War Updates: ಇರಾನ್ಗೆ ಟ್ರಂಪ್ ವಾರ್ನಿಂಗ್: ತೈಲ ಮಾರ್ಗ ಬಂದ್ ಮಾಡಿದರೆ ದೇಶವೇ ಸರ್ವನಾಶ, ಇಂದಿನ ಪ್ರಮುಖಾಂಶಗಳು
Iran-Israel-US War Upate: ಮಧ್ಯಪ್ರಾಚ್ಯದಲ್ಲಿ ಯುದ್ಧ ಆರಂಭವಾಗಿ ಬರೋಬ್ಬರಿ ಹನ್ನೊಂದು ದಿನ ಪೂರೈಸಿದ್ದು, ಇಂದು (ಮಾ.10) ಮಂಗಳವಾರ ಸಹ ಕ್ಷಿಪಣಿ ದಾಳಿಗಳು ಮುಂದುವರಿದಿವೆ. ಮತ್ತೊಂದೆಡೆ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಫ್ ಯುದ್ಧ ಮುಗಿದಿದೆ ಎಂದು ಮಹತ್ವದ ಹೇಳಿಕೆ ನೀಡಿದ್ದಾರೆ. ಇರಾನ್ ಹಾರ್ಮುಜ್ ಜಲಸಂಧಿ ಮೇಲೆ ಹಿಡಿತ ಬಿಗಿಗೊಳಿಸುತ್ತಿದ್ದು, ಯುಎಸ್ ಎಚ್ಚರಿಕೆ ನೀಡಿದೆ. ದಾಳಿಯಿಂದಾಗಿ ಇರಾನ್ನ ಕೆಲವು ತೈಲ ಕೇಂದ್ರಗಳು ದಾಳಿಗೆ ಒಳಗಾಗಿವೆ. ಟೆಹರಾನ್ ಸೇರಿ ಅನೇಕ ಪ್ರದೇಶಗಳು ಸ್ಮಶಾನದಂತಾಗಿವೆ. ವೈಮಾನಿಕ ದಾಳಿಯಲ್ಲಿ ಐದು ಇರಾನಿನ ಪರ ಉಗ್ರರು ಸಾವನ್ನಪ್ಪಿದ್ದಾರೆ. ಭಾರತ ಸೇರಿ ನಾನಾ ದೇಶಗಳಿಗೆ ತೈಲ ಪೂರೈಕೆ ಕೊರತೆ ಬಿಸಿ ತಟ್ಟಿದೆ. ಭಾರತ ಸರ್ಕಾರ ಇಂಧನ, ಎಲ್ಪಿಜಿ ಲಭ್ಯತೆ ಖಚಿತತೆಗೆ ಕಾಯ್ದೆಯೊಂದನ್ನು ಜಾರಿಗೊಳಿಸಿದೆ. ಯುದ್ಧಕ್ಕೆ ಸಂಬಂಧಿಸಿದಂತೆ ಇಂದಿನ ಬೆಳವಣಿಗೆಯ ಪ್ರಮುಖಾಂಶಗಳು ಇಲ್ಲಿವೆ.
ಈ ದಿನದ ಯುದ್ಧದ ಪ್ರಮುಖಾಂಶಗಳು ಇಲ್ಲಿವೆ
* ಇರಾನ್ ದೇಶದ ಮೇಲೆ ಇಸ್ರೇಲ್-ಯುಎಸ್ ಮುಗಿಬಿದ್ದಿವೆ. ನಿರಂತರ ದಾಳಿ ನಡೆಸುತ್ತಿವೆ. ಇತ್ತ ಪಟ್ಟು ಸಡಿಲಿಸದ ಇರಾನ್ 'ಹಾರ್ಮುಜ್ ಜಲಸಂಧಿ' ಮೇಲಿನ ಹಿಡಿತ ಬಿಗಿಗೊಳಿಸುವ ಮೂಲಕ ಬಲ ಪ್ರದರ್ಶನಕ್ಕೆ ಮುಂದಾಗಿದೆ. ಇದರಿಂದ ಭಾರತ ಸೇರಿ ಜಾಗತಿಕವಾಗಿ ಅನೇಕ ರಾಷ್ಟ್ರಗಳಿಗೆ ತೈಲ ಪೂರೈಕೆ ಕೊರತೆಯ ಬಿಸಿ ತಟ್ಟಿದೆ.

* ಇರಾನ್ ಹಾರ್ಮುಜ್ ಜಲಸಂಧಿ ಮೂಲಕ ತೈಲ ಹರಿವನ್ನು ನಿಲ್ಲಿಸುವ ಕ್ರಮ ಮುಂದುವರಿಸಿದ್ದೇ ಆದಲ್ಲಿ ಅದೊಂದು ದೇಶವಾಗಿ ಉಳಿಯಲ್ಲ. ನಮ್ಮ ದಾಳಿಗೆ ಸರ್ವನಾಶವಾಗುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಸಿದ್ದಾರೆ. ಈಗಿನಕ್ಕಿಂತ ಒಟ್ಟು 20 ಪಟ್ಟು ಹೆಚ್ಚು ದಾಳಿಯನ್ನು ಇರಾನ್ ಎದುರಿಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ. ಈ ಹಿಂದೆ ಟ್ರಂಪ್ ಪರಮಾಣು ಬಾಂಬ್ ಎಚ್ಚರಿಕೆ ನೀಡಿದ್ದರು.
* ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧ, ಉದ್ವಿಗ್ನತೆಯ ಮುಂದುವರಿದಿರುವ ನಡುವೆಯೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಹತ್ವದ ಹೇಳಿಕೆ ನೀಡಿದ್ದಾರೆ. ಯುದ್ಧ ಈಗ ಬಹುತೇಕ ಮುಗಿದಿದೆ ಎಂದು ಟ್ರಂಪ್ ಹೇಳಿದ್ದಾರೆ. ಇನ್ನು ಮುಂದೆ ಏನಾದರೂ ಇರಾನ್ ದುಸ್ಸಾಹಸಗಳಿಗೆ ಕೈ ಹಾಕಿದರೆ ಕಠಿಣ ಕ್ರಮವನ್ನು ಎದುರಿಸಲಿದೆ ಎಂದಿದ್ದಾರೆ.
* ಇರಾನ್ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ತನ್ನ ಕ್ಷಿಪಣಿವನ್ನು ನಾಶಪಡಿಸಿದೆ ಎಂದು ಯುಎಸ್ ದೂರಿದೆ. ಆದರೆ ಈ ಆರೋಪವನ್ನು ಇರಾನ್ ನಿರಾಕರಿಸಿದೆ. ಇತ್ತ ಯುಎಸ್ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಅವರು ಯುದ್ಧದ ಆರಂಭದ ನಂತರ ಇರಾನ್ ಇದುವರೆಗಿನ ದಾಳಿಯ ದಿನಗಳಿಗಿಂತ ಇಂದು ಮಂಗಳವಾರ ತೀವ್ರ ದಾಳಿ ಎದುರಿಸಲಿದೆ ಎಂದು ಹೇಳಿದ್ದಾರೆ.
* ಇರಾನ್ ಯುದ್ಧ ಕೈ ಬಿಟ್ಟು ಶರಣಾಗುವಂತೆ ಅಮರಿಕ ಸೂಚಿಸಿತ್ತು. ಇದಕ್ಕೆ ಒಪ್ಪದ ಇರಾನ್ ಮೇಲೆ ಇಸ್ರೇಲ್ ಹಾಗೂ ಯುಎಸ್ ಎರಡು ರಾಷ್ಟ್ರಗಳು ಬೇರೆ ಬೇರೆ ಮಾರ್ಗದಲ್ಲಿ, ತೀವ್ರ ದಾಳಿ ಮೂಲಕ ಒತ್ತಡ ಹೇರಲು ಮುಂದಾಗಿವೆ. ಪದೇ ಪದೇ ತೀವ್ರ ಯದ್ಧದ ಎಚ್ಚರಿಕೆ ನೀಡಿತ್ತುವೆ. ಜಂಟಿ ವೈಮಾನಿಕ ದಾಳಿಗೆ ಇರಾನ್ ಪ್ರತಿದಾಳಿಯನ್ನು ಮುಂದುವರಿಸಿದೆ. ಯುದ್ಧ ಸದ್ಯಕ್ಕೆ ನಿಲ್ಲುವ ಲಕ್ಷಣ ಕಾಣುತ್ತಿಲ್ಲ.
* ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಬಹ್ರೇನ್ನ ದುಬೈನಲ್ಲಿ ಇಂದು ಬೆಳಗ್ಗೆ ಬಾಂಬ್, ಕ್ಷಿಪಣಿಗಳ ಸದ್ದು ಕೇಳಿ ಬಂತು. ಸೌದಿ ಅರೇಬಿಯಾ ತನ್ನ ತೈಲ-ಸಮೃದ್ಧ ಪೂರ್ವ ಪ್ರದೇಶದ ಮೇಲೆ ಎರಡು ಡ್ರೋನ್ಗಳನ್ನು ನಾಶಪಡಿಸಿದೆ ಎಂದು ಹೇಳಿಕೊಂಡಿದೆ. ಕುವೈತ್ನ ರಾಷ್ಟ್ರೀಯ ಗಾರ್ಡ್ ಆರು ಡ್ರೋನ್ಗಳನ್ನು ಹೊಡೆದುರುಳಿಸಿರುವುದಾಗಿ ಮಾಹಿತಿ ನೀಡಿದೆ.
* ಭಾರತದ ಮೇಲೆ ಮಧ್ಯಪ್ರಾಚ್ಯದ ಯುದ್ಧದ ಪ್ರಭಾವ ಉಂಟಾಗಿದೆ. ಇಂಧನ ಮಾತ್ರವಲ್ಲದೇ ಎಲ್ಪಿಜಿ ಸಿಲೆಂಡರ್ ದರ ಏರಿಕೆಗೆ ಕಾರಣವಾಗಿದೆ. ಇಂಧನ, ಗ್ಯಾಸ್ ಲಭ್ಯತೆ ಖಚಿತತೆಗಾಗಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ 1955ರ ಅಗತ್ಯ ಸರಕುಗಳ ಕಾಯ್ದೆಯನ್ನು ಜಾರಿಗೊಳಿಸಿದೆ. ಈ ಮೂಲಕ ದೇಶದಲ್ಲಿ ಮನೆ ಅಡುಗೆ ಅನಿಲ ಪೂರೈಕೆಗೆ ಅಡ್ಡಿಯಾಗದಂತೆ ಕ್ರಮ ವಹಿಸಿದೆ. ಇದರಿಂದ ದರ ಏರಿಕೆ ಆಗುವುದು ತಪ್ಪುವ ನಿರೀಕ್ಷೆ ಇದೆ. ಯುದ್ಧ ಇಷ್ಟಕ್ಕೆ ನಿಂತರೆ ಯಾವುದೇ ಸಮಸ್ಯೆ ಇಲ್ಲ ಅಂತಲೂ ಹೇಳಲಾಗುತ್ತಿದೆ.












Click it and Unblock the Notifications