ಠೇವಣಿ ಹಣವನ್ನು ಜನರಿಂದ ಸಂಗ್ರಹಿಸಿದ ಡಿ.ಕೆ.ಶಿವಕುಮಾರ್
ರಾಮನಗರ, ಏಪ್ರಿಲ್ 20 : ಕನಕಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಶಿವಕುಮಾರ್ ಪಟ್ಟಣದ ಅಧಿದೇವತೆ ತಾಯಿ ಕೆಂಕೇರಮ್ಮ ಪೂಜೆ ಸಲ್ಲಿಸಿ, ದೇವರ ಹುಂಡಿಗೆ 500 ರೂ. ಹಾಕಿ, ನಂತರ ನಾಮಪತ್ರ ಸಲ್ಲಿಸುವಾಗ ಕಟ್ಟಬೇಕಾದ ಠೇವಣಿ ಹಣವನ್ನು ತಮ್ಮ ಅಭಿಮಾನಿಗಳಿಂದ ಸಂಗ್ರಹಿಸಿದ್ದು ವಿಶೇಷ.
ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್
2013ರ ವಿಧಾನಸಭಾ ಚುನಾವಣೆಯಲ್ಲಿ 210 ಕೋಟಿ ರೂಪಾಯಿ ಆಸ್ತಿ ಘೋಷಣೆ ಮಾಡಿಕೊಂಡು ಚುನಾವಣಾ ಆಯೋಗಕ್ಕೆ ಪ್ರಮಾಣಪತ್ರ ಸಲ್ಲಿಸಿದ್ದ ಡಿ.ಕೆ.ಶಿ., 2018 ಕರ್ನಾಟಕ ವಿಧಾನಸಭಾ ಚುನಾವಣೆಗೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ 600 ಕೋಟಿಗೂ ಹೆಚ್ಚು ಆಸ್ತಿ ಘೋಷಿಸಿಕೊಂಡ್ಡಿದ್ದಾರೆ. ಆದರೆ ತಮ್ಮ ಠೇವಣಿ ಹಣವನ್ನು ಮಾತ್ರ ಕಾರ್ಯಕರ್ತರಿಂದ ಪಡೆದಿದ್ದಾರೆ.
ಕ್ಷೇತ್ರ ಪರಿಚಯ: ಕನಕಪುರದಲ್ಲಿ ಡಿಕೆಶಿ ಅಶ್ವಮೇಧಕ್ಕೆ ಲಗಾಮು ಸಾಧ್ಯವೇ?
ಗುರುವಾರ ಬೆಳಗ್ಗೆ ಕಬ್ಬಾಳಮ್ಮ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿ, ನಂತರ ತಮ್ಮ ಮನೆ ದೇವರಾದ ಕೆಂಕೇರಮ್ಮ ದೇವಾಲಯದಲ್ಲೂ ವಿಶೇಷ ಪೂಜೆ ಸಲ್ಲಿಸಿ, ದೇವಾಲಯದಿಂದ ಸಾವಿರಾರು ಕಾರ್ಯಕರ್ತರೊಂದಿಗೆ ಮೆರವಣಿಯಲ್ಲಿ ತೆರಳಿ ಕನಕಪುರ ತಾಲೂಕು ಕಚೇರಿಯಲ್ಲಿ ಚುನಾವಣಾ ಅಧಿಕಾರಿ ಉಮೇಶ್ ಅವರಿಗೆ ಡಿಕೆಶಿ ನಾಮಪತ್ರ ಸಲ್ಲಿಸಿದರು. ತಮ್ಮ ಉಮೇದುವಾರಿಕೆ ಸಲ್ಲಿಸುವಾಗ ಪತ್ನಿ ಉಷಾ, ತಾಯಿ ಗೌರಮ್ಮ, ತಮ್ಮ ಡಿ.ಕೆ.ಸುರೇಶ್ ಸಾಥ್ ನೀಡಿದರು.
2013ರ ವಿಧಾನಸಭಾ ಚುನಾವಣೆಯಲ್ಲಿ ಡಿಕೆ ಶಿವಕುಮಾರ್ ಹಾಗೂ ಪಿಜಿ ಸಿಂಧ್ಯಾ ಅವರ ನಡುವೆ ನೇರ ಹಣಾಹಣಿ ನಡೆಯಿತು. ಕನಕಪುರ ಕ್ಷೇತ್ರದಿಂದ ಐದು ಬಾರಿ ಸ್ಪರ್ಧಿಸಿ ಜಯಗಳಿಸಿದ್ದ ಸಿಂಧ್ಯಾ ಅವರನ್ನು 31, 424 ಮತಗಳ ಅಂತರದಲ್ಲಿ ಡಿಕೆಶಿ ಪರಾಭವಗೊಳಿಸಿದರು. ಈ ಚುನಾವಣೆಯಲ್ಲಿ ಬಹುಮತ ಗಳಿಸಿದ ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರ ಹಿಡಿಯಿತು. ಸಿದ್ಧರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಡಿಕೆಶಿ ಇಂಧನ ಸಚಿವರಾಗಿ ಆಯ್ಕೆಯಾದರು.
ಕಾಂಗ್ರೆಸ್ ಪಕ್ಷದೊಳಗೆ ಹಾಗೂ ಸಾರ್ವಜನಿಕವಾಗಿ ತಮ್ಮ ವರ್ಚಸ್ಸನ್ನು ಭಾರೀ ಪ್ರಮಾಣದಲ್ಲಿ ವೃದ್ಧಿಸಿಕೊಂಡಿರುವ ಡಿಕೆಶಿ ಈ ಬಾರಿಯೂ ಗೆಲ್ಲುವುದು ನೂರಕ್ಕೆ ನೂರು ಸತ್ಯ ಎಂಬ ಮಾತುಗಳು ಕನಕಪುರದಲ್ಲಿವೆ.