ಅಪ್ಪನ ಸಕ್ಕರೆ ಚಟ ಬಿಡಿಸಲು ಮೋದಿ ಮೊರೆ ಹೋದ ಯುವಕ: ವಿಡಿಯೋ Viral, ಪ್ರಧಾನಿಯಿಂದ ಬಂತು ಅಚ್ಚರಿಯ ರಿಪ್ಲೈ
ನವದೆಹಲಿ: ಇಂದಿನ ಡಿಜಿಟಲ್ ಯುಗದಲ್ಲಿ ಸಾಮಾಜಿಕ ಜಾಲತಾಣಗಳು ಕೇವಲ ಮನರಂಜನೆಯ ವೇದಿಕೆಯಾಗಿ ಮಾತ್ರ ಉಳಿದಿಲ್ಲ, ಬದಲಾಗಿ ಸಾಮಾನ್ಯ ಜನರನ್ನು ದೇಶದ ಉನ್ನತ ನಾಯಕರೊಂದಿಗೂ ನೇರವಾಗಿ ಬೆಸೆಯುವ ಪ್ರಬಲ ಮಾಧ್ಯಮವಾಗಿ ರೂಪುಗೊಂಡಿವೆ. ಇದಕ್ಕೆ ತಾಜಾ ಉದಾಹರಣೆ ಎಂದರೆ, ದೆಹಲಿ ಮೂಲದ ಜನಪ್ರಿಯ ಕಂಟೆಂಟ್ ಕ್ರಿಯೇಟರ್ ಹಾಗೂ ಇನ್ಫ್ಲುಯೆನ್ಸರ್ ಯುವರಾಜ್ ದುವಾ (Yuvraj Dua) ಅವರ ಇತ್ತೀಚಿನ ವಿಡಿಯೋ. ತಮ್ಮ ತಂದೆಯ ಸಿಹಿ ತಿನ್ನುವ ಚಟವನ್ನು ಬಿಡಿಸಲು ಅವರು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಸಹಾಯ ಕೋರಿದ್ದರು. ಅಚ್ಚರಿ ಎಂದರೆ, ಸ್ವತಃ ಪ್ರಧಾನಿಯೇ ಈ ವಿಡಿಯೋಗೆ ಸ್ಪಂದಿಸುವ ಮೂಲಕ ಇಂಟರ್ನೆಟ್ ಲೋಕದಲ್ಲಿ ಭಾರಿ ಸಂಚಲನ ಸೃಷ್ಟಿಸಿದ್ದಾರೆ.
ಹೌದು, ಇನ್ಸ್ಟಾಗ್ರಾಮ್ನಲ್ಲಿ 1 ಮಿಲಿಯನ್ಗೂ ಹೆಚ್ಚು ಫಾಲೋವರ್ಸ್ಗಳನ್ನು ಹೊಂದಿರುವ ಯುವರಾಜ್ ದುವಾ, ಈ ವಾರದ ಆರಂಭದಲ್ಲಿ 'ಮೋದಿ-ಪಗ್ಲು ಪಾಪಾ' (Modi-Paglu Papa) ಎಂಬ ಶೀರ್ಷಿಕೆಯಡಿ ರೀಲ್ಸ್ ಒಂದನ್ನು ಹಂಚಿಕೊಂಡಿದ್ದರು. ಅದಕ್ಕೆ 'ಪಾಪಾ ಕಿ ಶುಗರ್ ಕಮ್ ಕರ್ವಾ ದೋ' (ದಯವಿಟ್ಟು ನನ್ನ ತಂದೆಯ ಸಕ್ಕರೆ ಸೇವನೆಯನ್ನು ಕಡಿಮೆ ಮಾಡಿಸಿ) ಎಂಬ ಕ್ಯಾಪ್ಶನ್ ನೀಡಿದ್ದರು. ವಿಡಿಯೋದಲ್ಲಿ ಯುವರಾಜ್, ತಮ್ಮ ತಂದೆ ಪ್ರಧಾನಿ ಮೋದಿಯವರ ಎಷ್ಟು ದೊಡ್ಡ ಅಭಿಮಾನಿ ಎಂಬುದನ್ನು ತಮಾಷೆಯಾಗಿ ವಿವರಿಸಿದ್ದರು. "ನನ್ನ ತಂದೆ ಟಿವಿ ನೋಡುತ್ತಿರುವಾಗ ಮೇಲಿನಿಂದ ಡ್ರ್ಯಾಗನ್ ಹಾರಿಬಂದರೂ ಅವರ ಗಮನ ಬೇರೆಡೆಗೆ ಹರಿಯುವುದಿಲ್ಲ, ಏಕೆಂದರೆ ಅವರು ಮೋದಿಯವರ ಅಪ್ಪಟ ಭಕ್ತರು" ಎಂದು ಹಾಸ್ಯಭರಿತವಾಗಿ ಹೇಳಿಕೊಂಡಿದ್ದರು.

ವಿಡಿಯೋದಲ್ಲಿ ಏನಿದೆ?
ಕುಟುಂಬದವರು ಎಷ್ಟೇ ಬುದ್ಧಿವಾದ ಹೇಳಿದರೂ ತಮ್ಮ ತಂದೆ ಜಿಲೇಬಿ ಮತ್ತು ಸಿಹಿ ತಿಂಡಿಗಳನ್ನು ತಿನ್ನುವುದನ್ನು ನಿಲ್ಲಿಸುತ್ತಿಲ್ಲ. ಹೀಗಾಗಿ, ಪ್ರಧಾನಿ ಮೋದಿಯವರು ತಮ್ಮ ಮುಂದಿನ 'ಮನ್ ಕಿ ಬಾತ್' (Mann ki Baat) ಕಾರ್ಯಕ್ರಮದಲ್ಲಿ 'ಉತ್ತಮ ಆರೋಗ್ಯಕ್ಕಾಗಿ ಸಕ್ಕರೆ ಸೇವನೆಯನ್ನು ಕಡಿಮೆ ಮಾಡುವುದು ಅಗತ್ಯ' ಎಂದು ಹೇಳಬೇಕು. ಮೋದಿಯವರ ಮಾತುಗಳು ತಮ್ಮ ತಂದೆಗೆ ಕಟ್ಟುನಿಟ್ಟಿನ 'ಸೂಚನೆ'ಗಳಿದ್ದಂತೆ, ಅವರು ಹೇಳಿದರೆ ಮಾತ್ರ ನಮ್ಮಪ್ಪ ಸಿಹಿ ತಿನ್ನುವುದನ್ನು ಬಿಡುತ್ತಾರೆ ಎಂದು ಯುವರಾಜ್ ವಿಡಿಯೋದಲ್ಲಿ ಮನವಿ ಮಾಡಿಕೊಂಡಿದ್ದರು. ಭಾರತೀಯ ಅಂಕಲ್ಗಳ ಮೇಲೆ ಪ್ರಧಾನಿ ಮೋದಿಯವರ ಪ್ರಭಾವ ಎಷ್ಟಿದೆ ಎಂಬುದನ್ನು ಅವರು ಅತ್ಯಂತ ನೈಜವಾಗಿ ತೆರೆದಿಟ್ಟಿದ್ದರು.
ಈ ವಿಡಿಯೋ ಅಪ್ಲೋಡ್ ಆದ ಕೆಲವೇ ಗಂಟೆಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಮಿಲಿಯನ್ಗಟ್ಟಲೆ ವೀಕ್ಷಣೆ ಪಡೆದುಕೊಂಡಿತು. ತಮಾಷೆಯ ಹಾಗೂ ಪ್ರತಿಯೊಂದು ಮನೆಗೂ ಅನ್ವಯಿಸುವಂತಹ ಈ ಕಥೆ ನೆಟ್ಟಿಗರ ಗಮನ ಸೆಳೆಯಿತು. ಆದರೆ, ಈ ಕಥೆಗೆ ಅಸಲಿ ತಿರುವು ಸಿಕ್ಕಿದ್ದು ಇನ್ಸ್ಟಾಗ್ರಾಮ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಈ ವಿಡಿಯೋಗೆ ಪ್ರತಿಕ್ರಿಯಿಸಿದಾಗ.
ಯುವರಾಜ್ ಅವರ ವಿಡಿಯೋವನ್ನು ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ (ಪಿಎಂ ಮೋದಿ ಇನ್ಸ್ಟಾಗ್ರಾಮ್) ಮರುಹಂಚಿಕೊಂಡ ಪ್ರಧಾನಿ ಮೋದಿ, ಯುವರಾಜ್ ಅವರ ಮನವಿಗೆ ಸ್ಪಂದಿಸಿದರು. "ಯುವರಾಜ್ ಅವರ ಕೋರಿಕೆಯ ಮೇರೆಗೆ, ಅವರ ತಂದೆ (ಹಾಗೂ ಇತರ ಎಲ್ಲರೂ) ಸಕ್ಕರೆ ಸೇವನೆಯನ್ನು ಕಡಿಮೆ ಮಾಡಬೇಕು ಎಂದು ನಾನು ಒತ್ತಾಯಿಸುತ್ತೇನೆ... ಆರೋಗ್ಯವಾಗಿರಿ, ಸಂತೋಷವಾಗಿರಿ" ಎಂದು ಪ್ರಧಾನಿ ಬರೆದುಕೊಂಡಿದ್ದಾರೆ. ಇದಲ್ಲದೆ, ತಮ್ಮ ಎರಡನೇ ಸ್ಟೋರಿಯಲ್ಲಿ, ಹೆಚ್ಚು ಸಕ್ಕರೆ ಸೇವನೆಯಿಂದ ಬೊಜ್ಜು ಸೇರಿದಂತೆ ಅನೇಕ ಕಾಯಿಲೆಗಳು ಬರುತ್ತವೆ ಎಂದು ಎಚ್ಚರಿಸಿರುವ ಪ್ರಧಾನಿ, ಯೋಗ ಮತ್ತು ವ್ಯಾಯಾಮ ಮಾಡುವಂತೆ ಜನರಿಗೆ ಕಳಕಳಿಯ ಸಲಹೆ ನೀಡಿದ್ದಾರೆ.
ಒಂದು ಸಣ್ಣ ಹಾಸ್ಯದ ವಿಡಿಯೋ ಈ ಮಟ್ಟಿಗೆ ವೈರಲ್ ಆಗಿ, ದೇಶದ ಪ್ರಧಾನಿಯೇ ಪ್ರತಿಕ್ರಿಯಿಸುತ್ತಾರೆ ಎಂದು ಯುವರಾಜ್ ದುವಾ ಕನಸಿನಲ್ಲೂ ಎಣಿಸಿರಲಿಲ್ಲ. ಪ್ರಧಾನಿಯವರ ಸಂದೇಶವನ್ನು ನೋಡಿದ ಯುವರಾಜ್ ಆಶ್ಚರ್ಯಚಕಿತರಾಗಿ, "ಇದು ನಂಬಲು ಅಸಾಧ್ಯವಾದದ್ದು. ವಿಡಿಯೋ ಎಲ್ಲಿಗೆ ತಲುಪಿದೆ ಎಂದು ನಾನು ಎಂದಿಗೂ ಊಹಿಸಿರಲಿಲ್ಲ" ಎಂದು ತಮ್ಮ ಸಂತಸ ಹಂಚಿಕೊಂಡಿದ್ದಾರೆ. ನಂತರ ತಮ್ಮ ತಂದೆಗೆ ಸಂದೇಶ ರವಾನಿಸಿರುವ ಅವರು, "ಈಗ ಸ್ವತಃ ಮೋದಿ ಜೀ ಅವರೇ ಹೇಳಿದ್ದಾರೆ. ದಯವಿಟ್ಟು ಇದನ್ನು ಒಪ್ಪಿಕೊಳ್ಳಿ ಪಾಪಾ" ಎಂದು ಮನವಿ ಮಾಡಿದ್ದಾರೆ. ಮಗನೊಬ್ಬ ತನ್ನ ತಂದೆಯ ಆರೋಗ್ಯದ ಮೇಲಿನ ಕಾಳಜಿಯಿಂದ ಮಾಡಿದ ಒಂದು ಸಣ್ಣ ವಿಡಿಯೋ ಇಂದು ಇಡೀ ದೇಶದ ಗಮನ ಸೆಳೆದಿದೆ.












Click it and Unblock the Notifications