ಗಣರಾಜ್ಯೋತ್ಸವ ಪರೇಡಲ್ಲಿ ಘರ್ಜಿಸಲಿದ್ದಾನೆ ಟಿಪ್ಪು ಸುಲ್ತಾನ್
ನವದೆಹಲಿ, ಜ.23 : ಈ ಬಾರಿಯ ಗಣರಾಜ್ಯೋತ್ಸವ ಪರೇಡ್ ನಲ್ಲಿ ಕರ್ನಾಟಕದಿಂದ ಮೈಸೂರು ಹುಲಿ ಟಿಪ್ಪು ಸುಲ್ತಾನ್ ಸ್ತಬ್ಧಚಿತ್ರ ಭಾಗವಹಿಸಲಿದೆ. ಈ ಮೂಲಕ ಮೈಸೂರು ಹುಲಿ ಟಿಪ್ಪು ಸುಲ್ತಾನ್ ಶೌರ್ಯ, ಸಾಹಸವನ್ನು ದೇಶಕ್ಕೆ ತಿಳಿಸಲು ಅವಕಾಶ ದೊರೆತಿದೆ. ನವದೆಹಲಿಯ ರಾಷ್ಟ್ರೀಯ ರಂಗಶಾಲಾ ಮೈದಾನದಲ್ಲಿ ಸ್ತಬ್ಧಚಿತ್ರ ನಿರ್ಮಾಣಗೊಂಡಿದ್ದು, ಕಲಾ ವಿನ್ಯಾಸಕ ಶಶಿಧರ ಅಡಪ ಇದನ್ನು ನಿರ್ಮಿಸಿದ್ದಾರೆ.
ಜ.26ರಂದು ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆಯುವ 64ನೇ ಗಣರಾಜ್ಯೋತ್ಸವ ಕಾರ್ಯಕ್ರಮದ ಪಾರಂಪರಿಕ ಪರೇಡ್ ನಲ್ಲಿ ಅಪ್ರತಿಮ ಪರಾಕ್ರಮಿ ಟಿಪ್ಪು ಸುಲ್ತಾನ್' ಸ್ತಬ್ಧ ಚಿತ್ರ ಪಾಲ್ಗೊಳ್ಳಲಿದೆ. ರಾಷ್ಟ್ರೀಯ ರಂಗಶಾಲಾ ಮೈದಾನದಲ್ಲಿ ರಕ್ಷಣಾ ಮಂತ್ರಾಲಯದಿಂದ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಸ್ತಬ್ಧಚಿತ್ರದ ಬಗ್ಗೆ ರಾಜ್ಯ ವಾರ್ತಾ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. [ಪರೇಡ್ ನೋಡಲಿದ್ದಾರೆ ಪುಟ್ಟಮ್ಮ, ರುದ್ರಪ್ಪ]
ವಾರ್ಷಿಕ 14 ರಾಜ್ಯಗಳ ಸ್ತಬ್ಧ ಚಿತ್ರಗಳು ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸುತ್ತವೆ. ಈ ಬಾರಿ ಕರ್ನಾಟಕದ ‘ಅಪ್ರತಿಮ ಪರಾಕ್ರಮಿ ಟಿಪ್ಪು ಸುಲ್ತಾನ್'ನ ಸ್ತಬ್ಧ ಚಿತ್ರ ಪರೇಡ್ ನಲ್ಲಿ ಭಾಗವಹಿಸಲು ಆಯ್ಕೆಯಾಗಿದೆ. ಈ ಮೂಲಕ ರಾಜ್ಯದ ಟಿಪ್ಪು ಸುಲ್ತಾನ್ ಶೌರ್ಯ, ತಂತ್ರಗಾರಿಕೆ, ವ್ಯವಹಾರ ನಿಪುಣತೆಯನ್ನು ದೇಶಕ್ಕೆ ತಿಳಿಸಲು ಅವಕಾಶ ದೊರಕಿದೆ. ಸ್ತಬ್ಧ ಚಿತ್ರದ ಮತ್ತಷ್ಟು ಮಾಹಿತಿ ಚಿತ್ರಗಳಲ್ಲಿ
ನಾಲ್ಕು ಥೀಮ್ ಗಳಲ್ಲಿ ಟಿಪ್ಪು ಸುಲ್ತಾನ್ ಆಯ್ಕೆ
ರಾಜ್ಯ ವಾರ್ತಾ ಇಲಾಖೆ ನಿರ್ದೇಶಕ ಎನ್.ಆರ್.ವಿಶುಕುಮಾರ್ ಅವರ ನೇತೃತ್ವದಲ್ಲಿ ಗಣರಾಜ್ಯೋತ್ಸವ ಪೆರೇಡ್ ನಲ್ಲಿ ಭಾಗವಹಿಸಲು ಸಾವಿರ ಕಂಬಗಳ ಬಸದಿ, ಕೊಡಗು ವೀರರ ನಾಡು, 18ನೇ ಶತಮಾನದಲ್ಲಿ ಮೈಸೂರು ದಸರಾದ ವೈಭವ ಹಾಗೂ ಅಪ್ರತಿಮ ಪರಾಕ್ರಮಿ ಟಿಪ್ಪು ಸುಲ್ತಾನ್ ಎಂಬ ನಾಲ್ಕು ಥೀಮ್ಗಳನ್ನು ರಕ್ಷಣಾ ಇಲಾಖೆಗೆ ಕಳುಹಿಸಿಕೊಡಲಾಗಿತ್ತು. ಇದರಲ್ಲಿ ರಕ್ಷಣಾ ಇಲಾಖೆ ವಿವಿಧ ಹಂತದ ಪರಿಶೀಲನೆ ಬಳಿಕ ಟಿಪ್ಪು ಸುಲ್ತಾನ್ ಸ್ತಬ್ಧಚಿತ್ರವನ್ನು ಆಯ್ಕೆ ಮಾಡಿಕೊಂಡಿದೆ.
ಟಿಪ್ಪು ಆಯ್ಕೆ ಹೇಗೆ?
ರಕ್ಷಣಾ ಇಲಾಖೆ ಟಿಪ್ಪು ಸುಲ್ತಾನ್ ಶ್ರೀರಂಗಪಟ್ಟಣದಲ್ಲಿ ಮೊತ್ತ ಮೊದಲ ಬಾರಿಗೆ ರಾಕೆಟ್ ಕೇಂದ್ರವನ್ನು ಸ್ಥಾಪಿಸಿದ್ದು, ವಿಜ್ಞಾನದಲ್ಲಿ ಆತನಿಗಿದ್ದ ಜ್ಞಾನ, ವ್ಯವಹಾರ ನಿಪುಣತೆ ಮುಂತಾದ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಈ ಸ್ತಬ್ಧಚಿತ್ರವನ್ನು ಆಯ್ಕೆ ಮಾಡಿದೆ. ವಾರ್ಷಿಕ 14 ರಾಜ್ಯಗಳ ಸ್ತಬ್ಧ ಚಿತ್ರ ಪರೇಡ್ ನಲ್ಲಿ ಭಾಗವಹಿಸುತ್ತದೆ. ಕರ್ನಾಟಕವೂ ಭಾಗವಹಿಸುವ ಜೊಪತೆಗೆ ಅತ್ಯುತ್ತಮ ಸ್ತಬ್ಧ ಚಿತ್ರ ವಿಭಾಗದಲ್ಲಿ ಪ್ರಶಸ್ತಿಗಳನ್ನು ಗಳಿಸಿದೆ.
ಸ್ತಬ್ಧ ಚಿತ್ರದ ನಿರ್ಮಾಣ ಎಲ್ಲಿ?
ನವದೆಹಲಿಯ ರಾಷ್ಟ್ರೀಯ ರಂಗಶಾಲಾ ಮೈದಾನದಲ್ಲಿ ಸ್ತಬ್ದಚಿತ್ರ ನಿರ್ಮಾಣಗೊಂಡಿದೆ. ಈ ಬಾರಿಯೂ ಸಹ ಪ್ರಶಸ್ತಿ ಲಭಿಸುವ ವಿಶ್ವಾಸದಲ್ಲಿ ಸ್ತಬ್ಧಚಿತ್ರವನ್ನು ನಿರ್ಮಾಣ ಮಾಡಲಾಗಿದೆ. ದೆಹಲಿಯಲ್ಲಿ ಕರ್ನಾಟಕ ವಾರ್ತಾ ಕೇಂದ್ರದ ಉಪ ನಿರ್ದೇಶಕ (ಪ್ರ) ಎಲ್.ಪಿ. ಗಿರೀಶ್ ನಿರ್ಮಾಣದ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.
ನಿರ್ಮಾಣ ಹೇಗೆ?
ರಾಜ್ಯದ ಅತ್ಯುತ್ತಮ ಕಲಾ ವಿನ್ಯಾಸಕ ಶಶಿಧರ ಅಡಪ ಟಿಪ್ಪು ಸ್ತಬ್ಧಚಿತ್ರವನ್ನು ವಿನ್ಯಾಸ ಮಾಡಿದ್ದಾರೆ. ಬೆಂಗಳೂರಿನ ಸಂಜಯ್ ಮಾರ್ಕೆಟಿಂಗ್ ಕಂಪನಿ ಸ್ತಬ್ಧಚಿತ್ರದ ನಿರ್ಮಾಣದ ಹೊಣೆ ಹೊತ್ತಿದ್ದು, ಕಲಾವಿನ್ಯಾಸಕ ರಘುನಂದನ್ ಇದನ್ನು ಕಾರ್ಯರೂಪಕ್ಕೆ ತಂದಿದ್ದಾರೆ. ಟಿಪ್ಪುವಿನ ಸ್ತಬ್ಧಚಿತ್ರ ಸಾಗುವ ವೇಳೆ ಕೇಳಿಬರುವ ಸಂಗೀತವನ್ನು ವಿ.ಮನೋಹರ್ ನಿರ್ದೇಶಿಸಿದ್ದಾರೆ. ಸ್ತಬ್ಧ ಚಿತ್ರದ ಜೊತೆ ಒಟ್ಟು 8 ಕಲಾವಿದರು ಸೈನಿಕರ ಪೋಷಾಕಿನಲ್ಲಿ ಮರೆವಣಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ನೇರಪ್ರಸಾರದ ಹೊಣೆ ಮಹೇಶ್ ಜೋಷಿಗೆ
ಈ ಬಾರಿ ಗಣರಾಜ್ಯೋತ್ಸವನ್ನು ನೇರ ಪ್ರಸಾರ ಮಾಡುವ ಜವಾಬ್ದಾರಿಯನ್ನು ದೆಹಲಿ ದೂರದರ್ಶನ ಕೇಂದ್ರದ ಹೆಚ್ಚುವರಿ ಮಹಾನಿರ್ದೇಶಕರಾದ ಕನ್ನಡಿಗ ಡಾ.ಮಹೇಶ್ ಜೋಶಿ ಅವರಿಗೆ ವಹಿಸಲಾಗಿದೆ. ಆರು ರಾಷ್ಟ್ರೀಯ ಮತ್ತು 18 ಪ್ರಾದೇಶಿಕ ವಾಹಿನಿಗಳಲ್ಲಿ ಈ ಕಾರ್ಯಕ್ರಮ ನೇರಪ್ರಸಾರವಾಗಲಿದೆ. ಈ ಗೌರವ ಕನ್ನಡಿರೊಬ್ಬರಿಗೆ ಸಿಕ್ಕಿರುವುದು ಇದೇ ಮೊದಲು.