Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣದ ಸ್ಥಳ: ಸಚಿವ ಎಂ.ಬಿ.ಪಾಟೀಲ್ ಮಹತ್ವದ ಮಾಹಿತಿ
ಬೆಂಗಳೂರು ಸಮೀಪ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣದ ಪ್ರಕ್ರಿಯೆ ವೇಗ ಪಡೆದುಕೊಂಡಿದ್ದು, ಈ ಕುರಿತು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಮಹತ್ವದ ಮಾಹಿತಿ ನೀಡಿದ್ದಾರೆ. ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮ (KSIIDC) ಈಗಾಗಲೇ ನಗರದ ಹೊರವಲಯದಲ್ಲಿ ಮೂರು ಸೂಕ್ತ ಸ್ಥಳಗಳನ್ನು ಗುರುತಿಸಿದೆ. ಈ ಸ್ಥಳಗಳನ್ನು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ (ಎಎಐ) ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಭೂಪ್ರದೇಶದ ಸ್ವರೂಪ, ಸಂಪರ್ಕ ವ್ಯವಸ್ಥೆ, ಪರಿಸರ ಪರಿಣಾಮಗಳು ಹಾಗೂ ತಾಂತ್ರಿಕ ಸವಾಲುಗಳ ಕುರಿತು ಸಮಗ್ರ ಅಭಿಪ್ರಾಯಗಳನ್ನು ನೀಡಿದ್ದಾರೆ ಎಂದು ವಿವರಿಸಿದ್ದಾರೆ.
ಕಾರ್ಯಸಾಧ್ಯತಾ ವರದಿ ಸಿದ್ಧತೆ
ಈ ಹಿನ್ನೆಲೆ, ಯೋಜನೆಯ ಪೂರ್ಣ ಸಾಮರ್ಥ್ಯ ಮತ್ತು ಸವಾಲುಗಳನ್ನು ಅಳೆಯಲು 'ಡಿಟೈಲ್ಡ್ ಪ್ರಾಜೆಕ್ಟ್ ರಿಪೋರ್ಟ್' (DPR) ಹಾಗೂ ಕಾರ್ಯಸಾಧ್ಯತಾ ವರದಿ ಸಿದ್ಧಪಡಿಸಲು ಟೆಂಡರ್ ಆಹ್ವಾನಿಸಲಾಗಿದೆ. ಈ ಟೆಂಡರ್ ಪ್ರಕ್ರಿಯೆಯಲ್ಲಿ 3ರಿಂದ 4 ಪ್ರಮುಖ ಸಂಸ್ಥೆಗಳು ಭಾಗವಹಿಸಿದ್ದು, ಶೀಘ್ರದಲ್ಲೇ ಆಯ್ಕೆ ಪ್ರಕ್ರಿಯೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಆಯ್ಕೆಯಾದ ಸಂಸ್ಥೆಗಳು ಸಲ್ಲಿಸುವ ತಾಂತ್ರಿಕ ಹಾಗೂ ಆರ್ಥಿಕ ವರದಿಗಳ ಆಧಾರದ ಮೇಲೆ ಅಂತಿಮ ಸ್ಥಳ ಮತ್ತು ಯೋಜನೆಗೆ ಸಂಬಂಧಿಸಿದ ಮಹತ್ವದ ನಿರ್ಧಾರಗಳನ್ನು ಸರ್ಕಾರ ಕೈಗೊಳ್ಳಲಿದೆ ಎಂದಿದ್ದಾರೆ.

ಪ್ರಸ್ತುತ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಪ್ರಯಾಣಿಕರ ಒತ್ತಡವನ್ನು ಕಡಿಮೆ ಮಾಡಲು ಈ ಎರಡನೇ ವಿಮಾನ ನಿಲ್ದಾಣ ಅಗತ್ಯವಾಗಿದೆ. ನಗರವು ಐಟಿ, ಸ್ಟಾರ್ಟ್ಅಪ್ ಮತ್ತು ಕೈಗಾರಿಕಾ ಕೇಂದ್ರವಾಗಿ ವೇಗವಾಗಿ ಬೆಳೆಯುತ್ತಿರುವ ಹಿನ್ನೆಲೆಯಲ್ಲಿ, ವಾಯು ಸಂಚಾರದ ಬೇಡಿಕೆಯೂ ಹೆಚ್ಚುತ್ತಿದೆ. ಈ ಹೊಸ ವಿಮಾನ ನಿಲ್ದಾಣವು ಕೇವಲ ಸಂಚಾರ ಸುಗಮತೆಗೆ ಮಾತ್ರವಲ್ಲದೆ, ಕರ್ನಾಟಕದ ಆರ್ಥಿಕ ಬೆಳವಣಿಗೆ, ಹೂಡಿಕೆ ಆಕರ್ಷಣೆ ಮತ್ತು ಲಾಜಿಸ್ಟಿಕ್ಸ್ ಅಭಿವೃದ್ಧಿಗೆ ಸಹ ಪ್ರಮುಖವಾಗಲಿದೆ ಎಂದಿದ್ದಾರೆ.
ಸ್ಥಳ ಆಯ್ಕೆ, ತಾಂತ್ರಿಕ ಪರಿಶೀಲನೆ ಹಾಗೂ ಕಾರ್ಯಸಾಧ್ಯತಾ ವರದಿ ಸಿದ್ಧತೆ ಮುಗಿದ ಬಳಿಕವೇ ಯೋಜನೆಗೆ ಅಂತಿಮ ರೂಪ ಸಿಗಲಿದೆ. ಸರ್ಕಾರವು ಎಲ್ಲ ಅಂಶಗಳನ್ನು ಪರಿಗಣಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಿದೆ. ದೀರ್ಘಕಾಲೀನ ದೃಷ್ಟಿಯಲ್ಲಿ ಈ ಯೋಜನೆ ರಾಜ್ಯದ ವಾಯುಯಾನ ಕ್ಷೇತ್ರಕ್ಕೆ ದೊಡ್ಡ ಉತ್ತೇಜನ ನೀಡುವ ನಿರೀಕ್ಷೆಯಿದೆ ಎಂದು ಎಂಬಿ ಪಾಟೀಲ್ ಸ್ಪಷ್ಟಪಡಿಸಿದ್ದಾರೆ.
ಅಂತಿಮ ಸ್ಥಳಗಳು
ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (AAI) ಈಗಾಗಲೇ ನಗರದ ಹೊರವಲಯದ ಮೂರು ಪ್ರಮುಖ ಸ್ಥಳಗಳನ್ನು ಪರಿಶೀಲಿಸಿದೆ. ಕನಕಪುರ ರಸ್ತೆಯ ಸೋಮನಹಳ್ಳಿ ಮತ್ತು ಚೂಡಹಳ್ಳಿ (ಕಗ್ಗಲಿಪುರ ಮತ್ತು ಹಾರೋಹಳ್ಳಿ ಸಮೀಪ), ತುಮಕೂರು ರಸ್ತೆಯ ನೆಲಮಂಗಲ-ಕುಣಿಗಲ್ ರಸ್ತೆ (ಚಿಕ್ಕಸೋಲೂರು ಸಮೀಪ) ಸ್ಥಳ ಗುರುತಿಸಲಾಗಿದ್ದು, ಪ್ರಾಧಿಕಾರವು ಈ ಸ್ಥಳಗಳಲ್ಲಿರುವ ಗುಡ್ಡಗಾಡು ಪ್ರದೇಶ, ಹವಾಮಾನ ವೈಪರೀತ್ಯ ಮತ್ತು ವಾಯು ಸಂಚಾರದ ದಟ್ಟಣೆಯಂತಹ ಸವಾಲುಗಳನ್ನು ಗುರುತಿಸಿದೆ. ಈ ಸವಾಲುಗಳನ್ನು ಮೀರಿ ವಿಮಾನ ನಿಲ್ದಾಣ ನಿರ್ಮಿಸಲು ಸಾಧ್ಯವೇ ಎಂಬುದನ್ನು ತಿಳಿಯಲು ಈಗ ವಿವರವಾದ ಕಾರ್ಯಸಾಧ್ಯತಾ ವರದಿ (Feasibility Report) ಸಿದ್ಧಪಡಿಸಲು ಟೆಂಡರ್ ಕರೆಯಲಾಗಿದೆ.
ಈಗಾಗಲೇ ಸಂಸ್ಥೆಗಳು ಟೆಂಡರ್ನಲ್ಲಿ ಭಾಗವಹಿಸಿದ್ದು, ಮುಂದಿನ 5 ತಿಂಗಳೊಳಗೆ ಈ ಸಂಸ್ಥೆಗಳು ವರದಿಯನ್ನು ಸಲ್ಲಿಸಲಿವೆ. ಭೂಸ್ವಾಧೀನ ವೆಚ್ಚ, ಪರಿಸರ ಕಾಳಜಿ ಮತ್ತು ಆರ್ಥಿಕ ಲಾಭದ ಆಧಾರದ ಮೇಲೆ ಅಂತಿಮ ಸ್ಥಳವನ್ನು ನಿಗದಿಪಡಿಸಲಾಗುವುದು. ಪ್ರಸ್ತುತ ಇರುವ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು 2030ರ ವೇಳೆಗೆ ತನ್ನ ಗರಿಷ್ಠ ಸಾಮರ್ಥ್ಯವನ್ನು ತಲುಪುವ ನಿರೀಕ್ಷೆಯಿದೆ. ಹೀಗಾಗಿ 2033ರ ವೇಳೆಗೆ ಈ ಹೊಸ ನಿಲ್ದಾಣವು ಕಾರ್ಯಾಚರಣೆಗೆ ಸಿದ್ಧವಾಗಬೇಕಿದೆ. ಇತ್ತೀಚೆಗೆ ಈ ಸಂಬಂಧ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೂಡ ಕೇಂದ್ರ ನಾಗರಿಕ ವಿಮಾನಯಾನ ಸಚಿವರನ್ನು ಭೇಟಿಯಾಗಿ ಮಹತ್ವದ ಚರ್ಚೆ ನಡೆಸಿ ಬಂದಿದ್ದಾರೆ.












Click it and Unblock the Notifications