಧ್ಯವಾಗುತ್ತದೆ. ಇಷ್ಟು ಕಾಲ ಒಂಟಿಯಾಗಿದ್ದು, ಹೋಟೆಲ್- ಮೆಸ್ ಊಟ- ತಿಂಡಿಯೇ ತಿನ್ನುವಂತಾಯಿತಲ್ಲಾ ಎಂದು ಕೊರಗುತ್ತಿರುವವರಿಗೂ ಇದು ಬಿಡುಗಡೆ ಕಾಲ.
ಆದರೆ, ಚರ್ಮ ವ್ಯಾಧಿಗಳು ಬರುವ ಸಾಧ್ಯತೆಗಳು ಹೆಚ್ಚಿವೆ. ಮೂರನೇ ಮನೆಯಲ್ಲಿರುವ ಶನಿಯು ಧನ ಲಾಭ ತರುವಂತೆಯೇ ಸಹೋದರರೊಡನೆ ಮನಸ್ತಾಪ ಅಥವಾ ಚಿಕ್ಕ ಪುಟ್ಟ ಬೇಸರಗಳು ಆಗುತ್ತವೆ. ಅವರಿಗಾಗಿ ನೀವು ಸ್ವಲ್ಪ ಖರ್ಚು ಸಹ ಮಾಡಬೇಕಾದ ಸಮಯ ಬರುತ್ತದೆ. ಸಹೋದರರು ಇರುವವರು ಇದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.

ಕೆಲಸ ಹೆಚ್ಚಾಗುತ್ತದೆ
ಟ್ರಾನ್ಸ್ ಪೋರ್ಟ್ ವ್ಯಾಪಾರ ಮಾಡುತ್ತಿರುವವರಿಗೆ ಕೆಲಸಗಳು ಹೆಚ್ಚುತ್ತವೆ. ಹಾಗಂತ ತುಂಬ ಲಾಭ ಬಂದು ಬಿಡುತ್ತದೆ ಅಂತಲ್ಲ. ಖರ್ಚುಗಳು ಹೆಚ್ಚಾಗಿ ಕೊನೆಯಲ್ಲಿ ಏನೂ ಉಳಿಯುವುದಿಲ್ಲ. ಹೇಗಿದ್ದರೂ ಉಳಿಸಲು ಆಗುವುದಿಲ್ಲ ಎಂದು ನೀವು ಯದ್ವಾತದ್ವಾ ಖರ್ಚು ಮಾಡದಿರಿ.

ನೀವು ಒಪ್ಪಿದರೂ ಮನೆಯವರು ಒಪ್ಪಲ್ಲ
ಅವಿವಾಹಿತರು ಪ್ರಯತ್ನಿಸಿದಲ್ಲಿ ಸುಗುಣ ಸಂಪನ್ನ ಸಂಬಂಧಗಳು ಬರುವ ಸಾಧ್ಯತೆ ಇದೆ. ಈ ಸಂಬಂಧಕ್ಕೆ ನೀವು ಒಪ್ಪಿ, ಹಸಿರು ನಿಶಾನೆ ತೋರಿದರೂ ನಿಮ್ಮ ಕುಟುಂಬದವರು ಒಪ್ಪುವ ಸಾಧ್ಯತೆಗಳು ಕಡಿಮೆ. ಅದೇ ಸಂಬಂಧ ಮುಂದುವರಿಸಬೇಕು ಎಂದು ಪಟ್ಟು ಹಿಡಿದಲ್ಲಿ ಮನೆಯಲ್ಲಿ ಮನಸ್ತಾಪ ಆಗುತ್ತದೆ.

ಸಂತಾನಕ್ಕೆ ಯತ್ನಿಸುತ್ತಿರುವವರಿಗೆ ಶುಭ ಸಮಯ
ಸಂತಾನ ಇಲ್ಲವೇ ಎಂದು ಯೋಚಿಸುತ್ತಿರುವ ದಂಪತಿ ಕೂಡಲೇ ಜಾತಕವನ್ನು ಜ್ಯೋತಿಷಿಗಳ ಬಳಿ ತೋರಿಸಿ, ಸಂತಾನಕ್ಕೆ ಅಡೆ-ತಡೆ ಇರುವಂಥ ದೋಷಗಳಿದ್ದಲ್ಲಿ ನಿವಾರಿಸಿಕೊಳ್ಳಿ. ಆ ನಂತರ ವರ್ಷಾಂತ್ಯದ ತನಕ ಕಾದು, ಆಮೇಲೆ ಪ್ರಯತ್ನಿಸಿದರೆ ಯಶಸ್ಸು ಇದೆ. ಸತ್ಸಂತಾನ ಪ್ರಾಪ್ತಿಯಾಗುತ್ತದೆ.

ವಾಹನ ಚಾಲನೆ ಯೋಗ
ನಿರುದ್ಯೋಗಿಗಳಾಗಿದ್ದಲ್ಲಿ ಹಾಗೂ ಒಂದು ವೇಳೆ ಸ್ವಂತ ಕೆಲಸ ಮಾಡಬೇಕು ಎಂದು ಮನಸ್ಸು ಮಾಡಿರುವಿರಾದರೆ ವಾಹನ ಚಾಲನೆಯ ವೃತ್ತಿ ಆಯ್ದುಕೊಳ್ಳಿ. ರೈಲಿನ ಚಾಲಕ, ವಿಮಾನದ ಪೈಲಟ್, ನೌಕೆ ಯಾವುದಾದರೂ ಸರಿ ಡ್ರೈವರ್ ಸೀಟಿನಲ್ಲಿ ಕೂರುವ ಅವಕಾಶ ಇದೆ. ಇದನ್ನು ನೆನಪಿನಲ್ಲಿಟ್ಟುಕೊಳ್ಳಿ.

ವರ್ಷದ ಮಧ್ಯ ಭಾಗದ ನಂತರ ಎಲ್ಲವೂ ಒಳಿತು
ತಾಯಿಯ ಆರೋಗ್ಯದ ಸಹ ಹೆಚ್ಚಿನ ಕಾಳಜಿ ಅವಶ್ಯಕತೆ ಇದೆ. ಮನೆ ಕಟ್ಟುವ ಯೋಚನೆ ಇದ್ದವರು ಹಿರಿಯರ ಅಥವಾ ತಂದೆ- ತಾಯಿ, ಅತ್ತೆ- ಮಾವ ಹೀಗೆ ಅವರ ಸಹಾಯ ಪಡೆಯಿರಿ. ಆಗ ಗೃಹ ನಿರ್ಮಾಣ ಯಶಸ್ವಿ ಆಗುತ್ತದೆ. ವರ್ಷದ ಮಧ್ಯ ಭಾಗದ ನಂತರ ಒಂದೊಂದಾಗಿ ಎಲ್ಲವೂ ಒಳ್ಳೆಯದಾಗುತ್ತಾ ಬರುತ್ತದೆ.

ಸಾಮಾನ್ಯದ ಯಶಸ್ಸಾದರೂ ಸಿಗಬೇಕು
ನ್ಯಾಯಾಲಯದಲ್ಲಿ ಸಹ ನಿಮಗೆ ದೊಡ್ಡ ಹಿನ್ನಡೆ ಆಗಲಾರದು. ವೈಯಕ್ತಿಕ ಜಾತಕ ಪರಿಶೀಲಿಸಿ ನೋಡಬೇಕು. ಇಲ್ಲದಿದ್ದರೆ ಸಾಮಾನ್ಯವಾಗಿ ನೋಡಿದಾಗ ವ್ಯಾಪಾರ, ಷೇರು ಮಾರುಕಟ್ಟೆಯಲ್ಲಿ ಹೂಡಿಕೆ, ಚಲನ ಚಿತ್ರರಂಗ ಹೀಗೆ ಈ ಎಲ್ಲಾ ಕ್ಷೇತ್ರಗಳಲ್ಲಿ ಹೆಚ್ಚು ಅಂತ ಅಲ್ಲದಿದ್ದರೂ ಸಾಮಾನ್ಯದ ಯಶಸ್ಸು ಸಿಗಬೇಕು.

ತವರು ಮನೆಯವರ ಜತೆಗೆ ಜಗಳ
ಪ್ರೀತಿ-ಪ್ರೇಮದಲ್ಲಿ ಇರುವವರ ಮಧ್ಯೆ ಸಂಬಂಧ ಇನ್ನಷ್ಟು ಗಾಢವಾಗುತ್ತದೆ. ಆಗಾಗ ಅನುಮಾನಗಳು ಕಾಡಿದರೂ ಅದು ಸರಿಹೋಗುತ್ತದೆ. ಆದರೆ ನಿಮ್ಮ ಸೋದರ ಸಂಬಂಧದಲ್ಲಿ ಯಾರಿಗಾದರೂ ಕಣ್ಣಿಗೆ ಬೀಳುವ ಅಥವಾ ನಿಮ್ಮ ಮೇಲೆ ಅನುಮಾನ ಮೂಡುವ ಎಲ್ಲ ಸಾಧ್ಯತೆಗಳಿವೆ. ಇನ್ನು ವಿವಾಹಿತ ಸ್ತ್ರೀಯರು ಮಾತ್ರ ತವರು ಮನೆಯವರೊಂದಿಗೆ ಚಿಕ್ಕ- ಪುಟ್ಟ ಜಗಳ ಮಾಡಿಕೊಳ್ಳುತ್ತಾರೆ.

ಗಮನ ವಿದ್ಯೆ ಕಡೆ ಇರಲಿ
ವಿದ್ಯಾರ್ಥಿಗಳು ಹಣದ ಕಡೆಗೆ ಗಮನ ಹರಿಸಬಾರದು. ಹೊಸದಾಗಿ ಸ್ನೇಹಿತರಾದವರು ಅದರಲ್ಲೂ ಹುಡುಗರಾದರೆ ಹುಡುಗಿ, ಹುಡುಗಿಯರಾದರೆ ಹುಡುಗರ ಜತೆಗೆ ಬಹಳ ಸಮಯ ಕಳೆಯುವ ಸಾಧ್ಯತೆ ಇರುತ್ತದೆ. ಹೊರಗೆ ಸುತ್ತಾಡುವುದು ಜಾಸ್ತಿಯಾಗುತ್ತದೆ. ಆ ಕಾರಣಕ್ಕೆ ಮನಸ್ಸನ್ನು ವಿದ್ಯಾಭ್ಯಾಸದಿಂದ ಬೇರೆಡೆ ಹರಿಸಬೇಡಿ.

ಪಾರ್ಥಿವೇಶ್ವರ ಪೂಜೆ, ಹವನ
ಶ್ರೀ ಪಾರ್ಥಿವೇಶ್ವರ ಪೂಜಾ ಸಹಿತ ರುದ್ರ ಹವನ ಹಾಗೂ ರುದ್ರ ಕ್ರಮಾರ್ಚನೆ ಮಾಡಿಸಬೇಕು. ಜಾತಕದಲ್ಲಿ ಶನಿ ಉತ್ತಮ ಸ್ಥಿತಿಯಲ್ಲಿ ಇದ್ದಲ್ಲಿ ಅಭಿಮಂತ್ರಿತ ಉತ್ತಮ ಗುಣಮಟ್ಟದ ನೀಲಿ ಪುಷ್ಯರಾಗ ರತ್ನವನ್ನು ಧರಿಸುವುದು ಉತ್ತಮ. ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಇರುವ ಸ್ವರ್ಣವಲ್ಲೀ ಮಠದಲ್ಲಿ ನೆಲೆಸಿರುವ ರಾಜರಾಜೇಶ್ವರಿ ಅಮ್ಮನವರ ದರ್ಶನ ಮಾಡಿ. ಯಥಾಶಕ್ತಿ ಸೇವೆ ಸಲ್ಲಿಸಿ.











Click it and Unblock the Notifications