ಭಾರತದಲ್ಲಿ ಎಬೋಲಾ ಸೋಂಕಿನ ಆತಂಕ ಬೇಕಿಲ್ಲ
ನವದೆಹಲಿ, ಆ.9 : ವಿಶ್ವದೆಲ್ಲೆಡೆ ಆತಂಕ ಸೃಷ್ಟಿಸುತ್ತಿರುವ ಎಬೋಲಾ ಮಾರಿಯ ಸೋಂಕಿನ ಯಾವುದೇ ಪ್ರಕರಣ ಭಾರತದಲ್ಲಿ ವರದಿಯಾಗಿಲ್ಲ, ಭಾರತೀಯರು ಈ ಕುರಿತು ಆತಂಕಪಡುವ ಅಗತ್ಯವಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಹೇಳಿದ್ದಾರೆ.
ನವದೆಹಲಿಯಲ್ಲಿ ಈ ಕುರಿತು ಹೇಳಿಕೆ ನೀಡಿರುವ ಡಾ.ಹರ್ಷವರ್ಧನ್, ದೇಶದಲ್ಲಿ ಎಬೋಲಾ ಕಾಣಿಸಿಕೊಳ್ಳದಿದ್ದರೂ ಸರ್ಕಾರ ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡಿದೆ. ವೈರಾಣು ಕಾಣಿಸಿಕೊಂಡ ದೇಶಗಳಿಂದ ಭಾರತಕ್ಕೆ ಬರುವ ಜನರ ಮೇಲೆ ನಿಗಾ ವಹಿಸಲಾಗಿದೆ ಎಂದು ತಿಳಿಸಿದ್ದಾರೆ. [ವೈದ್ಯಲೋಕಕ್ಕೆ ಶಾಕ್: ಡೆಡ್ಲಿ ವೈರಸ್ ಅಟ್ಯಾಕ್]

ಎಬೋಲಾ ಸೋಂಕು ಕಂಡುಬಂದಿರುವ ದೇಶಗಳಾದ ಗಿನಿಯಾ, ಸಿಯೆರಾ, ಲಿಯೋನ್, ಲೈಬೀರಿಯಾ, ನೈಜೀರಿಯಾ, ಅಮೆರಿಕ ಮತ್ತು ಸೌದಿ ದೇಶಗಳಿಗೆ ಪ್ರವಾಸ ಕೈಗೊಳ್ಳದಿರಲು ಭಾರತೀಯರಿಗೆ ಸರ್ಕಾರ ಮನವಿ ಮಾಡಿದೆ. ಎಬೋಲಾ ಸೋಂಕು ಪತ್ತೆಯಾದ ದೇಶಗಳಲ್ಲಿ ಸುಮಾರು 45,000 ಭಾರತೀಯರು ಇದ್ದಾರೆ ಎಂದು ಅಂದಾಜಿಸಲಾಗಿದೆ. [ಎಬೋಲಾ ಭೀತಿ, ಹಜ್ ವೀಸಾ ನಿಷೇಧ]
ಗಂಭೀರ ಕಾಯಿಲೆ : ಪಶ್ಚಿಮ ಆಫ್ರಿಕಾದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಎಬೋಲಾ ಅಂತರರಾಷ್ಟ್ರೀಯ ಮಟ್ಟದಲ್ಲಿ ತುರ್ತಾಗಿ ಪರಿಗಣಿಸಬೇಕಾದ ಗಂಭೀರ ಕಾಯಿಲೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಶುಕ್ರವಾರ ಘೋಷಣೆ ಮಾಡಿದೆ. ಇದುವರೆಗೆ ಸುಮಾರು ಒಂದು ಸಾವಿರ ಜನರನ್ನು ಬಲಿ ತೆಗೆದುಕೊಂಡ ಎಬೋಲಾವನ್ನು ನಿಯಂತ್ರಿಸಲು ಎಲ್ಲರೂ ಕೈಜೋಡಿಸಬೇಕು ಎಂದು ವಿಶ್ವಸಂಸ್ಥೆ ಮನವಿ ಮಾಡಿದೆ.
ಪ್ರತ್ಯೇಕ ವಾರ್ಡ್ ಸ್ಥಾಪಿಸಲಾಗಿದೆ : ಕರ್ನಾಟಕದಲ್ಲಿಯೂ ಎಬೋಲಾ ಸೋಂಕು ತಡೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ. ಆ.9ರಿಂದ ಮಂಗಳೂರು ಮತ್ತು ಬೆಂಗಳೂರು ವಿಮಾನ ನಿಲ್ದಾಣಗಳಲ್ಲಿ ಬಂದಿಳಿಯುವ ವಿದೇಶಿ ಪ್ರಯಾಣಿಕರನ್ನು ತಪಾಸಣೆ ಮಾಡಲಾಗುತ್ತಿದೆ. ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಪ್ರತ್ಯೇಕ ವಾರ್ಡ್ ಸ್ಥಾಪಿಸಲಾಗಿದೆ ಎಂದು ಸಚಿವರು ಹೇಳಿದ್ದಾರೆ.












Click it and Unblock the Notifications