ಹಿಮಾಚಲದ ಹೆವೆನ್ ಕುಲು ಮನಾಲಿ ಪ್ರವಾಸಕಥನ
ಚಿಕ್ಕ ವಯಸ್ಸಿನಲ್ಲಿ ಪ್ರೀತಿಯ ಚಿಕ್ಕಪ್ಪ ಹಿಮಾಚಲಪ್ರದೇಶದಿಂದ ರಜಾದಲ್ಲಿ ಬಂದಾಗ ಹೆಸರೇ ಕೇಳದೆ ನೋಡದೇ ಇರುವ ಜಾಗಗಳು ಅಂದರೆ ಶಿಮ್ಲಾ. ಮಂಡಿನಲ್ಲಿ ಕೆಲಸ ಮಾಡುತ್ತಿದ್ದ ಅವರು ಬರುವಾಗ ಅಲ್ಲಿ ಸಿಗುವ 'ಅಕ್ರೋಟ್' ತಂದರೆ ಆಗುವ ಸಂತೋಷ ಹೇಳತೀರದು. ಅದನ್ನು ತಿನ್ನುವುದು ಹೇಗಂತ ಗೊತ್ತಾಗುತ್ತಲೇ ಇರಲಿಲ್ಲ. ಆ ದಿನಗಳ ಮಜವೇ ಬೇರೆ.
ಈಗ ಶಿಮ್ಲಾದ ಬಗ್ಗೆ ಪ್ರಸ್ತಾಪ ಏಕೆ ಮಾಡಬೇಕಾಗಿ ಬಂದಿತೆಂದರೆ, ನಾವೇ ಖುದ್ದಾಗಿ ಸ್ವರ್ಗಸದೃಶ ಪ್ರದೇಶಕ್ಕೆ ಹೋಗಿ ಬಂದಿದ್ದು. ನಾವು ಪ್ರವಾಸಕ್ಕೆ ತಯಾರಿ ನಡೆಸುತ್ತಿರುವಾಗ ನಮ್ಮ ಅದೃಷ್ಟಕ್ಕೆ ಸಂಬಂಧಿ ಉಮೇಶ ಚಂಡೀಘರ್ ನಿಂದ 20 ಕಿ.ಮೀದಲ್ಲಿರುವ ಬಂಡೀನಲ್ಲೂ, ಇನ್ನೊಬ್ಬ ಕುಲುನಲ್ಲೇ ಇರುವುದೂ ಗೊತ್ತಾಯಿತು. ಅವರೇ ನಮ್ಮ ಪ್ರಯಾಣದ ವ್ಯವಸ್ಥೆಯನ್ನೂ ಮಾಡಿದರು.
ನಿಜಕ್ಕೂ ಈ ಪ್ರವಾಸ ಅವಿಸ್ಮರಣೀಯವಾದದ್ದು. ಚಾರಣ ಮಾಡುವುದೆಂದರೆ, ಸುಂದರ ಸ್ಥಳಗಳಿಗೆ ಪ್ರವಾಸ ಕೈಗೊಳ್ಳುವುದೆಂದರೆ ನಮಗೆ ನಿಜಕ್ಕೂ ಎಲ್ಲಿಲ್ಲದ ಉತ್ಸಾಹ. ದೇಶವಿದೇಶದಲ್ಲಿರುವ ಹಲವಾರು ಪ್ರದೇಶಗಳನ್ನು ನೋಡಿರುವ ನಮಗೆ ಕುಲು ಮನಾಲಿ ಪ್ರವಾಸ ವಿಶಿಷ್ಟಬಗೆಯ ಅನುಭವ ನೀಡಿದೆ. ಈ ಪ್ರವಾಸದ ಕಥನ ಮುಂದಿದೆ ಓದಿರಿ. [ಪೆರುನಲ್ಲಿರುವ ಮಾಚುಪಿಚು ಪ್ರವಾಸದ ಅನುಭವ]
ಶಿಮ್ಲಾ ಹಿಮಾಚಲಪ್ರದೇಶದ ರಾಜಧಾನಿ. ನಾವು ಹೊರಟಾಗ ತುಂತುರು ಮಳೆ ಬರುತ್ತಿತ್ತು. ಕ್ರಮೇಣ ಮಲ್ಲಿಗೆ ಹೂವು ಉದುರುತ್ತಿದೆಯೇನೋ ಎಂಬಂತೆ ಸ್ನೋ ಬೀಳಲು ಶುರುವಾಯಿತು. ಇದರಿಂದಾಗಿ ನೋಡುವ ಜಾಗಗಳಾದ ಸ್ಟೇಟ್ ಮ್ಯೂಸಿಯಂ, ಬರ್ಡ್ ಪಾರ್ಕ್, ಆರ್ಮಿ ಮ್ಯೂಸಿಯಂ ಮುಚ್ಚಿಬಿಟ್ಟಿದ್ದರು. ಆದರೆ ಜಾಕು ಹನುಮಂತನ ದೇವಸ್ಥಾನಕ್ಕೆ ಹಿಮ ಬೀಳುತ್ತಿದ್ದರೂ ಮೆಟ್ಟಿಲುಗಳನ್ನು ಹತ್ತಿ ಹೋಗಿದ್ದು 'ವಾಹ್' ಎನ್ನಿಸಿತು.
108 ಅಡಿ ಎತ್ತರದ ಚಂದನ ಬಣ್ಣದ ಆಂಜನೇಯನ ಪ್ರತಿಮೆ ನೋಡುವುದಕ್ಕೆ ಚೆಂದವೋ ಚೆಂದ. ಅಲ್ಲಿ ಒಂದು ಕೋತಿ ಪ್ರವಾಸಿಯ ಕನ್ನಡಕ ಕಿತ್ತುಕೊಂಡು ಕೂತಿದ್ದು ನೋಡಲು ತಮಾಷೆಯಾಗಿತ್ತು. ಅಬ್ಬಾ ಆ ಪ್ರವಾಸಿಯ ತೊಳಲಾಟ ಹೇಳತೀರದು. ಅವರು ಅಲ್ಲಿ ಬರುವ ಎಲ್ಲ ಪ್ರವಾಸಿಗಳನ್ನೂ ಚಾಕಲೇಟ್ ಇದೆಯಾ ಎಂದು ಕೇಳುತ್ತಿದ್ದರು. ಏಕೆಂದರೆ ಆ ಕೋತಿಗೆ ಚಾಕಲೇಟ್ ಕೊಟ್ಟಿದ್ದರೆ ಕನ್ನಡಕ ಕೊಡುತ್ತಿತ್ತಂತೆ! [ಆಸ್ಟ್ರೇಲಿಯಾದ ಶ್ರೀನಿವಾಸ ಗುಡಿಗೆ ಟ್ರೆಕ್ಕಿಂಗ್]
ಅಲ್ಲಿಂದ ಹೆಸರುವಾಸಿಯಾದ ಕೊಫ್ರೆ ಜಾಗಕ್ಕೆ ಹೊರಟೆವು. ಆದರೆ ಹಿಂದಿನ ದಿವಸವೂ ಹಿಮ ಬಿದ್ದಿದ್ದರಿಂದ ಅರ್ಧ ಮಾರ್ಗದಿಂದಲೇ ರಸ್ತೆ ಮುಚ್ಚಿ ಸೈನಿಕದಳ ಕಾವಲು ನಿಂತಿದ್ದರು. ಚೋಟಾ ಶಿಮ್ಲಾದ ಆಕರ್ಷಣೆ ಕೆಳಗಡೆಯಿಂದ ಲಿಫ್ಟ್ ನಲ್ಲಿ ಹೋಗುವುದು. ಇಲ್ಲಿಂದ ಕುಲುಕಡೆಗೆ ಪ್ರಯಾಣ. ನಮಗಾಗಿ ಕಾದಿದ್ದ ನಟರಾಜ್ ಮನಾಲಿನಲ್ಲಿ 3000 ಅಡಿ ಎತ್ತರದಲ್ಲಿರುವ ಹೆವನ್ ಲಾಡ್ಜ್ ನಲ್ಲಿ ಇಳಿದುಕೊಳ್ಳುವ ವ್ಯವಸ್ಥೆ ಮಾಡಿದ್ದರು. ಹೆಸರಿಗೆ ತಕ್ಕಂತೆ ಸುತ್ತಲೂ ಸ್ನೋನಿಂದ ಮುಚ್ಚಿ ಹೋಗಿದ್ದು ಪ್ರಕೃತಿ ಸೌಂದರ್ಯ ತುಂಬಿಕೊಂಡಾಗ ಇದೇ ಹಿಮಾಚಲದ ಹೆವೆನ್ ಎನ್ನಿಸಿತು!
ಮನಾಲಿಯ ಹಡಿಂಬ (ಹಿಡಿಂಬೆ) ದೇವಸ್ಥಾನ ಐತಿಹಾಸಿಕವಾದದ್ದು. ನಾಲ್ಕು ಶ್ರೇಣೀಕೃತ ಪಗೋಡವಿರುವ ಛಾವಣಿಯ ನೈಸರ್ಗಿಕ ಗುಹೆಯಲ್ಲಿ ಹೊಳೆಯುವ ದೇವಿ ಹೆಜ್ಜೆ ಗುರುತುಗಳನ್ನು ಇಲ್ಲಿ ಕಾಣಬಹುದು. ಮಹಾಭಾರತದ ಪಾಂಡವರಲ್ಲಿ ಮಧ್ಯಮನಾದ ಭೀಮನ ಹೆಂಡತಿಯೇ ಹಡಿಂಬಾದೇವಿ. ಈ ದೇವಸ್ಥಾನ ದುಂಗಿರಿ ವನವಿಹಾರ್ ನಲ್ಲಿರುವುದರಿಂದ 'ದುಂಗಿರಿ' ದೇವಸ್ಥಾನವೆಂದೂ ಕರೆಯುತ್ತಾರೆ. ಮರದ ಕೆತ್ತನೆಗಳ ಪೌರಾಣಿಕ ಪಾತ್ರಗಳು, ಪ್ರಾಣಿಗಳು ಮತ್ತು ಕಾಸ್ಮಿಕ್ ನೃತ್ಯಗಾರರ ಚಿತ್ರಗಳು ಗೋಡೆಯ ಅಂದ ಹೆಚ್ಚಿಸಿದ್ದವು. ಪ್ರತಿವರ್ಷ ಮೇ ತಿಂಗಳಲ್ಲಿ ದೊಡ್ಡ ಹಬ್ಬವನ್ನೇ ಆಚರಿಸುತ್ತಾರಂತೆ.
ನಗ್ಗರ್ ಕುಲು ರಾಜಧಾನಿ. ಇದನ್ನು ಸ್ಥಾಪಿಸಿದವರು ರಾಜ ವಿಸುಧ್ ಪಾಲ್. ಕ್ರಿಶ 1460ರಲ್ಲಿ ಜಗತ್ ಸಿಂಗ್ ಪ್ರಧಾನ ಕಛೇರಿಯನ್ನು ಸುಲ್ತಾನಪುರಕ್ಕೆ ವರ್ಗಾಯಿಸಿದ್ದ. ಮಧ್ಯಯುಗದ ಪ್ರಾಚೀನ ಕಟ್ಟಡವನ್ನು 1978ರಿಂದ ಪಾರಂಪರಿಕ ಹೋಟೆಲಾಗಿ ಪರಿವರ್ತಿಸಿದರು. ಇಲ್ಲಿಯೂ ವಾಸ್ತುಶಿಲ್ಪದ ಪಗೋಡಾಕಾರದ ದೇವಸ್ಥಾನವನ್ನು ಮರ ಮತ್ತು ಕಲ್ಲುಗಳಿಂದ ಕಟ್ಟಿರುವರು. ತ್ರಿಪುರ ಸುಂದರಿ ದೇವಸ್ಥಾನ, ಮ್ಯೂಸಿಯಂನಲ್ಲಿ ರಷ್ಯದ ಕಲಾವಿದ ನಿಕೋಲಾಸ್ ರೋರಿಚ್ ಕಲಾ ಚಿತ್ರಗಳು ಮತ್ತು ರಾಜ ಉಪಯೋಗಿಸುತ್ತಿದ್ದ ಆಯುಧಗಳನ್ನೆಲ್ಲ ಕಾಣಬಹುದು. ಸುತ್ತಲೂ ರಮಣೀಯ ಬೆಟ್ಟಗುಡ್ಡ ಸೌಂದರ್ಯದಿಂದ ಕೂಡಿರುವುದರಿಂದ ಸುಮಾರು ಹಿಂದಿ ಸಿನಿಮಾಗಳು ಮತ್ತು ಒಂದು ತೆಲುಗು ಸಿನಿಮಾದ ಚಿತ್ರೀಕರಣ ನಡೆದಿದೆ.
ರೊಹ್ಟಾಂಗ್ ಪಾಸ್ ಕಡೆಗೆ ಬಿಯಾಸ್ ನದಿಯ ಎಡದಂಡೆಯ ಮೇಲೆ ವಶಿಷ್ಟ ಎಂಬ ಊರು ಮೂರು ಕಿ.ಮೀ ದೂರದಲ್ಲಿದೆ. ಬಿಸಿನೀರಿನ ಬುಗ್ಗೆಗಳಿರುವ ಶ್ರೀರಾಮ ಮತ್ತು ವಶಿಷ್ಟ ದೇವಸ್ಥಾನಗಳು ಇಲ್ಲಿವೆ. ಬಿಸಿನೀರಿನ ಬುಗ್ಗೆಗಳಲ್ಲಿ ಸ್ನಾನ ಮಾಡುವ ವ್ಯವಸ್ಥೆ ಮಾಡಲಾಗಿದ್ದು, ಹೆಂಗಸರು, ಗಂಡಸರಿಗೆ ಪ್ರತ್ಯೇಕವಾಗಿವೆ.
ಮನಾಲಿಯಿಂದ 138 ಕಿ.ಮೀ ದೂರದಲ್ಲಿ ಕುಲು ವ್ಯಾಲಿ, ಮೇಲುಗಡೆ ಸೋಲಾಂಗ್ ಹಳ್ಳಿ ಮತ್ತು ಬೀಸ್ಕುಂಡ್ ನಲ್ಲಿ ಸೋಲಾಂಗ್ ವ್ಯಾಲಿ ಇದೆ. ಹಿಮ ನದಿ, ಸ್ನೋನಿಂದ ಮುಚ್ಚಿದ ಹಿಮ ಶಿಖರಗಳು, ಸ್ಕೀ ಇಳಿಜಾರು, ಸ್ಕೀಇಂಗ್, ಪ್ಯಾರಾ ಗ್ಲೈಡಿಂಗ್ ಮುಖ್ಯ ಚಟುವಟಿಕೆಗಳಾದರೆ, ಸಾಹಸ ಆಟಗಳಾದ ಜೋರ್ಬಿಂಗ್, ಕುದುರೆ ಸವಾರಿ, ಸ್ನೋ ಮೋಟಾರ್ ಬೈಕ್ ಸವಾರಿ ಆಕರ್ಷಣೀಯವಾಗಿತ್ತು. [ಪ್ರವಾಸ ಕಥನ : ಮುಕ್ತಿಗೆ ಮೂರೇ ಗೇಣು]
ಚೇರ್ ಲಿಫ್ಟ್ ನಲ್ಲಿ ಹೋದರೆ ಏನೂ ಉಪಯೋಗವಾಗಲಿಲ್ಲ. ಸ್ನೋ ತುಂಬಾ ಸಾಫ್ಟ್ ಇದ್ದು ನಡೆಯಲು ಅವಕಾಶವಾಗಲೇ ಇಲ್ಲ, ಬೇಜಾರಾಯಿತು. ಹೆಚ್ಚು ಪ್ರವಾಸಿಗಳೂ ಬಂದಿರಲಿಲ್ಲ. ನಾವೂ ಮೋಟಾರ್ ಬೈಕ್ ಸವಾರಿ ಮಾಡಿದೆವು. ಚಾಲಕ ರೋಲರ್ ಸ್ಕೇಟರ್ ರುಚಿ ಸ್ವಲ್ಪ ತೋರಿಸಿದ. ಹೋಗುವಾಗ ದಾರಿ ಮಾರ್ಗ ಚಿಕ್ಕದಾಗಿತ್ತು. ಮತ್ತು ಹಿಮದಿಂದ ತುಂಬಿತ್ತು. ವಾಹನ ಸಂಚಾರಕರು ಸ್ವಲ್ಪವೂ ತಾಳ್ಮೆ ಕಳೆದುಕೊಳ್ಳದೆ ಎದುರು ಬರುವ ವಾಹನಗಳಿಗೂ ದಾರಿಮಾಡಿಕೊಟ್ಟು ಸಹಾಯ ಬೇಕಾದರೆ ಒದಗಿಸಿ ಹಸನ್ಮುಖರಾಗಿ ಡ್ರೈವ್ ಮಾಡುವುದು ನಾವೂ ಕಲಿಯಬೇಕಾದ್ದು ಎನ್ನಿಸಿತು. ಆರು ದಿವಸಗಳ ಹಿಮಾಚಲದ ಸ್ವರ್ಗಸದೃಶ ಮನಾಲಿಯ ಪ್ರವಾಸ ಅದ್ಭುತವಾಗಿತ್ತು.