ಉತ್ತರಾಖಂಡ್ ನಲ್ಲಿ ತಮ್ಮನಿಗಾಗಿ ಕಾದಿದ್ದ ಅಣ್ಣನಿಗೆ ಆಘಾತ ನೀಡಿದ ಸಾವು
ಡೆಹ್ರಾಡೂನ್, ಫೆಬ್ರವರಿ.15: ಉತ್ತರಾಖಂಡ್ ಚಮೋಲಿ ಜಿಲ್ಲೆಯ ತಪೋವನ ಪ್ರದೇಶದ ಸುರಂಗದಲ್ಲಿ ಸೋಮವಾರ ಮತ್ತೆ ಮೂರು ಮೃತದೇಹಗಳು ಪತ್ತೆಯಾಗಿದ್ದು, ಹಿಮಪಾತದಿಂದ ಸೃಷ್ಟಿಯಾದ ಪ್ರವಾಹದಲ್ಲಿ ಮೃತಪಟ್ಟವರ ಸಂಖ್ಯೆ 54ಕ್ಕೆ ಏರಿಕೆಯಾಗಿದೆ.
ನ್ಯಾಷನಲ್ ಥರ್ಮಲ್ ಪವರ್ ಕಾರ್ಪೋರೇಷನ್ ಸಂಸ್ಥೆಯು ತಪೋವನ ವಿಷ್ಣುಗಡ್ ಪ್ರದೇಶದಲ್ಲಿ ನಡೆಯುತ್ತಿರುವ ಪವರ್ ಪ್ರಾಜೆಕ್ಟ್ ಪ್ರದೇಶದಲ್ಲಿ ಕೊರೆದ ಸುರಂಗದಲ್ಲಿ ಇದುವರೆಗೂ ಒಂಭತ್ತು ಕಾರ್ಮಿಕರ ಮೃತದೇಹಗಳು ಪತ್ತೆಯಾಗಿವೆ.
ಫೆಬ್ರವರಿ.07ರಂದು ಚಮೋಲಿ ಜಿಲ್ಲೆಯಲ್ಲಿನ ಹಿಮಪಾತದಿಂದ ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗಿತ್ತು. ಅಂದಿನಿಂದ ನಿರಂತರವಾಗಿ 9 ದಿನಗಳವರೆಗೂ ರಕ್ಷಣಾ ಕಾರ್ಯಾಚರಣೆ ಮುಂದುವರಿಸಲಾಗಿದೆ. 54 ಮಂದಿ ಮೃತಪಟ್ಟಿದ್ದು, ಇನ್ನೂ 150ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ.

ಸಹೋದರನಿಗೆ ಕಾದವರ ಮನೆಗೆ ಬಂತು ಮೃತದೇಹ
ಸೋಮವಾರ ಪತ್ತೆಯಾದ ಮೂರು ಮೃತದೇಹಗಳ ಪೈಕಿ ಒಬ್ಬರು ಚಮೋಲಿ ಜಿಲ್ಲೆ ಮಸೋಲಿ ಗ್ರಾಮದ ಸತ್ಯಪಾಲ್ ಸಿಂಗ್ ಬರ್ತವಾಲ್ ಎಂದು ಗುರುತಿಸಲಾಗಿದೆ. ಸತ್ಯಪಾಲ್ ಸಿಂಗ್ ಯಾವುದೇ ಅಪಾಯವಿಲ್ಲದೇ ಸುರಕ್ಷಿತವಾಗಿ ಮನೆಗೆ ಬರುತ್ತಾನೆ ಎಂದು ನಿರೀಕ್ಷೆಯಲ್ಲಿದ್ದೆವು. ಆದರೆ ಆತನ ಮೃತದೇಹವು ನಮ್ಮ ಮನೆಗೆ ಬಂದಿದೆ ಎನ್ನುವುದನ್ನು ನಂಬುವುದಕ್ಕೂ ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ ನೊಂದ ಸಹೋದರ.

ರಕ್ಷಣಾ ಕಾರ್ಯಾತರಣೆಗೆ ಯಂತ್ರಗಳ ಉಪಯೋಗ
ಚಮೋಲಿ ಜಿಲ್ಲೆಯ ತಪೋವನ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಮತ್ತಷ್ಟು ಜನರು ಸಿಲುಕಿರುವ ಅಪಾಯವಿದೆ. ಈ ಹಿನ್ನೆಲೆ 9ನೇ ದಿನವೂ ರಕ್ಷಣಾ ಕಾರ್ಯಾಚರಣೆಯನ್ನು ಮುಂದುವರಿಸಲಾಗಿದೆ. ಆಳವಾದ ಸುರಂಗಗಳನ್ನು ಕೊರೆಯುವುದಕ್ಕೆ ದೊಡ್ಡ ದೊಡ್ಡ ಯಂತ್ರಗಳನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಚಮೋಲಿ ಜಿಲ್ಲಾಧಿಕಾರಿ ಸ್ವಾತಿ ಭದೂರಿಯಾ ತಿಳಿಸಿದ್ದಾರೆ.

ಎನ್ ಟಿಪಿಸಿ ಪವರ್ ಪ್ರಾಜೆಕ್ಟ್ ಗೆ ಹಾನಿ
ಎನ್ ಟಿಪಿಸಿ 480 ಮೆಗಾ ವ್ಯಾಟ್ ತಪೋವನ-ವಿಷ್ಣುಗಢ್ ಹೈಡ್ರೋ ಪವರ್ ಪ್ರಾಜೆಕ್ಟ್ ಮತ್ತು 13.2 ಮೆಗಾ ವ್ಯಾಟ್ ನ ರಿಷಿಗಂಗಾ ಹೈಡಲ್ ಪ್ರಾಜೆಕ್ಟ್ ಗೆ ಹಾನಿಯಾಗಿದೆ. ಈ ಪ್ರದೇಶದಲ್ಲಿ ಸಿಲುಕಿರುವ ಕಾರ್ಮಿಕರ ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಕುಮಾರ್ ಭಲ್ಲಾ ಹೇಳಿದ್ದಾರೆ.

9ನೇ ದಿನವೂ ಮುಂದುವರಿದ ರಕ್ಷಣಾ ಕಾರ್ಯಾಚರಣೆ
ಹಿಮಪಾತ ಮತ್ತು ಪ್ರವಾಹ ಪರಿಸ್ಥಿತಿಯಿಂದಾಗಿ ಉತ್ತರಾಖಂಡ್ ಹಲವು ಗ್ರಾಮಗಳಿಗೆ ರಸ್ತೆ ಸಂಪರ್ಕ ಕಡಿತಗೊಂಡಿದೆ. ರೇನಿ ಪಲ್ಲಿ, ಪಾಂಗ್, ಲಟಾ, ಸುರೈತೋಟಾ, ಸುಕಿ, ಭಲ್ಗೋನ್, ತೋಲ್ಮಾ, ಫಾಗ್ರಸು, ಲೊಂಗ್ ಸೇಗ್ದಿ, ಗಹಾರ್, ಭಂಗ್ಯೂಲ್, ಜುವಾಗ್ವಾಡ್, ಜುಗ್ಜು ಸೇರಿದಂತೆ ಹಲವು ಗ್ರಾಮಗಳ ರಸ್ತೆ ಸಂಪರ್ಕ ಕಡಿತಗೊಂಡಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ, ರಾಜ್ಯ ವಿಪತ್ತು ನಿರ್ವಹಣಾ ತಂಡ, ಇಂಡೋ-ಟಿಬೆಟಿಯನ್ ಗಡಿ ಪೊಲೀಸ್ ಮತ್ತು ಭಾರತೀಯ ಸೇನಾ ಪಡೆಯ 600ಕ್ಕೂ ಹೆಚ್ಚು ಸಿಬ್ಬಂದಿಯು ಚಮೋಲಿ ಜಿಲ್ಲೆಯಲ್ಲಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ.












Click it and Unblock the Notifications